Advertisement

Koppal Lok Sabha Constituency: ಹಿಟ್ನಾಳ್‌ಗೆ ಹೊಸ ಮುಖ ಡಾ| ಕ್ಯಾವಟರ್‌ ಸವಾಲು

05:24 PM May 02, 2024 | Team Udayavani |

ಕೊಪ್ಪಳ: ಕೊಪ್ಪಳ ಲೋಕಸಭೆ ಕ್ಷೇತ್ರದ ಚುನಾವಣೆ ಈ ಬಾರಿ ಹೊಸ ಇತಿಹಾಸಕ್ಕೆ ಸಾಕ್ಷಿಯಾಗುತ್ತಿದೆ. ಕಾಂಗ್ರೆಸ್‌ನಿಂದ
ರಾಜಶೇಖರ ಹಿಟ್ನಾಳ್‌, ಬಿಜೆಪಿಯಿಂದ ಹೊಸಮುಖ ಡಾ| ಬಸವರಾಜ ಕ್ಯಾವಟರ್‌ ನಡುವೆ ಕಾದಾಟ ನಡೆದಿದೆ. ಕಮಲಕ್ಕೆ
ದಳ ಹಾಗೂ ರೆಡ್ಡಿ ಶಕ್ತಿ ದೊರೆತರೆ, ಕಾಂಗ್ರೆಸ್‌ಗೆ ಆರು ಶಾಸಕರ ಬಲದ ಜತೆಗೆ ಬಿಜೆಪಿ ಸಂಸದರಾಗಿದ್ದ ಸಂಗಣ್ಣ ಕರಡಿ
ಸೇರ್ಪಡೆಯಿಂದ ಹೆಚ್ಚಿನ ಬಲ ಬಂದಿದೆ.

Advertisement

ಕ್ಷೇತ್ರದಲ್ಲೀಗ ಕುಟುಂಬ ರಾಜಕಾರಣ ವರ್ಸಸ್‌ ಹೊಸ ಮುಖದ ಸಮರ ಏರ್ಪಟ್ಟಿದೆ. ಒಟ್ಟು 17 ಚುನಾವಣೆಗಳು ನಡೆದಿದ್ದು ಕಾಂಗ್ರೆಸ್‌ 9, ಜೆಡಿಎಸ್‌ 2, ಬಿಜೆಪಿ 3, ನಾಲ್ಕು ಬಾರಿ ಪಕ್ಷೇತರರು ಗೆದ್ದಿದ್ದಾರೆ. 2009ರಿಂದ ಕ್ಷೇತ್ರ ಕಮಲದ ಹಿಡಿತದಲ್ಲಿದೆ. ಅದರ ಮರು ವಶಕ್ಕೆ ಕಾಂಗ್ರೆಸ್‌ ಹಠಕ್ಕೆ ಬಿದ್ದಿದೆ. ಎಂಟು ವಿಧಾನಸಭೆ ಕ್ಷೇತ್ರಗಳ ಪೈಕಿ 2018ರಲ್ಲಿ 5 ಬಿಜೆಪಿ, 2 ಕಾಂಗ್ರೆಸ್‌, 1 ಜೆಡಿಎಸ್‌ ಗೆದ್ದಿದ್ದರೆ, 2023ರಲ್ಲಿ 6 ಕಾಂಗ್ರೆಸ್‌, 1 ಬಿಜೆಪಿ, ಜನಾರ್ದನ ರೆಡ್ಡಿ ನೇತೃತ್ವದ ಕೆಆರ್‌ಪಿಪಿ 1 ಸ್ಥಾನದಲ್ಲಿ ಗೆದ್ದಿತ್ತು. ರೆಡ್ಡಿ ಈಗ ಬಿಜೆಪಿ ಸೇರಿದ್ದಾರೆ. 2014 ಹಾಗೂ 2019ರಲ್ಲಿ ಸಂಗಣ್ಣ ಕರಡಿ ಬಿಜೆಪಿ ಸಂಸದರಾಗಿದ್ದರು. ಆದರೆ ಈ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ತಪ್ಪಿದ್ದರಿಂದ ಕಾಂಗ್ರೆಸ್‌ ಸೇರಿದ್ದಾರೆ.

