Advertisement

ಬದ್ಧತೆ ಇದ್ರೆ ಹಣ ಬಿಡುಗಡೆ ಮಾಡಿಸಿ

09:52 AM Jan 27, 2019 | |

ಕೋಲಾರ: ರಾಜ್ಯ ಸರ್ಕಾರದ ವಿರುದ್ಧ ವಿನಾಕಾರಣ ಆರೋಪ ಮಾಡುವ ಬದಲಿಗೆ ಯಡಿಯೂರಪ್ಪ ಅವರಿಗೆ ಬದ್ಧತೆ ಇದ್ದರೆ ನರೇಗಾದಡಿ ಕೇಂದ್ರದಿಂದ ಬಿಡುಗಡೆಯಾಗ ಬೇಕಿರುವ 1800 ಕೋಟಿ ರೂ. ಬಿಡುಗಡೆ ಮಾಡಿಸಲಿ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ತಿರುಗೇಟು ನೀಡಿದರು.

Advertisement

ನಗರದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಿಂದ ಬರ ನಿರ್ವಹಣೆಗೆ ಹೆಚ್ಚುವರಿ ಹಣ ಬಿಡುಗಡೆ ಮಾಡಿಸಲಿ ಅದು ಬಿಟ್ಟು, ಸತ್ಯಕ್ಕೆ ದೂರವಾದ ಮಾತುಗಳನ್ನಾಡಿದರೆ ಹಿರಿಯರಾದ ಅವರಿಗೆ ಶೋಭೆ ತರೋದಿಲ್ಲ ಎಂದು ತಿರುಗೇಟು ನೀಡಿದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಗಳು, ಹಣಕಾಸು ಸಚಿವರಾಗಿದ್ದವರು. ಯಾವ ಅನುದಾನ ಯಾವ ಹಂತದಲ್ಲಿ ಬಿಡುಗಡೆ ಆಗುತ್ತದೆ ಎನ್ನುವುದೂ ಅವರಿಗೆ ಗೊತ್ತಿದೆ. ಬರಪರಿಸ್ಥಿತಿ ನಿರ್ವಹಣೆಗಾಗಿ ಈಗಾಗಲೇ ಸರ್ಕಾರ 2600 ಕೋಟಿ ರೂ. ಜಿಪಂಗಳಿಗೆ ಬಿಡುಗಡೆ ಮಾಡಿದೆ. 1600 ರಿಂದ 1800 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.

ವಿಳಂಬ ಮಾಡಿಲ್ಲ: ಯಾವುದೇ ಕಾಮಗಾರಿ, ಕೆಲಸಗಳನ್ನು ಮಾಡಲು ಮಂಜೂರಾತಿ ಮುಖ್ಯವೇ ಹೊರತು, ಹಣ ಬಿಡುಗಡೆಯಲ್ಲ. ಅನವಶ್ಯಕ ಗೊಂದಲಗಳನ್ನು ಸೃಷ್ಟಿಸುವ ಅಗತ್ಯವೇ ಇಲ್ಲ. ಭಾಗಶಃ ಬಿಡುಗಡೆಯನ್ನು ಮಾಡಿದ್ದೇವೆ, ವಿಳಂಬ ಇಲ್ಲವೆಂದು ಸ್ಪಷ್ಟನೆ ನೀಡಿದರು.

ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹಣ ಇದೆ. ರಾಜ್ಯದಲ್ಲಿ ಹಣಕ್ಕೆ ಕೊರತೆಯಿಲ್ಲ. ಖರ್ಚು ಆದಂತೆ ಹಂತಹಂತವಾಗಿ ಬಿಡುಗಡೆ ಮಾಡುತ್ತಿದ್ದೇವೆ. ಈಗಾಗಲೇ ಕೋಲಾರ ಜಿಲ್ಲೆಯಲ್ಲಿ 220 ಕೋಟಿ ರೂ. ಡಿ.ಸಿ. ಖಾತೆಯಲ್ಲಿದೆ. ನೀರಿನ ಸಮಸ್ಯೆ ಎದುರಾದರೆ 2 ದಿನಗಳ ಒಳಗಾಗಿ ಗ್ರಾಮಕ್ಕೆ ಟ್ಯಾಂಕರ್‌ ಅಥವಾ ಖಾಸಗಿ ಕೊಳವೆಬಾವಿ ಬಾಡಿಗೆಗೆ ಪಡೆದು ನೀರು ಪೂರೈಸಲು ಸ್ಪಷ್ಟ ಸೂಚನೆ ನೀಡಲಾಗಿದೆ. ಇವೆಲ್ಲವೂ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು.

Advertisement

ಹಾಲಿಗೆ ಪ್ರೋತ್ಸಾಹಧನವನ್ನು ಬಿಜೆಪಿ ಇದ್ದಾಗಲೂ 3 ತಿಂಗಳಿಗೆ ಒಮ್ಮೆಯೇ ಪಾವತಿಸಲಾಗುತ್ತಿತ್ತು. ಅಂತೆಯೇ ಈಗಲೂ ಮಾಡಲಾಗುತ್ತಿದೆ. ಆದರೆ, ಅದರ ಬಗ್ಗೆಯೂ ಮಾತನಾಡಿರುವುದು ಸರಿಯಲ್ಲ. ಎಲ್ಲವನ್ನು ಅರ್ಥ ಮಾಡಿಕೊಂಡ ಬಳಿಕ ಮಾತನಾಡುವುದು ಸೂಕ್ತ ಎಂದು ಸಚಿವರು ಹೇಳಿದರು.

