Advertisement

Krishna Janmashtami:ನ್ಯೂಜೆರ್ಸಿ ಶ್ರೀಕೃಷ್ಣ ವೃಂದಾವನ-ಕೃಷ್ಣನ ಆಗಮನಕ್ಕೆ ರಂಗೇರಿದ ಸಂಭ್ರಮ

05:34 PM Aug 24, 2024 | Team Udayavani |

ನ್ಯೂಜೆರ್ಸಿ: ಜಗದ್ವಿಖ್ಯಾತ ಉಡುಪಿಯಲ್ಲಿ ಪುತ್ತಿಗೆ ಶ್ರೀ ಕೃಷ್ಣ ಮಠದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ 2024ರಲ್ಲಿ ಸಂಪೂರ್ಣ ಮಾಸೋತ್ಸವವಾಗಿ ವಿವಿಧ ಆಕರ್ಷಕ ಸಾಂಪ್ರದಾಯಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿರುವ ಸಂಭ್ರಮದ ಸುದ್ದಿಯನ್ನು ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಪತ್ರಿಕಾಗೋಷ್ಠಿಯಲ್ಲಿ ಇತ್ತೀಚಿಗೆ ಅರುಹಿದ ಸಂಗತಿ ವಿವಿಧ ಸುದ್ದಿ ಪತ್ರಿಕೆಗಳಲ್ಲಿ ಓದಿದ್ದೇವೆ.

Advertisement

ಉಡುಪಿಯಿಂದ ದೂರದಲ್ಲಿರುವ ಅಮೆರಿಕ, ಇಲ್ಲಿನ ಪೂರ್ವ ಭಾಗದ ನ್ಯೂಜೆರ್ಸಿಯಲ್ಲಿ ಉಡುಪಿ ಶ್ರೀ ಪುತ್ತಿಗೆ ಮಠದ ಶ್ರೀ 1008 ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳು 2002 ಡಿಸೆಂಬರ್‌ನಲ್ಲಿ ಶ್ರೀಕೃಷ್ಣ ವೃಂದಾವನವನ್ನು ಸ್ಥಾಪಿಸಿದರು. ನ್ಯೂಜೆರ್ಸಿಯ ಶ್ರೀಕೃಷ್ಣ ವೃಂದಾವನದಲ್ಲಿ ಸಹ ಶ್ರೀ ಕೃಷ್ಣ ಜನ್ಮ ಜಯಂತಿಯನ್ನು ಆಗಸ್ಟ್‌ 26ರಂದು ಭವ್ಯವಾಗಿ ಆಚರಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಂದು ಪ್ರಾತಃ ಪೂಜೆಯಿಂದ ಆರಂಭವಾಗಿ ಮಹಾಪೂಜೆಯ ಅನಂತರ ವೇದಪಾರಾಯಣವನ್ನು ಮಾಡಲಾಗುತ್ತದೆ. ಮಧ್ಯಾಹ್ನ ಮುಂದುವರೆದು ಗೀತಾ ಪಾರಾಯಣ ನಡೆಯುತ್ತದೆ. ಸಂಜೆ ಮತ್ತೂಮ್ಮೆ ಪೂಜೆಯ ಅನಂತರ ಅನೇಕ ವಾದ್ಯಗೋಷ್ಠಿಗಳ ಸಂಗೀತ ಕಾರ್ಯಕ್ರಮಗಳನ್ನು ಭಕ್ತರು ಆನಂದಿಸಬಹುದು. ಹಾಗೆಯೇ ಭಜನೆ ಸಹ ನಿರಂತರವಾಗಿ ಮುಂದುವರೆದು ಪಂಚಾಮೃತ ಅಭಿಷೇಕದೊಂದಿಗೆ ಮಹಾ ಪೂಜೆಯು ಸಹ ಆಗುತ್ತದೆ.

