Advertisement

Kittur Chennamma; ಬ್ರಿಟಿಷರ ವಿರುದ್ಧ ರಣಚಂಡಿಯಾಗಿ ಹೋರಾಡಿದ ವೀರರಾಣಿ ಚನ್ನಮ್ಮ

02:14 PM Oct 23, 2023 | Team Udayavani |

ಭಾರತ ದೇಶದ ಸ್ವಾತಂತ್ರ್ಯ ಸಂಗ್ರಾಮದ 1857ರ ಸಿಪಾಯಿ ದಂಗೆಯೇ ಮೊದಲನೆಯ ದಂಗೆ ಎಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಅದಕ್ಕೂ ಮುಂಚೆ ಅಂದರೆ 1824 ರಲ್ಲಿಯೇ ಕಿತ್ತೂರ ರಾಣಿ ಚನ್ನಮ್ಮ ತನ್ನ ಚಿಕ್ಕ ಸೈನ್ಯದ ಜತೆಗೂಡಿ ದೈತ್ಯ ಬ್ರಿಟಿಷ ಸೈನ್ಯದ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ಕೆಂಪು ಮೋತಿ ಪಿರಂಗಿಗಳನ್ನು ಹೊಡೆದುರುಳಿಸಿ ಸ್ವಾತಂತ್ರ್ಯ ಹೋರಾಟದ ಬೆಳ್ಳಿಚುಕ್ಕಿಯಾಗಿ ಮಿಂಚಿದವಳು ರಾಣಿ ಕಿತ್ತೂರು ಚನ್ನಮ್ಮ.

Advertisement

ಬ್ರಿಟಿಷರ ವಿರುದ್ಧ ರಣಚಂಡಿಯಾಗಿ ಹೋರಾಟ ನಡೆಸಿ ಕಿತ್ತೂರ ಸಂಸ್ಥಾನದ ಸ್ವಾಭಿಮಾನ, ನಾಡ ಪ್ರೇಮ, ಅಖಂಡ ಭಾರತ ದೇಶದ ಸ್ವಾತಂತ್ರ್ಯ ಪ್ರಿಯರಿಗೆ ದಿಟ್ಟ ಹೋರಾಟದ ಮೂಲಕ ಸಾಬೀತು ಪಡಿಸಿದ ಸುದಿನವೇ ಪ್ರಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದರೆ ತಪ್ಪಾಗಲಾರದು.

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕೆಯಾಗಿ ಐತಿಹಾಸಿಕ ಪುಟಗಳಲ್ಲಿ ರಾರಾಜಿಸುತ್ತಿರುವ ಈ ವೀರವನಿತೆ ಕಿತ್ತೂರ ಸಂಸ್ಥಾನದಲ್ಲಿ ಧನ-ಧಾನ್ಯ, ಮೂಲಸೌಕರ್ಯಗಳನ್ನು ಹೊಂದಿದ್ದಳು. ಸಂಸ್ಥಾನದಲ್ಲಿ ಶಸ್ತ್ರಾಸ್ತ್ರ, ಮದ್ದು ಗುಂಡುಗಳು
ಅಪಾರ ಪ್ರಮಾಣದಲ್ಲಿ ಸಂಗ್ರಹಿಸಿ ಇಟ್ಟುಕೊಂಡಿದ್ದಳು. ಯೋಧರನ್ನು ತನ್ನ ಸ್ವಂತ ಮಕ್ಕಳಂತೆ ಕಾಣುತ್ತಿದ್ದ ರಾಣಿ ಚನ್ನಮ್ಮ ವೈರಿಗಳ ಮಕ್ಕಳು ವೈರಿಗಳಲ್ಲ ಎಂದು ಹೇಳುವ ಮೂಲಕ ವೈರಿ ಬ್ರಿಟಿಷ್‌ ಅಧಿಕಾರಿ ಥ್ಯಾಕರೆ ಮಕ್ಕಳನ್ನು ಸಾಕಿ ಸಲುಹುವ ಮೂಲಕ ರಾಷ್ಟ್ರಮಾತೆ ಎಂದು ಪ್ರಸಿದ್ಧಿಯಾದಳು.

