Advertisement

ಅವ್ಯವಸ್ಥೆಯ ಆಗರವಾದ ಕೊರಟಗೆರೆ ಅಂಬೇಡ್ಕರ್ ವಸತಿ ಶಾಲೆ :ವಿದ್ಯಾರ್ಥಿಗಳ ಪೋಷಕರಿಂದ ಪ್ರತಿಭಟನೆ

09:09 PM Nov 08, 2021 | Team Udayavani |

ಕೊರಟಗೆರೆ : ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯಲ್ಲಿನ ಅವ್ಯವಸ್ಥೆ, ಅಭದ್ರತೆ, ಹುಳು ಬಿದ್ದಿರುವ ಊಟ, ಪ್ರಾಂಶುಪಾಲರು ಭೋದಕವರ್ಗದ ಕಿತ್ತಾಟ ಸೇರಿದಂತೆ ಹಲವು ಸಮಸ್ಯೆಗಳಿಂದ ಮಕ್ಕಳ ಮನಸಿನ ಮೇಲೆ ಪರಿಣಾಮ ಬೀರಿ ವಿದ್ಯಾಭ್ಯಾಸ ಮಾಡದ ಸ್ಥಿತಿ ಉಂಟಾಗಿದೆ ಎಂದು ಪೋಷಕರು ದೂರಿ ವಸತಿ ಶಾಲೆಯಲ್ಲಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

Advertisement

ದೀಪಾವಳಿ ಹಬ್ಬದ ಪ್ರಯುಕ್ತ ಸರಣಿ ರಜಾ ಇರುವ ಕಾರಣ ತಮ್ಮ ಮನೆಗಳಿಗೆ ತೆರೆಳಿದ್ದ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಪಟ್ಟಣದ ಡಾ, ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯಲ್ಲಿ ನಡೆಯುತ್ತಿದ್ದ ಅವ್ಯವಸ್ಥೆ ಬಗ್ಗೆ ತಂದೆ ತಾಯಿಗಳಿಗೆ ತಿಳಿಸಿದ ಪರಿಣಾಮ ವಿವಿಧ ತಾಲ್ಲೂಕುಗಳಿಂದ ಪೋಷಕರು ಮಕ್ಕಳೊಂದಿಗೆ ಆಗಮಿಸಿ ವಸತಿ ಶಾಲೆ ಪ್ರಾಂಶುಪಾಲರ ವಿರುದ್ದ ಪ್ರತಿಭಟನೆ ನಡೆಸಿ ವಾಗ್ವಾದಕ್ಕೆ ಇಳಿದಿದ್ದರು.

ನಂತರ ಶಾಲೆಯ ಎಲ್ಲಾ ಮಕ್ಕಳನ್ನು ಒಂದಡೆ ಸೇರಿಸಿ ಪೋಷಕರ ಮುಂದೆ ಪ್ರಾಂಶುಪಾಲರು ಮತ್ತು ಭೋದಕ ವರ್ಗ ಸಮಸ್ಯೆಗಳ ಬಗ್ಗೆ ಆಲಿಸಿದಾಗ ಬಹುತೇಕ ಮಕ್ಕಳು ಅಡಿಗೆಯವರ ಬಗ್ಗೆ ಹಾಗೂ ಹಲವು ಭಾರಿ ಹುಳುಬಿದ್ದ ಆಹಾರ ನೀಡಿದ್ದರ ಬಗ್ಗೆ ದೂರು ನೀಡಿದರು. ವಿದ್ಯಾರ್ಥಿನಿಲಯದ ತಾತ್ಕಾಲಿಕ ಭದ್ರತಾ ಸಿಬ್ಬಂದ್ದಿ ಲೋಕೇಶ್ ಅನಗತ್ಯವಾಗಿ ಹೆಣ್ಣು ಮಕ್ಕಳ ಕೊಠಡಿಗೆ ಬಾಗಿಲು ತಟ್ಟಿ ಮುನ್ಸೂಚನೆ ನೀಡದೇ ವಿನಾಕಾರಣ ಬಂದು ತೊಂದರೆ ನೀಡುತ್ತಿರುವುದನ್ನು ಹೆಣ್ಣುಮಕ್ಕಳು ಒಕ್ಕೊರಳಲ್ಲಿ ದೂರು ನೀಡಿದರು. ಹಾಗೂ ಇಷ್ಟೆಲ್ಲಾ ಸಮಸ್ಯೆಗಳನ್ನು ಪ್ರಾಂಶುಪಾಲರ ಬಳಿ ಹೇಳಿದ್ದರು ಸಹ ತಿಪ್ಪೆ ಸಾರಿಸುವ ಕೆಲಸವನ್ನು ಅವರು ಮಾಡಿದ್ದನ್ನು ಪೋಷಕರ ಬಳಿ ತಿಳಿಸಿದರು. ಗಂಡು ಮಕ್ಕಳಿಗೂ ಸಹ ಅನಾರೋಗ್ಯದ ಸಮಸ್ಯೆ ಇದ್ದಾಗ ಸರಿಯಾದ ಚಿಕಿತ್ಸೆ ನೀಡಿಲ್ಲದ ಬಗ್ಗೆ ದೂರುಗಳು ಬಂದವು.