ಬರಗಾಲ ಆವರಿಸಿರುವ ಸಮಯದಲ್ಲಿ ಕೆ.ಸಿ. ವ್ಯಾಲಿಯಿಂದ ನೀರು ಬರುತ್ತಿತ್ತು. ಅದಕ್ಕೆ ತಡೆಯಾಜ್ಞೆ ತಂದಿರುವುದು ದುರಾದೃಷ್ಟ. ಇಂತಹ ಒಳ್ಳೆಯ ಕೆಲಸಗಳಿಗೆ ಕಲ್ಲು ಹಾಕುವವರಿಗೆ ಅವಿಭಜಿತ ಜಿಲ್ಲೆಯಲ್ಲಿ ಕೊರತೆಯಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ನೀರಿನಿಂದ ತೊಂದರೆಯಾಗುತ್ತಿದೆ ಎಂದು ಜನರು ಹೇಳುತ್ತಿಲ್ಲ, ವರದಿಗಳು ಹೇಳಿಲ್ಲ. ಆದರೂ ವಿನಾಕಾರಣ ಹೈಕೋರ್ಟ್‌ ಅಲ್ಲದೆ ಸುಪ್ರಿಂಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತಂದಿರುವುದು ರೈತ ವಿರೋಧಿ ಕ್ರಮ ಎಂದರೆ ತಪ್ಪಾಗಲಾರದು. ಹೀಗಾಗಿ ಒಳ್ಳೆಯ ಕೆಲಸಗಳಿಗೆ ಕಲ್ಲು ಹಾಕುವವರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗಿಯೇ ಇರುವುದಾಗಿ ಹೇಳಿದರು.

ಹೈಕೋರ್ಟ್‌ನಂತೆಯೇ ಸುಪ್ರಿಂಕೋರ್ಟ್‌ ಗೂ ಮನವರಿಕೆ ಮಾಡಿಕೊಟ್ಟು ನೀರು ಹರಿಸಲಾಗುವುದು. ಎತ್ತಿನಹೊಳೆಯೂ ಈ ಭಾಗಕ್ಕಿಂತ ಆ ಭಾಗದಲ್ಲಿ ವೇಗವಾಗಿ ಕೆಲಸವಾಗುತ್ತಿರುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಸಂಸದ ಕೆ.ಎಚ್.ಮುನಿಯಪ್ಪ, ಶಾಸಕ ಕೆ.ಶ್ರೀನಿವಾಸಗೌಡ, ಜಿಪಂ ಅಧ್ಯಕ್ಷೆ ಗೀತಮ್ಮ ಆನಂದರೆಡ್ಡಿ, ನಗರಸಭೆ ಅಧ್ಯಕ್ಷೆ ಮಹಾಲಕ್ಷ್ಮೀ, ತಾಪಂ ಅಧ್ಯಕ್ಷ ಸೂಲೂರು ಎಂ.ಆಂಜಿನಪ್ಪ, ಜಿಲ್ಲಾಧಿ ಕಾರಿ ಜೆ.ಮಂಜುನಾಥ್‌, ಎಸ್ಪಿ ರೋಹಿಣಿ ಕಟೋಚ್ ಸಫೆಟ್ ಉಪಸ್ಥಿತರಿದ್ದರು.

ಸಾಲ ಮನ್ನಾ ಯೋಜನೆ ಮುಂದೂಡಿಲ್ಲ
ಒಂದೇ ರೈತ ಕುಟುಂಬವು ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕ್‌ನಲ್ಲಿಯೂ ಸಾಲ ಪಡೆದಿದೆ. ತೆರಿಗೆಯನ್ನು ಪಾವತಿಸುವವರನ್ನು ನೋಡಿಕೊಂಡು ಸಾಲಮನ್ನಾದಲ್ಲಿ ಸೌಲಭ್ಯ ಕಲ್ಪಿಸಲು ಮತ್ತು ಒಂದೇ ಕುಟುಂಬಕ್ಕೆ ಎರಡು ಕಡೆ ಸೌಲಭ್ಯ ನೀಡುವುದು ಸೂಕ್ತವಲ್ಲ ಎನ್ನುವ ಉದ್ದೇಶಕ್ಕಾಗಿ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಅದಕ್ಕಾಗಿಯೇ ಯೋಜನೆಯು ಸ್ವಲ್ಪ ವಿಳಂಬವಾಗಿದೆ. ಆದರೂ ರಾಜ್ಯದಲ್ಲಿ 8000 ಕೋಟಿ ರೂ. ರೈತರ ಸಾಲಮನ್ನಾವಾಗಿದೆ, ಹಂತಹಂತವಾಗಿ ನಡೆಯುತ್ತದೆಯೇ ಹೊರತು ಮುಂದೂಡಿಕೆಯ ಮಾತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next