Advertisement

ಕುದ್ರಡ್ಕ –ಪಾಲೆರು ರಸ್ತೆಯಲ್ಲಿ ಒಂದು ವರ್ಷದಿಂದ ಕತ್ತಲು

07:26 AM Jan 23, 2020 | mahesh |

ಉಪ್ಪಿನಂಗಡಿ: ಕುದ್ರಡ್ಕ- ಪಾಲೆರು ರಸ್ತೆ ಕಾಮಗಾರಿ ಆರಂಭದಿಂದ ದಾರಿ ದೀಪದ ಬೆಳಕು ಕಾಣದೇ ಗ್ರಾಮಸ್ಥರು ಕತ್ತಲಲ್ಲಿ ಕಾಲ ಕಳೆಯುತ್ತಿದ್ದು, ತತ್‌ಕ್ಷಣ ಕ್ರಮ ಕೈಗೊಳ್ಳುವಂತೆ ಗ್ರಾ.ಪಂ. ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ತಣ್ಣೀರುಪಂತ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ನಡೆದಿದೆ.

Advertisement

ಕಲ್ಲೇರಿಯ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷ ಜಯವಿಕ್ರಮ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ವಿಚಾರ ಪ್ರಸ್ತಾವವಾಯಿತು. ಅಭಿವೃದ್ಧಿ ಅಧಿಕಾರಿ ವರದಿ ಹಾಗೂ ಸುತ್ತೋಲೆಗಳನ್ನು ಓದಿದ ಬಳಿಕ ಸದಸ್ಯರಾದ ಸದಾನಂದ ಶೆಟ್ಟಿ ಮಡಪ್ಪಾಡಿ ಮಾತನಾಡಿ, ಸರಕಾರದ ಯೋಜನೆಯಡಿ ಕುದ್ರಡ್ಕ – ಪಾಲೆರು ರಸ್ತೆಯನ್ನು ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಅಭಿವೃದ್ಧಿಪಡಿಸುವ ಕಾಮಗಾರಿಗಾಗಿ ವಿದ್ಯುತ್‌ ಕಂಬಗಳನ್ನು ಸ್ಥಳಾಂತ ರಿಸಲಾಗಿದೆ. ಇದರಿಂದ 28ಕ್ಕೂ ಅಧಿಕ ದಾರಿದೀಪಗಳು ನಿಷ್ಕ್ರಿಯವಾಗಿವೆ ಎಂದರು.

ಗುತ್ತಿಗೆದಾರರ ವಿರುದ್ಧ ಆಕ್ರೋಶ
ಕೆಲವು ದಾರಿ ದೀಪಗಳನ್ನು ಗ್ರಾ.ಪಂ. ಇತ್ತೀಚೆಗಷ್ಟೇ ಖರೀದಿಸಿದ್ದು, ಅವೂ ಉರಿಯದಂತಾಗಿವೆ. ಇಡೀ ರಸ್ತೆಯಲ್ಲಿ ಬೆರಳೆಣಿಕೆಯಷ್ಟು ದೀಪಗಳು ಮಾತ್ರ ಉರಿಯುತ್ತಿವೆ. ಒಂದು ವರ್ಷದಿಂದ ಗುತ್ತಿಗೆದಾರರು ಮೊಬೈಲ್‌ ಕರೆ ಸ್ವೀಕರಿಸುತ್ತಿಲ್ಲ. ಹೊಸದಾಗಿ ಅಳವಡಿಸಿರುವ ದೀಪಗಳಿಗೆ ಒಂದು ವರ್ಷ ಗ್ಯಾರಂಟಿ ಇದ್ದು, ಕರೆ ಸ್ವೀಕರಿಸಿದರೆ ದೀಪಗಳನ್ನು ಬದಲಿಸಿಕೊಡಬೇಕಾದ ಪರಿಸ್ಥಿತಿ ಮನಗಂಡು ಅವರು ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಈಗ ಗುತ್ತಿಗೆದಾರರನ್ನು ವಿಚಾರಿಸಿದರೆ, ಗ್ಯಾರಂಟಿ ಅವಧಿ ಮುಗಿಯಿತು ಎಂಬ ಕಾರಣ ಹೇಳಿ ನುಣುಚಿಕೊಳ್ಳುತ್ತಿದ್ದಾರೆ. ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಿ. ಎಲ್ಲ ದಾರಿದೀಪಗಳೂ ಉರಿಯುವಂತೆ ಮಾಡಲು ಕ್ರಮ ಕೈಗೊಳ್ಳಿ. ಗ್ರಾಮಾಂತರ ಪ್ರದೇಶದಲ್ಲಿ ದಾರಿ ಮಧ್ಯ ಅರಣ್ಯ ಪ್ರದೇಶವಿದ್ದು, ಗ್ರಾಮಸ್ಥರಲ್ಲಿ ಆತಂಕದ ಛಾಯೆ ಆವರಿಸಿದೆ ಎಂದು ಹೇಳಿದರು.

