Advertisement

ಕೆಎಸ್‌ಆರ್‌ಟಿಸಿ ಅರ್ಧದಷ್ಟೂ ಸಿಬ್ಬಂದಿಗೆ ವರ್ಗಾವಣೆ ಅನುಮಾನ!

08:55 AM Aug 03, 2017 | Harsha Rao |

ಬೆಂಗಳೂರು: ಸಾವಿರಾರು ಸಾರಿಗೆ ನೌಕರರು ಎದುರು ನೋಡುತ್ತಿರುವ ರಸ್ತೆ ಸಾರಿಗೆ ಅಂತರ ನಿಗಮಗಳ ವರ್ಗಾವಣೆಗೆ
ಸಂಬಂಧಿಸಿದ ಪ್ರಕ್ರಿಯೆಯ ಪ್ರಾಥಮಿಕ ಹಂತ ಪೂರ್ಣಗೊಂಡಿದ್ದು, ಒಟ್ಟಾರೆ ಆಕಾಂಕ್ಷಿಗಳ ಪೈಕಿ ಅರ್ಧದಷ್ಟೂ ಸಿಬ್ಬಂದಿಗೆ ಈ ಬಾರಿ ವರ್ಗಾವಣೆ ಭಾಗ್ಯ ಸಿಗುವುದು ಅನುಮಾನವಾಗಿದೆ.

Advertisement

ಅಂತರ ನಿಗಮಗಳ ವರ್ಗಾವಣೆ ಬಯಸಿ 18,978 ಅರ್ಜಿಗಳು ಬಂದಿದ್ದು, ಅವುಗಳ ವಿಂಗಡಣೆ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ವಿವಿಧ ನಿಗಮಗಳಲ್ಲಿ ಖಾಲಿ ಇರುವ ಹುದ್ದೆಗಳೂ ಸೇರಿ ಅಬ್ಬಬ್ಟಾ ಎಂದರೆ 6ರಿಂದ 7 ಸಾವಿರ
ನೌಕರರಿಗೆ ಮಾತ್ರ ಈ ಬಾರಿ ವರ್ಗಾವಣೆ ಭಾಗ್ಯ ಸಿಗುವ ಸಾಧ್ಯತೆಯಿದೆ. ಉಳಿದವರು ಈ “ಭಾಗ್ಯ’ಕ್ಕಾಗಿ ಮತ್ತೆ ಹಲವು ವರ್ಷ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.

ಮೊದಲ ಹಂತದಲ್ಲಿ ವರ್ಗಾವಣೆ ಸಿಗದವರ ಕತೆ ಏನು ಎಂಬುದಕ್ಕೆ ಸ್ವತಃ ಸಾರಿಗೆ ನಿಗಮ ಅಥವಾ ಸರ್ಕಾರದ ಬಳಿಯೂ ಉತ್ತರವಿಲ್ಲ. ಮತ್ತೆ ಮುಂದಿನ ವರ್ಷ ಈ ವರ್ಗಾವಣೆ ಮಾಡಬಹುದು. ಆದರೆ, ನಿರೀಕ್ಷಿತ ಪ್ರಮಾಣದ
ಹುದ್ದೆಗಳು ಲಭ್ಯ ಇರುವುದಿಲ್ಲ. ಇನ್ನು ಪ್ರತಿ ವರ್ಷ ನಿವೃತ್ತಿ ಹೊಂದುವವರ ಪ್ರಮಾಣ ಕೆಎಸ್‌ಆರ್‌ಟಿಸಿಯಲ್ಲಿ ಕೇವಲ ಶೇ. 2ರಿಂದ 3ರಷ್ಟಿದೆ. ಉಳಿದ ನಿಗಮಗಳಲ್ಲಿ ಇದಕ್ಕಿಂತ ಕಡಿಮೆ. ಹೀಗಿರುವಾಗ, ಮುಂದಿನ ಎರಡು-ಮೂರು ವರ್ಷಗಳಂತೂ
ವಂಚಿತರಿಗೆ ವರ್ಗಾವಣೆ ಸಿಗುವುದು ಕಷ್ಟಸಾಧ್ಯ ಎಂದು ಹೆಸರು ಹೇಳಲಿಚ್ಛಿಸದ ಉನ್ನತ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

