Advertisement

Koratagere: ಮೈಸೂರು ದಸರಾದಲ್ಲಿ ಸಿದ್ದರಬೆಟ್ಟ ಸ್ತಬ್ದಚಿತ್ರ

09:51 PM Oct 08, 2024 | Team Udayavani |

ಕೊರಟಗೆರೆ: ವಿಜಯದಶಮಿ ಹಬ್ಬದಂದು ನಡೆಯುವ ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಸಸ್ಯ ಸಂಜೀವಿನಿ ಕ್ಷೇತ್ರದ ಸಿದ್ದರಬೆಟ್ಟ, ಏಷ್ಯಾ ಖಂಡದ ಏಕೈಕ ಏಕಶಿಲ ಬೆಟ್ಟ, ಮಧುಗಿರಿ ಬೆಟ್ಟ, ಏಳು ಸುತ್ತಿನ ಕೋಟೆ ಎಂದೇ ಹೆಸರುವಾಸಿಯಾದ ಚನ್ನರಾಯನದುರ್ಗ ಮತ್ತು ಸಸ್ಯ ಸಂಜೀವಿನಿ ಕ್ಷೇತ್ರವೆಂದು ಸುಪ್ರಸಿದ್ದಿ ಪಡೆದಿರುವ ಸಿದ್ದರಬೆಟ್ಟದ ಸ್ತಬ್ದಚಿತ್ರಗಳು ತುಮಕೂರು ಜಿಲ್ಲೆಯಿಂದ ಸೆ.12ರ ಶನಿವಾರ ಪ್ರದರ್ಶನವಾಗಲಿವೆ.

Advertisement

ತುಮಕೂರು ಜಿಲ್ಲಾಧಿಕಾರಿ ಡಾ.ಶುಭ ಕಲ್ಯಾಣ್ ಮತ್ತು ಜಿ.ಪಂ. ಸಿಇಓ ಜಿ.ಪ್ರಭು ವಿಶೇಷ ಆಸಕ್ತಿ ವಹಿಸಿ ಜಿಲ್ಲೆಯ 5 ಪ್ರಮುಖ ಕ್ಷೇತ್ರಗಳ ಮಾಹಿತಿ ಪಡೆದು ಕಲಾವಿದರಿಂದ ವಿನ್ಯಾಸ ಸಿದ್ದಪಡಿಸಿ ಅಂತಿಮವಾಗಿ ಸಿದ್ದರಬೆಟ್ಟ ಆಯ್ಕೆ ಮಾಡಿ ಜೊತೆಗೆ ಏಷ್ಯಾ ಖಂಡದ ಏಕಶಿಲಾ ಬೆಟ್ಟ ಮಧುಗಿರಿ ಮತ್ತು ಏಳು ಸುತ್ತಿನ ಕೋಟೆ ಆಗಿರುವ ಚನ್ನರಾಯನದುರ್ಗ ಸೇರಿದಂತೆ ಅರಸರು, ಸಂಜೀವಿನಿ ಪರ್ವತ, ಐತಿಹಾಸಿಕ ವಿಷಯಾಧಾರಿತ ಸ್ತಬ್ದಚಿತ್ರ ನಿರ್ಮಿಸಿ ದಸರಾ ಮಹೋತ್ಸವದಲ್ಲಿ ಪ್ರದರ್ಶನ ಮಾಡಲು ಸಜ್ಜಾಗಿದೆ.

ಸ್ತಬ್ದಚಿತ್ರದ ವಿಶೇಷತೆ ಏನಿದೆ ಗೊತ್ತಾ..?

