Advertisement

ರೈಲ್ವೇ ಟರ್ಮಿನಲ್‌ ನಿರ್ಮಾಣಕ್ಕೆ ಒತ್ತಡ

10:16 AM Feb 24, 2020 | Sriram |

ಕಾಸರಗೋಡು: ಅಭಿವೃದ್ಧಿ ಪಥದತ್ತ ಸಾಗುತ್ತಿರುವ ಕುಂಬಳೆಯಲ್ಲಿ ರೈಲ್ವೇ ಟರ್ಮಿನಲ್‌ ನಿರ್ಮಿಸಬೇಕೆಂದು ಹೆಚ್ಚೆಚ್ಚು ಬೇಡಿಕೆ ಕೇಳಿ ಬರುತ್ತಿದೆ. ಕುಂಬಳೆ ಯಲ್ಲಿ ಸಾಕಷ್ಟು ಸ್ಥಳಾವಕಾಶವಿದ್ದು, ಈ ಹಿನ್ನೆಲೆಯಲ್ಲಿ ರೈಲ್ವೇ ಟರ್ಮಿನಲ್‌ ನಿರ್ಮಾಣಕ್ಕೆ ಸೂಕ್ತ ಸ್ಥಳವೆಂಬುದು ಸಾರ್ವತ್ರಿಕ ಅಭಿಪ್ರಾಯವಾಗಿದೆ. ರೈಲ್ವೇ ಇಲಾಖೆಯೂ ಕುಂಬಳೆಯಲ್ಲಿ ಟರ್ಮಿ ನಲ್‌ ಸ್ಥಾಪಿಸುವ ಬಗ್ಗೆ ಪ್ರಸ್ತಾವವನ್ನು ಕೆಲವು ತಿಂಗಳ ಹಿಂದೆ ಮುಂದಿಟ್ಟಿತ್ತು. ಆದರೆ ಆ ಬಳಿಕ ಈ ಬಗ್ಗೆ ಯಾವುದೇ ಪ್ರಕ್ರಿಯೆ ನಡೆದಿಲ್ಲ.

Advertisement

ಪ್ರಸಕ್ತ ಕೇರಳ, ಕರ್ನಾಟಕ, ಮುಂಬಯಿ ಸಹಿತ ನಾನಾ ಕಡೆ ಸಂಚರಿಸುವ ರೈಲು ಗಳು ಮಂಗಳೂರಿನಿಂದ ಆರಂಭ ಗೊಳ್ಳುತ್ತಿದ್ದು, ಅಲ್ಲಿ ಸ್ಥಳಾವಕಾಶದ ಕೊರತೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸ ಟರ್ಮಿನಲ್‌ಗೆ ಕುಂಬಳೆ ಸೂಕ್ತ ಸ್ಥಳವಾಗಿದೆ. ಈ ಕಾರಣ ದಿಂದ ಕುಂಬಳೆಯನ್ನು ಆಯ್ಕೆ ಮಾಡಿ ಕೊಳ್ಳುವಂತೆ ಅಭಿಪ್ರಾಯ ವ್ಯಕ್ತವಾಗಿದೆ. ಈಗಾಗಲೇ ಕೇರಳದಲ್ಲಿ ಎರ್ನಾಕುಳಂ ಜಂಕ್ಷನ್‌, ತಿರುವನಂತಪುರ ಕೊಚ್ಚುವೇಳಿ ಯಲ್ಲಿ ಪ್ರಮುಖ ಟರ್ಮಿನಲ್‌ ನಿಲ್ದಾಣ ಕಾರ್ಯಾಚರಿಸುತ್ತಿವೆ. ಜತೆಗೆ ತಿರುವ ನಂತಪುರ ನೇಮಂನಲ್ಲಿ ಟರ್ಮಿನಲ್‌ ಸ್ಥಾಪನೆಗೆ ರೈಲ್ವೇ ಇಲಾಖೆ ಅಂತಿಮ ತಯಾರಿಯಲ್ಲಿದೆ. ಕುಂಬಳೆ ರೈಲು ನಿಲ್ದಾಣವನ್ನು ಟರ್ಮಿನಲ್‌ ಸ್ಟೇಷನ್‌ ಆಗಿ ಮೇಲ್ದರ್ಜೆಗೇರಿಸುವುದರಿಂದ ಮಂಗಳೂರಿನಲ್ಲಿ ದಟ್ಟಣೆ ಕಡಿಮೆ ಯಾಗುವ ಸಾಧ್ಯತೆ ಇದೆ ಎಂಬುದು ರೈಲ್ವೇ ಬಳಕೆದಾರರ ಅಭಿಪ್ರಾಯವಾಗಿದೆ.

