Advertisement

ಸಾತ್ವಿಕ ಚಿಂತನೆಗಳಿಂದ ಭಗವದರಿವು ಸಾಧ್ಯ: ಶಿವಗಿರಿ ಶ್ರೀ

12:30 AM Feb 23, 2019 | |

ಕುಂಬಳೆ: ಯಾಗಗಳು ಪ್ರಕೃತಿ ಯನ್ನು ಶುದ್ಧೀಕರಿಸುತ್ತವೆ ಹಾಗೂ ಬದಲಾ ವಣೆ  ತರುತ್ತದೆಂದು ಯಾಗ ಯಜ್ಞಗಳ ಅನುಭವಗಳಿಂದ ತಿಳಿದು ಬರುತ್ತವೆ. ಇದಕ್ಕೆ ಜ್ವಲಂತ ಉದಾಹರಣೆಯೆಂದರೆ  ಭೋಪಾಲ್‌ನಲ್ಲಿ 1983ರಲ್ಲಿ ನಡೆದ ಅನಿಲ ದುರಂತದಲ್ಲಿ ಅಗ್ನಿಹೋತ್ರಿಗಳ ಮನೆಗಳಲ್ಲಿ ವಿಷಾನಿಲದ ಪ್ರತಿಕೂಲಗಳು ಇಲ್ಲವಾಗಿ ಯಾವುದೇ ಪ್ರಭಾವ ಬೀರದಿರುವುದು ವಿಶೇಷವಾಗಿದೆ. 

Advertisement

ಇಂತಹ ಯಜ್ಞ ಯಾಗಾದಿಗಳು ನಡೆಯುತ್ತಿರುವ ಕೊಂಡೆವೂರಿನಲ್ಲಿ, ಸಾತ್ವಿಕ ವಾತಾವರಣದಲ್ಲಿ ಮಾತ್ರ ಭಗವಂತನ್ನು ಕಾಣಬಹುದು ಎಂದು ಕಾರ್ಕಳ ಬಲೊಟ್ಟು ಶಿವಗಿರಿ ಮಠದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ನುಡಿದರು.

ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಜರಗುತ್ತಿರುವ ವಿಶ್ವಜಿತ್‌ ಅತಿರಾತ್ರ ಸೋಮಯಾಗದ ಅಂಗವಾಗಿ ಗುರುವಾರ ಜರಗಿದ ಧರ್ಮಸಭೆಯಲ್ಲಿ ಅನುಗ್ರಹ ಸಂದೇಶ ನೀಡಿ ಮಾತನಾಡಿದರು. 

ವೈದಿಕ ಕಾಲದ ವಿಧಿ ವಿಧಾನಗಳನ್ನು ಕೇಳಿ ತಿಳಿದಿರುವೆವೇ ಹೊರತು ಅನುಭವಿಸಿ ತಿಳಿದಿಲ್ಲ. ಆದರೆ ಕೊಂಡೆವೂರು ಆಶ್ರಮದಲ್ಲಿ ನಡೆಯುತ್ತಿರುವ ಯಜ್ಞಗಳ ಫಲವನ್ನು ಭಕ್ತರು ಅನುಭವಸುತ್ತಿದ್ದಾರೆಂದು ಅವರು ತಿಳಿಸಿದರು. ಸತ್‌ ಚಿಂತನೆಗಳ ಸದಾಶಯ ಪ್ರವೃತ್ತಿಗಳು, ಉತ್ತಮ ಕೆಲಸಗಳು ಕೊಂಡೆವೂರು ಪರಿಸರದಲ್ಲಿ ಇನ್ನಷ್ಟು  ಜರಗಿ ಒಗ್ಗಟ್ಟಿನಿಂದ ಬಾಳ್ವೆ ನಡೆಸುವಂತಾಗಲಿ ಎಂದು ಹಾರೈಸಿದರು.  ಹೊಸ ತಲೆಮಾರಿಗೆ ಧಾರ್ಮಿಕ ಅರಿವನ್ನು ಬೋಧಿಸುವ, ಆಧ್ಯಾತ್ಮಿಕ ಅನುಷ್ಠಾನಗಳನ್ನು ಮೂಲ ಪರಂಪರೆಯಂತೆ ಅನುಷ್ಠಾನಗೊಳಿಸಲು ಆಸ್ತಿಕ ಬಂಧುಗಳು ಕೈಜೋಡಿಸುವ ತುರ್ತು ಇಂದಿಗಿದೆ. ಜಗತ್ತಿಗೆ ಇಂದು ಅಂಟಿಕೊಂಡಿರುವ ವಿಧ್ವಂಸಕಾರಿ ಪ್ರವೃತ್ತಿಗೆ ತಿಲಾಂಜಲಿ ನೀಡಿ ಶಾಂತಿ ಸಮಾಧಾನದ ವಸುದೆ„ವ ಕುಟುಂಬ ಪರಿಕಲ್ಪನೆ ಪ್ರವೃತ್ತಗೊಳ್ಳಲಿ ಎಂದು ಶ್ರೀಗಳು ಆಶಯ ವ್ಯಕ್ತಪಡಿಸಿದರು.

