Advertisement

ಕೆಎಸ್‌ಆರ್‌ಪಿ ಪೊಲೀಸರಿಗೆ ಐದೇ ವರ್ಷಕ್ಕೆ ಬಡ್ತಿ

04:29 PM Feb 18, 2021 | Team Udayavani |

ಕಲಬುರಗಿ:ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಪಡೆ (ಕೆಎಸ್‌ಆರ್‌ಪಿ) ಪೇದೆಗಳಿಗೆ ಐದೇ ವರ್ಷದಲ್ಲಿ ಬಡ್ತಿ ನೀಡುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದೇ ತಿಂಗಳೊಳಗೆ 200ಕ್ಕೂ ಅಧಿಕ ಪೇದೆಗಳಿಗೆ ಮುಖ್ಯ ಪೇದೆ ಹುದ್ದೆಗೆ ಬಡ್ತಿ ನೀಡಲು ಇಲಾಖೆ ಮುಂದಾಗಿದೆ.

Advertisement

ಸಾಮಾನ್ಯವಾಗಿ ಸರ್ಕಾರಿ ನೌಕಕರು ವರ್ಗಾವಣೆ ಮತ್ತು ಬಡ್ತಿಗಾಗಿ ಸಾಕಷ್ಟು ಕಸರತ್ತು ಮಾಡುವುದು ತಪ್ಪಿಲ್ಲ. ಅದರಲ್ಲೂ, ಪೊಲೀಸ್‌ ಇಲಾಖೆಯಲ್ಲಿ ಬಡ್ತಿಗಾಗಿ ಕನಿಷ್ಟ ಹತ್ತು ವರ್ಷ ಕಾಯಲೇಬೇಕು. ಸೇವೆಗೆ ಸೇರಿ 15ರಿಂದ 16 ವರ್ಷ ಕಳೆದರೂ ಬಡ್ತಿ ಸಿಗುವುದೇ ಇಲ್ಲ. ಆದರೆ, ಕೆಎಸ್‌ಆರ್‌ಪಿ ಪೊಲೀಸರು ಇನ್ನು ಮುಂದೆ ಬಡ್ತಿ ಪಡೆಯಲು ಹತ್ತು ವರ್ಷ ಕಾಯುವುದೇ ಬೇಕಾಗಿಲ್ಲ. ಐದು ವರ್ಷಕ್ಕೇ ಬಡ್ತಿ ಹೊಂದುವ ಅವಕಾಶ ಕಲ್ಪಿಸಲಾಗಿದೆ. ಮುಂದಿನ ವಾರವೇ 200 ಪೇದೆಗಳ ಬಡ್ತಿ ಆದೇಶ ಹೊರ ಬೀಳುವ ನಿರೀಕ್ಷೆ ಇದೆ.

ಫಿಟ್ನೆಸ್‌ ಒಂದೇ ಮಾನದಂಡ: ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆ ಹೊತ್ತಿರುವ ಪೊಲೀಸರು ದೈಹಿಕವಾಗಿ ಸದೃಢವಾಗಿರಲೇಬೇಕು. ಇಲಾಖೆಗೆ
ಸೇರುವಾಗ ದೇಹದಂಡನೆ ಮಾಡಿ ಫಿಟ್‌ ಆ್ಯಂಡ್‌ ಫೈನ್‌ ಆಗಿಯೇ ಇರುತ್ತಾರೆ. ಇಲಾಖೆಗೆ ಸೇರಿದ ಕೆಲ ವರ್ಷಗಳಲ್ಲೇ ದೇಹದ ಆರೋಗ್ಯವನ್ನು ಪೊಲೀಸರು ಮರೆತು ಬಿಡುತ್ತಾರೆ. ಬೊಜ್ಜು ಮತ್ತು ಅತಿಯಾದ ತೂಕ ಬೆಳೆಸುತ್ತಾರೆ. ಆದರೆ, ಈಗ ಸೇವೆಯಲ್ಲಿರುವಷ್ಟು ವರ್ಷವೂ ದೇಹ ದಂಡನೆ ಮಾಡಲೇಬೇಕೆಂಬ ಕಟ್ಟುನಿಟ್ಟಾದ ನಿಯಮವನ್ನು ಕೆಎಸ್‌ಆರ್‌ ಪಿಯಲ್ಲಿ ರೂಪಿಸಲಾಗಿದೆ. ಐದು ವರ್ಷದ ಬಡ್ತಿಗೂ ಫಿಟ್ನೆಸ್‌ ಒಂದೇ ಮಾನದಂಡವಾಗಿದೆ. ಫಿಟ್ನೆಸ್ ಕಾಯ್ದುಕೊಂಡರೆ ಬಡ್ತಿಯೂ ಸಿಗುತ್ತದೆ, ಬಯಸಿದಲ್ಲಿಗೆ ವರ್ಗಾವಣೆಯನ್ನು ಪಡೆಯಬಹುದು.

