Advertisement

ಕಾರ್ಮಿಕರು ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಲಿ

11:16 AM Mar 03, 2019 | Team Udayavani |

ಕೊಪ್ಪಳ: ಕಾರ್ಮಿಕರಿಗೆ ಸರ್ಕಾರದ ವಿವಿಧ ಸೌಲಭ್ಯಗಳಿದ್ದು, ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕೆಂದು ಜಿಪಂ ಅಧ್ಯಕ್ಷ ವಿಶ್ವನಾಥರಡ್ಡಿ ಹೇಳಿದರು.

Advertisement

ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‌ನಲ್ಲಿ ಆಯೋಜಿಸಿದ್ದ ಕಾರ್ಮಿಕ ಸಮ್ಮಾನ ಪ್ರಶಸ್ತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ಕಾರ್ಮಿಕರು ತಾವು ಮಾಡುವ ಕೆಲಸದಲ್ಲಿ ದೇವರನ್ನು ಕಾಣಬೇಕು. ಅಂದಾಗ ಮಾತ್ರ ಆ ಕೆಲಸದಿಂದ ಪುರಸ್ಕಾರ, ಸನ್ಮಾನಗಳು ತಾವೇ ಹುಡಿಕಿಕೊಂಡು ಬರುತ್ತವೆ. ಎಷ್ಟು ಶ್ರಮವಹಿಸಿ ಕೆಲಸ ಮಾಡುತ್ತೆವೆಯೋ ಅಷ್ಟು ಪ್ರತಿಫಲ ಸಿಗುವುದರಲ್ಲಿ ಸಂಶಯವೇ ಇಲ್ಲ. ಆದ್ದರಿಂದ ಕಾರ್ಮಿಕರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರವು ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ. ಹಲವಾರು ಕ್ಷೇತ್ರದಲ್ಲಿ ಕಾರ್ಮಿಕರು ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ. ಅಂತಹ ಕಾರ್ಮಿಕರನ್ನು ಗುರುತಿಸಿ ಅವರಿಗೆ ಸರ್ಕಾರದಿಂದ ಕಾರ್ಮಿಕ ಸಮ್ಮಾನ ಪ್ರಶಸ್ತಿಗಳು ಹಾಗೂ ಗೌರವಧನ ನೀಡುವ ಮೂಲಕ ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಕಾರ್ಮಿಕರ ವೃತ್ತಿಪರ ಕೆಲಸದಲ್ಲಿ ಇನ್ನು ಹೆಚ್ಚಿನ ಆಸಕ್ತಿ ದೊರೆಯಲಿದೆ. ಕಾರ್ಮಿಕರಿಗೆ ವಿವಾಹ, ಮನೆ ನಿರ್ಮಾಣಕ್ಕೆ ಸಹಾಯಧನ, ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ, ಮಕ್ಕಳ ವಿವಾಹಕ್ಕೆ ಧನ ಸಹಾಯ ಹೀಗೆ ಹಲವಾರು ಸೌಲಭ್ಯಗಳನ್ನು ನೀಡಿ ಅವರಿಗೆ ಜೀವನ ಕಲ್ಪಿಸಲು ಸರ್ಕಾರ ಸಿದ್ಧವಿದೆ. ಅಲ್ಲದೇ ವಿವಿಧ ರೀತಿಯ ಸೌಲಭ್ಯಗಳನ್ನು ಜಾರಿಗೆ ಮಾಡಿದ್ದು, ಕಾರ್ಮಿಕರು ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕೆಂದರು.

