Advertisement

ಐತಿಹಾಸಿಕ ಪಿಂಕ್‌ ಟೆಸ್ಟ್‌ ಗೆ ಕೋಲ್ಕತಾ ಸಜ್ಜು

09:39 AM Nov 22, 2019 | Team Udayavani |

ಕೋಲ್ಕತಾ: ನ. 22ರಿಂದ 26ರ ವರೆಗೆ ಕೋಲ್ಕತಾದ ಈಡನ್‌ ಗಾರ್ಡನ್‌ನಲ್ಲಿ ನಡೆಯಲಿರುವ ಐತಿಹಾಸಿಕ ಟೆಸ್ಟ್‌ ಪಂದ್ಯವನ್ನು ನೋಡಲು ಕೇಂದ್ರದ ಗೃಹಮಂತ್ರಿ ಅಮಿತ್‌ ಶಾ, ಬಾಂಗ್ಲಾ ದೇಶದ ಪ್ರಧಾನಿ ಶೇಖ್‌ ಹಸೀನಾ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗಮಿಸಲಿದ್ದಾರೆ.

Advertisement

ಪ್ರಧಾನಿ ನರೇಂದ್ರ ಮೋದಿ ಅವರಿಗೂ ಆಹ್ವಾನ ನೀಡಲಾಗಿತ್ತು. ಆದರೆ ಅವರು ಭಾಗವಹಿಸುತ್ತಿಲ್ಲ. ಒಂದು ಟೆಸ್ಟ್‌ ಪಂದ್ಯಕ್ಕಾಗಿ ಇಷ್ಟೆಲ್ಲ ಪ್ರಮುಖರು ಬರುತ್ತಿರುವುದು ಯಾಕೆ ಎನ್ನುವ ಪ್ರಶ್ನೆಯೇ? ಇಲ್ಲಿದೆ ಉತ್ತರ. ಇದು ಸಾಮಾನ್ಯ ಪಂದ್ಯವಲ್ಲ. ಭಾರತದಲ್ಲಿ ನಡೆಯಲಿರುವ ಚೊಚ್ಚಲ ಹಗಲುರಾತ್ರಿಯ ಟೆಸ್ಟ್‌ ಪಂದ್ಯ. ಇಲ್ಲಿ ಭಾರತ ಮತ್ತು ಬಾಂಗ್ಲಾ ಸೆಣಸಾಡಲಿವೆ.

2015ರಲ್ಲಿ ಮೊದಲ ಹಗಲುರಾತ್ರಿ ಟೆಸ್ಟ್‌
ಏಕದಿನ, ಟಿ20 ಪಂದ್ಯಗಳೆಲ್ಲ ಇತ್ತೀಚೆಗೆ ನಡೆ ಯುತ್ತಿರುವುದು ಹಗಲುರಾತ್ರಿ ಮಾದರಿಯಲ್ಲೇ. ಆದರೆ ಟೆಸ್ಟ್‌ ಪಂದ್ಯಗಳು ಹಿಂದಿನಂತೆಯೇ ಬೆಳಗ್ಗೆ ಶುರುವಾಗಿ ಸಂಜೆ ಮುಗಿಯುತ್ತಿದ್ದವು. ಇದರ ಬದಲು ಹಗಲುರಾತ್ರಿ ಮಾದರಿಗೆ ಟೆಸ್ಟನ್ನೂ ಬದಲಿಸಿದರೆ, ಜನರನ್ನು ಆಕರ್ಷಿಸಲು ಸಾಧ್ಯ ಎಂದು ಆಸ್ಟ್ರೇಲಿಯ ಮಂಡಳಿ ಚಿಂತಿಸಿ, ಅದನ್ನು ಜಾರಿ ಮಾಡಿತು. 2015, ನ.27ರಂದು ಆಸ್ಟ್ರೇಲಿಯದ ಅಡಿಲೇಡ್‌ನ‌ಲ್ಲಿ ಆಸ್ಟ್ರೇಲಿಯ ಮತ್ತು ನ್ಯೂಜಿಲ್ಯಾಂಡ್‌ ನಡುವೆ ಮೊದಲ ಹಗಲುರಾತ್ರಿ ಟೆಸ್ಟ್‌ ಪಂದ್ಯ ನಡೆಯಿತು. ಅದಾದ ಮೇಲೆ ಆಸ್ಟ್ರೇಲಿಯ ವರ್ಷಕ್ಕೊಂದು ಹಗಲುರಾತ್ರಿ ಪಂದ್ಯವನ್ನು ಕಡ್ಡಾಯವಾಗಿ ಆಡಿಸಲು ತೀರ್ಮಾನಿಸಿದೆ. ಆದರೆ ಇದುವರೆಗೆ ನಡೆದಿರುವ ಪಂದ್ಯಗಳು ಬೆರಳೆಣಿಕೆ ಮಾತ್ರ. ಆಸ್ಟ್ರೇಲಿಯದಲ್ಲಿ ಟೆಸ್ಟ್‌ ಪಂದ್ಯವನ್ನೂ ನೋಡಲು ಜನರು ನುಗ್ಗಿ ಬರುವುದರಿಂದ, ಹಗಲು ಪಂದ್ಯಕ್ಕೂ ಹಗಲುರಾತ್ರಿ ಪಂದ್ಯಕ್ಕೂ ಏನು ವ್ಯತ್ಯಾಸ ಎಂದು ಗುರುತಿಸಲು ಕಷ್ಟ. ಅದನ್ನು ಭಾರತದಂತಹ ರಾಷ್ಟ್ರಗಳಲ್ಲಿ ಆಡಿಸಿದರೆ ಮಾತ್ರ ಆ ವ್ಯತ್ಯಾಸ ಗೊತ್ತಾಗುತ್ತದೆ.