ಮಧ್ಯರಾತ್ರಿ ವೇಳೆಯಲ್ಲಿ ಶ್ರೀ ಕೃಷ್ಣನ ಜನ್ಮದ ಪ್ರಯುಕ್ತ ಎಲ್ಲ ಕೃಷ್ಣ ಭಕ್ತರು “ಶ್ರೀಕೃಷ್ಣ ಅರ್ಘ್ಯ ಸ್ವಾಗತ’ ಚಂದ್ರೋದಯದ ಸಮಯದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಶ್ರೀ ಕೃಷ್ಣ ಜನ್ಮಾಷ್ಟಮಿಯ ಉತ್ಸವ ಮುಂದುವರೆದು ಸೆಪ್ಟಂಬರ್‌ 1, 2024ರಂದು “ಶ್ರೀ ಕೃಷ್ಣ ಲೀಲೋತ್ಸವ, ಮಕ್ಕಳಿಗಾಗಿ ವಿವಿಧ ಆಕರ್ಷಕ ಸಾಂಪ್ರದಾಯಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ಸ್ಪರ್ಧೆಗಳ ವಿವರ: 1. ಶ್ರೀ ಕೃಷ್ಣನ ವರ್ಣ ಚಿತ್ರ ರಚನೆ, 2. ರಾಧಾಕೃಷ್ಣರ ವೇಷದ ಪ್ರದರ್ಶನ,3. ಯಕ್ಷಗಾನ, 4. ಹುಲಿ ವೇಷ, 5. ಭಗವದ್ಗೀತಾ 7ನೇ ಅಧ್ಯಾಯ ಪಠಣ. ಅಂದು ಸಂಜೆ ಮಹಾಪೂಜೆಯ ಅನಂತರ ಭಜನೆ ಪ್ರವಚನ ಮತ್ತು ರಥೋತ್ಸವ ನಡೆಯಲಿದೆ.

Advertisement

ನ್ಯೂಜೆರ್ಸಿಯ ಶ್ರೀಕೃಷ್ಣ ವೃಂದಾವನ
ಶ್ರೀಕೃಷ್ಣ ವೃಂದಾವನವು ಸುಜ್ಞಾನ ಧಾರ್ಮಿಕ ಮತ್ತು ಧಾತೃತ್ವ ಫೌಂಡೇಶನ್‌ (SRCF) ಗೆ ಸಂಬಂಧಪಟ್ಟಿದೆ. 2009ರ ಜನವರಿ ತನಕ, ಈ ಸಂಸ್ಥೆ ಪಾರ್ಲಿನ್‌ನ ದ್ವಾರಕಾದೀಶ ದೇವಾಲಯ ಸೇರಿದಂತೆ ವಿವಿಧ ಹಿಂದೂ ದೇವಾಲಯಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿತು. 2009ರ ಜನವರಿಯಲ್ಲಿ ಶ್ರೀಕೃಷ್ಣ ವೃಂದಾವನವು 215ಮೇ ಸ್ಟ್ರೀಟ್‌, ಎಡಿಸನ್‌, NJನಲ್ಲಿ ತನ್ನ ಹೊಸ ಶಾಶ್ವತ ಭವ್ಯ ದೇವಾಲಯವನ್ನು ಕಂಡುಕೊಂಡಿತು.

ಈ ಶಾಶ್ವತ ಸ್ಥಳವು ದಕ್ಷಿಣ ಎಡಿಸನ್‌ನಲ್ಲಿರುವ 3.5 ಎಕ್ರೆ ವಿಸ್ತೀರ್ಣದಲ್ಲಿದೆ ಮತ್ತು ಸುಮಾರು 15,000 ಚದರ ಅಡಿಗಳ ನಿರ್ಮಿತ ವಿಸ್ತೀರ್ಣವಿದೆ. ದೇವಾಲಯದ ಆವರಣವು ಪೂಜಾ ಮಂಟಪ, ಪ್ರಸಾದ ಹಾಲ್‌ ಮತ್ತು ಪೂಜಾರಿಗಳ ವಾಸದ ಕಟ್ಟಡಗಳನ್ನು ಒಳಗೊಂಡಿದೆ. ಇದು ಸುಮಾರು 280 ಜನರನ್ನು ಹೊಂದುವ ಸಾಮರ್ಥ್ಯವಿರುವ ಬಹುಉದ್ದೇಶ ಸಮುದಾಯ ಭವನವನ್ನೂ ಹೊಂದಿದೆ.

ವೃಂದಾವನದ ಆಸ್ಥಾನ ದೇವರು ಉಡುಪಿ ಶ್ರೀ ಕೃಷ್ಣ. ಹರಿಸರ್ವೋತ್ತಮತ್ವ-ವಾಯು ಜೀವೋತ್ತಮತ್ವದ ಹಾದಿಯಲ್ಲಿಯೇ, ವೃಂದಾವನದಲ್ಲಿ ಮುಖ್ಯಪ್ರಾಣ, ಅಂದರೆ ಶ್ರೀಹನುಮಾನ್‌ ರೂಪದ ದೇವರನ್ನು ಪೂಜಿಸಲಾಗುತ್ತಿದೆ. ಈ ಕಲಿಯುಗದಲ್ಲಿ, ಕೋಟ್ಯಾಂತರ ಭಕ್ತರು ಇಲ್ಲಿ ಸ್ಥಾಪಿತ ಮತ್ತು ಪೂಜಿಸಲ್ಪಡುವ ಕಲ್ಪತರು ಶ್ರೀ ರಾಘವೇಂದ್ರ ಸ್ವಾಮಿಯ ಮೃತಿಕಾ ಬೃಂದಾವನದ ಆಶೀರ್ವಾದವನ್ನು ಪಡೆಯುತ್ತಿದ್ದಾರೆ. ಪ್ರತೀ ದಿನ ಮೂವರು ದೇವತೆಗಳಿಗೆ ಉಡುಪಿ ಸಂಪ್ರದಾಯದಲ್ಲಿ ವೇದ ಮಂತ್ರಗಳ ಪಠಣದೊಂದಿಗೆ ಪೂಜೆ ಸಲ್ಲಿಸಲಾಗುತ್ತದೆ, ಅನಂತರ ಅನ್ನದಾನ (ಪ್ರತೀ ದಿನ ಎರಡು ಬಾರಿ) ನಡೆಯುತ್ತದೆ.

