Advertisement

ಸಚಿವ ಈಶ್ವರಪ್ಪ ನಿರ್ಗಮನದಲ್ಲೂ ಬೆಳಗಾವಿ ಸದ್ದು !

11:25 PM Apr 14, 2022 | Team Udayavani |

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿ ರಾಜಕೀಯ ಕ್ಷೇತ್ರದಲ್ಲಿ ಮತ್ತೆ ಎಲ್ಲರೂ ತಿರುಗಿ ನೋಡುವಂತಹ ಸುದ್ದಿ ಮಾಡಿದೆ. ಜಿಲ್ಲೆಯ ಜಿದ್ದಾಜಿದ್ದಿನ ರಾಜಕಾರಣ ಬಿಜೆಪಿ ಸರಕಾರದ ಇಬ್ಬರು ಪ್ರಭಾವಿ ರಾಜಕಾರಣಿಗಳ  ತಲೆದಂಡವಾಗುವಂತೆ ಮಾಡಿರುವುದೇ ಇದಕ್ಕೆ ಸಾಕ್ಷಿ. ಈ ಎರಡೂ ತಲೆದಂಡದಲ್ಲಿ ಕಾಂಗ್ರೆಸ್‌ನ  ಒಗ್ಗಟ್ಟಿನ ಹೋರಾಟಕ್ಕಿಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಒಂದು ರೀತಿಯ ಶಪಥ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.

Advertisement

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದಲ್ಲಿ  ಗಂಭೀರ ಆರೋಪ ಹೊತ್ತ ರಮೇಶ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.  ಈಗ ಸಿಎಂ  ಬೊಮ್ಮಾಯಿ ನೇತೃತ್ವದ ಸರಕಾರದಲ್ಲಿ ಭ್ರಷ್ಟಾಚಾರ ಹಾಗೂ ಸಂತೋಷ್‌ ಪಾಟೀಲ್‌  ಆತ್ಮಹತ್ಯೆ ಪ್ರಕರಣದಲ್ಲಿ  ಸಚಿವ ಕೆ.ಎಸ್‌.ಈಶ್ವರಪ್ಪ ರಾಜೀನಾಮೆ ಪ್ರಕಟಿಸಿದ್ದಾರೆ. ಈ ಇಬ್ಬರೂ ಪ್ರಭಾವಿಗಳ ರಾಜೀನಾಮೆಗೆ ಬೆಳಗಾವಿಯ ರಾಜಕಾರಣವೇ ಕಾರಣ ಎಂಬುದು  ಸತ್ಯ.  ಎರಡೂ ಪ್ರಕರಣಗಳಲ್ಲಿ ರಾಜಕೀಯ ಪ್ರತಿಷ್ಠೆಯೇ ಪರಿಣಾಮ ಬೀರಿದೆ.

ಈಶ್ವರಪ್ಪ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಎಲ್ಲಿಯೂ ಬೆಳಗಾವಿ ಜಿಲ್ಲೆಯ ರಾಜಕಾರಣದ ಪ್ರಸ್ತಾವ ಮಾಡಿಲ್ಲ. ಆದರೆ ಗುರುವಾರ ಒಮ್ಮೆಲೇ ಅಖಾಡಕ್ಕೆ ಇಳಿದಿರುವ ರಮೇಶ ಜಾರಕಿಹೊಳಿ ಈ ಪ್ರಕರಣದ ಹಿಂದೆ  “ಮಹಾನ್‌ ನಾಯಕ’ರ ತಂಡದ ಕೈವಾಡವಿದೆ ಎನ್ನುವ ಮೂಲಕ ಶಿವಕುಮಾರ್‌ ಹಾಗೂ ಹೆಬ್ಟಾಳ್ಕರ್‌ ಕಡೆ ಬೊಟ್ಟು ಮಾಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯ ರಾಜಕಾರಣ ಎಂದಾಕ್ಷಣ ಎಲ್ಲರ ಗಮನ ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್‌ ಕಡೆ ತಿರುಗುತ್ತದೆ. ಇಬ್ಬರದೂ ಜಿದ್ದಾಜಿದ್ದಿನ ಸೆಣಸಾಟ. ಇದು ರಾಜ್ಯಮಟ್ಟದಲ್ಲಿ ಅಷ್ಟೇ ಅಲ್ಲ, ರಾಷ್ಟ್ರಮಟ್ಟದಲ್ಲೂ ಸುದ್ದಿಯಾಗುತ್ತಿದೆ.

ರಮೇಶ ಜಾರಕಿಹೊಳಿ ನೇರವಾಗಿ ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ ಎಂದು ಹೇಳಿದ್ದಾರೆ. ತಮ್ಮ ಸಿ.ಡಿ. ಮಾಡಿದ  “ಮಹಾನ್‌ ನಾಯಕ’ರ ತಂಡವೇ ಈ ಪ್ರಕರಣದಲ್ಲೂ ಕೆಲಸ ಮಾಡಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್‌ನ ಪ್ರಭಾವಿ ನಾಯಕ  ಹಾಗೂ ತಮ್ಮ ಬದ್ಧ ವೈರಿಯ ಮೇಲೆ ಆರೋಪ ಮಾಡಿದ್ದಾರೆ.

