Advertisement

ಕೊಯಿಲ: ಸುಂದರ ತಾಣದಲ್ಲೀಗ ಬಯಲು ಶೌಚ

11:53 AM Aug 06, 2018 | Team Udayavani |

ಆಲಂಕಾರು: ಕೊಯಿಲ ಗ್ರಾಮದ ಪಶುಸಂಗೋಪನ ಇಲಾಖೆಗೆ ಸೇರಿದ ಗುಡ್ಡಗಳು ಹಸಿರು ಹೊದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುವಂತಿವೆ. ಆದರೆ, ಇಲ್ಲಿ ಪಶು ವೈದ್ಯಕೀಯ ಕಾಲೇಜು ನಿರ್ಮಿಸಲಾಗಿದ್ದು, ಕಟ್ಟಡ ಕಾರ್ಮಿಕರು ನಿತ್ಯ ಬಯಲು ಶೌಚ ಮಾಡುತ್ತಿರುವ ಕಾರಣ ಪರಿಸರದಲ್ಲಿ ದುರ್ವಾಸನೆ ಹಬ್ಬಿದೆ.

Advertisement

ಪಶುಸಂಗೋಪನ ಇಲಾಖೆಯ ಅಧೀನದಲ್ಲಿರುವ 800 ಎಕರೆ ಪ್ರದೇಶದಲ್ಲಿ 247 ಎಕರೆಯಲ್ಲಿ ಪಶುಪಾಲನ ಮತ್ತು ಪಶುವೈದ್ಯ ಸೇವಾ ಇಲಾಖೆ ಮತ್ತು ಬೀದರ್‌ನ ಪಶು ವೈದ್ಯಕೀಯ ಮತ್ತು ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಪುತ್ತೂರು ತಾಲೂಕಿನ ಕೊಯಿಲದಲ್ಲಿ ಪಶು ವೈದ್ಯಕೀಯ ಕಾಲೇಜು ನಿರ್ಮಾಣವಾಗುತ್ತಿದೆ.

300 ಕೋ. ರೂ. ಕಾಮಗಾರಿ
ಕಳೆದ ಸರಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಕಾಲೇಜು ಕಟ್ಟ ಡ ಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು, 300 ಕೋಟಿ ರೂ. ವೆಚ್ಚದಲ್ಲಿ ಪಶು ವೈದ್ಯಕೀಯ ಕಾಲೇಜು ನಿರ್ಮಾಣವಾಗಲಿದೆ. 150ಕ್ಕೂ ಮಿಕ್ಕಿದ ಕಾರ್ಮಿಕರು ಬಯಲು ಶೌಚ ಆಶ್ರಯಿಸಿದ್ದು, ಪಕ್ಕದ ಗುಡ್ಡಗಳಿಗೆ ತೆರಳುತ್ತಿದ್ದಾರೆ. ಇದರಿಂದ ಪಕ್ಕದಲ್ಲಿರುವ ಜನವಸತಿ ಪ್ರದೇಶಕ್ಕೆ ದುರ್ನಾತ ಹಬ್ಬುತ್ತಿದೆ. ಕರ್ನಾಟಕ ಗೃಹ ಮಂಡಳಿಯಿಂದ ಗುತ್ತಿಗೆ ಪಡೆದ ಬೆಂಗಳೂರಿನ ಸ್ಟಾರ್‌ ಬಿಲ್ಡರ್ ಕಾಮಗಾರಿ ನಿರ್ವಹಿಸುತ್ತಿದೆ.

ವಸತಿ ನಿಲಯ, ಅತಿಥಿ ಗೃಹ, ಕಾಲೇಜು ಮತ್ತು ಆಸ್ಪತ್ರೆ ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ. ಕಚೇರಿ ಮತ್ತು ಸಿಬಂದಿ ವಸತಿಗೃಹದ ನಿರ್ಮಾಣ ಇನ್ನಷ್ಟೆ ಆರಂಭವಾಗಬೇಕಾಗಿದೆ.