ಮೈಸೂರು ದಸರಾದಲ್ಲಿ ಪ್ರದರ್ಶನವಾಗುವ ಸ್ತಬ್ದಚಿತ್ರ 11 ಅಡಿ ಅಗಲ, 12 ಅಡಿ ಎತ್ತರ ಮತ್ತು 32 ಅಡಿ ಉದ್ದವಿದೆ. ಸ್ತಬ್ದಚಿತ್ರದ ಮುಂದಿನ ಅರ್ಧ ಭಾಗ ಸಿದ್ದರಬೆಟ್ಟ, ಶ್ರೀ ಸಿದ್ದೇಶ್ವರ ಸ್ವಾಮಿ, ಗುಹೆ, ಮಹಾದ್ವಾರ ಮತ್ತು ಮೆಟ್ಟಿಲುಗಳು ಮೂಡಿಬರಲಿದೆ. ರಾಜ ಕುರಂಗರಾಯ ಮತ್ತು ಐತಿಹಾಸಿಕ ಕುರುಹುಗಳಿವೆ. ಹಿಂದಿನ ಅರ್ಧಭಾಗದಲ್ಲಿ ಮಧುಗಿರಿ ಮತ್ತು ಚನ್ನರಾಯನದುರ್ಗದ ಪ್ರತಿಕೃತಿ, ಅರಸರ ಚಿತ್ರಗಳು, ಇತಿಹಾಸದ ಸಾಕ್ಷಿಗಳಾದ ಶಾಸನ, ವೀರಗಲ್ಲು, ದೇವಾಲಯಗಳ ಪ್ರತಿಕೃತಿ ಮೂಡಿ ಬಂದಿದೆ.

5 ಸಲ ಬಹುಮಾನ ಮತ್ತು ಜನಮೆಚ್ಚುಗೆ..

Advertisement

ತುಮಕೂರು ಜಿಲ್ಲೆಯನ್ನು ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ 2014 ರಿಂದ 6 ಸಲ ಪ್ರತಿನಿಧಿಸಿ ತಿಪಟೂರಿನ ಅರಳುಗುಪ್ಪೆಯ ಶ್ರೀಚನ್ನಕೇಶವ ದೇವಾಲಯ (2014), ಎಡೆಯೂರು ಶ್ರೀಸಿದ್ದಲಿಂಗೇಶ್ವರ ದೇವಾಲಯ (2017), ಸಿದ್ದಗಂಗೆಯ ಶ್ರೀಶಿವಕುಮಾರ ಸ್ವಾಮಿಗಳು (2018), ಅಕ್ಷರ ದಾಸೋಹ ಸಿದ್ದಗಂಗಾ ಮಠ (2019), ನಿಟ್ಟೂರು ಹೆಚ್‍ಎಎಲ್ ಘಟಕ (2022), ಮೂಡಲಪಾಯ ಯಕ್ಷಗಾನ (2023) ದ ಬಹುಮಾನ ಜನಮೆಚ್ಚುಗೆ ಪಡೆದಿದೆ. 5 ಬಾರಿ ಬಹುಮಾನ ತಂದುಕೊಟ್ಟ ತಿಪಟೂರಿನ ಕಲಾವಿದ ತಿಪಟೂರು ಕೃಷ್ಣ ಮತ್ತು ಅವರ ತಂಡ ಈ ಬಾರಿಯು ಸ್ತಬ್ದಚಿತ್ರ ನಿರ್ಮಾಣದ ಹೊಣೆಗಾರಿಕೆ ಹೊತ್ತಿದೆ.

10 ತಾಲೂಕಿನಲ್ಲಿ 10 ದಿನ ಸಂಚಾರ..

ಮೈಸೂರು ದಸರಾದ ಜಂಬೂ ಸವಾರಿ ಮುಗಿದ ಮಾರನೇಯ ದಿನದಿಂದ ಸಸ್ಯ ಸಂಜೀವಿನಿ ಕ್ಷೇತ್ರ, ಏಳು ಸುತ್ತಿನ ಕೋಟೆ ಮತ್ತು ಏಕಶಿಲಾ ಬೆಟ್ಟದ ಸ್ತಬ್ದಚಿತ್ರವು ತುಮಕೂರು ಜಿಲ್ಲೆಯ 10 ತಾಲೂಕಿನಲ್ಲಿ ಸಂಭ್ರಮ ಮತ್ತು ಸಡಗರದಿಂದ ಸಂಚರಿಸಲಿದೆ. ಪ್ರತಿದಿನ 1ತಾಲೂಕಿನಲ್ಲಿ ಸಂಚಾರ ನಡೆಸಲು ಸಂಘ-ಸಂಸ್ಥೆ, ಇತಿಹಾಸ ತಜ್ಞರು ಮತ್ತು ಅಧಿಕಾರಿಗಳ ತಂಡ ವಿಶೇಷ ಕಾಳಜಿ ವಹಿಸಿವೆ.