ಸರ್ಕಾರದ ಸಂಸದೀಯ ಕಾರ್ಯದರ್ಶಿ ರಾಘವೇಂದ್ರ ಹಿಟ್ನಾಳ ಮಾತನಾಡಿ, ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಮಾತಿನಂತೆ ನಾವು ಮಾಡುವ ಕೆಲಸದಲ್ಲಿ ಕೈಲಾಸವನ್ನು ಕಾಣಬೇಕು. ಅಂದಾಗ ಮಾತ್ರ ಆ ಕೆಲಸಕ್ಕೆ ಯಶಸ್ಸು ಬರುತ್ತದೆ. ಅಂಬೇಡ್ಕರ್‌ ಸಹಾಯ ಹಸ್ತ ನೋಂದಣಿ ಪಲಾನುಭವಿಗಳಿಗೆ ಹಲವಾರು ಕ್ಷೇತ್ರದಲ್ಲಿ ಉಚಿತ ಸೌಲಭ್ಯಗಳನ್ನು ನೀಡುತ್ತಿದ್ದು, ಅಂತಹ ಕಾರ್ಮಿಕರಿಗೆ ರೂ. ಐದು ಲಕ್ಷ ಅನುದಾನದಲ್ಲಿ ಮನೆಗಳ ನಿರ್ಮಾಣ, ಹಾಗೆಯೆ ಕೆಲಸದ ಸಂದರ್ಭದಲ್ಲಿ ಅಕಾಲಿಕ ಮರಣ ಹೊಂದಿದ ಕಾರ್ಮಿಕರಿಗೆ ರೂ. ಐದು ಲಕ್ಷ ಪರಿಹಾರವನ್ನು ಸರ್ಕಾರದಿಂದ ವಿತರಿಸಲಾಗುತ್ತದೆ. ಇಎಸ್‌ಐ ನೋಂದಣಿಯಾಗಿರುವ ಕಾರ್ಮಿಕರಿಗೆ ಆರೋಗ್ಯ ಸಮಸ್ಯೆಯಾದರೆ ಸರ್ಕಾರದಿಂದ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಚಂದ್ರಶೇಖರ ಎನ್‌. ಐಲಿ ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಹಲವಾರು ಕಾರ್ಮಿಕರನ್ನು ಗುರುತಿಸಿ ಅವರಿಗೆ ನೋಂದಣಿ ಕಾರ್ಡ್‌ಗಳನ್ನು ನೀಡುತ್ತಿದ್ದು, ಅವರಿಗೆ ಸರ್ಕಾರದಿಂದ ಬರುವ ಸಹಾಯಧನ ನೀಡುತ್ತಿದ್ದೇವೆ. ಹಾಗೆಯೇ ಕೇಂದ್ರ ಸರ್ಕಾರದ ಶ್ರಮ, ಸಮ್ಮಾನ್‌ ಧನ ಯೋಜನೆಯಡಿ 60 ವರ್ಷ ಪೂರೈಸಿದ ವ್ಯಕ್ತಿಗಳಿಗೆ ಪಿಂಚಣಿ ನೋಂದಣಿಯಲ್ಲಿ ಕೊಪ್ಪಳ ಜಿಲ್ಲೆಯು ರಾಜ್ಯದ ಎರಡನೇ ಸ್ಥಾನದಲ್ಲಿದೆ. ಇನ್ನು ಅನೇಕ ರೀತಿಯ ಯೋಜನೆಗಳ ಬಗ್ಗೆ ಇಲಾಖೆಯು ಕಾರ್ಮಿಕರಿಗೆ ಮಾಹಿತಿಯನ್ನು ನೀಡುತ್ತಿದೆ ಎಂದರು.

Advertisement

ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್‌, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಗೂಳಪ್ಪ ಹಲಗೇರಿ, ತಾಪಂ ಅಧ್ಯಕ್ಷ ಬಾಲಚಂದ್ರನ್‌, ಜಿಲ್ಲಾ ಕಾರ್ಮಿಕ ನಿರೀಕ್ಷಕ ಹೊನ್ನಪ್ಪ, ಬಸವರಾಜ ಹಿರೇಗೌಡರ್‌ ಸೇರಿದಂತೆ ಮತ್ತಿತರರಿದ್ದರು. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು, ಅಗಸರು, ಕ್ಷೌರಿಕರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಮಂಡಕ್ಕಿ ಭಟ್ಟಿ ಕಾರ್ಮಿಕರು, ಸಾರಿಗೆ ಕಾರ್ಮಿಕರು, ಹಮಾಲಿಗಳು, ಟೈಲರ್‌ಗಳು ಹಾಗೂ ಅಸಂಘಟಿತ ಕಾರ್ಮಿಕ ವರ್ಗಕ್ಕೆ ಕಾರ್ಮಿಕ ಸಮ್ಮಾನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next