ಕಿತ್ತೂರು ರಾಣಿ ಚನ್ನಮ್ಮಾಜಿಯವರು ಕಾಕತಿ ದೇಸಾಯಿ ಧೂಳಪ್ಪಗೌಡ ಹಾಗೂ ಪದ್ಮಾವತಿ ದಂಪತಿಯ ಪುಣ್ಯಗರ್ಭದಲ್ಲಿ
1778ರಲ್ಲಿ ಜನಿಸಿದರು. ಧೂಳಪ್ಪಗೌಡ ದೇಸಾಯಿ ಯುದ್ಧ ಕಲೆಯಲ್ಲಿ ನಿಪುಣರಾಗಿದ್ದರು. ಇವರು ತಮ್ಮ ಮಗಳಿಗೆ ಸರ್ವ ವಿದ್ಯೆಯನ್ನೂ ಕಲಿಸಿದ್ದರು. ರಾಜಕಳೆಯ ಹೆಣ್ಣು ಮಗುವೇ ಮುಂದೆ ಕಿತ್ತೂರ ಮಹಾಸಂಸ್ಥಾನದ ಮಹಾರಾಣಿ ಪಟ್ಟ ವಹಿಸಿಕೊಂಡು ಕಿತ್ತೂರು ನಾಡನ್ನು ಸಮೃದ್ಧ ನಾಡಾಗಿ ಬೆಳೆಸಿದ ಕೀರ್ತಿ ರಾಣಿ ಚನ್ನಮ್ಮನವರಿಗೆ ಸಲ್ಲುತ್ತದೆ.

ಮಲ್ಲಸರ್ಜ ದೊರೆಗೆ ಮೊದಲನೇ ಹೆಂಡತಿ ರುದ್ರಮ್ಮ ಇದ್ದಾಗಲೂ ರಾಣಿ ಚನ್ನಮ್ಮಳನ್ನು ಎರಡನೇ ಪತ್ನಿಯಾಗಿ ಸ್ವೀಕರಿಸಿದ ಸಂಸ್ಥಾನದ ಅಧಿಪತಿ ಮಲ್ಲಸರ್ಜ 1816ರಲ್ಲಿ ತೀರಿ ಹೋಗುತ್ತಾರೆ. ರುದ್ರಮ್ಮನವರ ಉದರದಲ್ಲಿ ಜನಿಸಿದ ಶಿವಲಿಂಗರುದ್ರ ಸರ್ಜನಿಗೆ ರಾಣಿ ಚನ್ನಮ್ಮಾಜಿ ಪಟ್ಟ ಕಟ್ಟಿ ಆತನ ಆಡಳಿತ ನಿರ್ವಹಣೆಯಲ್ಲಿ ಮಾರ್ಗದರ್ಶಿಯಾಗಿ ಸಂಸ್ಥಾನದ ಜವಾಬ್ದಾರಿ ಹೊರುತ್ತಾಳೆ.

Advertisement

ನಂತರ ಶಿವಲಿಂಗರುದ್ರ ಸರ್ಜನ ಆರೋಗ್ಯದಲ್ಲಿ ಏರುಪೇರಾಗಿ ಹಾಸಿಗೆ ಹಿಡಿಯುತ್ತಾನೆ. ಕೆಲ ದಿನಗಳ ನಂತರ ಶಿವಲಿಂಗರುದ್ರ ಸರ್ಜನ ಆರೋಗ್ಯ ಕ್ಷೀಣಿಸುತ್ತ ಹೋಗುತ್ತದೆ. 1824ರಲ್ಲಿ ಜು.10ರಂದು ಶಿವಲಿಂಗ ರುದ್ರಸರ್ಜ ಮಗುವನ್ನು ದತ್ತಕ ಪಡೆಯುವ ವಿಚಾರವನ್ನು ಬ್ರಿಟಿಷರ ಗಮನಕ್ಕೆ ತರಲು ಪತ್ರ ಬರೆದನು. ಇದೇ ಸಂದರ್ಭದಲ್ಲಿ ಕಿತ್ತೂರು ಸಂಸ್ಥಾನದ ಸೇನಾ ನಾಯಕ ಸರದಾರ ಗುರುಸಿದ್ದಪ್ಪ ಮಾಸ್ತಮರಡಿಯ ಬಾಳನಗೌಡನ ಮಗ ಶಿವಲಿಂಗಪ್ಪ(ಸವಾಯಿ ಮಲಸರ್ಜ)ನನ್ನು ಸಂಸ್ಥಾನಕ್ಕೆ ಕರೆದುಕೊಂಡು ಬಂದನು.