ಆಧಾರ್‌ ತಿದ್ದುಪಡಿಗೆ ಕ್ರಮ ಕೈಗೊಳ್ಳಿ
ಗ್ರಾ.ಪಂ. ಸದಸ್ಯ ಡಿ.ಕೆ. ಅಯೂಬ್‌ ಹಾಗೂ ತಾ.ಪಂ. ಸದಸ್ಯೆ ಕೇಶವತಿ ಮಾತನಾಡಿ, ಗ್ರಾಮಸ್ಥರು ಕಚೇರಿಗಳ ಕೆಲಸಕ್ಕಾಗಿ ಆಧಾರ್‌ ಕಾರ್ಡ್‌ಗಳ ತಿದ್ದುಪಡಿ, ಹೆಸರು ಬದಲಾವಣೆ, ಮೊಬೈಲ್‌ ಸಂಖ್ಯೆ ಸೇರ್ಪಡೆ ಸಹಿತ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ಆಧಾರ್‌ ತಿದ್ದುಪಡಿ ಮಾಡಿಸಲು ಎರಡು ದಿನಗಳ ಶಿಬಿರ ಹಮ್ಮಿಕೊಳ್ಳಬೇಕು. ಆಧಾರ್‌ ಇಲ್ಲದ ಹೊಸಬರಿಗಾಗಿ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದರು. ಇದಕ್ಕೆ ಸಮ್ಮತಿಸಿದ ಅಧ್ಯಕ್ಷರು, ಅಧಿಕಾರಿಗಳಿಗೆ ಪತ್ರ ಬರೆದು, ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಡಾಮರು ಕಾಮಗಾರಿಗೆ ಪಟ್ಟು
ಸದಸ್ಯ ಸೂರಪ್ಪ ಬಂಗೇರ ಮಾತನಾಡಿ, ತಮ್ಮ ವಾರ್ಡ್‌ ವ್ಯಾಪ್ತಿಯ ಆನೆಪಳ್ಳ ರಸ್ತೆಯ ಗತಿ ಏನು? ಅನುದಾನ ಒದಗಿಸಿ ಇಲ್ಲವೇ ಡಾಮರು ಕಾಮಗಾರಿ ಕೈಗೊಳ್ಳಿ ಎಂದು ಪಟ್ಟು ಹಿಡಿದರು. ಅನುದಾನ ಬಂದಲ್ಲಿ ಈ ರಸ್ತೆಗೆ ಒದಗಿಸುವುದಾಗಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಭರವಸೆ ನೀಡಿದರು.

