Advertisement

ಕೊಂಬೆಟ್ಟು ತಾ|ಕ್ರೀಡಾಂಗಣಕ್ಕೆ ಕಾಯಕಲ್ಪ

11:14 PM Oct 15, 2019 | mahesh |

ಪುತ್ತೂರು: ಕೊಂಬೆಟ್ಟು ತಾಲೂಕು ಕ್ರೀಡಾಂಗಣ ಅಭಿವೃದ್ಧಿಗೆ ಮೊದಲ ಹಂತದ 3 ಕೋಟಿ ರೂ. ಅನುದಾನದ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಕ್ರಿಯಾಯೋಜನೆ ಆಡಳಿತಾತ್ಮಕ ಮಂಜೂರಾತಿಗೆ ವಾರ ದೊಳಗೆ ಸಲ್ಲಿಕೆಯಾಗಲಿದೆ.

Advertisement

ಈ ಹಿಂದಿನ ಸರಕಾರದ ಅವಧಿಯಲ್ಲಿ ಕ್ರೀಡಾ ಸಚಿವರಾಗಿದ್ದ ಪ್ರಮೋದ್‌ ಮಧ್ವರಾಜ್‌ ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುತ್ತೂರಿನಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಕ್ರೀಡಾಂಗಣ ನಿರ್ಮಾಣಕ್ಕೆ ದೊಡ್ಡ ಮೊತ್ತದ ಅನುದಾನ ನೀಡುವುದಾಗಿ ಘೋಷಿಸಿದ್ದರು. ಅದರಂತೆ ಶಕುಂತಳಾ ಟಿ. ಶೆಟ್ಟಿ ಅವಧಿಯಲ್ಲಿ ಎರಡು ವರ್ಷಗಳ ಹಿಂದೆ 14.5 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಲ್ಲಿ ಮೊದಲ ಹಂತದಲ್ಲಿ 3 ಕೋ.ರೂ. ಮಂಜೂರಾತಿಗೆ ಸರಕಾರ ತಾತ್ವಿಕ ಒಪ್ಪಿಗೆ ನೀಡಿತ್ತು.

ಆಡಳಿತಾತ್ಮಕ ಒಪ್ಪಿಗೆಗೆ ಸಲ್ಲಿಕೆ
ಮೊದಲ ಹಂತದ ಅನುದಾನದಲ್ಲಿ ಕೈಗೊಳ್ಳಬೇಕಾದ ಕಾಮಗಾರಿಯ ಎಸ್ಟಿಮೇಟ್‌ ತಯಾರಿಸಲು ಎರಡು ತಿಂಗಳ ಹಿಂದೆ ಡಿ.ಸಿ. ಕಚೇರಿ ಮೂಲಕ ಲೋಕೋಪಯೋಗಿ . ಇಲಾಖೆಗೆ ಸಲ್ಲಿಸಲಾಗಿತ್ತು. ಅದರಂತೆ ಲೋಕೋ ಪಯೋಗಿ ಇಲಾಖೆ ಆರ್ಕಿ ಟೆಕ್ಚರ್‌ ಸಲಹೆ ಪಡೆದು ಎಸ್ಟಿಮೇಟ್‌ ತಯಾರಿಕೆ ಅಂತಿಮ ಹಂತಕ್ಕೆ ತಲುಪಿದೆ. ಇದನ್ನು ವಾರದೊಳಗೆ ದ.ಕ. ಯುವಜನ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಕಳುಹಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿಂದ ಆಡಳಿತಾತ್ಮಕ ಒಪ್ಪಿಗೆ ನೀಡಿದ ಬಳಿಕ ಟೆಂಡರ್‌ ಪ್ರಕ್ರಿಯೆ ನಡೆದು ಕಾಮಗಾರಿ ಆರಂಭಗೊಳ್ಳಬೇಕಿದೆ.

ಒಳಾಂಗಣ ಕ್ರೀಡಾಂಗಣ
ಮೂರು ಕೋಟಿ ರೂ. ಅನುದಾನದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಯುವಜನ ಇಲಾಖೆ ನಿರ್ಧರಿಸಿದೆ. ಇದರಲ್ಲಿ ಬಾಲ್‌ ಬ್ಯಾಡ್ಮಿಂಟನ್‌, ಶಟ್ಲ ಬ್ಯಾಡ್ಮಿಂಟನ್‌, ವಾಲಿಬಾಲ್‌, ಬಾಸ್ಕೆಟ್‌ ಬಾಲ್‌ ಅಂಕಣ, ವೀಕ್ಷಣೆಗೆ ಗ್ಯಾಲರಿ ನಿರ್ಮಿಸಲು ಯೋಜಿಸಲಾಗಿದೆ. ಪುರುಷ, ಮಹಿಳಾ ವಿಭಾಗಗಳಲ್ಲಿ ಪ್ರತ್ಯೇಕ ಡ್ರೆಸ್ಸಿಂಗ್‌ ಕೊಠಡಿಗಳು, ಕೆಳ ಅಂತಸ್ತಿನಲ್ಲಿ ಪಾರ್ಕಿಂಗ್‌ ಮೊದಲಾದ ಸೌಲಭ್ಯ ಕ್ರಿಯಾ ಯೋಜನೆಯಲ್ಲಿ ಅಡಕವಾಗಿವೆ.