ಗ್ಯಾರಂಟಿ ಸ್ಕೀಂ -ಮೋದಿ ನಾಮಬಲ: ಕಾಂಗ್ರೆಸ್‌ ಅಭ್ಯರ್ಥಿ ರಾಜಶೇಖರ ಹಿಟ್ನಾಳ್‌ ಗ್ಯಾರಂಟಿ ಯೋಜನೆ ಜತೆಗೆ ಮೋದಿ ಆಡಳಿತ ವೈಫಲ್ಯಗಳನ್ನು ಪಟ್ಟಿ ಮಾಡಿ ಜನರ ಮುಂದಿಡುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಡಾ| ಬಸವರಾಜ ಅವರು ಪ್ರಧಾನಿ ಮೋದಿ ನಾಮ ಬಲದ ಜತೆ ಕೇಂದ್ರ ಸರಕಾರದ ಅಭಿವೃದ್ಧಿ ಕೆಲಸ, ದೇಶದ ಭದ್ರತೆ, ವಿಕಸಿತ ಭಾರತದ ಕನಸು, ಅಂಜನಾದ್ರಿ ಅಭಿವೃದ್ಧಿ, ಹಿಂದೆ ಕ್ಷೇತ್ರದಲ್ಲಿ ಸಂಗಣ್ಣ ಕರಡಿ ಮಾಡಿದ ಅಭಿವೃದ್ಧಿ ಕಾರ್ಯ ಮುಂದಿಟ್ಟು ಮತ ಯಾಚಿಸುತ್ತಿದ್ದಾರೆ.

ಲಿಂಗಾಯತ ಮತಗಳ ಪ್ರಾಬಲ್ಯ ಹೆಚ್ಚಿದ್ದರೆ ಅನಂತರದಲ್ಲಿ ಕುರುಬ, ಎಸ್‌ಸಿ-ಎಸ್‌ಟಿ, ಮುಸ್ಲಿಮರು ಗಣನೀಯ ಸಂಖ್ಯೆಯಲ್ಲಿದ್ದಾರೆ. ರಾಜಶೇಖರ ಹಿಟ್ನಾಳ್‌ ಕುರುಬ ಸಮುದಾಯಕ್ಕೆ ಸೇರಿದ್ದು ಜಾತಿ ಬಲ, ಅಲ್ಪಸಂಖ್ಯಾಕ, ಅಹಿಂದ
ಮತಗಳು ಆಸರೆಯಾಗಲಿವೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಡಾ| ಬಸವರಾಜ ಪ್ರಬಲ ಪಂಚಮಸಾಲಿ ಸಮುದಾಯಕ್ಕೆ ಸೇರಿದ್ದು, ಲಿಂಗಾಯತ, ಹಿಂದುತ್ವ, ಎಸ್‌ಸಿ-ಎಸ್‌ಟಿ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಕಳೆದ ಮೂರು ಚುನಾವಣೆಗಳಲ್ಲಿ ಲಿಂಗಾಯತ ನಾಯಕರೇ ಕ್ಷೇತ್ರದಲ್ಲಿ ಗೆಲುವು ಕಂಡಿದ್ದಾರೆ. ಅದೇ ಲೆಕ್ಕಾಚಾರವನ್ನು ಹಾಕಿ ಬಿಜೆಪಿ ಡಾಕ್ಟರ್‌ಗೆ ಟಿಕೆಟ್‌ ನೀಡಿದೆ.

ಕಮಲಕ್ಕೆ ದಳ, ಕೈ ಹಿಡಿದ ಸಂಗಣ್ಣ: ಬಿಜೆಪಿಗೆ ಜೆಡಿಎಸ್‌ ಮೈತ್ರಿಯಾಗಿ ಎಂಟೂ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದೆ. ಎಂಟು ಕ್ಷೇತ್ರಗಳ ಪೈಕಿ ಸಿಂಧನೂರು ಕ್ಷೇತ್ರದಲ್ಲಿ ಜೆಡಿಎಸ್‌ ಹಿಡಿತ ಹೊಂದಿದೆ. ವೆಂಕಟರಾವ್‌ ನಾಡಗೌಡ ಹಿಂದೆ ಜೆಡಿಎಸ್‌ನಿಂದ ಗೆದ್ದಿದ್ದು ಮೈತ್ರಿ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಅಲ್ಲದೇ ಜನಾರ್ದನ ರೆಡ್ಡಿ ಕಮಲಕ್ಕೆ ಆಸರೆಯಾಗಿದ್ದಾರೆ. ಆದರೆ ಹಿಂದೆ ಬಿಜೆಪಿ ಸಂಸದರಾಗಿದ್ದ ಸಂಗಣ್ಣ ಕರಡಿ ಟಿಕೆಟ್‌ ತಪ್ಪಿದ್ದರಿಂದ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಇದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಏಕೆಂದರೆ ಅವರು ನಾಲ್ಕು ಬಾರಿ ಶಾಸಕ, 2 ಬಾರಿ ಸಂಸದರಾಗಿ ತಮ್ಮದೇ ಹಿಡಿತ ಹೊಂದಿದ್ದಾರೆ. ಅವರ ಸೇರ್ಪಡೆಯಿಂದ ಕೈಗೆ ಬಲ ಬಂದಂತಾಗಿದೆ. ಕೊಪ್ಪಳದಲ್ಲಿ ಸಹೋದರನೇ ಶಾಸಕರಾಗಿರುವುದು ಹಿಟ್ನಾಳ್‌ಗೆ ವರವಾಗಿದ್ದರೆ, ಗಂಗಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಲ್ಲಿ ಬಣ ಬಡಿದಾಟವಿದ್ದರೂ ಇಬ್ಬರೂ ಕೈ ಅಭ್ಯರ್ಥಿ ಪರವೇ ನಿಂತಿದ್ದಾರೆ. ಆದರೆ ಒಳ ಏಟು ಯಾರಿಗೆ ಹೊಡೆತ ಕೊಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