Advertisement

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸರಕಾರ  ಪತನಕ್ಕೆ ಕಾರಣವಾದ ರಮೇಶ ಜಾರಕಿಹೊಳಿ ತಮ್ಮ ಮುಂದಾಳತ್ವದಲ್ಲಿ ಬಿಜೆಪಿ ಸರಕಾರ ರಚಿಸಲು ಪ್ರಮುಖ ಕಾರಣರಾದರು. ರಮೇಶ್‌ ನೇತೃತ್ವದ ಶಾಸಕರ ಬಲದಿಂದಯಡಿಯೂರಪ್ಪ ಮುಖ್ಯಮಂತ್ರಿಯಾದರು. ಅಷ್ಟೇ ಅಲ್ಲ ಮೊದಲೇ ಮಾತು ಕೊಟ್ಟಂತೆ ಜಾರಕಿಹೊಳಿ ಅವರಿಗೆ ನೀರಾವರಿ ಖಾತೆಯೂ ಸಿಕ್ಕಿತು. ನೀರಾವರಿ ಸಚಿವರಾಗಿದ್ದೇ ತಡ ಜಿಲ್ಲೆಯ ರಾಜಕಾರಣದಲ್ಲಿ ವಿಚಿತ್ರ ತಿರುವುಗಳು ಕಂಡುಬಂದವು. ಸೇಡಿನ ರಾಜಕಾರಣ ಹೆಚ್ಚು ಮಹತ್ವ ಪಡೆದುಕೊಂಡಿತು. ಜಿದ್ದಾಜಿದ್ದಿನ ರಾಜಕಾರಣ ಸರಕಾರದ ಜತೆಗೆ ರಮೇಶ ಜಾರಕಿಹೊಳಿ ಅವರಿಗೂ ಮುಳುವಾಯಿತು. ರಹಸ್ಯ ಕಾರ್ಯಾಚರಣೆಯ ತಂತ್ರ  ಜಾರಕಿಹೊಳಿ  ಸಚಿವ ಸ್ಥಾನವನ್ನೇ ಕಸಿದುಕೊಂಡಿತು.

ಗಂಭೀರವಾಗಿ ಪರಿಗಣಿಸಿರಲಿಲ್ಲ : ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಸರಕಾರ ಇದ್ದಾಗ ಒಂದು ಸಣ್ಣ ಪಿಎಲ್‌ಡಿ ಬ್ಯಾಂಕ್‌ ರಾಜಕಾರಣ ಸರಕಾರದ ಬುಡಕ್ಕೆ ಬೆಂಕಿ ಹಚ್ಚಿತ್ತು.  ಆಗ ಜಿಲ್ಲೆಯಲ್ಲಿ ಕಾಂಗ್ರೆಸ್‌ ನಾಯಕ ಡಿ.ಕೆ.ಶಿವಕುಮಾರ್‌  ನೇರ ಹಸ್ತಕ್ಷೇಪದಿಂದ ಮುನಿಸಿಕೊಂಡಿದ್ದ ರಮೇಶ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಲ್ಲದೆ ಮೈತ್ರಿ ಸರಕಾರ ಉರುಳಿಸುವ ಪ್ರತಿಜ್ಞೆ ಮಾಡಿದ್ದರು. ಆಗ ಯಾರೂ ಅದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ರಮೇಶ ಜಾರಕಿಹೊಳಿ ಸುಮ್ಮನಿರದೆ  ಕಾಂಗ್ರೆಸ್‌ ಶಾಸಕರನ್ನು ತಮ್ಮ ಕಡೆ ಸೆಳೆಯುವಲ್ಲಿ ಯಶಸ್ವಿಯಾದರು. ಒಂದು ತಿಂಗಳಿಗೂ ಹೆಚ್ಚು ಕಾಲ ರಾಜ್ಯದ ಹೊರಗಡೆ ಇದ್ದು ಮೈತ್ರಿ ಸರಕಾರ ಕೆಡವಿದರು. ಇದೆಲ್ಲಈಗ ಇತಿಹಾಸ. ಆದರೆ ಆಗ ಸರಕಾರ ಉರುಳಿಸಿದ ಕುಖ್ಯಾತಿ ಗಡಿ ಜಿಲ್ಲೆ ಬೆಳಗಾವಿಗೆ ಅಂಟಿಕೊಂಡಿತು.

 

-ಕೇಶವ ಅದಿ

Advertisement

Udayavani is now on Telegram. Click here to join our channel and stay updated with the latest news.

Next