ಈತನನ್ನು ದತ್ತಕ ತೆಗೆದುಕೊಳ್ಳುವ ನಿರ್ಧಾರ ಮಾಡಿ ಜುಲೈ 10ರಂದು ಥ್ಯಾಕರೆಗೆ ಪತ್ರ ಬರೆದನು. ಇನ್ನೇನು ಪತ್ರ ರವಾನಿಸಬೇಕು ಅನ್ನುವಷ್ಟರಲ್ಲಿ ಶಿವಲಿಂಗರುದ್ರ ಸರ್ಜನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಕಾರಣ ಪತ್ರವನ್ನು ರವಾನಿಸಲಿಲ್ಲ. ಸೆಪ್ಟೆಂಬರ್‌ 11 ರಂದು ಶಿವಲಿಂಗ ರುದ್ರ ಸರ್ಜನ ಆರೋಗ್ಯ ಹದಗೆಟ್ಟು ಅದೇ ದಿನ ಅವಸರವಾಗಿ ದತ್ತ ಪ್ರಕ್ರಿಯೆ ಮುಗಿಸಿದ. ಸೆಪ್ಟಂಬರ್‌ 12ರಂದು ಶಿವಲಿಂಗ ರುದ್ರ ಸರ್ಜ ಬರೆದ ಪತ್ರವನ್ನು ಕೊಣ್ಣೂರು ಮಲ್ಲಪ್ಪ ಥ್ಯಾಕರೆಗೆ ಮುಟ್ಟಿಸಿದನು. ಪತ್ರದಲ್ಲಿ ಜುಲೈ 10 ಎಂದು ಇದ್ದಿದ್ದನ್ನು ಗಮನಿಸಿ ಸಂಶಯಗೊಂಡನು. ಸೆಪ್ಟಂಬರ್‌ 12ರಂದು ಶಿವಲಿಂಗ ರುದ್ರಸರ್ಜ ಮರಣ ಹೊಂದಿದನು.