ಸಾಂಕ್ರಾಮಿಕ ರೋಗ ಭೀತಿ
ಬಿಹಾರ ಮತ್ತು ಬಯಲು ಸೀಮೆ ಮೂಲದ ಕಾರ್ಮಿಕರು ಇಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರಿಗೆ ಮೂರು ಶೌಚಾಲಯಗಳ ವ್ಯವಸ್ಥೆಯಿದೆ. ಅದರ ನಿರ್ವಹಣೆ ಸರಿಯಾಗಿಲ್ಲದ ಕಾರಣ ಉಪಯೋಗಿಸುವಂತಿಲ್ಲ. ಶೌಚಾಲಯದ ಕೊರತೆಯಿಂದ ಮಹಿಳಾ ಕಾರ್ಮಿಕರಿಗೆ ಹೆಚ್ಚು ಕಷ್ಟವಾಗಿದೆ. ಬಟ್ಟೆ, ಸ್ನಾನದ ಕೊಳಚೆ ನೀರು ಗುಡ್ಡದ ಕೆಳಗಿನ ಭಾಗವಾದ ಎಲ್ಯಂಗ, ಆತೂರುಬೈಲಿನಲ್ಲಿ 29ಕ್ಕೂ ಹೆಚ್ಚು ಕುಟುಂಬಗಳಿರುವ ವಸತಿ ಪ್ರದೇಶದತ್ತ ಹರಿಯುತ್ತಿದೆ. ಮಳೆ ನೀರು ಹಾಗೂ ಕುಡಿಯುವ ನೀರಿನ ಮೂಲಗಳಲ್ಲಿ ಬೆರೆತು ಈ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.

Advertisement

ಶೆಡ್‌ನ‌ಲ್ಲಿ ವಾಸ
ಕಾರ್ಮಿಕರೆಲ್ಲರೂ 7 ಶೆಡ್‌ಗಳಲ್ಲಿ ವಾಸಿಸುತ್ತಿದ್ದಾರೆ. ಶೆಡ್‌ಗೆ ವಿದ್ಯುತ್‌ ವ್ಯವಸ್ಥೆಯಿದೆ. ವಿದ್ಯುತ್‌ ಕಡಿತಗೊಂಡರೆ ಜನರೇಟರ್‌ ಇದೆ. ಆದರೆ ಶೀಟ್‌ಗಳಿಂದ ನಿರ್ಮಿಸುವ ಶೆಡ್‌ಗಳಲ್ಲಿ ಸುರಕ್ಷತೆಯಿಲ್ಲ. ಶೌಚಾಲಯ ನಿರ್ಮಾಣ ಮಾಡಿಕೊಡಿ ಎಂದು ಗುತ್ತಿಗೆದಾರರಲ್ಲಿ ಹೇಳಿಕೊಂಡಿದ್ದೇವೆ. ಅವರು ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಕಾರ್ಮಿಕರು. ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನ, ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಕೊಯಿಲ, ವಳಕಡಮ ಶಾಲೆ, ಮಸೀದಿ, ಪ್ರಮುಖ ಪೇಟೆಗಳನ್ನು ಸಂಪರ್ಕಿಸಲು ನೂರಾರು ಮಂದಿ ಉಪಯೋಗಿಸುವ ರಸ್ತೆಗಳು ಇದೇ ಕಟ್ಟಡಗಳ ಪಕ್ಕದ ಜಾಗದಲ್ಲಿ ಹಾದು ಹೋಗಿದೆ. ಕಟ್ಟಡಗಳು ಗುಡ್ಡಗಳ ಮೇಲ್ಭಾಗದಲ್ಲಿ ನಿರ್ಮಾಣವಾಗುತ್ತಿವೆ. ಇಲ್ಲಿನ ಮರಳು, ಕಸ- ಕಡ್ಡಿಗಳು ಕೂಡ ರಸ್ತೆ ಚರಂಡಿಗಳಿಗೆ ಸೇರುತ್ತಿದೆ.

