Advertisement

ಕುಂದಾಪುರ ಫ್ಲೈಓವರ್‌: ಅ. 20ರಂದು ಪ್ರತಿಭಟನೆ

11:06 PM Oct 17, 2019 | Sriram |

ಕುಂದಾಪುರ: ಶಾಸ್ತ್ರಿ ಸರ್ಕಲ್‌ ಫ್ಲೈಓವರ್‌ ಹಾಗೂ ಬಸ್ರೂರು ಮೂರುಕೈ ಅಂಡರ್‌ ಪಾಸ್‌ ಕಾಮಗಾರಿ ಪೂರ್ಣ ಗೊಳಿಸಲು ಕೊನೆಗೂ ಪ್ರತಿ ಭಟನೆಗೆ ದಿನ ನಿಗದಿಯಾಗಿದೆ. ಅ. 20ರಂದು ಕೆಲವಾರು ಸಂಘಟನೆಗಳು ಒಟ್ಟುಗೂಡಿ ಪ್ರತಿಭಟನೆಗೆ ಮುಂದಾಗಲಿವೆ. ಕೇಮಾರು ಸಾಂದೀಪನಿ ಸಾಧನಾ ಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ ಅವರು ಭಾಗವಹಿಸಲಿದ್ದಾರೆ.

Advertisement

ಆದೇಶ
ಇಲ್ಲಿನ ಈ ಹಿಂದಿನ ಉಪವಿಭಾಗ ದಂಡಾಧಿಕಾರಿ, ಸಹಾಯಕ ಕಮಿಷನರ್‌ ಟಿ. ಭೂಬಾಲನ್‌ ಅವರು ನವಯುಗ ಉಡುಪಿ ಟೋಲ್‌ವೇ ಪ್ರೈ.ಲಿ.ಗೆ ಅವರು ಉಡುಪಿಯ ಕರಾವಳಿ ಬೈಪಾಸ್‌ನಲ್ಲಿ ಅಂಡರ್‌ ಪಾಸ್‌ ನ. 1ರೊಳಗೆ, ಶಾಸ್ತ್ರಿ ಸರ್ಕಲ್‌ನ ಫ್ಲೈಓವರ್‌, ಬಸ್ರೂರು ಮೂರುಕೈ ಅಂಡರ್‌ಪಾಸ್‌ ಕಾಮಗಾರಿ ಎ.1ರ ಒಳಗೆ ಮುಗಿಸಬೇಕೆಂದು ಕಳೆದ ವರ್ಷ ಅ.10ರಂದು ಆದೇಶ ನೀಡಿದ್ದರು. ಆದರೆ ನೀಡಿದ ಆದೇಶ ಕಾರ್ಯಗತವಾಗಿಲ್ಲ. ಸೆಕ್ಷನ್‌ 133ರ ಅಡಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಅವರು ಪ್ರಕರಣದ ವಿಚಾರಣೆ ನಡೆಸಿದ್ದು ಅಂತಿಮ ಆದೇಶ ಜಾರಿ ಮಾಡಿದ್ದರು. ಆದರೆ ಕಾಮಗಾರಿ ನಡೆಯದೇ ಹಣಕಾಸಿನ ಅಡಚಣೆಯಿಂದ ಕಾಮಗಾರಿ ಸ್ಥಗಿತವಾಗಿದ್ದು ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸ ದಿದ್ದರೆ ನ್ಯಾಯಾಲಯದ ಆದೇಶ ಉಲ್ಲಂಘನೆ ತೂಗುಗತ್ತಿ ನೇತಾಡಿದರೂ ಪ್ರಯೋಜನವಾಗಿಲ್ಲ. ವೇತನ ಕೊಡದೇ ಕೆಲಸಕ್ಕೆ ಬರಲಾರೆವು ಎಂದು ಕಾರ್ಮಿಕರು ಹೊರಟು ಹೋಗಿಯಾಗಿದೆ.

