Advertisement

Krishna Janmashtami: ಜನಮನದ ಹಬ್ಬ – ಕೃಷ್ಣ ಜನ್ಮಾಷ್ಟಮಿ

11:41 AM Sep 03, 2023 | Team Udayavani |

ಕೃಷ್ಣ ಜನ್ಮಾಷ್ಟಮಿ ಮಹಾವಿಷ್ಣುವಿನ ದಶವತಾರಗಳಲ್ಲಿ ಒಂದಾದ ಕೃಷ್ಣಾವತಾರದ ನೆನಪಿಗಾಗಿ ಅಥವಾ ಶ್ರೀಕೃಷ್ಣ ಜನ್ಮ ಸ್ಮರಣಾರ್ಥ ಆಚರಿಸುವ ಹಬ್ಬವಾಗಿದೆ. ಹಲವಾರು ಕಡೆ ವಿವಿಧ ಹೆಸರುಗಳಿಂದ ಜನ್ಮಾಷ್ಟಮಿಯು ಪ್ರಸಿದ್ಧಿ ಪಡೆದಿದೆ. ಕೃಷ್ಣ ಜನಿಸಿದ ಈ ಶುಭದಿನವನ್ನು ಗೋಕುಲಾಷ್ಟಮಿ ಎಂದೂ ಕರೆಯಲಾಗುತ್ತದೆ. ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣಾಷ್ಟಮಿ ಎಂದೂ, ಸೌರಮಾನ ರೀತಿಯಲ್ಲಿ ಸಿಂಹ ಮಾಸದ ರೋಹಿಣೀ ನಕ್ಷತ್ರದ ದಿನ ಆಚರಿಸಲಾಗುತ್ತದೆ. ಶ್ರಾವಣ ಮಾಸದಲ್ಲಿ  ಬರುವ ಕೃಷ್ಣ ಪಕ್ಷದ ಅಷ್ಟಮಿಯು ಶ್ರೀಕೃಷ್ಣನ ಜನನ ದಿನ.

Advertisement

ಮಧುರೆಯ ರಾಜನಾದ ಕಂಸ, ತನ್ನ ತಂಗಿ ದೇವಕಿಯ ವಿವಾಹದ ಅನಂತರ ಮೆರವಣಿಗೆಯಲ್ಲಿ ಸಾಗುತ್ತಿರುವ ಸಂದರ್ಭದಲ್ಲಿ ಇವಳ 8ನೇ ಮಗನಿಂದ ನಿನಗೆ ಮರಣ ಬರಲಿದೆ ಎಂಬ ಅಶರೀರವಾಣಿಯೊಂದು ಕೇಳಿಸುತ್ತದೆ. ಇದರಿಂದ ಭಯಭೀತಗೊಂಡ ಕಂಸ ತಂಗಿ ಬಾವರನ್ನೇ ಕೊಲ್ಲಲು ಧಾವಿಸಿದಾಗ ದೇವಕಿ ಅಣ್ಣನ ಬಳಿ ಪತಿಯ ಜೀವ ಭಿಕ್ಷೆ  ಬೇಡುತ್ತಾಳೆ.

ಈ ಸಂದರ್ಭದಲ್ಲಿ ದೇವಕಿ ಜನಿಸಿದ ಎಲ್ಲ ಮಕ್ಕಳನ್ನೂ ನಿನಗೇ ಒಪ್ಪಿಸುತ್ತೇನೆ ಆದರೆ ನನ್ನ ಪತಿಯನ್ನು ಬಿಟ್ಟು ಬಿಡು ಎಂದು ಅಂಗಲಾಚಿ ಬೇಡಿಕೊಳ್ಳುತ್ತಾಳೆ. ಆಗ ದುರುಳನಾದ ಕಂಸನು ಅವರನ್ನು ಕಾರಾಗೃಹಕ್ಕೆ ತಳ್ಳುತ್ತಾನೆ. ತದನಂತರದಲ್ಲಿ ಆತನು ಜನಿಸಿದ ಏಳು ಮಕ್ಕಳನ್ನೂ ಕೊಂದದ್ದರಿಂದ ಆತನ ಪಾಪದ ಕೊಡವು ತುಂಬಿ ತುಳುಕುತ್ತಿರುತ್ತದೆ.

ಈ ಸಂದರ್ಭದಲ್ಲಿ ದೇವಕಿಯು 8ನೇ ಮಗುವಿಗೆ ಜನ್ಮನೀಡುತ್ತಾಳೆ. ಮೊದಲೇ ಕೇಳಿಬಂದ ಅಶರೀರ ವಾಣಿಯಂತೆ ವಸುದೇವನು ತನಗೆ ಜನಿಸಿದ ಗಂಡು ಮಗುವನ್ನು ಯಶೋದೆಯ ಬಳಿ ಇಟ್ಟು ಯಶೋದೆಯ ಬಳಿ ಇರುವ ಹೆಣ್ಣು ಮಗುವನ್ನು ಕಾರಾಗೃಹಕ್ಕೆ ಕರೆತಂದು ದೇವಕಿಯ ಬಳಿ ಮಲಗಿಸುತ್ತಾನೆ. ಮಗು ಜನಿಸಿದ ವಿವರ ಕೇಳಿ  ಕಂಸ ಓಡೋಡಿ ಬರುತ್ತಾನೆ.

