Advertisement

ಆಫ್ರಿಕಾ ಸರಣಿ: ರಾಹುಲ್‌ಗೆ ನಾಯಕತ್ವ?

09:59 AM Mar 03, 2020 | sudhir |

ಹೊಸದಿಲ್ಲಿ: ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಗೆ ಕರ್ನಾಟಕ ಕ್ರಿಕೆಟಿಗ ಕೆ.ಎಲ್‌. ರಾಹುಲ್‌ ಅವರಿಗೆ ಟೀಮ್‌ ಇಂಡಿಯಾ ನಾಯಕತ್ವ ಲಭಿಸಲಿದೆಯೇ? ಹೌದು ಎನ್ನುತ್ತಿವೆ ಮೂಲಗಳು.

Advertisement

ನಾಯಕ ವಿರಾಟ್‌ ಕೊಹ್ಲಿ ನ್ಯೂಜಿಲ್ಯಾಂಡ್‌ ಸರಣಿ ಮುಗಿದ ಬಳಿಕ ವಿಶ್ರಾಂತಿ ಪಡೆಯಲಿದ್ದಾರೆ ಎನ್ನಲಾಗಿದೆ. ಉಪನಾಯಕ ರೋಹಿತ್‌ ಶರ್ಮ ಇನ್ನೂ ಗಾಯ ದಿಂದ ಚೇತರಿಸಿಕೊಂಡಿಲ್ಲ. ಹೀಗಾಗಿ ಭಾರತ ತಂಡದ ನಾಯಕ ಹಾಗೂ ಉಪನಾಯಕನ ಪಟ್ಟಕ್ಕಾಗಿ ನಾಲ್ವರು ಕ್ರಿಕೆಟಿಗರ ನಡುವೆ ಪೈಪೋಟಿ ಏರ್ಪಟ್ಟಿದೆ. ಕೆ.ಎಲ್‌. ರಾಹುಲ್‌, ಶಿಖರ್‌ ಧವನ್‌, ಶ್ರೇಯಸ್‌ ಅಯ್ಯರ್‌ ಮತ್ತು ಮನೀಷ್‌ ಪಾಂಡೆ ರೇಸ್‌ನಲ್ಲಿದ್ದಾರೆ.

ಭವಿಷ್ಯದ ನಾಯಕ ರಾಹುಲ್‌
ಮೂಲಗಳ ಪ್ರಕಾರ ಈ ನಾಲ್ವರಲ್ಲಿ ಅನುಭವಿ ರಾಹುಲ್‌ಗೆ ನಾಯಕತ್ವದ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಇತ್ತೀಚೆಗೆ ನ್ಯೂಜಿಲ್ಯಾಂಡ್‌ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಕೊಹ್ಲಿ, ರೋಹಿತ್‌ ಅನುಪಸ್ಥಿತಿಯಲ್ಲಿ ರಾಹುಲ್‌ ತಂಡವನ್ನು ಮುನ್ನಡೆಸಿದ್ದರು. ಭವಿಷ್ಯದಲ್ಲಿ ರಾಹುಲ್‌ಗೆ ಭಾರತ ತಂಡದ ನಾಯಕತ್ವ‌ ನೀಡುವ ಕುರಿತಂತೆ ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದ್ದು, ಹೀಗಾಗಿ ಆಫ್ರಿಕಾ ಸರಣಿಗೆ ಮೊದಲ ಆಯ್ಕೆ ರಾಹುಲ್‌ ಎನ್ನಲಾಗಿದೆ.

ರೇಸ್‌ನಲ್ಲಿ ಶಿಖರ್‌ ಧವನ್‌
ಶಿಖರ್‌ ಧವನ್‌ ಕೂಡ ಆಯ್ಕೆ ರೇಸ್‌ನಲ್ಲಿದ್ದಾರೆ. ನಾಯಕನ ಪಾತ್ರ ನಿರ್ವಹಿಸಿದ ಅನುಭವ ಇಲ್ಲದಿದ್ದರೂ ಧವನ್‌ಗೆ ಉಪನಾಯಕನಾಗಿ ತಂಡ ಮುನ್ನಡೆಸಿರುವ ಅನುಭವ ಇದೆ. ಮನೀಷ್‌ ಪಾಂಡೆ ದೇಶಿ ಕ್ರಿಕೆಟ್‌ನಲ್ಲಿ ನಾಯಕನಾಗಿ ಉತ್ತಮ ನಿರ್ವಹಣೆ ನೀಡಿದ್ದಾರೆ. ಇವರ ನಾಯಕತ್ವದಲ್ಲಿ ಕರ್ನಾಟಕ ತಂಡ ವಿಜಯ್‌ ಹಜಾರೆ ಹಾಗೂ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಕ್ರಿಕೆಟ್‌ ಕೂಟದಲ್ಲಿ ಚಾಂಪಿಯನ್‌ ಆಗಿರುವುದರಿಂದ ಪಾಂಡೆಗೊಂದು ಅವಕಾಶ ಸಿಕ್ಕಿದರೂ ಅಚ್ಚರಿ ಇಲ್ಲ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next