ತಾಲೂಕು ಕ್ರೀಡಾಂಗಣದ ಬೇಡಿಕೆ
1991-92ರ ಅನಂತರ ಕೊಂಬೆಟ್ಟು ಡಿಸ್ಟ್ರಿಕ್‌ ಶಾಲಾ ಆವರಣದಲ್ಲಿದ್ದ ಮೈದಾನ ತಾಲೂಕು ಕ್ರೀಡಾಂಗಣವಾಗಿ ಯುವಜನ ಸೇವಾ ಇಲಾಖೆಯ ವ್ಯಾಪ್ತಿಗೆ ಸೇರ್ಪಡೆಗೊಂಡಿತ್ತು. 400 ಮೀ. ಮಣ್ಣಿನ ಟ್ರ್ಯಾಕ್‌ ಇರುವ ಕ್ರೀಡಾಂಗಣ
ದಲ್ಲಿ ತಾಲೂಕು, ಜಿಲ್ಲಾ, ರಾಜ್ಯಮಟ್ಟದ ಕ್ರೀಡಾಕೂಟ ನಡೆದಿದೆ.

Advertisement

ಪುತ್ತೂರಿನ ಶಾಸಕರಾಗಿದ್ದ ವಿನಯ ಕುಮಾರ್‌ ಸೊರಕೆ, ಡಿ.ವಿ. ಸದಾನಂದ ಗೌಡ, ಮಲ್ಲಿಕಾ ಪ್ರಸಾದ್‌, ಶಕುಂತಳಾ ಟಿ. ಶೆಟ್ಟಿ ಮೊದಲಾದ ಜನ ಪ್ರತಿನಿಧಿಗಳ ಅವಧಿಯಲ್ಲಿ ಕ್ರೀಡಾಂಗಣದಲ್ಲಿ ವಿವಿಧ ಅಭಿವೃದ್ಧಿ ನಡೆದಿದೆ. ತಾಲೂಕು ಕೇಂದ್ರದ ಮಧ್ಯದಲ್ಲಿ ಕ್ರೀಡಾಂಗಣ ಇರುವ ಕಾರಣ ಇದನ್ನು ಅಂತಾರಾಷ್ಟ್ರೀಯ ದರ್ಜೆ ಮಟ್ಟದ ಸುಸಜ್ಜಿತ ಕ್ರೀಡಾಂಗಣ ರೂಪಿಸಬೇಕು ಎಂಬ ಬೇಡಿಕೆ ಕೇಳಿ ಬಂದಿತ್ತು.

14.5 ಕೋಟಿ ರೂ. ಪ್ರಸ್ತಾವನೆ
ಈಗಾಗಲೇ 14.5 ಕೋ.ರೂ. ಅನುದಾನದಲ್ಲಿ ಕ್ರೀಡಾಂಗಣ ಅಭಿವೃದ್ಧಿಪಡಿಸುವ ಪ್ರಸ್ತಾವನೆ ಎರಡು ವರ್ಷಗಳ ಹಿಂದೆ ಸರಕಾರಕ್ಕೆ ಸಲ್ಲಿಕೆಯಾಗಿದೆ. ಪುತ್ತೂರು
ನ್ಪೋರ್ಟ್ಸ್ ಕ್ಲಬ್‌, ವಿವಿಧ ದೈಹಿಕ ಶಿಕ್ಷಣ ಶಿಕ್ಷಕರ ಉಪಸ್ಥಿತಿಯಲ್ಲಿ ಸಭೆ ನಡೆದು ಅದರನ್ವಯ 6.5 ಕೋಟಿ ರೂ. ವೆಚ್ಚದಲ್ಲಿ 400 ಮೀಟರ್‌ ಸಿಂಥೆಟಿಕ್‌ ಟ್ರ್ಯಾಕ್‌, 8 ಕೋಟಿ ರೂ. ವೆಚ್ಚದಲ್ಲಿ ಒಳಾಂಗಣ – ಹೊರಾಂಗಣ ಕ್ರೀಡಾಂಗಣ, ಪೆವಿಲಿಯನ್‌ ನಿರ್ಮಿಸುವ ಬಗ್ಗೆ ಪ್ರಸ್ತಾವಿಸಲಾಗಿತ್ತು. ಅನಂತರ ನ್ಯೂ ದಿಲ್ಲಿ ಶಿವನರೇಶ್‌ ನ್ಪೋರ್ಟ್ಸ್ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆ ತಾಂತ್ರಿಕ ಅಧಿಕಾರಿಗಳು ನೀಲ ನಕಾಶೆ ತಯಾರಿಸಿದ್ದಾರೆ.