ಭಾರತದಲ್ಲಿ ಪರಿಣಾಮವೇನಾಗಬಹುದು?
ಭಾರತದಲ್ಲಿ ಟೆಸ್ಟ್‌ ಪಂದ್ಯಗಳಿಗೆ ಜನರು ಬರುವುದೇ ಅಪರೂಪ. ಬೆಂಗಳೂರು, ಮುಂಬಯಿ, ಕೋಲ್ಕತಾ, ದಿಲ್ಲಿ, ಚೆನ್ನೈನಂತಹ ಸ್ಥಳಗಳಲ್ಲಿ ಪ್ರೇಕ್ಷಕರೇ ಇರುವುದಿಲ್ಲ. ಆದ್ದರಿಂದ ಉಚಿತ ಟಿಕೆಟ್‌ ನೀಡುವುದು, ಕಡಿಮೆ ಬೆಲೆಯಲ್ಲಿ ಟಿಕೆಟ್‌ ಮುದ್ರಿಸುವುದು, ಶಾಲಾ ಮಕ್ಕಳಿಗೆ ಪ್ರವೇಶ ನೀಡುವುದು, ಇಂತಹ ಪ್ರಯೋಗಗಳೆಲ್ಲ ನಡೆದಿವೆ. ಅದಕ್ಕಾಗಿಯೇ ಎರಡನೇ ಹಂತದ ನಗರಗಳ ಮೇಲೆ ಕಣ್ಣಿಟ್ಟು ಪಂದ್ಯಗಳನ್ನು ನಡೆಸಲು ಬಿಸಿಸಿಐ ಮುಂದಾಗಿದೆ. ಹಾಗೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಕಳೆದ ಒಂದೆರಡು ವರ್ಷಗಳಿಂದ ಟೆಸ್ಟ್‌ ನಡೆಯುತ್ತಿದೆ. ಇಲ್ಲಿ ಒಂದು ಹಂತಕ್ಕೆ ಜನರು ಸೇರುತ್ತಿದ್ದಾರೆ. ಕಾಲಕ್ರಮೇಣ ಈ ಕೇಂದ್ರಗಳಲ್ಲೂ ಜನರು ಬರುವುದು ನಿಂತುಹೋಗಬಹುದು. ಅದಕ್ಕೆ ಟೆಸ್ಟ್‌ ಕ್ರಿಕೆಟನ್ನು ಆಕರ್ಷಕ ಮಾಡಲು ಹಗಲುರಾತ್ರಿ ಟೆಸ್ಟ್‌ ಪಂದ್ಯ ನಿಗದಿಯಾಗಿದೆ. ಮೊದಲ ಪಂದ್ಯವಾಗಿರುವುದರಿಂದ ಜನರ ನಿರೀಕ್ಷೆ ಹೆಚ್ಚಾಗಿದೆ. ಈಗಾಗಲೇ 50 ಸಾವಿರಕ್ಕೂ ಹೆಚ್ಚು ಟಿಕೆಟ್‌ ಮಾರಾಟವಾಗಿವೆ. ಮುಂದೆ ಏನಾಗುತ್ತದೆ ಎಂದು ಕಾದು ನೋಡಬೇಕು.

