Advertisement

ಕೆ.ಆರ್.ಪೇಟೆ: ಅತ್ಯಾಚಾರಗೈದು ಅಪ್ರಾಪ್ತ ವಯಸ್ಕ ಬಾಲಕಿಯ ಕೊಲೆ

10:17 AM Dec 18, 2021 | Team Udayavani |

ಕೆ.ಆರ್.ಪೇಟೆ: ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದಿರುವ ಆತಂಕಕಾರಿ ಘಟನೆ ಬೂಕನಕೆರೆ ಗ್ರಾಮದಲ್ಲಿ ನಡೆದಿದೆ.

Advertisement

ಬಾಲಕಿಯ ಮೇಲೆ ಪಕ್ಕದ ಮನೆಯ ಪರಮೇಶ್(46) ಎಂಬಾತ, ಕಳೆದ ಐದಾರು ತಿಂಗಳಿನಿಂದ ನಿರಂತರ ಅತ್ಯಾಚಾರ ನಡೆಸಿದ್ದು,  ಆಕೆ ಗರ್ಭಿಣಿ ಎಂದು ಗೊತ್ತಾದ ಕೂಡಲೇ ನೇಣು ಬಿಗಿದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಪೋಷಕರು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಆರೋಪಿ ಪರಮೇಶ್ ಬಾಲಕಿಯ ಪೋಷಕರು ಕೆಲಸಕ್ಕೆ ಹೋದ ನಂತರ ಮನೆಗೆ ಬಂದು ಬಾಲಕಿಯನ್ನು ಬೆದರಿಸಿ ನಿರಂತರವಾಗಿ ಅತ್ಯಾಚಾರ ಎಸಗಿದ್ದ. ಆಕೆ ಗರ್ಭಿಣಿಯಾದ ವಿಚಾರ ಗೊತ್ತಾದ ಕೂಡಲೇ ಆಕೆಯ ಮನೆಯಲ್ಲಿಯೇ ನೇಣು ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ ದೂರಿನಲ್ಲಿ ಹೇಳಲಾಗಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಅಖಿಲ ಕರ್ನಾಟಕ ಅರುಂದತಿಯಾರ್ ಮಹಾಸಭಾ ರಾಜ್ಯಾಧ್ಯಕ್ಷರಾದ ಆರ್.ಕೃಷ್ಣ ಅವರ ನೇತೃತ್ವದಲ್ಲಿ ಮಂಡ್ಯ ಜಿಲ್ಲಾಧಿಕಾರಿಗಳ ಮುಂದೆ ಬೃಹತ್ ಪ್ರತಿಭಟನೆ ನಡೆಸಿದ ಮಹಾಸಭಾ ಕಾರ್ಯಕರ್ತರು ಹಾಗೂ ವಿವಿಧ ತಾಲೂಕುಗಳ ಪೌರಕಾರ್ಮಿಕರು ಆರೋಪಿಯನ್ನು ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸಬೇಕು, ಮೃತ ಬಾಲಕಿಯ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು ಹಾಗೂ ಪೋಷಕರಿಗೆ ಕನಿಷ್ಠ 30ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಪರಮೇಶ್‍ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Advertisement

ಆರ್.ಕೃಷ್ಣ ಅವರು ಮಾತನಾಡಿ, ರಾಜ್ಯಾದ್ಯಂತ ನಮ್ಮ ಅರುಂಧತಿಯಾರ್ ಸಮುದಾಯ ಬಂಧುಗಳು ಪೌರಕಾರ್ಮಿಕರಾಗಿ ಪುರಸಭೆ, ಗ್ರಾ.ಪಂ.ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲಸಕ್ಕೆ ಹೋದ ವೇಳೆ ಮನೆಯಲ್ಲಿ ಮಕ್ಕಳು ಹೊರತು ಪಡಿಸಿ ಬೇರೆ ಯಾರೂ ಇರುವುದಿಲ್ಲ, ಹಾಗಾಗಿ ನಮ್ಮ ಪೌರಕಾರ್ಮಿಕ ಕಾಲೋನಿಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next