Advertisement

ನೀರಿಂಗಿಸುವುದು ಸರ್ಕಾರಿ ಕೆಲಸವಲ್ಲ, ನಮ್ಮಗಳ ಕರ್ತವ್ಯ!

03:56 PM Jun 05, 2019 | Naveen |

ಕೋಲಾರ: ಪರಿಸರವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಅದರಲ್ಲೂ ಅಪಾಯಕಾರಿ ಮಟ್ಟಕ್ಕೆ ಅಂತರ್ಜಲ ಇಳಿದಿರುವ ಜಿಲ್ಲೆಯಲ್ಲಿ ಪರಿಸರ ಉಳಿಸಿಕೊಳ್ಳುವುದು ಆದ್ಯತೆ ನೀಡಬೇಕಾಗಿದೆ.

Advertisement

ಪರಿಸರ ಉಳಿಸಿಕೊಳ್ಳಬೇಕಾದರೆ ಪ್ರಮುಖವಾಗಿ ಎರಡು ವಿಷಯಗಳ ಕುರಿತು ಗಮನಹರಿಸಬೇಕು. ಒಂದು ಯಥೇಚ್ಛವಾಗಿ ಮರಗಳನ್ನು ಬೆಳೆಸಬೇಕು. ಇನ್ನೊಂದು ಭೂಮಿಗೆ ಸುರಿಯುವ ಮಳೆ ನೀರಿನ ಪ್ರತಿ ಹನಿಯನ್ನು ಹಿಡಿದಿಟ್ಟುಕೊಳ್ಳಬೇಕು. ಮರಗಳನ್ನು ಬೇಕಾಬಿಟ್ಟಿ ಕಡಿದು ಬಳಸಿಕೊಂಡಿರುವ ಕೋಲಾರ ಜಿಲ್ಲೆಯ ಜನರು ಕೆರೆ ಕುಂಟೆಗಳನ್ನು ಸಮತಟ್ಟು ಮಾಡಿ ಕಟ್ಟಡಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಕೆರೆ ಕುಂಟೆ ಕಲ್ಯಾಣಿ ರಾಜಕಾಲುವೆಗಳೆಂಬ ಪೂರ್ವಿಕರ ನಿರ್ಮಾಣಗಳು ಕ್ರಮೇಣ ಕಣ್ಮರೆಯಾಗುತ್ತಿವೆ. ಇವೆಲ್ಲದರ ಪರಿಣಾಮ ಮಳೆ ಅಪರೂಪದ ಅತಿಥಿಯಾಗುತ್ತಿದೆ. ಅಂತರ್ಜಲ ಎರಡು ಸಾವಿರ ಅಡಿಗಳಿಗೆ ತಲುಪಿದೆ.

ಪರಿಹಾರವೇನು?: ಪ್ರಸ್ತುತ ವಿಶ್ವ ಪರಿಸರ ದಿನಾಚರಣೆ ಆಚರಿಸುತ್ತಿರುವ ಸಂದರ್ಭದಲ್ಲಿ ಜಿಲ್ಲೆಯ ಪರಿಸರ ಉಳಿಸಿಕೊಳ್ಳುವ ಕುರಿತು ಪಾನಿ ಫೌಂಡೇಷನ್‌ ಮಹಾರಾಷ್ಟ್ರದಲ್ಲಿ ನಡೆಸುತ್ತಿರುವ ನೀರು ಹಿಡಿದಿಟ್ಟುಕೊಳ್ಳುವ ಸ್ಪರ್ಧೆ ಜಿಲ್ಲೆಗೂ ಮಾದರಿಯಾಗಬೇಕಾಗಿದೆ. ಪ್ರತಿಯೊಬ್ಬರು ನೀರು ಹಿಡಿದಿಟ್ಟುಕೊಳ್ಳುವ ಕಾರ್ಯದಲ್ಲಿ ಸ್ಪಯಂ ಪ್ರೇರಿತವಾಗಿ ಭಾಗಿಯಾಗಬೇಕಾಗಿದೆ.