ಪಿಂಕ್‌ ಚೆಂಡಿನಲ್ಲಿ ಆಟ
ಇಲ್ಲಿ ಪಂದ್ಯಗಳನ್ನು ಮಾಮೂ ಲಿಯಂತೆ ಕೆಂಪು ಚೆಂಡಿನಲ್ಲಿ ಆಡಿಸು ವುದಿಲ್ಲ. ಅಥವಾ ಏಕದಿನ ಪಂದ್ಯ ಹಗಲುರಾತ್ರಿಯಲ್ಲಿ ನಡೆದಾಗ ಬಳಸಲ್ಪಡುವ ಬಿಳಿ ಚೆಂಡನ್ನು ಬಳಸುವುದಿಲ್ಲ. ಟೆಸ್ಟ್‌ ಹಗಲುರಾತ್ರಿ ಪಂದ್ಯಕ್ಕೆ ವಿಶೇಷವಾಗಿ ಪಿಂಕ್‌ ಚೆಂಡನ್ನು ಸಿದ್ಧಪಡಿಸಲಾಗಿದೆ. ರಾತ್ರಿ ವೇಳೆ ಆಟಗಾರರ ಕಣ್ಣಿಗೆ ಒಗ್ಗಿಕೊಳ್ಳಲಿ ಎಂದು ಈ ಬಣ್ಣವನ್ನು ಆಯ್ದುಕೊಳ್ಳಲಾಗಿದೆ. ಆದರೆ ಚೆಂಡಿನ ಬಣ್ಣ ಬಹಳ ಹೊತ್ತು ಉಳಿಯುವುದಿಲ್ಲ, ಬಹಳ ಬೇಗ ಚೆಂಡಿನ ತಾಕತ್ತೂ ಇಳಿದುಹೋಗುತ್ತದೆ. ಇದಕ್ಕೆ ಏನು ಪರಿಹಾರ ಎಂದು ಇನ್ನೂ ಗೊತ್ತಾಗಿಲ್ಲ.

Advertisement

ಸೌರವ್‌ ಗಂಗೂಲಿ ಹೋರಾಟಕ್ಕೆ ಸಿಕ್ಕ ಜಯ
ಬಿಸಿಸಿಐ ನೂತನ ಅಧ್ಯಕ್ಷರಾಗಿ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಆಯ್ಕೆಯಾಗಿದ್ದಾರೆ. ಅವರು ಮೊದಲಿಂದಲೂ ಹಗಲುರಾತ್ರಿ ಪಂದ್ಯಗಳ ಪರವಾಗಿದ್ದರು. ಇದೀಗ ಅಧ್ಯಕ್ಷರಾದ ಮೊದಲ ತಿಂಗಳಲ್ಲೇ ದಿಢೀರನೇ ಹಗಲುರಾತ್ರಿ ಪಂದ್ಯದ ನಿರ್ಧಾರ ಮಾಡಿದರು. ಅಷ್ಟು ಮಾತ್ರವಲ್ಲ, ಎದುರಾಳಿ ಬಾಂಗ್ಲಾ ತಂಡವನ್ನು ಒಪ್ಪಿಸಿದರು. ಅದಕ್ಕೂ ಹೆಚ್ಚಾಗಿ ದಿಗ್ಗಜರನ್ನು ಪಂದ್ಯ ನೋಡಲು ಬರುವಂತೆ ಮಾಡಲು ಯಶಸ್ವಿಯಾಗಿದ್ದಾರೆ. ಗಂಗೂಲಿಯ ಮನವಿಗೆ ಎರಡೂ ದೇಶಗಳ ಪ್ರಮುಖ ನಾಯಕರು ಸ್ಪಂದಿಸಿರುವುದನ್ನು ಇಲ್ಲಿ ಗಮನಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next