700 ಅರ್ಜಿ ಅಸಿಂಧು: 18,978 ಅರ್ಜಿಗಳಲ್ಲಿ ಅಂದಾಜು 700 ಅರ್ಜಿಗಳು ಅಸಿಂಧುಗೊಂಡಿದ್ದು, ಇದರಲ್ಲಿ ಶೇ.80ರಷ್ಟು ತರಬೇತಿ (ಟ್ರೈನಿ) ಹಂತದಲ್ಲಿರುವ ಅಭ್ಯರ್ಥಿಗಳಾಗಿದ್ದಾರೆ. ಹಾಗಾಗಿ, ನಿಯಮದ ಪ್ರಕಾರ ಅವರಿಗೆ ಈ ಅಂತರ ನಿಗಮಗಳ ವರ್ಗಾವಣೆಗೆ ಅವಕಾಶ ಇರುವುದಿಲ್ಲ. ಉಳಿದ ಶೇ.20ರಷ್ಟು ಅರ್ಜಿಗಳು ಪುನರಾವರ್ತನೆಗೊಂಡವು ಆಗಿವೆ. ಅರ್ಜಿ ಹಾಕಿದವರೆಲ್ಲರಿಗೂ ಏಕಕಾಲದಲ್ಲಿ ವರ್ಗಾವಣೆ ಸಾಧ್ಯವಿಲ್ಲ. ಯಾಕೆಂದರೆ, ವರ್ಗಾವಣೆ ಬಯಸಿದವರಲ್ಲಿ 16 ಸಾವಿರ ಅರ್ಜಿಗಳು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಯಿಂದಲೇ ಬಂದಿವೆ. ಉಳಿದ 3 ಸಾವಿರ ಅರ್ಜಿಗಳು ಈಶಾನ್ಯ ಮತ್ತು ವಾಯವ್ಯ ರಸ್ತೆ ಸಾರಿಗೆ ನಿಗಮಗಳಿಂದ ಬಂದಿವೆ.

ಅಂದರೆ ಎರಡು ಸಾರಿಗೆ ಸಂಸ್ಥೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಹೋಗಲು ಬಯಸಿದ್ದರಿಂದ ಅಲ್ಲಿ ಇಷ್ಟೊಂದು ಹುದ್ದೆಗಳು ಖಾಲಿಯಿಲ್ಲ. ಹಾಗಾಗಿ, ಆ ಕಡೆಯಿಂದ (ಈಶಾನ್ಯ ಮತ್ತು ವಾಯವ್ಯ ನಿಗಮಗಳು) ಬರಲು ಬಯಸಿದ 2,500-3,000
ಸಿಬ್ಬಂದಿ ಮತ್ತು ಖಾಲಿ ಇರುವ ಹುದ್ದೆಗಳು ಸೇರಿ 6ರಿಂದ 7 ಸಾವಿರ ಸಿಬ್ಬಂದಿ ವರ್ಗಾವಣೆ ಆಗಲಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್‌.ಆರ್‌. ಉಮಾಶಂಕರ್‌ “ಉದಯವಾಣಿ’ಗೆ ತಿಳಿಸಿದರು.

Advertisement

ಬಿಎಂಟಿಸಿಯಿಂದ ಕೆಲವರು ಕೆಎಸ್‌ಆರ್‌ಟಿಸಿಗೂ ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ನಗರದಲ್ಲಿ ಜೀವನ ವೆಚ್ಚ ದುಬಾರಿ. ಸಂಚಾರದಟ್ಟಣೆಯಲ್ಲಿ ಚಾಲಕ-ನಿರ್ವಾಹಕರು ಸದಾ ಒತ್ತಡದಲ್ಲೇ ಕಾರ್ಯನಿರ್ವಹಿಸುತ್ತಾರೆ. ಕೊನೇಪಕ್ಷ ಕೆಎಸ್‌ಆರ್‌ಟಿಸಿಗೆ ವರ್ಗಾವಣೆಗೊಂಡರೆ, ಬೇರೆ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಬಹುದು ಎಂಬುದು ಸಿಬ್ಬಂದಿ ಲೆಕ್ಕಾಚಾರ.
ತಗ್ಗಲಿದೆ ಆರ್ಥಿಕ ಹೊರೆ: ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಬೇರೆ ನಿಗಮಗಳಿಗೆ ವರ್ಗಾವಣೆ ಆಗುತ್ತಿರುವುದರಿಂದ ಈ ಎರಡೂ ನಿಗಮಗಳಿಗೆ ಆರ್ಥಿಕ ಹೊರೆ ಕೂಡ ತಗ್ಗಲಿದೆ ಎಂದು ಲೆಕ್ಕಪತ್ರ ವಿಭಾಗದ
ಅಧಿಕಾರಿಯೊಬ್ಬರು ಮಾಹಿತಿ ನೀಡುತ್ತಾರೆ.

ಅಂತರ ನಿಗಮಗಳ ವರ್ಗಾವಣೆಯಲ್ಲಿ ಸೇವಾ ಹಿರಿತನ ಇರುವವರಿಗೆ ಮೊದಲ ಆದ್ಯತೆ ನೀಡಲಾಗಿದೆ. ಹಾಗಾಗಿ, ಸಾಮಾನ್ಯವಾಗಿ ವರ್ಗಾವಣೆ ಹೊಂದುವವರ ಮಾಸಿಕ ವೇತನ ಹೆಚ್ಚು-ಕಡಿಮೆ 40 ಸಾವಿರ ರೂ. ಇರುತ್ತದೆ. ಈಗ
ಅದೇ ಮೊತ್ತದಲ್ಲಿ ಇಬ್ಬರು ನೌಕರರು ಬರುತ್ತಾರೆ. ಈ ನಿಟ್ಟಿನಲ್ಲಿ ತುಸು ಆರ್ಥಿಕ ಹೊರೆ ತಗ್ಗಲಿದೆ ಎಂಬುದು ಅಧಿಕಾರಿಗಳ ಲೆಕ್ಕಾಚಾರ.

Advertisement

Udayavani is now on Telegram. Click here to join our channel and stay updated with the latest news.

Next