ಗುತ್ತಿಗೆದಾರರು ಜವಾಬ್ದಾರರು
ಕಾರ್ಮಿಕರಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಿ ಕೊಡುವುದು ಗುತ್ತಿಗೆದಾರರ ಜವಾಬ್ದಾರಿ. ಕಾಲೇಜು ನಿರ್ಮಾಣದ ಹೊಣೆ ಹೊತ್ತ ಕರ್ನಾಟಕ ಹೌಸಿಂಗ್‌ ಬೋರ್ಡ್‌ನ ಮಂಗಳೂರಿನ ಅಧಿಕಾರಿಗಳೊಂದಿಗೆ ಮತ್ತು ಗುತ್ತಿಗೆ ಪಡೆದಿರುವ ಬೆಂಗಳೂರಿನ ಸ್ಟಾರ್‌ ಬಿಲ್ಡರ್ಸ್‌ನ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ ಕ್ರಮ ಕೈಗೊಳ್ಳಲಾಗುವುದು.
 - ಡಾ| ನಾರಾಯಣ ಭಟ್‌,
 ವಿಶೇಷ ಕರ್ತವ್ಯಾಧಿಕಾರಿ, ಕೊಯಿಲ ಪಶು ವೈದಕೀಯ ಕಾಲೇಜು 

ಪ್ರತಿಭಟನೆಗೆ ಸಿದ್ಧತೆ
ಕಾಮಗಾರಿ ಆರಂಭದಿಂದಲೂ ಇಲ್ಲಿನ ಕಾರ್ಮಿಕರು ಬಯಲು ಶೌಚವನ್ನು ಆಶ್ರಯಿಸಿದ್ದಾರೆ. ಈ ಬಗ್ಗೆ ಗುತ್ತಿಗೆದಾರರಿಗೆ ಸ್ಥಳೀಯರು ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಸ್ವಚ್ಛ  ಭಾರತ ಪರಿಕಲ್ಪನೆಗೆ ಗುತ್ತಿಗೆದಾರರ ದುರ್ನಡತೆಯಿಂದ ಕಳಂಕವಾಗುತ್ತಿದೆ. ಕೊಯಿಲ ಗ್ರಾಮವು ಸ್ವಚ್ಛ  ಗ್ರಾಮವೆನ್ನುವ ಪ್ರಶಸ್ತಿ ಪಡೆದಿದೆ. ಗ್ರಾ.ಪಂ. ನೀಡಿದ ನೊಟೀಸಿಗೆ ಸ್ಪಂದಿಸಿಲ್ಲ. ಪ್ರತಿಭಟನೆಗೆ ಸಿದ್ಧತೆ ನಡೆಸಲಾಗುತ್ತಿದೆ.
– ಸುಲೈಮಾನ್‌,
ಕೊಯಿಲ ಗ್ರಾ.ಪಂ. ಸದಸ್ಯ

ನೋಟಿಸ್‌ಗೂ ಸಂದಿಸಿಲ್ಲ 
ಸ್ಥಳೀಯರ ದೂರಿನ ಮೇರೆಗೆ ಕಟ್ಟಡ ನಿರ್ಮಾಣದಾರರಿಗೆ ಕೊಯಿಲ ಗ್ರಾ.ಪಂ. ನೋಟಿಸ್‌ ನೀಡಿ, ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸೂಚಿಸಿತ್ತು. ಸ್ವತಃ ಗ್ರಾ.ಪಂ. ಅಧಿಕಾರಿ, ಆಡಳಿತ ಮಂಡಳಿ, ಸ್ಥಳೀಯ ಆರೋಗ್ಯ ಸಹಾಯಕಿಯರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ಕ್ರಮ ಕೈಗೊಳ್ಳುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದರು. ಆದರೂ ಗುತ್ತಿಗೆದಾರರು ಮೌನವಾಗಿದ್ದಾರೆ.

ಗಮನಕ್ಕೆ ಬಂದಿಲ್ಲ
ಪಶು ವೈದ್ಯಕೀಯ ಕಾಲೇಜು ಕಟ್ಟಡ ಕಾರ್ಮಿಕರಿಗೆ ಸಮರ್ಪಕ ಶೌಚಾಲಯವಿಲ್ಲದೆ ಬಯಲು ಶೌಚ ಅವಲಂಬಿಸಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಸ್ಥಳಕ್ಕೆ ತೆರಳಿ ಕ್ರಮ ಕೈಗೊಳ್ಳುವಂತೆ ಪುತ್ತೂರು ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಲಾಗುವುದು.
– ಡಾ| ಎಂ.ಆರ್‌. ರವಿ
ದ.ಕ. ಜಿ.ಪಂ. ಸಿಇಒ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next