Advertisement

ಡಾ| ಬಸವರಾಜ ಕ್ಯಾವಟರ್‌-ಬಿಜೆಪಿ -ಜೆಡಿಎಸ್‌ ಮೈತ್ರಿ ಅಭ್ಯರ್ಥಿ
* ಸಾಮರ್ಥ್ಯ
1)ಪ್ರಧಾನಿ ನರೇಂದ್ರ ಮೋದಿ ನಾಮಬಲ
2)ಹಿಂದಿನ ಸಂಸದರ ಅಭಿವೃದ್ಧಿ ಬಲ
3)ಹಿಂದುತ್ವದ ಬಲ, ಲಿಂಗಾಯತ ಸಮಾಜಕ್ಕೆ ಸೇರಿದ್ದು

ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿ ಕಾರ್ಯಗಳು, ಹೆದ್ದಾರಿ, ರೈಲ್ವೇ ಅಭಿವೃದ್ಧಿ ಯೋಜನೆಗಳು, ಕ್ಷೇತ್ರದಲ್ಲಿ ಹಿಂದೆ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ನನ್ನ ಗೆಲುವಿಗೆ ವರದಾನವಾಗಲಿವೆ. ಮುಂದೆ ಅಂಜನಾದ್ರಿ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳ ಕಾರ್ಯಗತಗೊಳಿಸಲು ಕ್ಷೇತ್ರದ ಮತದಾರರು ನನಗೆ ಮತ ನೀಡಲಿದ್ದಾರೆ.
● ಡಾ|ಬಸವರಾಜ ಕ್ಯಾವಟರ್‌, ಬಿಜೆಪಿ ಅಭ್ಯರ್ಥಿ

ರಾಜಶೇಖರ ಹಿಟ್ನಾಳ್‌ ಕಾಂಗ್ರೆಸ್‌ ಅಭ್ಯರ್ಥಿ
*ಸಾಮರ್ಥ್ಯ
1)ಗ್ಯಾರಂಟಿಯೋಜನೆಗಳ ಬಲ
2)ಸಂಗಣ್ಣ ಕರಡಿ ಕಾಂಗ್ರೆಸ್‌ಗೆ ಸೇರ್ಪಡೆ
3)ಆರು ಕ್ಷೇತ್ರದಲ್ಲಿ ಶಾಸಕರು ಗೆದ್ದಿರುವ ಶಕ್ತಿ

ರಾಜ್ಯ ಸರಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳು ಜನರ ಮನೆ ಮನೆಗೂ ತಲುಪಿವೆ. ಬಡವರಿಗೆ ಆಸರೆಯಾಗಿವೆ. ಇದಲ್ಲದೇ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಪಂಚ ನ್ಯಾಯ ಯೋಜನೆಗಳನ್ನು ಜಾರಿಗೊಳಿಸಲು ಪಕ್ಷ ನಿರ್ಧರಿಸಿದೆ. ಮೋದಿ ಸರಕಾರದ ದುರಾಡಳಿತ, ವೈಫಲ್ಯವನ್ನು ಜನತೆ ನೋಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ಜನತೆ ಮತ ನೀಡಲಿದ್ದಾರೆ.
● ರಾಜಶೇಖರ ಹಿಟ್ನಾಳ್‌, ಕಾಂಗ್ರೆಸ್‌ ಅಭ್ಯರ್ಥಿ

■ ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next