ಇದನ್ನೂ ಓದಿ :ಅರುಣಾಚಲದಲ್ಲಿ ಸೇನಾ ದಾಳಿಯ ಬೆದರಿಕೆ : ಭಾರತೀಯ ಸೇನೆ ಹೈ ಅಲರ್ಟ್‌

ಸ್ಥಳಕ್ಕೆ ತಹಶೀಲ್ದಾರ್ ಭೇಟಿ:- ವಿಷಯ ತಿಳಿದ ಕೊರಟಗೆರೆ ತಹಶೀಲ್ದಾರ್ ನಾಹೀದಾ ಜಮ್ ಜಮ್ ಸ್ಥಳಕ್ಕೆ ಧಾವಿಸಿ ಊಟ ಮತ್ತು ಕೊಠಡಿ ಸ್ವಚ್ಚತೆ ಹಾಗೂ ಶೌಚಾಲಯವನ್ನು ಪರಿಶೀಲಿಸಿದರು. ಆಹಾರ ದಾಸ್ತಾನು ಕೊಠಡಿಗೆ ಹೋದಾಗ ಕೆಲವು ಪದಾರ್ಥಗಳಲ್ಲಿ ಹುಳು ಬಿದ್ದಿರುವುದನ್ನು ಕಂಡು ಪ್ರಾಶುಪಾಲರಿಗೆ ತರಾಟೆಗೆ ತೆಗೆದುಕೊಂಡರು. ಆಹಾರ ದಾಸ್ತಾನು ಪುಸ್ತಕ ಮತ್ತು ಊಟದ ಮೆನು ಚಾರ್ಟ್ ಈ ಎರಡನ್ನು ನಿರ್ವಹಿಸದೇ ಇದ್ದದ್ದನ್ನು ಗಮನಿಸಿದರು. ನಂತರ ವಿದ್ಯಾರ್ಥಿನಿಲಯದ ಎಲ್ಲಾ ಹೆಣ್ಣು ಮಕ್ಕಳನ್ನು ಒಂದೆಡೆ ತರಗತಿಯಲ್ಲಿ ಕರೆಸಿ ಅವರ ಸಮಸ್ಯೆಗಳ ಬಗ್ಗೆ ಗುಪ್ತವಾಗಿ ಆಲಿಸಿ, ವೈಯಕ್ತಿಕ ಸಮಸ್ಯೆಗಳನ್ನು ತಿಳಿದ ನಂತರ ಹೊರ ಬಂದು ಪ್ರಾಂಶುಪಾಲರು ಮತ್ತು ಭದ್ರತಾ ಸಿಬ್ಬಂದಿ ವಿರುದ್ದ ಕೆಂಡಾಮಂಡವಾದರು. ಕೂಡಲೇ ಕೊರಟಗೆರೆ ಪಿಎಸ್‌ಐ ನಾಗರಾಜು ಹಾಗೂ ಸಿಬ್ಬಂದಿಯವರನ್ನು ಕರೆಸಿ ಭದ್ರತಾ ಸಿಬ್ಬಂದಿ ಲೋಕೇಶ್‌ನನ್ನು ಅವರ ವಶಕ್ಕೆ ನೀಡಿ ಕೆಲಸದಿಂದ ವಜಾ ಮಾಡುವಂತೆ ಪ್ರಾಂಶುಪಾಲರಿಗೆ ಸೂಚಿಸಿದರು. ಇಂತಹ ಸಿಬ್ಬಂದ್ದಿಯನ್ನು ಕೆಲಸದಲ್ಲಿ ಮುಂದುವರೆಸುವುದಕ್ಕೆ ಹಾಗೂ ಇಲ್ಲಿನ ಯಾವ ಸಮಸ್ಯೆಗಳನ್ನು ಪರಿಹರಿಸದ ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡು, ಅಡುಗೆ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದರು. ಭೋದಕ ವರ್ಗದವರಿಗೂ ಸಹ ತಂದೆ ತಾಯಿಯರ ರೀತಿ ಬೆರೆತು ಅವರ ಸಮಸ್ಯೆಗಳನ್ನು ಆಲಿಸಿ ಬಗ್ಗೆಹರಿಸುವಂತೆ ಆದೇಶಿಸಿದರು. ಮುಂಬರುವ ದಿನಗಳಲ್ಲಿ ವಸತಿ ಶಾಲೆಯಲ್ಲಿ ದೂರು ಪೆಟ್ಟಿಗೆಯನ್ನು ಇಡುವಂತೆ ಅದರಲ್ಲಿ ಮಕ್ಕಳು ತಮ್ಮ ದೂರುಗಳನ್ನು ಹಾಕುವಂತೆ ಅದನ್ನು ಸ್ವತಃ ತಾವೇ ನಿರ್ವಹಿಸುವುದಾಗಿ ಹೆಣ್ಣುಮಕ್ಕಳಿಗೆ ಭರವಸೆ ನೀಡಿ ಧೈರ್ಯ ತುಂಬಿದರು. ಹಾಗೂ ಈ ಸಂದರ್ಭದ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವುದಾಗಿ ಮಾದ್ಯಮದವರಿಗೆ ತಿಳಿಸಿದರು.