ವೃಂದಾವನವು ಅನೇಕ ಸಮುದಾಯಗಳಿಗೆ ಮತ್ತು ಅವರ ಮುಂದಿನ ತಲೆಮಾರುಗಳಿಗೆ, ಶ್ರೀಕೃಷ್ಣನ ಸಂದೇಶವನ್ನು ಪಸರಿಸುವುದರ ಮೂಲಕ ಮತ್ತು ನಮ್ಮ ಮಹಾನ್‌ ಸಂಸ್ಕೃತಿಯ ಸಂಪ್ರದಾಯಗಳನ್ನು ಈ ಭಾಗದಲ್ಲಿ ಬಲಪಡಿಸುವ ಮೂಲಕ ಜನ ಸಮಾನ್ಯರ ಅಭ್ಯುದಯಕ್ಕಾಗಿ ನೆಲೆ ಊರಿದೆ.

ಇಂದಿನ ಹೊಸ ತಲೆಮಾರುಗಳಿಗೆ, ನಮ್ಮ ಶ್ರೀಮಂತ ಸಂಸ್ಕೃತಿಯ, ಸಾಂಪ್ರದಾಯಿಕ ಮತ್ತು ಧಾರ್ಮಿಕ ಬೇರುಗಳನ್ನು ಭದ್ರ ಪಡಿಸಲು ಮತ್ತು ಅರ್ಥೈಸಲು ವೃಂದಾವನವು ಅವಕಾಶವನ್ನು ಒದಗಿಸುತ್ತದೆ. ನಮ್ಮ ಶಾಸ್ತ್ರಗಳಿಂದ ಜೀವನದ ಆಂತರಿಕ ಅರ್ಥ ಮತ್ತು ಅನೇಕ ವಿಚಾರಗಳನ್ನು ಕಲಿಯಲು ಅವಕಾಶಗಳನ್ನು ಒದಗಿಸುತ್ತದೆ. ವೃಂದಾವನವು ಉಡುಪಿಯಲ್ಲಿ ಪ್ರಸ್ತುತ ತರಬೇತಿಯನ್ನು ಪಡೆದ ಪಂಡಿತರಿಂದ ಸೇವೆಗಳನ್ನು ಒದಗಿಸುತ್ತದೆ.

ದೇವಾಲಯವು ಸಾವಿರಾರು ಜನರನ್ನು ಸೇರಿಸುತ್ತಿರುವಾಗ, ಶ್ರೀ ಕೃಷ್ಣನ ಪ್ರಮುಖ ದೇವಾಲಯವನ್ನು ಒಳಗೊಂಡ ಆಂತರಿಕ ದೇವಾಲಯವನ್ನು ಸುಧಾರಿಸಲು ಒಂದು ಪ್ರಯತ್ನವೂ ನಡೆಯುತ್ತಿದೆ. ಗರ್ಭಗುಡಿ (ಆಂತರಿಕ ದೇವಾಲಯ) ಅಳವಡಿಸಲು ಯೋಜಿಸಲಾಗಿದೆ. ಶ್ರೀ ಕೃಷ್ಣ ವೃಂದಾವನವು ಶ್ರೀ ಕೃಷ್ಣನ ಕೃಪೆಯಿಂದ ಅಯಸ್ಕಾಂತ ಶಕ್ತಿಯಂತೆ ಕೆಲಸ ಮಾಡಿದ ಸ್ವಯಂಸೇವಕರ ಪರಿಶ್ರಮದ ಫಲವಾಗಿ ವಿಜೃಂಭಿಸುತ್ತಿದೆ.

ವರದಿ:ಡಾ| ಬ.ರಾ. ಸುರೇಂದ್ರ

Advertisement

Udayavani is now on Telegram. Click here to join our channel and stay updated with the latest news.

Next