Advertisement

ಕುಳಗೇರಿ ಕ್ರಾಸ್‌: ಕುಳಗೇರಿಯಲ್ಲಿ ಮುಖ್ಯ ಕಾಲುವೆ ನೆಲಸಮ

06:02 PM Jan 12, 2024 | Team Udayavani |

ಉದಯವಾಣಿ ಸಮಾಚಾರ
ಕುಳಗೇರಿ ಕ್ರಾಸ್‌: ಸುಮಾರು 40 ವರ್ಷಗಳ ಹಿಂದೆ ರೈತರ ಅನುಕೂಲಕ್ಕೆ ನೀರಾವರಿ ಉದ್ಧೇಶಕ್ಕೆ ನಿರ್ಮಿಸಲಾದ ಮಲಪ್ರಭಾ ಎಡದಂಡೆ ಮುಖ್ಯ ಕಾಲುವೆ ನೆಲಸಮ ಮಾಡಿ ಭೂಸ್ವಾಧೀನ ಮಾಡಿಕೊಂಡು ನಿವೇಶನ ನಿರ್ಮಿಸುತ್ತಿದ್ದರೂ ಸಂಬಂಧಿಸಿದ ನೀರಾವರಿ ಅ ಧಿಕಾರಿಗಳು ಮಾತ್ರ ಗಮನಹರಿಸುತ್ತಿಲ್ಲ ಎಂಬ ಆರೋಪ ರೈತರಿಂದ ಕೇಳಿಬರುತ್ತಿದೆ.

Advertisement

ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ಕಾಕನೂರು ನೀರಾವರಿ ನಿಗಮದವರ ವ್ಯಾಪ್ತಿಯ ಮಲಪ್ರಭಾ ಎಡದಂಡೆಯ ಹಲವಾರು ಕಾಲುವೆಗಳು ಸದ್ಯ ಮುಚ್ಚಿ ಹೋಗಿವೆ. ಗ್ರಾಮದ ಹೃದಯ ಭಾಗದಲ್ಲಿ ನೀರು ಹರಿಯುವ ಮಲಪ್ರಭಾ ಎಡದಂಡೆಯ 38ರ ಹಂಚು ಕಾಲುವೆಯ ದಿಕ್ಕು ಬದಲಿಸಿದ ಕೆಲವರು ನಿವೇಶನ ನಿರ್ಮಾಣಕ್ಕೆ ಮುಖ್ಯ ಕಾಲುವೆ ಮುಚ್ಚಿ ಬೇರೆ ಕಡೆ ನೀರು ಹರಿಸಲಾಗುತ್ತಿದೆ. ಈ ಕುರಿತು ಸಾಕಷ್ಟು ಬಾರಿ ರೈತರು ಮನವಿ ಮಾಡಿದ್ದಾರೆ. ಕ್ಯಾರೆ ಎನ್ನದ ನೀರಾವರಿ ಅಧಿಕಾರಿಗಳು ಸಮಸ್ಯೆ ಬಗೆಹರಿಸುತ್ತೇವೆ ಎಂದು ಹಾರಿಕೆ ನೀಡುತ್ತಿದ್ದಾರೆ ಎಂಬುದು ರೈತರ ಆರೋಪವಾಗಿದೆ.

ಅರ್ಧಕ್ಕೆ ನಿಂತ ಕಾಮಗಾರಿ: ಸದ್ಯ ಮಲಪ್ರಭಾ ಎಡದಂಡೆ ಮರು ಕಾಲುವೆ ನಿರ್ಮಾಣ(ರೀಮಾಡ್ಲಿಂಗ್‌) ಹೆಸರಲ್ಲಿ ಮರು ಜೀವ
ಪಡೆದಿದ್ದು, ಗುತ್ತಿಗೆದಾರ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿ ಹೋಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಅಪೂರ್ಣ ಕಾಮಗಾರಿಯಿಂದ ರೈತರ ಜಮಿನುಗಳಿಗೆ ಸರಿಯಾಗಿ ನೀರು ತಲುಪುತ್ತಿಲ್ಲ  ಎಂದು ರೈತರು ಗೋಳಾಡುತ್ತಿದ್ದಾರೆ.