ಕನ್ಯಾನ ಬಾಳೆಕೋಡಿಯ ಡಾ| ಶಶಿಕಾಂತ ಮಣಿ ಸ್ವಾಮೀಜಿ ಉಪಸ್ಥಿತರಿದ್ದರು. ಅವರು ಆಶೀರ್ವಚನ ನೀಡಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಅವರು ದಿವ್ಯ ಉಪಸ್ಥಿತರಿದ್ದರು. ಡಾ| ಜಯಪ್ರಕಾಶನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿ ನಿರ್ವಹಿಸಿ ವಂದಿಸಿದರು.

Advertisement

ಫೆ. 22ರಂದು ಶ್ರೀ ಗಾಯತ್ರೀ ದೇವಿಯ ಸನ್ನಿಧಾನದಲ್ಲಿ ಬೆಳಗ್ಗೆ ಪುಣ್ಯಾಹ, ಗಣಯಾಗ, ಸಾನ್ನಿಧ್ಯ ಕಲಶಾಭಿಷೇಕ, ಯತಿವರ್ಯರಿಗೆ ಪೂರ್ಣಕುಂಭ ಸ್ವಾಗತ, ಅನುಗ್ರಹ ಸಂದೇಶ, ಮಧ್ಯಾಹ್ನ ಪ್ರಸನ್ನ ಮಹಾಪೂಜೆಯ ಬಳಿಕ ಅನ್ನ ಸಂತರ್ಪಣೆ ನಡೆಯಿತು. ಸಂಜೆ ದುರ್ಗಾನಮಸ್ಕಾರ ಪೂಜೆ, ರಂಗ ಪೂಜೆ ನಡೆಯಿತು.

ಯಾಗಶಾಲೆಯಲ್ಲಿ ಸೂರ್ಯೋದಯಕ್ಕೆ ಪ್ರವಗ್ಯì, ಉಪಸತ್‌, ಸುಬ್ರಹ್ಮಣ್ಯಾಹ್ವಾನ, ಅರುಣ ಕೇತುಕ ಚಯನ, ಉಪಸ್ಥಾನ, ಪ್ರವಗ್ಯì ಉದ್ವಾಸನೆ, ಅಗ್ನಿಪ್ರಣಯನ, ಹವಿರ್ದಾನ, ಪ್ರಣಯನ, ಸದೋಮಂಟಪ ನಿರ್ಮಾಣ, ಅಗ್ನಿಷೋಮೀಯ ಪ್ರಣಯನ, ಅಗ್ನಿಷೋಮೀಯ ಯಾಗ, ವಸತೀವರೀಹರಣ, ಪಂಚಗೋದೋಹನ, ನಾಮಸುಬ್ರಹ್ಮಣ್ಯಾಹ್ವಾನ, ಸತ್ಯುಪಕ್ರಮ, ವೈಶ್ರವಣ ಯಜ್ಞಗಳು ಜರಗಿದುವು. ಶ್ರೀ ಗಾಯತ್ರೀ ದೇವಿಯ ಸನ್ನಿಧಾನದಲ್ಲಿ ಪುಣ್ಯಾಹ, ಗಣಯಾಗ, ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕದ ವಿಧಿವಿಧಾನಗಳನ್ನು ಕಟೀಲು ಶ್ರೀಕ್ಷೇತ್ರದ ಅನಂತಪದ್ಮನಾಭ ಆಸ್ರಣ್ಣ ಅವರು ನೆರವೇರಿಸಿದರು. ಶ್ರೀ ಗಾಯತ್ರೀ ಸಭಾ ಮಂಟಪದ ಧಾರ್ಮಿಕ ಸಭೆ ಜರಗಿತು.