ಹಸುಗೂಸನ್ನು ಕೊಲ್ಲಲು ಬಂಡೆಗೆ ಅಪ್ಪಳಿಸಿದಾಗ ಆ ಕೂಸು ಆಕಾಶಕ್ಕೆ ನೆಗೆದು ವಿಷ್ಣುವಿನ ಸಹಾಯಕಿ ಯೋಗಮಾಯೆಯ ರೂಪತಳೆದು ನಿನ್ನನ್ನು ಸಂಹರಿಸುವ ಶಿಶು ಜನ್ಮವೆತ್ತಿ ಬೆಳೆಯುತ್ತಿದೆ ಎಂದು ಹೇಳಿ ಮಾಯವಾದಳು ಇದನ್ನು ಕೇಳಿದ ಕಂಸನು ಭಯಭೀತನಾಗುತ್ತಾನೆ. ಹರಿಯು ಜನಿಸಿದ ಈ ಶುಭಗಳಿಗೆಯನ್ನೇ ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸುತ್ತೇವೆ.

Advertisement

ಇತ್ತ ನಂದಗೋಕುಲದಲ್ಲಿ ನಂದರಾಜನ ಮನೆಯಲ್ಲಿ ಆ ಹಸುಗೂಸು ಬೆಳೆಯುತ್ತಿರುತ್ತದೆ. ಕಂಸನು ಹರಿಯನ್ನು ಹರಣ ಗೈಯಲು ಬಗೆ ಬಗೆಯ ಪ್ರಯತ್ನ ಮಾಡಿದರೂ ಆತನ ಯಾವ ಪ್ರಯತ್ನವೂ ಸಫ‌ಲವಾಗುವುದಿಲ್ಲ. ಮುರಾರಿಯ ಬಾಲಲೀಲೆಗಳನ್ನು ವಿವರಿಸಲು ಪುಟಗಳು ಸಾಲದು. ಕೃಷ್ಣನು ಹಲವಾರು ರೀತಿಯಲ್ಲಿ ತನ್ನ ಬಾಲ ಲೀಲೆಗಳನ್ನು ತೋರಿಸುತ್ತಾ ಬೆಳೆಯುತ್ತಾನೆ. ಕೊನೆಗೆ ಈತನೇ ತನ್ನ ಮಾವನಾದ ಕಂಸನನ್ನು ವಧಿಸುತ್ತಾನೆ.

ಅಷ್ಟಮಿಯಂದು ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಮಿಂದು ಶುಚಿಭೂìತನಾಗಿ ತಳಿರು, ತೋರಣ ಸಾರಣಾದಿಗಳಿಂದ ಮನೆಯನ್ನು ಸಿಂಗರಿಸಿ,  ವ್ರತ ಸಂಕಲ್ಪ ಮಾಡಿ ಶ್ರೀಕೃಷ್ಣನ ಕಥಾಶ್ರವಣ ಮಾಡಿ ರಾತ್ರಿ ವಿಶೇಷ ಪೂಜೆ ಸಲ್ಲಿಸುವುದು ಈ ಹಬ್ಬದ ವೈಶಿಷ್ಟ್ಯ.

ಉಡುಪಿ, ಮಧುರಾ, ವೃಂದಾವನ, ಮುಂತಾದೆಡೆಗಳಲ್ಲಿ ಕೃಷ್ಣನ ಮೂರ್ತಿಯನ್ನು ಉಯ್ನಾಲೆಯಲ್ಲಿಟ್ಟು ಲಾಲಿ ಹಾಡಿ ತೂಗಲಾಗುವುದು. ಅನಂತರ ಕೃಷ್ಣನ ಜನ್ಮೋತ್ಸವವನ್ನು ಆಚರಿಸಿ ನಾಮಕರಣ, ಪೂಜೆ, ನೈವೇದ್ಯ, ಭಜನೆ ಮೊದಲಾದ ಕಾರ್ಯಕ್ರಮಗಳು ನಡೆಯುತ್ತದೆ. ಬೃಂದಾವನದಲ್ಲಿ ಇಂದಿಗೂ ಕೂಡ ಅಂದಿನ ಗೋಪಿಯರು ವರ್ತುಲಾಕಾರದಲ್ಲಿ ನರ್ತಿಸಿದಂತೆ ಹೆಣ್ಣು ಮಕ್ಕಳು ಶ್ರೀಕೃಷ್ಣನ ಮೂರ್ತಿಯ ಸುತ್ತಲೂ ಸುತ್ತುಗಟ್ಟಿ ನರ್ತಿಸುವುದು ಕಾಣಸಿಗುತ್ತದೆ.

ಹೀಗೆ ಜೀವನದ ಕಲುಷಿತ ಕಾಳರಾತ್ರಿಯಲ್ಲಿ ಎಲ್ಲರನ್ನೂ ಪವಿತ್ರಾತ್ಮರನ್ನಾಗಿ ಮಾಡುವ ಶ್ರೀಕೃಷ್ಣ ಜನ್ಮಾಷ್ಟಮಿ ಭಾರತದ ಎಲ್ಲ ಭಾಗಗಳಲ್ಲೂ ಆಚರಿಸಲ್ಪಡುವ ಜನಪ್ರಿಯ ಹಬ್ಬವಾಗಿದೆ.

ಎಲ್ಲರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭ ಹಾರೈಕೆಗಳು.

ಕಾರ್ತಿಕ್‌ ಕುಮಾರ್‌ ಕೆ., ಕಡೆಕಲ್ಲು, ಏತಡ್ಕ

Advertisement

Udayavani is now on Telegram. Click here to join our channel and stay updated with the latest news.

Next