ನೀರಾವರಿ ಅಧಿಕಾರಿಗಳ ನಿರ್ಲಕ್ಷ್ಯ: ಸದ್ಯ ಗ್ರಾಮದಲ್ಲಿ ಈ ಹಿಂದೆ 15 ಅಡಿ ರಸ್ತೆ ಸಮೇತ ಇದ್ದ ಕಾಲುವೆ ನೆಲಸಮ ಮಾಡಿ ನಿವೇಶನಗಳು ನಿರ್ಮಾಣ ಮಾಡುತ್ತಿದ್ದರೂ ಅಧಿಕಾರಿಗಳು ಮಾತ್ರ ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು, ರೈತರು ಆರೋಪಿಸುತ್ತಿದ್ದಾರೆ. ಸರಿಯಾದ ರಸ್ತೆ ಇಲ್ಲದ ಕಾರಣ ರೈತರ ಕೃಷಿ ಚಟುವಟಿಕೆಗೆ ತೊಂದರೆ ಅನುಭವಿಸುತ್ತಿದ್ದಾರೆ.

ಮುಖ್ಯ ಕಾಲುವೆಗಳು ನೆಲಸಮ: ಗ್ರಾಮದಲ್ಲಿ ನೀರು ಹರಿಯುವ ಸಾಕಷ್ಟು ಮುಖ್ಯ ಕಾಲುವೆಗಳನ್ನು ನೆಲಸಮ ಮಾಡಿ ಬಿಲ್ಡಿಂಗ್‌ ನಿರ್ಮಿಸಲಾಗಿದೆ. ಅದೇ ಪರಿಸ್ಥಿತಿಯಲ್ಲಿ ಮತ್ತೂಂದು ಮುಖ್ಯ ಕಾಲುವೆ ಮುಚ್ಚಿ ಹೋಗಿದ್ದು, ನೀರಾವರಿ ಅಧಿಕಾರಿಗಳು
ಮಾತ್ರ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.

Advertisement

ಮುಖ್ಯ ಕಾಲುವೆ ನೆಲಸಮ ಮಾಡುತ್ತಿರುವ ಪರಿಣಾಮ ಕೆಳಭಾಗದಲ್ಲಿರುವ ರೈತರಿಗೆ ನೀರು ಬಾರದೆ ತೊಂದರೆ ಅನುಭವಿಸುತ್ತಿದ್ದಾರೆ. ರೈತರ ಜಮಿನುಗಳಿಗೆ ನೀರು ಹರಿಸುವ ಮುಖ್ಯ ಕಾಲುವೆಗಳನ್ನ ಅಕ್ರಮವಾಗಿ ನೆಲಸಮ ಮಾಡುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಆದಷ್ಟು ಬೇಗ ರಸ್ತೆ ಸಮೇತ ಕಾಲುವೆ ನಿರ್ಮಿಸಿ ರೈತರಿಗೆ ಅನುಕೂಲ
ಮಾಡಬೇಕು. ಒತ್ತುವರಿ ತಡೆಯದೇ ಇದ್ದರೆ ಉಗ್ರ ಹೋರಾಟಕ್ಕೂ ಸಿದ್ದ ಎಂದು ರೈತರು ನೀರಾವರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ನನಗೆ ಏನೂ ಗೊತ್ತಿಲ್ಲ. ನಾನು ಈ ಕಚೇರಿಗೆ ಬಂದು ಮೂರು ತಿಂಗಳಾಗಿದ್ದು, ಸದ್ಯ ಗಮನಹರಿಸಿ ಕ್ರಮ ಕೈಗೊಳ್ಳುತ್ತೇನೆ. ನಮ್ಮ ಸಿಬ್ಬಂದಿ ಈಗಾಗಲೇ ಸರ್ವೇ ಕಾರ್ಯ ಮಾಡಿದ್ದಾರೆ. ನೋಟಿಸ್‌ ನೀಡಿದ್ದಾರಂತೆ. ಸಂಪೂರ್ಣ ಮಾಹಿತಿ ಪಡೆದು ಸದ್ಯ ಇನ್ನೊಂದು
ನೋಟಿಸ್‌ ನೀಡಿ ಕಾಲುವೆ ನಿರ್ಮಾಣ ಕೆಲಸ ಆರಂಭಿಸುತ್ತೇವೆ.
ಮಲ್ಲಿಕಾರ್ಜುನ ಡಂಬಳಿಕರ್‌,ಕಾಕನೂರು ನೀರಾವರಿ ಇಲಾಖೆ ಎಇಇ.

*ಮಹಾಂತಯ್ಯ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next