ಸಿದ್ದರಬೆಟ್ಟ ಸ್ತಬ್ದಚಿತ್ರದ ವಿಶೇಷತೆ..

ಸಸ್ಯಸಂಜೀವಿನಿ ಕ್ಷೇತ್ರ ಎಂದೇ ಸುಪ್ರಸಿದ್ದ ಪಡೆದಿರುವ ಸಿದ್ದರಬೆಟ್ಟ ಸಮುದ್ರ ಮಟ್ಟದಿಂದ 2650 ಅಡಿ ಎತ್ತರದಲ್ಲಿದೆ. ಕೇವಲ ಸ್ಪರ್ಶದಿಂದಲೇ ಕಬ್ಬಿಣವೂ ಬಂಗಾರವಾಗುವ ಔಷಧಿ ಸಸ್ಯಗಳ ಸಂಜೀವಿನಿ ಬೆಟ್ಟದಲ್ಲಿದೆ. ರಾಜ ಕುರಂಗರಾಯ ಆದಿಯಿಂದಲೂ ಶ್ರೀಗಳ ಅಣತಿಯಂತೆ ಬೆಟ್ಟವನ್ನು ಅಭಿವೃದ್ದಿಗೆ ಶ್ರಮಿಸಿದ್ದಾರೆ. ಕುರಂಗರಾಯ ಮೈಸೂರು ಪ್ರಾಂತ್ಯದ ಮೊದಲ ದಲಿತ ರಾಜ ಕಟ್ಟಿದ ಕೋಟೆಯು ಕುರಂಗಕೋಟೆ ಎನಿಸಿದೆ. ಚರ್ಮದ ನಾಣ್ಯವನ್ನು ಜಾರಿಗೆ ತಂದ ಪ್ರಥಮ ರಾಜನೆಂಬ ಹೆಗ್ಗಳಿಕೆಗೆ ಕುರಂಗರಾಯನಿಗೆ ಇದ್ದು ಇವೆಲ್ಲವು ಸ್ತಬ್ದಚಿತ್ರದಲ್ಲಿ ಅಡಕವಾಗಿದೆ.

ಏಷ್ಯಾಖಂಡದ ಅತಿದೊಡ್ಡ ಏಕಶಿಲಾಬೆಟ್ಟ..

ತುಮಕೂರು ಜಿಲ್ಲೆಯ ಮಧುಗಿರಿ ಕೇಂದ್ರದಲ್ಲಿನ ಏಕಶಿಲಾಬೆಟ್ಟ ಸಮುದ್ರ ಮಟ್ಟದಿಂದ 3930 ಅಡಿ ಎತ್ತರದಲ್ಲಿದೆ. ವಿಶೇಷವಾದ ವಾಸ್ತುಶಿಲ್ಪ ಕೋಟೆ ಎನಿಸಿರುವ ಮಧುಗಿರಿ ಕೋಟೆಯನ್ನು 17ನೇ ಶತಮಾನದಲ್ಲಿ ವಿಜಯನಗರ ರಾಜವಂಶದವರಿಂದ ನಿರ್ಮಿಸಲ್ಪಟ್ಟಿದೆ. ಕೋಟೆಯ ಗೋಡೆಗಳು ತುಂಬಾ ಕಡಿದಾಗಿದ್ದು ಶತ್ರುಗಳು ಏರಲು ಅಸಾಧ್ಯ. ಕೋಟೆಯ ವಿಶಿಷ್ಟ ಎಂದರೇ ಬೃಹತ್ ಪ್ರವೇಶದ್ವಾರ. ಹೀರೇಗೌಡ ಎಂಬ ಸಾಮಾಂತ ರಾಜನ ಆಳ್ವಿಕೆಯಲ್ಲಿದ್ದು ಮೈಸೂರು ಅರಸರ ಪ್ರಮುಖ ಭದ್ರಕೋಟೆ ಆಗಿತ್ತು ಎಂಬ ಇತಿಹಾಸವಿದೆ.

