Advertisement

ಅಸ್ತಮಾ ಪೀಡಿತರಿಗೆ ಉಚಿತ ಔಷಧಿ

10:34 AM Jun 10, 2019 | Naveen |

ಕೊಪ್ಪಳ: ಮೃಗಶಿರ ಮಳೆ ಕೂಡುವ ಸಮಯದಲ್ಲಿ ತಾಲೂಕಿನ ಕುಟಗನಹಳ್ಳಿಯ ಕುಲಕರ್ಣಿ ಕುಟುಂಬವೊಂದು ಹಲವು ವರ್ಷಗಳಿಂದ ಅಸ್ತಮಾ ರೋಗಿಗಳಿಗೆ ಗಿಡಮೂಲಿಕೆಗಳಿಂದ ಕೂಡಿದ ಔಷಧಿ ಉಚಿತ ವಿತರಣೆ ಮಾಡುತ್ತಿದ್ದು, ಶನಿವಾರ ಮಧ್ಯರಾತ್ರಿ ಸಾವಿರಾರು ಜನರಿಗೆ ಔಷಧಿ ವಿತರಿಸಲಾಯಿತು.

Advertisement

ಕುಟಗನಹಳ್ಳಿಯಲ್ಲಿ ಅಶೋಕರಾವ್‌ ಕುಲಕರ್ಣಿ ಕುಟುಂಬವು ಹಲವು ವರ್ಷಗಳಿಂದ ಮೃಗಶಿರ ಮಳೆ ಕೂಡುವ ಸಮಯದಲ್ಲಿ ಈ ಔಷಧಿ ವಿತರಣೆ ಮಾಡುತ್ತಾ ಬಂದಿದೆ. ಇಲ್ಲಿನ ಔಷಧಿ ಸೇವನೆ ಮಾಡಿದರೆ ಅಸ್ತಮಾ ರೋಗ ನಿವಾರಣೆಯಾಗಲಿದೆ ಎನ್ನುವ ನಂಬಿಕೆ ಜನತೆಯಲ್ಲಿದೆ. ಹಾಗಾಗಿ ರಾಜ್ಯ ಸೇರಿದಂತೆ ಅನ್ಯ ರಾಜ್ಯದಿಂದಲೂ ಜನತೆ ಪ್ರತಿ ವರ್ಷವೂ ಆಗಮಿಸುತ್ತಾರೆ.

ಈ ಬಾರಿ ಮೃಗಶಿರಾ ಮಳೆಯು ಶನಿವಾರ ರಾತ್ರಿ 11:30ಕ್ಕೆ ಕೂಡಿದ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆಯೇ ವಿವಿಧ ಕಡೆಯಿಂದ ಆಗಮಿಸಿದ್ದ ಜನತೆ ಗ್ರಾಮದ ಹೊರ ವಲಯದ ಬಯಲು ಪ್ರದೇಶದಲ್ಲಿ ವಾಸ್ತವ್ಯ ಮಾಡಿದ್ದರು. ಸಂಜೆ ಗ್ರಾಮದ ತುಂಬೆಲ್ಲ ಜನಜಾತ್ರೆ ಎನ್ನುವಂತೆ ಭಾಸವಾಗಿತ್ತು.

ಅಶೋಕರಾವ್‌ ಕುಲಕರ್ಣಿ ಕುಟುಂಬ ಗ್ರಾಮ ವ್ಯಾಪ್ತಿಯಲ್ಲಿನ ಗುಡ್ಡಗಾಡು ಪ್ರದೇಶದಲ್ಲಿ ಸುತ್ತಾಡಿ ಗಿಡಮೂಲಿಕೆಗಳ ಎಲೆಗಳನ್ನು ತಂದು ಅವುಗಳನ್ನು ಮಿಶ್ರಣ ಮಾಡಿ ಸಣ್ಣ ಮಾತ್ರೆ ರೂಪದಲ್ಲಿ ಸಿದ್ಧಪಡಿಸಿಟ್ಟುಕೊಂಡಿರುತ್ತದೆ. ಪ್ರತಿ ವರ್ಷ ಮೃಗಶಿರ ಮಳೆ ಕೂಡುವ ವೇಳೆ ಈ ಔಷಧಿ ವಿತರಣೆ ಮಾಡಲಾಗುತ್ತಿದೆ. ಸುತ್ತಲಿನ ಸಾವಿರಾರು ಜನರು ಈ ಔಷಧಿ ಸೇವನೆ ಮಾಡಿದರೆ ಅಸ್ತಮಾ ರೋಗ ವಾಸಿಯಾಗಲಿದೆ ಎನ್ನುವ ನಂಬಿಕೆಯಿದೆ. ಜೊತೆಗೆ ಅಸ್ತಮಾ ರೋಗ ಇಲ್ಲದೇ ಇರುವವರೂ ಸಹಿತ ಇದನ್ನು ಸೇವನೆ ಮಾಡುತ್ತಿದ್ದಾರೆ. ಶನಿವಾರ ಮಧ್ಯ ರಾತ್ರಿ ಕುಲಕರ್ಣಿ ಕುಟುಂಬ ಪೂಜೆ ಸಲ್ಲಿಸಿ ಜನಸ್ತೋಮಕ್ಕೆ ಔಷಧಿ ವಿತರಣೆ ಮಾಡಿತು.

Advertisement

Udayavani is now on Telegram. Click here to join our channel and stay updated with the latest news.

Next