ಹೀಗಾಗಿ ನಿತ್ಯವೂ ಪೊಲೀಸರ ದೈಹಿಕ ಕ್ಷಮತೆಗೆ ಒತ್ತು ನೀಡುವ ಕೆಲಸವೂ ಇಲಾಖೆಯಿಂದಲೇ ಆಗುತ್ತಿದೆ. ಪೊಲೀಸರು ತಮ್ಮ ವಯಸ್ಸಿಗೆ ಅನುಗುಣವಾಗಿ ದೇಹದ ತೂಕ ಹೊಂದಲೇಬೇಕೆಂಬ ಸೂಚನೆಯನ್ನು ಈಗಾಗಲೇ ನೀಡಲಾಗಿದೆ. ಜತೆಗೆ ಕೆಎಸ್‌ಆರ್‌ಪಿ ಸೇರಿದ ನಂತರವೂ ಹಲವರು ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಸಿವಿಲ್‌ ಮತ್ತು ಸಿಆರ್‌ ವಿಭಾಗ ಸೇರಿಕೊಳ್ಳಲು ಅನೇಕ ರೀತಿಯಲ್ಲಿ ಪ್ರಯತ್ನ ಮಾಡುತ್ತಲೇ ಇರುತ್ತಾರೆ.ಬೇರೆಡೆಗೆ ಅರ್ಹ ಆಗದಿದ್ದರೆ ಮಾತ್ರ ಕೆಎಸ್‌ ಆರ್‌ಪಿಯಲ್ಲೇ ಉಳಿಯುತ್ತಾರೆ. ಇಂತಹ ಪ್ರವೃತಿ, ಮನೋವೃತ್ತಿ ಬದಲಾಯಿಸುವ ಕೆಲಸ ನಡೆಯುತ್ತಿದೆ.

ಕೆಎಸ್‌ಆರ್‌ಪಿ ಪೊಲೀಸರಿಗೂ ಅಗತ್ಯ ಸೌಕರ್ಯ, ಸೌಲಭ್ಯ ಒದಗಿಸಲಾಗುತ್ತಿದೆ. ಸಿವಿಲ್‌ ಸೇರಿದಂತೆ ಇತರ ವಿಭಾಗಗಳಂತೆ ಕೆಎಸ್‌ ಆರ್‌ಪಿಯಲ್ಲೂ ಪೊಲೀಸರಿಗೆ ಆರಂಭದಲ್ಲೇ 35 ಸಾವಿರ ರೂ.ಗೂ ಅಧಿಕ ಸಂಬಳ ಸಿಗುತ್ತದೆ. ನಾಲ್ಕು ವರ್ಷಗಳಲ್ಲಿ 45 ಸಾವಿರ ರೂ.ಗೆ ಏರುತ್ತದೆ.

Advertisement

ವಸತಿ ವ್ಯವಸ್ಥೆ, ಕ್ಯಾಂಟೀನ್‌ ಸೌಕರ್ಯ, ಆರೋಗ್ಯ ವಿಮೆ, ಮಕ್ಕಳಿಗಾಗಿ ಪ್ರತ್ಯೇಕವಾದ ಪೊಲೀಸ್‌ ಪಬ್ಲಿಕ್‌ ಸ್ಕೂಲ್‌ ಹಾಗೂ ವಿವಿಧ ರೀತಿಯ ಭತ್ಯೆ ಸೇರಿ 60ರಿಂದ 75 ಸಾವಿರ ರೂ. ಸಂಬಳ ಸಿಗುತ್ತದೆ. ಆದರೂ, ಕೆಎಸ್‌ಆರ್‌ಪಿ ಪೊಲೀಸರು ಕೇವಲ ಸಮಸ್ಯೆಗಳನ್ನೇ ಹೇಳಿಕೊಳ್ಳದೆ, ಸೌಲಭ್ಯಕ್ಕೆ ತಕ್ಕನಾದ ಕೆಲಸವನ್ನು ತೆಗೆಯುವ ಪ್ರಯತ್ನ ನಡೆದಿದೆ ಎನ್ನುತ್ತಾರೆ ಕೆಎಸ್‌ ಆರ್‌ಪಿ ಹಿರಿಯ ಅಧಿಕಾರಿಗಳು.