ಇಂದಿನ ಕಾರ್ಯಕ್ರಮ
ಫೆ. 23 ರಂದು ಯಾಗಶಾಲೆಯಲ್ಲಿ ಮುಂಜಾನೆ 4 ರಿಂದ  ಯಜ್ಞಸಾರಥಿಗಾನ, ಗ್ರಹೋಪಸ್ಥಾನ, ಪ್ರಾತರನುವಾಕ, ನಾಮ-ಸುಬ್ರಹ್ಮಣ್ಯಾಹ್ವಾನ, ಸೋಮಾಭಿಷವ, ಗ್ರಹಗ್ರಹಣ, ಸರ್ಪಣ, ಬಹಿಷ್‌ಪವಮಾನ, ಸವನೀಯಯಾಗ, ವಪಾಯಾಗ, ಪ್ರಾತಸ್ಸವನ,ಆಜ್ಯಾದಿ ಶಸ್ತ್ರಗಳು, ಪ್ರಾತಸ್ಸವನ ಸಮಾಪ್ತಿ. ಮಾಧ್ಯಂದಿನ ಸವನಃ ಸೋಮಾಭಿಷವ, ತರ್ಪಣ, ಸವನೀಯ ಯಾಗ, ದಕ್ಷಿಣಾದಾನ, ವಿಶ್ವಕರ್ಮ ಹೋಮ, ಮಾಧ್ಯಂದಿನ ಸ್ತೋತ್ರ ಶಸ್ತ್ರಗಳು. ಸವನಯಾಗ, ಅಂಗಯಾಗ, ವೈಶ್ವದೇವ ಪಿತƒಯಜ್ಞ, ಅಗ್ನಿಮಾರುತ, ವಾಲಖೀಲ್ಯ, ವೃಷಾಕಪಿ, ಎವಯಾಮರುತ್‌, ಸ್ತೋತ್ರ, ಶಸ್ತ್ರ ವಿಶೇಷಗಳು, ಷೋಡಶೀ,ರಾತ್ರಿ ಪರ್ಯಾಯ, ಆಶ್ವಿ‌ನ ಸ್ತೋತ್ರ, ಶಸ್ತ್ರ, ಬೆಳಗ್ಗೆ 10 ಗಂಟೆಗೆ ಯತಿವರ್ಯರಿಗೆ-ಪೂರ್ಣಕುಂಭ ಸ್ವಾಗತ, 10.30ಕ್ಕೆ  ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ, ಆನೆಗುಂದಿ ಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿಯವರು ಅನುಗ್ರಹ ಸಂದೇಶ ನೀಡಲಿರುವರು. ಮಧ್ಯಾಹ್ನ  12.30ಕ್ಕೆ  ಪ್ರಸನ್ನ ಮಹಾಪೂಜೆಯ ಬಳಿಕ ಅನ್ನ ಸಂತರ್ಪಣೆ ನಡೆಯಲಿರುವುದು. ಫೆ. 24ರಂದು ಯಾಗ ಸಂಪನ್ನಗೊಳ್ಳಲಿರುವುದು.