ಸಿಂಥೆಟಿಕ್‌ ಟ್ರ್ಯಾಕ್‌ ಕೊರತೆ
ಜಿಲ್ಲೆಯಲ್ಲಿ ಮಂಗಳೂರು, ಮೂಡುಬಿದಿರೆಯಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಾಣಗೊಂಡಿದೆ. ಜಿಲ್ಲಾ ಕೇಂದ್ರವಾಗಿ ರೂಪುಗೊಳ್ಳಲು ಅರ್ಹತೆ ಹೊಂದಿರುವ ಪುತ್ತೂರಿಗೂ ಸಿಂಥೆಟಿಕ್‌ ಟ್ರ್ಯಾಕ್‌, ಒಳಾಂಗಣ ಕ್ರೀಡಾಂಗಣ ಅನಿವಾರ್ಯ ಆಗಿದೆ. ಈಗ ವ್ಯವಸ್ಥೆ ಇಲ್ಲದ ಕಾರಣ ತಾಲೂಕು ಮಟ್ಟದ ಸ್ಪರ್ಧೆಗಳಲ್ಲಿ ಮಣ್ಣಿನ ಟ್ರ್ಯಾಕ್‌ನಲ್ಲಿ ಓಡುವ ಸ್ಪರ್ಧಿಗಳು ಜಿಲ್ಲಾಮಟ್ಟದಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ನಲ್ಲಿ ಓಡುವಾಗ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಿಲ್ಲ. ಇದು ನ್ಪೋರ್ಟ್ಸ್ ಮಾತ್ರವಲ್ಲದೆ ಗೇಮ್ಸ್‌ ಸ್ಪರ್ಧೆಗಳ ಪ್ರದರ್ಶನದ ಮೇಲೂ ಪರಿ ಣಾಮ ಬೀರುತ್ತದೆ. ಹೀಗಾಗಿ ಸುಸಜ್ಜಿತ ಕ್ರೀಡಾಂಗಣ ಅನಿವಾರ್ಯವಾಗಿದೆ.

ವಾರದೊಳಗೆ ಸಲ್ಲಿಕೆ
ಲೋಕೋಪಯೋಗಿ ಇಲಾಖೆಯಲ್ಲಿ ಎಸ್ಟಿಮೇಟ್‌ ತಯಾರಿ ಅಂತಿಮ ಹಂತದಲ್ಲಿದೆ. ತತ್‌ಕ್ಷಣ ಪೂರ್ಣಗೊಳಿಸಿ ವಾರದೊಳಗೆ ಯುವಜನ ಇಲಾಖೆಯ ದ.ಕ. ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಲಾಗುವುದು. ಅಲ್ಲಿಂದ ಆಡಳಿತಾತ್ಮಕ ಮಂಜೂರಾತಿ ದೊರೆತ ಬಳಿಕ ಮುಂದಿನ ಪ್ರಕ್ರಿಯೆ ಆರಂಭಗೊಳ್ಳಲಿದೆ.
– ಬಿ. ರಾಜಾರಾಮ್‌, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌

ತಾತ್ವಿಕ ಒಪ್ಪಿಗೆ ಸಿಕ್ಕಿದೆ
ಎರಡು ಹಂತಗಳಲ್ಲಿ ಕ್ರೀಡಾಂಗಣ ಪರಿಶೀಲಿಸಲಾಗಿದೆ. ಲೋಕೋಪಯೋಗಿ ಇಲಾಖೆ ಎಸ್ಟಿಮೇಟ್‌ ತಯಾರಿಸಿ ಯುವಜನ ಇಲಾಖೆಗೆ ಸಲ್ಲಿಸಬೇಕಿದೆ. 14.5 ಕೋಟಿ ರೂ. ಪ್ರಸ್ತಾವನೆಯಲ್ಲಿ ಮೊದಲ ಹಂತದಲ್ಲಿ 3 ಕೋಟಿ ರೂ. ಅನುದಾನ ನೀಡಲು ಸರಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಶಾಸಕರ ಮುಖಾಂತರ ಸಚಿವರನ್ನು ಭೇಟಿ ಮಾಡಿ ಅನುದಾನ ಬಿಡುಗಡೆ ಮುಂದಿನ ಹಂತದಲ್ಲಿ ನಡೆಯಲಿದೆ.
– ಮಾಮಚ್ಚನ್‌ ಎಂ., ಕ್ರೀಡಾಧಿಕಾರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪುತ್ತೂರು

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next