Advertisement

ಬರದ ನಾಡಿಗೆ ಬದುಕು ಕೊಟ್ಟ ಕೆಎಂಕೆ

07:23 AM Feb 04, 2019 | |

ಕೋಲಾರ: ಬರದ ಜಿಲ್ಲೆಗಳಲ್ಲಿ ಜನರಿಗೆ ಬದುಕು ನೀಡಿದ ಹೈನೋದ್ಯಮದ ಇಂದಿನ ಔನ್ನತ್ಯವನ್ನು ಕ್ಷೀರಕ್ರಾಂತಿಯ ಹರಿಕಾರ ಎಂ.ವಿ.ಕೃಷ್ಣಪ್ಪ ಅವರಿಗೆ ಸಮರ್ಪಣೆಯಾಗಲಿ ಎಂದು ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅಭಿಪ್ರಾಯಪಟ್ಟರು.

Advertisement

ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ ಹಾಗೂ ಹಾಲು ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ನಗರದ ಜೂನಿಯರ್‌ ಕಾಲೇಜು ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದಿವಂಗತ ಎಂ.ವಿ.ಕೃಷ್ಣಪ್ಪ ಅವರ ಜನ್ಮಶತಮಾನೋತ್ಸವವನ್ನು ಗೋಪೂಜೆ ಹಾಗೂ ಗೋವುಗಳಿಗೆ ಮೇವು ತಿನ್ನಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಯುವ ಪೀಳಿಗೆಯ ರಾಜಕಾರಣಿಗಳಿಗೆ ಎಂವಿ.ಕೆ ಅವರ ಹಾಸ್ಯದ ತುಣುಕುಗಳಿರುವ ಭಾಷಣ ಓದುವಂತೆ ಸಲಹೆ ನೀಡಿದ ಅವರು, ಹಾಸ್ಯ ಪ್ರವೃತ್ತಿ ಮೂಲಕವೇ ಎದುರಾಳಿಗಳನ್ನು ಸಮರ್ಥವಾಗಿ ಎದುರಿಸುತ್ತಿದ್ದ ಕೃಷ್ಣಪ್ಪ ರಾಜಕಾರಣಿಗಳಿಗೆ ಆದರ್ಶವಾಗಿದ್ದರು ಎಂದು ತಿಳಿಸಿದರು. ಸ್ಫೂರ್ತಿಯ ಚಿಲುಮೆಯಾಗಿ ಯುವಶಕ್ತಿಯ ಅವಧೂತರಾಗಿ ರಾಜಕಾರಣಕ್ಕೆ ಬಂದ ಎಂವಿಕೆ, ವರ್ಣರಂಜಿತ ವ್ಯಕ್ತಿತ್ವವನ್ನು ಸ್ಮರಿಸುವ ಸಂದರ್ಭ ತನಗೆ ಬಂದಿದ್ದು ಅವರಿಗೆ ಪ್ರಣಾಮ ಸಲ್ಲಿಸುತ್ತೇನೆ ಎಂದರು.

ಆದರ್ಶ ರಾಜಕಾರಣಿ ಎಂ.ವಿ.ಕೃಷ್ಣಪ್ಪ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ದೂರದೃಷ್ಟಿಯ ಆದರ್ಶ ರಾಜಕಾರಣಿ ಎಂವಿಕೆ ಆಗಿದ್ದು ಸಾಮಾಜಿಕ ಕಳಕಳಿ ಇರುವವರಿಂದ ಮಾತ್ರ ಅಭಿವೃದ್ಧಿ ಸಾಧ್ಯವೆಂದು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆಂದರು.

ಹೆಜ್ಜೆ ಗುರುತು: ದೂರದೃಷ್ಟಿಯಿಂದ ಹಾಲೆಂಡ್‌ನಿಂದ ಹಸು, ಗೂಳಿ ತಂದು ದೇಶದಲ್ಲಿ ಎಚ್ಎಫ್‌ ತಳಿ ರಾಸನ್ನು ಪರಿಚಯಿಸಿದರು. ಈ ಸಾಧನೆಗೆ ಅವರ ಪತ್ನಿಯೂ ಪಾಲುದಾರರು. ಅವರ ಮನೆಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಐದು ಮಂದಿ ಜೈಲಿಗೆ ಹೋಗಿದ್ದರಂತೆ. ಅದರ ಫಲಾನುಭವಿಗಳು ನಾವು ಎಂದರು.