ಕೆಲಸ ನಡೆಯದಿರಲು ಮರಳು ಅಭಾವ, ಮರಳು ಹಾಗೂ ಕಲ್ಲಿಗೆ ಅನು ಮತಿ ದೊರೆಯಲು ವಿಳಂಬ ಸೇರಿದಂತೆ ಕಾರಣಗಳಿದ್ದವು ಎಂದು ಉತ್ತರಿಸಿದ್ದರು. ಜಿಲ್ಲಾಡಳಿತ ಬೆಂಬಲ ನೀಡುತ್ತಿಲ್ಲ ಎಂದು ನವ ಯುಗ ಸಂಸ್ಥೆ ಡಿಸಿ ವಿರುದ್ಧವೂ ದೂರು ನೀಡಿತ್ತು. ಸಾರ್ವಜನಿಕರ ದೂರಿಗೆ ಖುದ್ದು ಸ್ಪಂದಿಸುತ್ತಿದ್ದ ಹಿಂದಿನ ಡಿಸಿಯವರು ಸಂಸ್ಥೆಯವರನ್ನು ಕರೆದು ಕಾಮಗಾರಿ ಬೇಗ ಮುಗಿಸುವಂತೆ ಅನೇಕ ಬಾರಿ ಸೂಚನೆ ಕೊಟ್ಟಿದ್ದರು. ರಾ. ಹೆ. ಸಮಿತಿಯವರು ನವಯುಗ ಸಂಸ್ಥೆಯ ವಿರುದ್ಧ ಆರೋಪ ಮಾಡಿದ್ದು, ಬ್ರಹ್ಮಾವರ, ಸಾಸ್ತಾನ, ಸಾಲಿಗ್ರಾಮ, ತೆಕ್ಕಟ್ಟೆ, ಕಲ್ಯಾಣಪುರ, ಕಟಪಾಡಿ ಮೊದಲಾದೆಡೆ ಸರ್ವಿಸ್‌ ರಸ್ತೆ ನೀಡಿಲ್ಲ.

ಅರೆಬರೆ ಚರಂಡಿ ಕಾಮಗಾರಿ ಮಾಡಲಾಗಿದೆ. ಶೇ.60 ಕಾಮಗಾರಿ ಆದ ಬಳಿಕವಷ್ಟೇ ಟೋಲ್‌ ಸಂಗ್ರಹ ಆರಂಭಿಸಬೇಕಿತ್ತು. 150 ಕಿ.ಮೀ. ಗಳಲ್ಲಿ ಮೂರು ಕಡೆ ಟೋಲ್‌ ಸಂಗ್ರಹ ಕಾನೂನು ಪ್ರಕಾರ ಸರಿಯಲ್ಲ ಎಂದು ಆರೋಪಿಸಲಾಗಿತ್ತು.

ಪ್ರತಿಭಟನೆಗೆ ಸಜ್ಜು
ಇಷ್ಟು ಸಮಯದಿಂದ ಕಾಮಗಾರಿ ಅರೆಬರೆ ಸ್ಥಿತಿಯಲ್ಲಿದ್ದು ಜನಪ್ರತಿನಿಧಿಗಳು ಹಾಗೂ ಅರ್ಧ ಕಾಮಗಾರಿಯ ಫ್ಲೈಓವರ್‌ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್‌ಗೆ ಒಳಗಾಗಿತ್ತು. ಐತಿಹಾಸಿಕ ಸ್ಮಾರಕ ಎಂಬಂತೆ ಈಗ ಇದನ್ನು ವಿಡಂಬನೆಗೆ ಬಳಸಿಕೊಳ್ಳಲಾಗುತ್ತಿದೆ. ಇದೀಗ ಒಂದಷ್ಟು ಸಂಘಟನೆಗಳು ಒಟ್ಟಾಗಿ ಪ್ರತಿಭಟನೆಗೆ ಮುಂದಾಗಿವೆ. ಅ.20ರಂದು ಬೆಳಗ್ಗೆಯಿಂದ ಅಪರಾಹ್ನವರೆಗೆ ಪ್ರತಿಭಟನೆ ನಡೆಯಲಿದೆ. ಈ ಮಧ್ಯೆ ಈಗಿನ ಜಿಲ್ಲಾಧಿಕಾರಿಗಳು ಕೂಡಾ ಗುತ್ತಿಗೆದಾರ ಸಂಸ್ಥೆ ಜತೆ ಮಾತುಕತೆ ನಡೆಸಿದ್ದು ಅ.20ರಿಂದ ಕಾಮಗಾರಿ ಆರಂಭಿಸುವುದಾಗಿ ಸಂಸ್ಥೆಯವರು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next