ಸರ್ಕಾರಿ ಕೆಲಸವಲ್ಲ: ಯಾರ ಯಜಮಾನಿಕೆಯೂ ಇಲ್ಲದ ಗುಡ್ಡಬೆಟ್ಟಗಳಲ್ಲಿ ಸುರಿಯುವ ಮಳೆಯನ್ನು ಹೇಗೆ ಹಿಡಿದಿಟ್ಟು ನೆಲಕ್ಕೆ ಇಂಗಿಸಬೇಕು, ಯಾರು ಇಂಗಿಸಬೇಕು? ಎನ್ನುವುದು ಬಹು ಮುಖ್ಯ ವಿಚಾರ. ನಮ್ಮಲ್ಲಿ ಬಹಳಷ್ಟು ಮಂದಿಗೆ ಸರ್ಕಾರವೇ ಈ ಕೆಲಸ ಮಾಡಬೇಕು ಎಂಬ ನಂಬಿಕೆ ಇದೆ. ಸರ್ಕಾರವು ಅಂತರ್ಜಲ ವೃದ್ಧಿಗೆ ಕೆ.ಸಿ. ವ್ಯಾಲಿ, ಚೆಕ್‌ ಡ್ಯಾಂಗಳ ನಿರ್ಮಾಣ, ಕೆರೆ ಹೂಳೆತ್ತುವಿಕೆ ಇತ್ಯಾದಿ ಕೆಲಸಗಳನ್ನು ಕೈಗೆತ್ತಿಕೊಂಡಿದೆ. ಆದರೆ, ಇದ್ಯಾವುದು ಪರಿಪೂರ್ಣವಲ್ಲ. ಪರಿಣಾಮಕಾರಿಯಾಗಿಯೂ ಇಲ್ಲ. ಕಾರಣ ಇದು ಕೇವಲ ಸರ್ಕಾರಿ ಕೆಲಸವಾಗಿ ಉಳಿದಿರುವುದು. ಜನರ ಪಾಲ್ಗೊಳ್ಳುವಿಕೆ ನೆಪ ಮಾತ್ರಕ್ಕೆ ಇರುವಂತಾಗಿರುವುದು. ಇದರಿಂದ ಸರ್ಕಾರಿ ಇಲಾಖೆಗಳ ಯೋಜನೆಗಳೆಲ್ಲ ಹಳ್ಳ ಹಿಡಿಯುವಂತಾಗಿದೆ. ಎರಡು ಮೂರು ದಶಕಗಳಲ್ಲಿ ಜಿಲ್ಲೆಯೊಂದರಲ್ಲಿಯೇ ನೀರು ಪೂರೈಕೆ ವಿಚಾರದಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಸರಿಯಾದ ಲೆಕ್ಕವೇ ಇಲ್ಲವೆನಿಸುತ್ತದೆ.

ನೀರು ಹಿಡಿದಿಟ್ಟುಕೊಳ್ಳುವ ಸ್ಪರ್ಧೆ: ಸರ್ಕಾರದ ಹಣ ಬೃಹತ್‌ ಯೋಜನೆಗಳ ಮೂಲಕ ವ್ಯರ್ಥವಾಗುವುದನ್ನು ತಡೆಯಬೇಕಾದರೆ, ಪ್ರತಿಯೊಬ್ಬರು ನೀರು ಇಂಗಿಸುವ ಕಾಯಕದಲ್ಲಿ ತೊಡಗಬೇಕಾಗುತ್ತದೆ. ಮಳೆ ನೀರನ್ನು ಯಾರೂ ಇಂಗಿಸದೇ ಇದ್ದರೆ ಅದು ತಂತಾನೇ ಹರಿದು, ಮೇಲ್ಮಣ್ಣನ್ನು ಕೊಚ್ಚಿ ಸಾಗಿಸುತ್ತದೆ. ಕೆರೆ-ತೊರೆಗಳಿಗೆ ಅಪಾರ ಹೂಳನ್ನು ತುಂಬುತ್ತಾ ತನ್ನ ಪಾಡಿಗೆ ತಾನು ಹರಿದು ಸಮುದ್ರಕ್ಕೆ ಸೇರುತ್ತದೆ.

