Advertisement

ಕೊಲ್ಲೂರು ದೇಗುಲದಲ್ಲಿ ಅಕ್ರಮ ಅವ್ಯವಹಾರ : ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ

12:50 AM Mar 10, 2021 | Team Udayavani |

ಬೆಂಗಳೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ 21.5 ಕೋಟಿ ರೂ.ಗಳ ಅಕ್ರಮ ನಡೆದಿದ್ದು ಸರಕಾರ ತನಿಖೆ ನಡೆಸಬೇಕು ಎಂದು ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾ ಸಂಘ, ಕರ್ನಾಟಕದ ವಕ್ತಾರ ಮೋಹನ ಗೌಡ ಒತ್ತಾಯಿಸಿದ್ದಾರೆ.

Advertisement

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅವ್ಯವಹಾರದಲ್ಲಿ ಭಾಗಿಯಾಗಿರುವ ದೇವಾಲಯದ ತಪ್ಪಿತಸ್ಥ ಆಡಳಿತ ಮಂಡಳಿ ಮತ್ತು ಅಧಿಕಾರ ವರ್ಗದವಿರುದ್ಧ ಕ್ರಮಕೈಗೊಳ್ಳಬೇಕು ಎಂದರು.

ದೇಗುಲದಲ್ಲಿ ನಡೆದಿರುವ ಅವ್ಯವಹಾರ ಮಾಹಿತಿ ಹಕ್ಕು ಅಧಿನಿಯಮದಲ್ಲಿ ದೊರಕಿರುವ ಪತ್ರಗಳಿಂದ ಬಹಿರಂಗಗೊಂಡಿದೆ. ಅರ್ಪಣೆಯಲ್ಲಿ ದೊರೆತಿರುವ ಬಂಗಾರ-ಬೆಳ್ಳಿಗಳನ್ನು ಕೊಳ್ಳೆ ಹೊಡೆಯಲಾಗಿದ್ದು ಸರಕಾರ 15 ದಿನಗಳ ಒಳಗೆ ತನಿಖೆಗೆ ಆದೇಶಿಸದಿದ್ದರೆ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

2018-2019ರ ವರೆಗೆ ದೇಣಿಗೆ ಸ್ವೀಕರಿಸಿದ ಆಭರಣ ಗಳ ಪಟ್ಟಿ ಸರಕಾರಿ ಲೆಕ್ಕ ಪರಿಶೋಧಕರಿಗೆ ಸಲ್ಲಿಸಿಲ್ಲ. ದೇವಾಲಯ ಲೆಕ್ಕಪತ್ರದ ಬಗ್ಗೆ ಆಡಿಟ್‌ ಕೂಡ ನಡೆದಿಲ್ಲ. 2016ರಲ್ಲಿ ದೇವಾಲಯದ ಕೋಟ್ಯಂತರ ರೂ. ಚಿನ್ನ ಕಳ್ಳತನ ಪ್ರಕರಣದಲ್ಲಿ ಆಗಿನ ಕಾರ್ಯ ನಿರ್ವಹಣಾಧಿಕಾರಿ ಮತ್ತು ಸಿಬಂದಿ ಭಾಗಿಯಾಗಿದ್ದರು. ಈಗಲೂ ಅದೇ ಕಾರ್ಯ ನಡೆದಿದೆ ಎಂದು ದೂರಿದರು. ಶ್ರೀರಾಮ ಸೇನೆಯ ರಾಜ್ಯ ಕಾರ್ಯದರ್ಶಿ ಎಂ.ಎಸ್‌.ನಂದೀಶ್‌, ಈ ಸಂಬಂಧ ಮುಜರಾಯಿ ಇಲಾಖೆ ಸಚಿವರನ್ನು ಭೇಟಿ ಮಾಡಿ ಭ್ರಷ್ಟಾಚಾರದ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು. ಧಾರ್ಮಿಕ ಕ್ಷೇತ್ರದ ಹೋರಾಟಗಾರ ಪ್ರಣವ್‌ ಶರ್ಮ, ನ್ಯಾಯವಾದಿ ವಿಜಯಶೇಖರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ದೇವನಿಧಿ ದುರ್ಬಳಕೆ ಆರೋಪ
ಉಡುಪಿ: ಕೊಲ್ಲೂರು ದೇಗುಲದ ಲೆಕ್ಕಪರಿಶೋಧಕರ ವರದಿ ಪ್ರಕಾರ ದೇವಸ್ಥಾನದ ಈ ಹಿಂದಿನ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ದೇವನಿಧಿಯನ್ನು ದುರ್ಬಳಕೆ ಮಾಡಿಕೊಂಡಿರುವ ಶಂಕೆಯಿದ್ದು. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಕರ್ನಾಟಕ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ರಾಜ್ಯ ವಕ್ತಾರ ಗುರುಪ್ರಸಾದ್‌ ಗೌಡ ತಿಳಿಸಿದರು.
ದೇವನಿಧಿಯಿಂದ ಉಡುಪಿ ಜಿಲ್ಲಾಧಿಕಾರಿ ಗೃಹ ಕಚೇರಿಯ ದೂರವಾಣಿ ನಿವಾಸದ ದೂರವಾಣಿ ಬಿಲ್‌ ಮೊತ್ತ 23,363 ರೂ. ಪಾವತಿಸಲಾಗಿದೆ. ಸರಕಾರದ ಬಳಿ ಇದಕ್ಕಾಗಿ ಹಣವಿಲ್ಲವೇ ಎಂದು ಪ್ರಶ್ನಿಸಿದರು. ಮಹಾಸಂಘದ ವಕ್ತಾರ ಸುನೀಲ್‌ ಘನವಟ್‌, ಸದಸ್ಯರಾದ ಪ್ರಭಾಕರ ನಾಯಕ್‌, ಮತ್ತಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next