Advertisement

74 ಲಕ್ಷ ಲೀಟರ್‌ ಹಾಲು ಉತ್ಪಾದನೆ: ಕರ್ನಾಟಕದಲ್ಲಿ ತಮ್ಮ ಸರ್ಕಾರ ಬಂದ ನಂತರ ಹಾಲಿಗೆ ಐದು ರೂ.ಪ್ರೋತ್ಸಾಹ ಧನ ನೀಡಿದ್ದರಿಂದಾಗಿ 50 ಲಕ್ಷ ಲೀಟರಷ್ಟಿದ್ದ ಹಾಲಿನ ಉತ್ಪಾದನೆ ಇಂದು 74 ಲಕ್ಷ ಲೀಟರ್‌ಗೆ ಏರಿಕೆಯಾಗಿದೆ. ಹಾಲಿನ ಉತ್ಪಾದನೆ ಹೆಚ್ಚಳದಿಂದ ತೊಂದರೆಯಾಗದಂತೆ ರಾಜ್ಯದ 1.2 ಕೋಟಿ ಮಕ್ಕಳಿಗೆ ಹಾಲು ವಿತರಿಸಲಾಗುತ್ತಿದೆ ಎಂದರು.

ರಮೇಶ್‌ಕುಮಾರ್‌ರಿಂದ ನೈತಿಕ ದಿಕ್ಸೂಚಿ-ಸಿಬಿಕೆ: ಜಿಲ್ಲಾ ಉಸ್ತುವಾರಿ ಸಚಿವ ಸಿ.ಬಿ.ಕೃಷ್ಣಬೈರೇಗೌಡ, ಎಂವಿಕೆ ಸ್ಮರಣೆಯಲ್ಲಿ ನಾವು ಎಡವಿದ್ದೇವೆ. ಆದರೆ ರಮೇಶ್‌ಕುಮಾರ್‌ ಅವರು ನಮ್ಮ ಕಿವಿಹಿಂಡಿ ನೈತಿಕ ದಿಕ್ಸೂಚಿಯಾದರು. ಯಾರೂ ವೇದಿಕೆಯಲ್ಲಿ ಕೂರಬಾರದು ಎಂದು ನಿರ್ಬಂಧ ಹಾಕಿಕೊಂಡರು ಎಂದು ತಿಳಿಸಿದರು.ರಾಜ್ಯದ 12 ಜಿಲ್ಲೆಗಳಲ್ಲಿ ಲಾಲ್‌ಬಹದ್ದೂರ್‌ ಶಾಸ್ತ್ರಿ ಅವರನ್ನು ಕರೆಸಿ ಹಾಲು ಒಕ್ಕೂಟಗಳನ್ನು ಉದ್ಘಾಟಿಸಿದ ಎಂವಿಕೆ ಅವರು ಕೆ.ಸಿ. ರೆಡ್ಡಿ ನಂತರ ಮುಖ್ಯಮಂತ್ರಿಗಳಾಗುವ ಅರ್ಹತೆ ಹೊಂದಿದ್ದರು. ಆದರೆ ಸ್ವಲ್ಪದರಲ್ಲಿ ತಪ್ಪಿ ಹೋಯಿತು ಎಂದರು.

ಇದೇ ವೇಳೆ ಮಾಜಿ ಪ್ರಧಾನಿ ದೇವೇಗೌಡರು ಅನಾರೋಗ್ಯದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಬರಲಾಗದೇ ಕಳುಹಿಸಿದ್ದ ಸಂದೇಶವನ್ನು ಸಚಿವರು ವಾಚಿಸಿದರು. ಇದೇ ಸಂದರ್ಭದಲ್ಲಿ ಎಂ.ವಿ.ಕೃಷ್ಣಪ್ಪ ಅವರ ಧರ್ಮಪತ್ನಿ ಪ್ರಮೀಳಾ ಕೃಷ್ಣಪ್ಪ ಅವರನ್ನು ಡಿಸಿಸಿ ಬ್ಯಾಂಕ್‌ ಮತ್ತು ಕೋಚಿಮುಲ್‌ನಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿದ್ದ ಸಹಸ್ರಾರು ಮಂದಿಗೆ ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ ಊಟದ ವ್ಯವಸ್ಥೆ ಮಾಡಿದ್ದರು.

ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌ ಕಾರ್ಯಕ್ರಮ ನಿರೂಪಿಸಿ, ರಾಜ್ಯದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿರುವ ದಿವಂಗತ ಎಂ.ವಿ.ಕೃಷ್ಣಪ್ಪ ಅವರ ಹೆಸರನ್ನು ಪಶುವೈದ್ಯಕೀಯ ವಿವಿಗೆ ಇಡಿ, ಕೋಲಾರ ಜಿಲ್ಲೆಯಲ್ಲಿ ಅವರ ಹೆಸರಿನಲ್ಲಿ ಉನ್ನತ ಶಿಕ್ಷಣದ ಕಾಲೇಜು ಸ್ಥಾಪನೆಗೆ ಮನವಿ ಮಾಡಿದರು.

ಕೃಷಿ ಸಚಿವ ಶಿವಶಂಕರರೆಡ್ಡಿ, ಸಂಸದ ರಾಜೂ ಗೌಡ, ಶತಮಾನೋತ್ಸವ ಸಮಿತಿ ಅಧ್ಯಕ್ಷ ಕೆ.ಶ್ರೀನಿವಾಸಗೌಡ, ಶಾಸಕರಾದ ವಿ.ಮುನಿಯಪ್ಪ, ನಸೀರ್‌ ಅಹಮದ್‌, ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ, ರೂಪಕಲಾ ಶಶಿಧರ್‌, ಚೌಡರೆಡ್ಡಿ, ಮಾಜಿ ಶಾಸಕರಾದ ಡಾ.ಸುಧಾಕರ್‌, ಚೌಡರೆಡ್ಡಿ, ರಾಜಣ್ಣ, ಎಂ.ನಾರಾಯಣಸ್ವಾಮಿ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಮುಖಂಡರಾದ ಸಿ.ಎಂ.ಮುನಿಯಪ್ಪ ಇದ್ದರು.

ಬೈಕ್‌ ರ್ಯಾಲೀಲಿ ಬಂದ ಅಭಿಮಾನಿಗಳು
ಶ್ರೀನಿವಾಸಪುರ:
ಜಿಲ್ಲೆಯಲ್ಲಿ ಡೇರಿ ಸ್ಥಾಪಿಸಲು ಪಣತೊಟ್ಟು ಸಾಧಿಸಿ ಹಲವಾರು ಯೋಜನೆಗಳನ್ನು ಜಾರಿಗೊಳಿಸುವಂತೆ ಮಾಡಿದ ಮಹಾನ್‌ ಪುರುಷ ಎಂ.ವಿ.ಕೃಷ್ಣಪ್ಪ ಎಂದು ತಾಪಂ ಮಾಜಿ ಸದಸ್ಯ ಕೆ.ಕೆ.ಮಂಜುನಾಥರೆಡ್ಡಿ ಹೇಳಿದರು. ಕೋಲಾರ ಜಿಲ್ಲೆ ಶ್ರೀನಿವಾಸಪುರ ಪಟ್ಟಣದಲ್ಲಿ ಆರ್‌.ಕೆ.ಫೋರ್ಸ್‌ ಮತ್ತು ಕಾಂಗ್ರೆಸ್‌ ಮುಖಂಡರಿಂದ ಶ್ರೀನಿವಾಸಪುರದಿಂದ ಕೋಲಾರವರೆಗೂ ಎಂವಿಕೆ ಶತಮಾನೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಬೈಕ್‌ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.

ಕೃಷ್ಣಪ್ಪನವರು ಡೆನ್ಮಾಕ್‌ ದೇಶದಿಂದ ಸೀಮೆ ಹಸು ಮತ್ತು ಹಾಲೆಂಡ್‌ ದೇಶದಲ್ಲಿ ನಡೆಯುತ್ತಿದ್ದ ಕ್ಷೀರ ಪದ್ಧತಿಯನ್ನು ದೇಶಕ್ಕೆ ಪರಿಚಿಯಿಸಿದರೆಂದರು. ಬೈಕ್‌ ರ್ಯಾಲಿಯಲ್ಲಿ ನೂರಾರು ಅಭಿಮಾನಿಗಳು ಭಾಗವಹಿಸಿದ್ದರು. ಈ ವೇಳೆ ಆರ್‌.ಕೆ.ಫೋರ್ಸ್‌ ಮತ್ತು ವಿಧಾನಸಭಾಧ್ಯಕ್ಷರಾದ ಕೆ.ಆರ್‌.ರಮೇಶಕುಮಾರ್‌ ಅಭಿಮಾನಿ ಬಳಗದಿಂದ ಬೈಕ್‌ ರ್ಯಾಲಿ ನಡೆಯಿತು.