Advertisement

ಗ್ರಾಮೀಣ ಜನರು ತಾವಾಗಿ ಒಗ್ಗಟ್ಟಾಗಿ ನಿಂತರೆ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ಮಹಾರಾಷ್ಟ್ರದ ‘ಹಿವ್ರೆ ಬಝಾರ್‌’ ಎಂಬ ಹಳ್ಳಿಯ ಉದಾಹರಣೆ ನಮ್ಮೆದುರು ಇದೆ. ಬರಪೀಡಿತ ಆ ಊರಲ್ಲಿ ಜನರೆಲ್ಲ ಗುಳೆ ಎದ್ದು ಹೊರಡುತ್ತಿದ್ದಾಗ ಒಂದು ಪುಟ್ಟ ಗ್ರಾಮದಲ್ಲಿ ಜಲಕ್ರಾಂತಿ ಸಂಭವಿಸಿತು. ಅಲ್ಲಿ ಇಂದು ಐವತ್ತಕ್ಕೂ ಹೆಚ್ಚು ಜನರು ಕೃಷಿ ಮತ್ತು ಡೇರಿ ಕೆಲಸ ಮಾಡುತ್ತಲೇ ದಶಲಕ್ಷಾಧೀಶರಾಗಿದ್ದಾರೆ. ಅಲ್ಲೇನೂ ಯಾರೂ ದೊಡ್ಡ ಅಣೆಕಟ್ಟು ಕಟ್ಟಿಲ್ಲ ಅಥವಾ ಮೋಡಬಿತ್ತನೆ ಮಾಡಲಿಲ್ಲ. ಸುರಿದಷ್ಟು ಮಳೆಯನ್ನೇ ಹಿಡಿದು ನಿಲ್ಲಿಸಿದರು ಅಷ್ಟೆ.

ಇದೇ ಮಾದರಿ: ಅದನ್ನೇ ಮಾದರಿಯಾಗಿ ಇಟ್ಟುಕೊಂಡು ಮಹಾರಾಷ್ಟ್ರದ ‘ಪಾನಿ ಫೌಂಡೇಶನ್‌ ಸಂಸ್ಥೆ’ ಜಗತ್ತಿನ ಗಮನ ಸೆಳೆಯುವಷ್ಟು ಅಚ್ಚರಿಯ ಕೆಲಸವನ್ನು ಮಾಡುತ್ತಿದೆ. ಮಳೆನೀರನ್ನು ಹಿಡಿದಿಡುವ ‘ವಾಟರ್‌ ಕಪ್‌ ಸ್ಪರ್ಧೆ’ಯನ್ನು ನಾಲ್ಕು ವರ್ಷಗಳ ಹಿಂದೆ ಅದು ಮೂರು ತಾಲೂಕುಗಳ 116 ಹಳ್ಳಿಗಳಲ್ಲಿ ಆರಂಭಿಸಿತು. ಕೋಲಾರ ಜಿಲ್ಲೆಯ ಅಂತರಗಂಗೆ ಬೆಟ್ಟ ಸೇರಿದಂತೆ ಖಾಲಿ ಇರುವ ಸರ್ಕಾರಿ ಭೂಮಿ, ಅರಣ್ಯ ಪ್ರದೇಶ, ಖಾಸಗಿ ಭೂಮಿಯಲ್ಲಿ ಇಂತ ಕ್ರಾಂತಿಕಾರಕ ಕೆಲಸವಾದರೆ ಜಿಲ್ಲೆಯಲ್ಲಿ ಪ್ರತಿ ವರ್ಷ ಸುರಿಯುವ 750 ಮಿ.ಮೀ ಮಳೆಯಲ್ಲಿಯೇ ಪರಿಸರ ಕಾಪಾಡಿಕೊಳ್ಳಲು ಸಾಧ್ಯವೆನ್ನುತ್ತಾರೆ ಜಲತಜ್ಞರು. ಇದಕ್ಕಾಗಿ ಜನರು ಮನಸ್ಸು ಮಾಡಬೇಕಷ್ಟೆ.

Advertisement

Udayavani is now on Telegram. Click here to join our channel and stay updated with the latest news.

Next