– ಅತಿರಾತ್ರ ಸೋಮಯಾಗ ಐತಿಹಾಸಿಕವಾಗಿ ನೆರವೇರುತ್ತಿದ್ದು, ನಿತ್ಯ ಸಹಸ್ರಾರು ಭಕ್ತರು ಸಹಿತ ಆಧ್ಯಾತ್ಮಿಕ ನಾಯಕರು ಭೇಟಿ ನೀಡುತ್ತಿದ್ದಾರೆ.
– ಕೊಂಡೆವೂರು ಆಶ್ರಮ ಪರಿಸರ ಹಬ್ಬದ ವಾತಾವರಣದಲ್ಲಿ ತುಂಬಿದ್ದು,ಅಚ್ಚುಕಟ್ಟಾದ ವ್ಯವಸ್ಥೆ ಗಮನ ಸೆಳೆದಿದೆ. ಯಾಗ ಭೂಮಿಯ ಪಕ್ಕದಲ್ಲಿ ಕಾರ್ಯಾಲಯ, ನೋಂದಣಿ ಕೇಂದ್ರ, ಉಪಚಾರ ಘಟಕಗಳಿಗೆ ವ್ಯವಸ್ಥೆಗೊಳಿಸಲಾಗಿದೆ. ಜತೆಗೆ ದೂರದೂರಿನ ಅತಿಥಿಗಳಿಗೆ ಕೊಂಡೆವೂರು ವಿದ್ಯಾಲಯದಲ್ಲಿ ವಸತಿ ವ್ಯವಸ್ಥೆಯನ್ನೂ ಮಾಡಲಾಗಿದೆ.
– ಮಂಗಳೂರಿನ ನೂರಕ್ಕೂ ಮಿಕ್ಕ ಬಾಣಸಿಗರು ಬೆಳಗ್ಗೆ ಮತ್ತು ಸಂಜೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಭೋಜನದ ವ್ಯವಸ್ಥೆಯಲ್ಲಿ ನಿರತರಾಗಿದ್ದಾರೆ.
– ಯಾಗಶಾಲೆಯಲ್ಲಿ ಋತ್ವಿಜರ ವೇದ ಮಂತ್ರೋಚ್ಛಾರಗಳನ್ನು ಅರ್ಥ ಸಹಿತ ಧ್ವನಿವರ್ಧಕದ ಮೂಲಕ ತಿಳಿಸುವ ವ್ಯವಸ್ಥೆ ಮಾಡಲಾಗಿದ್ದು, ಚಂದ್ರಕಾಂತ್‌ ಶರ್ಮಾ ಮಾಹಿತಿಗಳನ್ನು ನೀಡುತ್ತಿರುವರು.
– ಮಹಿಳೆಯರ ಸಹಿತ ಸಹಸ್ರಕ್ಕೂ ಮಿಕ್ಕ  ಸ್ವಯಂಸೇವಕರು ಹಗಲು ರಾತ್ರಿ ಎನ್ನದೆ ಶ್ರಮಸೇವೆಯಲ್ಲಿ ನಿರತರಾಗಿರುವರು.ಎಲ್ಲಿಯೂ ಕಸಕಡ್ಡಿಗಳಿಲ್ಲದೆ  ಶುಚಿತ್ವಕ್ಕೆ ಆದ್ಯತೆ ನೀಡಲಾಗಿದೆ.

ಯೋಗಿಗಳ ಯಾಗ ಶ್ರೇಷ್ಠ
ಯೋಗಿಗಳು ಮಾಡಿದ ಯಾಗಗಳು ಅತ್ಯಂತ ಶ್ರೇಷ್ಠ. ಇದರಿಂದ ಸುಭಿಕ್ಷೆಯುಂಟಾಗುವುದು. ಯಾಗಗಳಿಂದ ಲಭ್ಯವಾಗುವ ಚೇತನ ಶಕ್ತಿ  ಶಾಶ್ವತವಾಗಿದ್ದು ಸನ್ಮಂಗಳಕರವಾಗಿರುತ್ತದೆ. ವಿಶ್ವದಲ್ಲಿಯೇ ಭಾರತದ ಮಣ್ಣಿನಲ್ಲಿ ಮಾತ್ರ ವಿಶಿಷ್ಟ ಆಧ್ಯಾತ್ಮಿಕ ಚೌಕಟ್ಟಿದೆ. ಸಾಧಕರ ತ್ಯಾಗಗಳಿಂದ ಪುನೀತವಾದ ಪರಂಪರೆಯನ್ನು ಮುನ್ನಡೆಸುತ್ತಿರುವ ಕೊಂಡೆವೂರು ಶ್ರೀಕ್ಷೇತ್ರದ ಚಟುವಟಿಕೆಗಳು ಅನುಕರಣೀಯ.
– ಡಾ| ಶಶಿಕಾಂತ ಮಣಿ ಸ್ವಾಮೀಜಿ
ಕನ್ಯಾನ ಬಾಳೆಕೋಡಿ

Advertisement

Udayavani is now on Telegram. Click here to join our channel and stay updated with the latest news.

Next