Advertisement

ಯೋಗದಿಂದ ದೇಹ-ಮನಸ್ಸು ಗಟ್ಟಿ

03:13 PM Jun 22, 2019 | Team Udayavani |

ಕೊಪ್ಪಳ: ಭಾರತದ ಯೋಗಕ್ಕೆ ವಿಶ್ವ ಮಟ್ಟದಲ್ಲಿ ಮಾನ್ಯತೆ ದೊರೆತಿದೆ. ಅಂತಹ ಯೋಗದ ಬಗ್ಗೆ ಜನರಿಗೆ ಜಾಗೃತಿಗಾಗಿ ಆನೆಗೊಂದಿಯಲ್ಲಿ ಯೋಗ ವಿದ್ಯಾಲಯ ಅಥವಾ ಯೋಗಾಶ್ರಮ ಆರಂಭಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

Advertisement

ಜಿಲ್ಲಾಡಳಿತ, ಜಿಪಂ ಹಾಗೂ ಆಯುಷ್‌ ಇಲಾಖೆಯ ಆಶ್ರಯದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಯೋಗದಿಂದ ದೇಹವನ್ನಷ್ಟೇ ಅಲ್ಲ, ಮನಸ್ಸನ್ನೂ ಕೂಡ ಗಟ್ಟಿಗೊಳಿಸಬಹುದು. ಪ್ರಧಾನಿ ನರೇಂದ್ರ ಮೋದಿ 2015ರಲ್ಲಿ ಯೋಗ ದಿನಾಚರಣೆಗೆ ಕರೆ ನೀಡಿದಾಗ ವಿಶ್ವದ ಎಲ್ಲಾ ರಾಷ್ಟ್ರಗಳು ಇದಕ್ಕೆ ಬೆಂಬಲ ವ್ಯಕ್ತಪಡಿಸಿದವು. ಅಂತಾರಾಷ್ಟ್ರೀಯ ಯೋಗ ದಿನವನ್ನು ಇಂದು ಜಗತ್ತಿನ ನೂರಾರು ದೇಶಗಳಲ್ಲಿ ಆಚರಿಸಲಾಗುತ್ತದೆ. ಯೋಗದ ಮಹತ್ವದಿಂದಾಗಿ ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತಾಗಿದೆ. ಪ್ರತಿ ವರ್ಷ ಒಂದು ಮಹತ್ವದ ವಾಕ್ಯದೊಂದಿಗೆ ಯೋಗ ದಿನ ಆಚರಿಸಲಾಗುತ್ತಿದೆ ಎಂದರು.

ಒತ್ತಡದ ನಡುವೆ ಬದುಕು ಸಾಗಿಸುವ ಇಂದಿನ ಜೀವನ ಶೈಲಿಗೆ ಯೋಗ ಅವಶ್ಯಕವಾಗಿ ಬೇಕಾಗಿದ್ದು, ಯೋಗದಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಯೋಗದಿಂದ ಅನೇಕ ರೋಗಗಳು ದೂರವಾಗಲಿವೆ ಮತ್ತು ಮಾನಸಿಕ ಆರೋಗ್ಯ ಸದೃಢತೆ ಹೊಂದುವುದರ ಜೊತೆಗೆ ಶಾಂತಿ, ಸಹನೆ ಮನೋಭಾವ ಬೆಳೆಯಲು ಸಾಧ್ಯವಾಗಲಿದೆ. ಜಿಲ್ಲೆಯ ಆನೆಗುಂದಿಯು ಪ್ರಾಕೃತಿಕ, ನೈಸರ್ಗಿಕ ತಾಣವಾಗಿದ್ದು, ಇಲ್ಲಿ ಯೋಗ ವಿದ್ಯಾಲಯ ಅಥವಾ ಇದಕ್ಕೆ ಸಂಬಂಧಿಸಿದ ಆಶ್ರಮ ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇನೆ ಎಂದರು.

ಜಿಲ್ಲಾಧಿಕಾರಿ ಸುನೀಲ್ ಕುಮಾರ್‌ ಮಾತನಾಡಿ, ನಿತ್ಯ ಯೋಗಾಭ್ಯಾಸ ಮಾಡುವವರು, ಇಡೀ ದಿನ ಹುರುಪಿನಿಂದ ಹಾಗೂ ಚೈತನ್ಯದಿಂದ ಕಾರ್ಯ ನಿರ್ವಹಿಸಲು ಸಾಧ್ಯ. ಯೋಗವು ಇಂದಿನ ಸಾಮಾಜಿಕ ಬದುಕಿನಲ್ಲಿನ ಒತ್ತಡಗಳನ್ನು ಕೆಲವೇ ನಿಮಿಷಗಳಲ್ಲಿ ನಿವಾರಿಸುವ ದಿವ್ಯ ಔಷಧಿಯಾಗಿದೆ. ಯೋಗದಿಂದ ಬದುಕಿನಲ್ಲಿ ಏಕಾಗ್ರತೆ ಹಾಗೂ ದೃಢ ಮನಸ್ಸು ಪಡೆಯಲು ಸಾಧ್ಯವಿದೆ. ಹೆಚ್ಚಿನ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ಸರ್ಕಾರಿ ನೌಕರರು ಒತ್ತಡದಿಂದ ಮುಕ್ತರಾಗಲು ಯೋಗ ಮಾಡುವುದು ಅಗತ್ಯವಾಗಿದೆ ಎಂದರು.

Advertisement

ಜಿಪಂ ಸಿಇಒ ಆರ್‌.ಎಸ್‌. ಪೆದ್ದಪ್ಪಯ್ಯ ಮಾತನಾಡಿದರು. ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ ಜಿಲ್ಲಾ ಸಂಸ್ಥೆಯಿಂದ ಸಿದ್ಧಪಡಿಸಿದ್ದ 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪರಿಸರ ದಿನಾಚರಣೆ ಹಾಗೂ 2019-20ನೇ ಸಾಲಿನ ವಾರ್ಷಿಕ ಕ್ರೀಯಾ ಯೋಜನೆಯ ಕೈಪಿಡಿ ಬಿಡುಗಡೆ ಮಾಡಲಾಯಿತು.

ಸಮಾರಂಭಕ್ಕೂ ಮುನ್ನ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಆಯುಷ್‌ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ವೈ.ಜೆ. ಶಿರವಾರ, ಯೋಗ ಗುರು ಅಶೋಕಸ್ವಾಮಿ ಹಿರೇಮಠ ಅವರು ಯೋಗಾಭ್ಯಾಸ ನಡೆಸಿಕೊಟ್ಟರು.

ಜಿಲ್ಲಾ ಆಯುಷ್‌ ಅಧಿಕಾರಿ ಡಾ| ಬಸವರಾಜ ಕುಂಬಾರ, ಈಶ್ವರಿ ವಿಶ್ವವಿದ್ಯಾಲಯದ ಯೋಗಿನಿ ಅಕ್ಕ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು, ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next