ವೆಬ್‌ ಕಾಸ್ಟ್‌ ವ್ಯವಸ್ಥೆಯಲ್ಲೇ ಅಹವಾಲು ಪರಿಶೀಲನೆ
ಕೆಎಸ್‌ಆರ್‌ಪಿಯಲ್ಲಿ ಆನ್‌ಲೈನ್‌ ವ್ಯವಸ್ಥೆ ಸಮಪರ್ಕವಾಗಿ ಅವಳಡಿಸಿಕೊಳ್ಳಲಾಗಿದೆ. ವರ್ಗಾವಣೆ ಮತ್ತು ಬಡ್ತಿ ಸೇರಿ ಪೊಲೀಸರ ಎಲ್ಲ ಸಮಸ್ಯೆ ಮತ್ತು ಅಹವಾಲುಗಳನ್ನು ಝೂಮ್‌ ಮಾದರಿ ವೆಬ್‌ ಕಾಸ್ಟ್‌ ವ್ಯವಸ್ಥೆಯಲ್ಲೇ ಪರಿಶೀಲಿಸಲಾಗುತ್ತದೆ. ಪೊಲೀಸರು ತಾವಿರುವ ಬೆಟಾಲಿಯನ್‌ ಕಚೇರಿಯಿಂದಲೇ ಬೆಂಗಳೂರಿನ ಕೇಂದ್ರ ಕಚೇರಿಗೆ ನೇರವಾಗಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ತಮ್ಮ ಅಹವಾಲು ಸಲ್ಲಿಸಬಹುದು. ಇದರಿಂದ ಉತ್ತರ ಕರ್ನಾಟಕ ಅದರಲ್ಲೂ ಕಲಬುರಗಿ, ಬೀದರ್‌, ವಿಜಯಪುರದಂತ ದೂರದ ಜಿಲ್ಲೆಗಳಿಂದ ಬೆಂಗಳೂರಿಗೆ ಅಲೆಯುವುದನ್ನು ತಪ್ಪಿಸಲಾಗುತ್ತಿದೆ. ಒಂದು ರೂ. ಖರ್ಚು ಮಾಡದೆ, ಸಮಯ ವ್ಯಯಿಸದೆ ವರ್ಗಾವಣೆ ಹಾಗೂ ಬಡ್ತಿಯ ಪೋಸ್ಟಿಂಗ್‌ ನೀಡುವ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಫಿಟ್ನೆಸ್‌ ಸಾಬೀತು ಪಡಿಸಿದರೆ ಕೇವಲ 24 ಗಂಟೆಗಳಲ್ಲೇ ಪೊಲೀಸರ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. 48 ಗಂಟೆಗಳಲ್ಲಿ ತಮ್ಮ ಆಯ್ಕೆ ಸ್ಥಳಕ್ಕೆ ಹೋಗಿ ನಿಯುಕ್ತಿಗೊಳ್ಳಬಹುದು. ಇದೇ ಮಾದರಿಯಲ್ಲಿ ಈಗಾಗಲೇ 45 ಜನ ಪೊಲೀಸರು ವರ್ಗಾವಣೆ ಪಡೆದಿದ್ದಾರೆ.

ಕೆಎಸ್‌ಆರ್‌ಪಿಯಲ್ಲಿ ಬಡ್ತಿ ಸೇವಾವಧಿಯನ್ನು ಹತ್ತರಿಂದ ಐದು ವರ್ಷಕ್ಕೆ ಇಳಿಸಲಾಗಿದೆ. ಈಗಾಗಲೇ ಫಿಟ್ನೆಸ್‌ ಆಧಾರದಡಿ ಅರ್ಹತೆ ಹೊಂದಿರುವ 200 ಪೇದೆಗಳ ಬಡ್ತಿಗೆ ಮುಂದಿನ ವಾರದಲ್ಲಿ ಆದೇಶ ಹೊರಡಿಸಲಾಗುತ್ತದೆ. ಸಿಂಪತಿ ಅಥವಾ ಲಾಬಿಗೆ ಅವಕಾಶ ನೀಡದೆ ಅರ್ಹತೆಗೆ ಮನ್ನಣೆ ಕೊಡುವ ವ್ಯವಸ್ಥೆ ಅನುಷ್ಠಾನಕ್ಕೆ ತರಲಾಗುತ್ತಿದೆ.
ಅಲೋಕ್‌ ಕುಮಾರ್‌,
ಎಡಿಜಿಪಿ, ಕೆಎಸ್‌ಆರ್‌ಪಿ

ರಂಗಪ್ಪ ಗಧಾರ

Advertisement

Udayavani is now on Telegram. Click here to join our channel and stay updated with the latest news.

Next