Advertisement

ಜನ ಪ್ರತಿನಿಧಿಗಳಾಗಿ ತಮ್ಮ ಸೇವಾವಧಿ ಮುಗಿಯುವ ಹಂತದಲ್ಲಿದ್ದು, ಈ ಬಾರಿಯ ಗ್ರಾಮಸಭೆಯಲ್ಲಿ ಪ್ರತೀ ವಾರ್ಡ್‌ನಲ್ಲಿ ಸಾಮಾಜಿಕ ಕಾಳಜಿಯಡಿ ಪಂಚಾಯತ್‌ ನೀರುಪೋಲು, ಅನವಶ್ಯಕ ದಾರಿದೀಪ ಉರಿಯುವಿಕೆಯನ್ನು ಕಚೇರಿಯ ಗಮನಕ್ಕೆ ತಂದ ವಾರ್ಡ್‌ ಸದಸ್ಯರನ್ನು ಗುರುತಿಸಿ ಸಮ್ಮಾನಿಸಬೇಕು ಎಂದು ಸದಸ್ಯರು ಪಟ್ಟು ಹಿಡಿದರು. ಇದಕ್ಕೆ ಸರ್ವಾನುಮತದ ಒಪ್ಪಿಗೆಯೂ ಲಭಿಸಿತು. ಆಯಾ ವಾರ್ಡ್‌ ಸದಸ್ಯರೇ ಕಛೇರಿಯ ಗಮನಕ್ಕೆತಂದ ವಾರ್ಡ್‌ ಗೆ ಓರ್ವರನ್ನು ಗುರುತಿಸಿ ಸನ್ಮಾಸಿಬೇಕು ಎಂದು ಬಿಗುಪಟ್ಟು ಹಿಡಿದರು. ಇದಕ್ಕೆ ಸರ್ವಾನುಮತದ ಒಪ್ಪಿಗೆಯು ಸಿಕ್ಕಿದ್ದು ಆಯಾ ವಾರ್ಡ್‌ ಸದಸ್ಯರೇ ಗುರುತಿಸುವಂತೆ ಅಭಿವೃದ್ಧಿ ಅಧಿಕಾರಿ ತಿಳಿಸಿದರು.

ಸಭೆಯಲ್ಲಿ ಉಪಾಧ್ಯಕ್ಷರಾದ ಕೇಶವ ನಾಯ್ಕ, ಸದಸ್ಯರಾದ ರಾಕೇಶ, ನವೀನ್‌, ತಾಜುದ್ದೀನ್‌, ಅಬ್ದುಲ್‌ ರಹಿಮಾನ್‌, ಶಾಲೆಟ್‌ ವಾಸ್‌, ಹೇಮಾವತಿ, ಶಕುಂತಳಾ, ಸರೋಜಿನಿ, ಗೀತಾ, ಮೈಮೂನಾ, ಕೈರುನ್ನೀಸಾ, ಭಾರತಿ, ಯಮುನಾ, ಸುಮಾ ಉಪಸ್ಥಿತರಿದ್ದರು. ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು.

ಫೆ. 15ರಂದು ಗ್ರಾಮಸಭೆ
ಫೆ. 15ರ ಮುಂಜಾನೆ ಗ್ರಾಮಸಭೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ರುದ್ರಗಿರಿ ದೇವಸ್ಥಾನಕ್ಕೆ ಹೋಗುವ ರಸ್ತೆಗೆ ಅಬ್ಟಾಸ್‌ ಎಂಬವರು ತಮ್ಮ ತೋಟದ 200ಕ್ಕೂ ಅಧಿಕ ಅಡಿಕೆ ಗಿಡ ಕಡಿದು ಪಟ್ಟಾ ಜಾಗದಲ್ಲಿ ರಾಜರಸ್ತೆಗೆ ಅನುವು ಮಾಡಿಕೊಟ್ಟಿದ್ದು, ಸಾಮಾಜಿಕ ಸಾಮರಸ್ಯದ ಈ ಮಾದರಿ ಕಾರ್ಯವನ್ನು ಗುರುತಿಸಿ, ಅವರನ್ನು ಗ್ರಾಮಸಭೆಯಲ್ಲಿ ಸಮ್ಮಾನಿಸಲು ತೀರ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next