ಕೆ.ಸಿ. ವ್ಯಾಲಿಗೆ ತಡೆ ತಂದವರು ಸಮಾಜ ದ್ರೋಹಿಗಳು: ಅಂತರ್ಜಲ ಪಾತಾಳ ತಲುಪಿದ ಜಿಲ್ಲೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕೆ.ಸಿ. ವ್ಯಾಲಿ ಯೋಜನೆಗೆ ಅಡ್ಡಗಾಲು ಹಾಕಿರುವವರು ಸಮಾಜ ದ್ರೋಹಿಗಳು. ಅಂತಹವರ ಬಗ್ಗೆ ಎರಡೂ ಜಿಲ್ಲೆಯ ಜನ ಎಚ್ಚರಿಕೆಯಿಂದಿರಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.

ದಿವಂಗತ ಎಂ.ವಿ.ಕೃಷ್ಣಪ್ಪ ಅವರ ಜನ್ಮಶತಮಾನೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನೇರವಾಗಿ ತ್ಯಾಜ್ಯ ನೀರು ಬಳಸಿ ಒಳ್ಳೆಯ ತರಕಾರಿ ಬೆಳೆಯುತ್ತಿದ್ದಾರೆ. ಅದನ್ನು ತಿಂತಿದ್ದೇವೆ. ಆದರೆ ಸಂಸ್ಕರಣೆ ಮಾಡಿದ ನೀರು ಬರದಿಂದ ಕಂಗೆಟ್ಟು ಅಂತರ್ಜಲ 1500 ಅಡಿಗಿಳಿದ ಜಿಲ್ಲೆಯ ಕೆರೆಗಳಿಗೆ ತುಂಬಿಸಲು ಮುಂದಾದರೆ ಅದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹೋಗುತ್ತಾರೆ.

ಇವರು ಜನವಿರೋಧಿಗಳು ಎಂದು ಕಿಡಿಕಾರಿದರು. ನರಸಾಪುರ ಕೆರೆ ಭರ್ತಿಯಾಗಿರುವುದನ್ನು ನೋಡಿದರೆ ಖುಷಿಯಾಗುತ್ತದೆ. ಇಂತಹ ಯೋಜನೆಗೆ ವಿರೋಧ ವ್ಯಕ್ತಪಡಿಸುವವರನ್ನು ಒಕ್ಕೊರಲಿನಿಂದ ಖಂಡಿಸಿ ಎಂದು ತಾಕೀತು ಮಾಡಿದರು. ಸುಮಾರು 2500 ಕೋಟಿ ರೂ., ವೆಚ್ಚದಲ್ಲಿ ಕೆ.ಸಿ. ವ್ಯಾಲಿ ಹಾಗೂ ಹೆಬ್ಟಾಳ ವ್ಯಾಲಿ ಯೋಜನೆ ನೀಡಿದ್ದೇನೆ.

ಈ ಯೋಜನೆಗಳಿಗೆ ರಮೇಶ್‌ಕುಮಾರ್‌ ದುಂಬಾಲು ಬಿದ್ದರು. ಕೃಷ್ಣಬೈರೇಗೌಡ, ಸಂಸದ ಮುನಿಯಪ್ಪ ಮತ್ತಿತರರು ಒತ್ತಡ ಹಾಕಿದರು ಎಂದರು. ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ. ಇದಕ್ಕೆ 13 ಸಾವಿರ ಕೋಟಿ ರೂ. ನೀಡಿದ್ದೇನೆ. ಕೆ.ಸಿ.ವ್ಯಾಲಿ ಕೆರೆಗಳನ್ನು ತುಂಬಿಸಿ. ಅಂತರ್ಜಲ ವೃದ್ಧಿ ಯೋಜನೆಯಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next