Advertisement

ಪರಿಶಿಷ್ಟವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಆಗಮನ: ಸ್ಥಳಕ್ಕೆ ಧಾವಿಸಿದ ಇಲಾಖಾ ಅಧಿಕಾರಿ ತ್ಯಾಗರಾಜು ತಹಶೀಲ್ದಾರ್‌ರಿಂದ ಪೋಷಕರಿಂದ ಮಾಹಿತಿ ಪಡೆದು ತಪ್ಪಿತಸ್ಥರ ವಿರುದ್ದ ಕಾನೂನುಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ದೂರು ನೀಡಿದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುವ ಭರವಸೆಯನ್ನು ಪೋಷಕರಿಗೆ ನೀಡಿದರು. ಹಲವು ನ್ಯೂನತೆಗಳನ್ನು ಸರಿಪಡಿಸುವುದಾಗಿ ತಿಳಿಸಿದರು. ಪ್ರಾಂಶುಪಾಲ ಸುರೇಶ್‌ರನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕೆನ್ನುವ ಪೋಷಕರ ಅಹವಾಲನ್ನು ಪಡೆದು ಹಿರಿಯ ಅಧಿಕಾರಿಗಳಿಗೆ ವರದಿ ನೀಡುವುದಾಗಿ ಭರವಸೆ ನೀಡಿ ಇನ್ನು ಮುಂದೆ ಈರೀತಿ ಆಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದರು.

ವಸತಿ ಶಾಲೆಯಲ್ಲಿ ಪ್ರಾಂಶುಪಾಲರ ಅಸಮರ್ಥತೆ, ವಿದ್ಯಾರ್ಥಿನಿಯರ ಅಭದ್ರತೆ , ಮೂಲಭೂತ ಸೌಕರ್ಯ ಮತ್ತು ಸ್ವಚ್ಚತೆಯಿಲ್ಲದ ಶೌಚಾಲಯ, ಅಡುಗೆ ಮತ್ತು ವಸತಿ ಕೊಠಡಿಗಳು, ಭೋದಕ ವರ್ಗದವರ ಒಳಕಿತ್ತಾಟ, ಮಹಿಳಾ ವಸತಿ ನಿಲಯವಿದ್ದರು ರಾತ್ರಿವೇಳೆ ಮಹಿಳಾ ಭದ್ರತಾ ಸಿಬ್ಬಂದಿ ಇಲ್ಲದಿರುವುದು, ರಾತ್ರಿ ವೇಳೆಯಲ್ಲಿ ಒಬ್ಬ ಶಿಕ್ಷಕಿಯಾದರು ಉಳಿಯದೇ ಇರುವುದು ಇಡೀ ವಸತಿಶಾಲೆಯ ಅವ್ಯವಸ್ಥೆ ಎದ್ದು ಕಾಣುತ್ತಿತ್ತು. ಜೊತೆಗೆ ಕೆಲ ಹುಳುಬಿದ್ದ ಆಹಾರ ಪದಾರ್ಥಗಳ ಬಗ್ಗೆ ಅಡುಗೆಯವರ ನಿರ್ಲಕ್ಷತೆ ಕಂಡು ಬರುತ್ತಿತ್ತು. ಸರ್ಕಾರವು ಕೋಟಿಗಟ್ಟಲೇ ವಸತಿಶಾಲೆಗಳಿಗೆ ನೀಡುತ್ತಿದ್ದರು ಅಲ್ಲಿನ ಅವ್ಯವಸ್ಥೆ ನಿಜಕ್ಕೂ ಆಘಾತಕಾರಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next