ಏಳು ಸುತ್ತಿನ ಕೋಟೆ ಸಿ.ಎನ್.ದುರ್ಗ..

ಸಿದ್ದರಬೆಟ್ಟ ಸಮೀಪವೇ ಇರುವ ಚನ್ನರಾಯನದುರ್ಗ ಏಳು ಸುತ್ತಿನ ಕೋಟೆ ಎಂದೇ ಸುಪ್ರಸಿದ್ದಿ ಪಡೆದಿದೆ. ಇತಿಹಾಸದ ಹಲವಾರು ಸಾಮ್ರಾಜ್ಯಗಳ ಉಗಮ ಮತ್ತು ಪತನಕ್ಕೆ ಸಾಕ್ಷಿಯಾಗಿರುವ ಏಳು ಸುತ್ತಿನ ಕೋಟೆಯು ಸುಮಾರು 3734 ಅಡಿ ಎತ್ತರದಲ್ಲಿದೆ. ಆಕರ್ಷಕವಾಗಿದ್ದ ಈ ಕೋಟೆಯನ್ನು ವಶಪಡಿಸಿಕೊಳ್ಳಲು ಮೈಸೂರು ಒಡೆಯರು, ಮರಾಠರು ಸತತ ಸೆಣಸಾಟ ನಡೆಸಿದ್ದರು.

ನಂತರ ಆಂಗ್ಲರು ವಶಪಡಿಸಿಕೊಂಡಿದ್ದರೂ ಮೈಸೂರು ಅರಸರ ನಿರಂತರ ಹೋರಾಟದಿಂದ ಬಿಡುಗಡೆಗೊಂಡಿತ್ತು. ಕೋಟೆಯೂ ವಿಶಿಷ್ಟ ರೀತಿಯಲ್ಲಿ ನಿರ್ಮಿಸಲಾಗಿದೆ. ತಳದಿಂದ ಬೆಟ್ಟದ ತುದಿಯವರೆಗೂ ಮೂರು ಹಂತಗಳಲ್ಲಿ ಸುಂದರವಾಗಿ, ರಕ್ಷಣಾತ್ಮಕವಾಗಿ ಕೋಟೆ ನಿರ್ಮಿಸಲಾಗಿದೆ.

ಮೈಸೂರು ದಸರಾದಲ್ಲಿ ಕೊರಟಗೆರೆಯ ಸಿದ್ದರಬೆಟ್ಟ, ಚೆನ್ನರಾಯನದುರ್ಗ ಮತ್ತು ಮಧುಗಿರಿಯ ಏಕಶಿಲಾ ಬೆಟ್ಟದ ಸ್ತಬ್ದಚಿತ್ರದ ಜೊತೆ ಮಹಾರಾಜರ ಇತಿಹಾಸ ಒಳಗೊಂಡ ಚಿತ್ರ ಪ್ರದರ್ಶನದ ಆಗಲಿದೆ. 15 ಜನ ಕಲಾವಿದರಿಂದ ಕಳೆದ 20 ದಿನಗಳಿಂದ ಸ್ತಬ್ದಚಿತ್ರ ತಯಾರಿಸಲಾಗಿದೆ. ಇದು ನಮ್ಮ ತುಮಕೂರು ಜಿಲ್ಲೆಯ ಹೆಮ್ಮೆಯ ವಿಚಾರ. – ಜಿ.ಪ್ರಭು. ಜಿಪಂ ಸಿಇಓ. ತುಮಕೂರು

Advertisement

Udayavani is now on Telegram. Click here to join our channel and stay updated with the latest news.

Next