ಜಾಗ ಅಳೆದು
ಖಚಿತಪಡಿಸಲು ಆಗ್ರಹ
ದಕ್ಷಿಣ ಕೇರಳದಿಂದ ಆಗಮಿಸಿ, ಕಣ್ಣೂರಿನಲ್ಲಿ ಸಂಚಾರ ಕೊನೆಗೊಳಿಸುವ ಎಲ್ಲ ಎಕ್ಸ್‌ಪ್ರೆಸ್‌ ರೈಲುಗಳನ್ನು ಕುಂಬಳೆಯ ವರೆಗೆ ವಿಸ್ತರಿಸಬೇಕು, ಕುಂಬಳೆಯಲ್ಲಿ ರೈಲ್ವೇ ಟರ್ಮಿನಲ್‌ ಸ್ಥಾಪಿಸಬೇಕು ಮೊದಲಾದ ಬೇಡಿಕೆಗಳು ಹೆಚ್ಚುತ್ತಿರುವಂತೆ ರೈಲು ನಿಲ್ದಾಣದ ಜಾಗವನ್ನು ಅಳೆದು ಖಚಿತಪಡಿಸುವಂತೆ ಒತ್ತಡ ಹೆಚ್ಚಾಗಿದೆ.

ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರೂ ಕುಂಬಳೆ ರೈಲು ನಿಲ್ದಾಣದಲ್ಲಿ ಸಾಕಷ್ಟು ಮೂಲ ಸೌಕರ್ಯಗಳಿಲ್ಲ. ಪ್ರಸಕ್ತ ಕುಂಬಳೆ ರೈಲು ನಿಲ್ದಾಣ ಸಮಸ್ಯೆಗಳ ಆಗರವಾಗಿದೆ. ದಾಖಲೆಯಲ್ಲಿ ರೈಲ್ವೇ ಇಲಾಖೆಗೆ 35 ಎಕರೆ ವಿಶಾಲ ಜಾಗವಿದ್ದರೂ ಇದರಲ್ಲಿ ಬಹುತೇಕ ಭಾಗ ಕಬಳಿಕೆಯಾಗಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ. ರೈಲು ನಿಲ್ದಾಣದ ಜಾಗವನ್ನು ಸಮಗ್ರ ಸರ್ವೇ ಮಾಡಬೇಕಾದ ಅನಿವಾರ್ಯವಿದೆ. ರೈಲು ನಿಲ್ದಾಣ ಮತ್ತು ರಾಷ್ಟ್ರೀಯ ಹೆದ್ದಾರಿ ನಡುವಿನ ಬಹುತೇಕ ಕಟ್ಟಡಗಳನ್ನು ರೈಲ್ವೇ ಇಲಾಖೆ ಜಾಗವನ್ನು ಅತಿಕ್ರಮಿಸಿ ನಿರ್ಮಿಸಲಾಗಿದೆ ಎಂಬ ಆರೋಪವಿದೆ. ಇವೆಲ್ಲವನ್ನೂ ತೆರವುಗೊಳಿಸಿ ಸಮಗ್ರ ಅಭಿವೃದ್ಧಿ ನಡೆಸಿದಲ್ಲಿ ಮಾತ್ರ ಟರ್ಮಿನಲ್‌ ಸ್ಟೇಷನ್‌ ನಿರ್ಮಾಣ ಕಾರ್ಯವೂ ಸಲೀಸಾಗಿ ನಡೆಯಲು ಸಾಧ್ಯವಿದೆ ಎಂಬುದು ರೈಲ್ವೇ ಬಳಕೆದಾರರ ಸಂಘ ಅಭಿಪ್ರಾಯಪಟ್ಟಿದೆ.

ವಿವಿಧ ಬೇಡಿಕೆ
ಕೋಟಿಕುಳಂನಲ್ಲಿ ಅಪಘಾತ ಸಾಧ್ಯತೆ ಹೆಚ್ಚಾಗಿರುವ ರೈಲ್ವೇ ಕ್ರಾಸಿಂಗ್‌ ಬದಲು ಮೇಲ್ಸೇತುವೆ ನಿರ್ಮಿಸುವುದು, ತಿರುವ ನಂತಪುರ- ಕಣ್ಣೂರು ಜನಶತಾಬ್ಧಿ ಎಕ್ಸ್‌ ಪ್ರಸ್‌ ರೈಲನ್ನು ಕುಂಬಳೆ ವರೆಗೆ ವಿಸ್ತರಿಸ ಬೇಕು, ಬೇಕಲ ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸಬೇಕು, ಬೈಂದೂರು (ಕೊಲ್ಲೂರು)- ಶೋರ್ನೂರು ರೈಲು ಸಂಚಾರ ಪುನರಾ ರಂಭಿಸುವುದರ ಜತೆಗೆ ಪಳನಿ, ಮಧುರೈ ಹಾದಿಯಾಗಿ ರಾಮೇಶ್ವರದವರೆಗೂ ವಿಸ್ತರಿಸುವುದು, ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ಕಣ್ಣೂರು – ಮಂಗಳೂರು ರೂಟಲ್ಲಿ ಮತ್ತಷ್ಟು ರೈಲುಗಳನ್ನು ಅಳವಡಿಸಬೇಕು, ಕಾಸರಗೋಡು ರೈಲು ನಿಲ್ದಾಣದಲ್ಲಿ ಟಿಕೆಟ್‌ ಕೌಂಟರ್‌ಗಳ ಸಂಖ್ಯೆ ಹೆಚ್ಚಿಸಬೇಕು, ಮಂಗಳೂರು – ಕಣ್ಣೂರು ಪ್ಯಾಸೆಂಜರ್‌ ರೈಲು ಆರಂಭಿಸುವುದು ಇವೇ ಮೊದಲಾದ ಬೇಡಿಕೆಗಳಿಗೆ ರೈಲ್ವೇ ಪ್ರಯಾಣಿಕರ ಸಂಘಟನೆ ಆಗ್ರಹಿಸಿದೆ.

Advertisement

16ಜಿಲ್ಲೆಗಳಲ್ಲಿ ರೈಲು ನಿಲ್ದಾಣಗಳು
ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 16 ರೈಲು ನಿಲ್ದಾಣಗಳಿವೆ. ಅವುಗಳಲ್ಲಿ ಮೂರು “ಎ’ ದರ್ಜೆ ನಿಲ್ದಾಣಗಳು. 10 ಆದರ್ಶ ರೈಲು ನಿಲ್ದಾಣಗಳಾಗಿವೆ. ಆದರೆ ಕಾಸರಗೋಡು ಕೇಂದ್ರ ಸಹಿತ ಮೂರು ರೈಲು ನಿಲ್ದಾಣಗಳು “ಎ’ದರ್ಜೆ ಹಾಗೂ ಉಳಿದವುಗಳು ಆದರ್ಶ ನಿಲ್ದಾಣಗಳೆಂದು ಗುರುತಿಸಿಕೊಂಡಿದ್ದರೂ ಕಾರ್ಯನಿರ್ವಹಣೆ ಮಾತ್ರ ಕಳಪೆಯಾಗಿದೆ ಎಂದು ರೈಲ್ವೇ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.

ಮನವಿ ಮಾಡಲಾಗಿದೆ
ಕುಂಬಳೆ ರೈಲು ನಿಲ್ದಾಣದಲ್ಲಿ ಅಗತ್ಯದ ಸೌಕರ್ಯ ಕಲ್ಪಿಸಬೇಕು. ರೈಲು ನಿಲ್ದಾಣ ಅಭಿವೃದ್ಧಿ ಸಮಿತಿ ಆಗ್ರಹದನ್ವಯ ಈಗಾಗಲೇ ಇಲಾಖೆ ರೈಲ್ವೇ ನಿಲ್ದಾಣದ ಎದುರು ಭಾಗದಲ್ಲಿ ಆವರಣಗೋಡೆ ನಿರ್ಮಿಸಿದೆ. ಜಾಗ ಅಳೆದು ಖಚಿತಪಡಿಸಿಕೊಳ್ಳುವುದರ ಜತೆಗೆ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಬೇಕೆಂದು ಮನವಿ ಮಾಡಲಾಗಿದೆ. ಜತೆಗೆ ಕುಂಬಳೆಯಲ್ಲಿ ಟರ್ಮಿನಲ್‌ ನಿಲ್ದಾಣ ಸ್ಥಾಪಿಸಲು ರೈಲ್ವೇ ಇಲಾಖೆ ಮುಂದಾಗಬೇಕು.
– ಫರೀದಾ ಝಾಕೀರ್‌,
ಅಧ್ಯಕ್ಷೆ, ರೈಲ್ವೇ ನಿಲ್ದಾಣ ಅಭಿವೃದ್ಧಿ ಸಮಿತಿ, ಕುಂಬಳೆ

Advertisement

Udayavani is now on Telegram. Click here to join our channel and stay updated with the latest news.

Next