ಪತ್ರ ಕುರಿತು ಥ್ಯಾಕರೆ ಪತ್ರ ಬೇರೆಯವರಿಂದ ಬರೆಯಲ್ಪಟ್ಟಿರಬೇಕು ಅಥವಾ ಸಂಸ್ಥಾನ ಉಳಸಿಕೊಳ್ಳಲು ಆತನ ವಿಚಾರ ಶಕ್ತಿ
ಕಳೆದುಕೊಂಡ ಸಂದರ್ಭದಲ್ಲಿ ಆತನ ಸಹಿ ಪಡೆದಿರಬೇಕು ಎಂದು ಸಂಶಯಗೊಂಡ. ಸೆ.14 ರಂದು ಥ್ಯಾಕರೆ ಕಿತ್ತೂರಿಗೆ ಬಂದನು. ಅರಮನೆ ಶೋಧ ಮಾಡಿ ರಾಜ್ಯ ಮನೆತನದವರಿಗೆ ಹೆದರಿಕೆ ಹಾಕಿ ಅದೇ ದಿನ ಡೆಕ್ಕನ್‌ ಕಮಿಷನರ್‌ ಚಾಪಲಿನ ಅವರಿಗೆ ದತ್ತಕ ಮಗು ಕಿತ್ತೂರು ಸಂಸ್ಥಾನದ ಹತ್ತಿರದ ಸಂಬಂಧಿಯಲ್ಲ, ದೇಸಾಯಿಯ ಅನುಯಾಯಿಗಳು ತಮ್ಮ ಪ್ರಭಾವ ಮುಂದುವರಿಸಲು ಮಾಡಿದ ಕುತಂತ್ರ, ಪತ್ರದಲ್ಲಿ ಸಹಿ ಸ್ಪಷ್ಟವಾಗಿಲ್ಲ ದಿನಾಂಕದಲ್ಲಿ ತಾಳಮೇಳ ಇಲ್ಲವೆಂದು ಆರೋಪಿಸಿದ ಒಂದು ಪತ್ರ ಬರೆಯುತ್ತಾನೆ. ಚನ್ನಮ್ಮನನ್ನು ಮಲತಾಯಿ ಎಂದು ಕರೆದಿರುವುದು ಆತನ ವಿಕಾರ ಮನಸ್ಥಿತಿಯನ್ನು ತೋರುತ್ತದೆ. ದತ್ತಕ
ಕಾಯಿದೆ ಬದ್ಧವಾಗಿ ಇರದೇ ಇರುವುದರಿಂದ ಮತ್ತು ಮೃತರ ದೇಸಾಯಿಯ ಪತ್ನಿ ಅಲ್ಪವಯಿ ಇರುವ ಕಾರಣ ಸಂಸ್ಥಾನದ ಜವಾಬ್ದಾರಿ ತನ್ನದು ಎಂದಿರುವುದು ಆತನ ಸಂಸ್ಥಾನ ನುಂಗುವ  ಮನಸ್ಥಿತಿಯನ್ನು ತೋರುವುದು.

ನಂತರ ಖಜಾನೆಯನ್ನು ಸೀಲ್‌ ಮಾಡಿಸಿ ದತ್ತಕ ಪ್ರಕ್ರಿಯೆ ನಡದೆ ಇಲ್ಲ ಎಂದು ಚಾಪ್ಲಿನ್‌ ಗೆ ವರದಿ ಮಾಡಿದನು. ಹಾವೇರಿಯ
ವೆಂಕಟರಾಯನ ಲಿಖೀತ ಒಪ್ಪಿಗೆ ಇಲ್ಲದೇ ಸಂಸ್ಥಾನದಲ್ಲಿ ಏನನ್ನೂ ಬದಲಾವಣೆ ಮಾಡಕೂಡದೆಂದು ಆದೇಶ ನೀಡಿದನು.
ನಂತರ 30 ಜನ ಬ್ರಿಟಿಷ್‌ ಕಾವಲುಗಾರರನ್ನು ಕೋಟೆಯ ಪೂರ್ವ-ಪಶ್ಚಿಮ ದ್ವಾರ ಕಾಯಲು ನೇಮಿಸಿದ. ಇದರಿಂದ ರಾಣಿ ಚನ್ನಮ್ಮ ಸರದಾರ ಗುರುಸಿದ್ದಪ್ಪ ಜ್ವಾಲಾಮುಖಿಯಂತಾದರು. ಥ್ಯಾಕರೆ ನೀಡುತ್ತಿರುವ ತೊಂದರೆಯನ್ನು ಚನ್ನಮ್ಮ ಪತ್ರ ಮುಖಾಂತರ ಮುಂಬಯಿ ಗವರ್ನರ್‌ ಎಲ್ಪಿನ್‌ಸ್ಟನ್‌ ಗಮನಕ್ಕೆ ತಂದರೂ ಸ್ಪಂದಿಸಲಿಲ್ಲ. ಮುಂದುವರಿದು ಥ್ಯಾಕರೆ ರಾಣಿ ಚನ್ನಮ್ಮ ಮತ್ತು ವೀರಮ್ಮಳ ಮಧ್ಯ ವೈಮನಸ್ಸು ಮಾಡಿಸಲು ಯತ್ನಿಸಿ ವಿಫಲನಾದ.ನಂತರ ದತ್ತಕ ಮಗ ಶಿವಲಿಂಗಪ್ಪ
ಕೂಡಲೇ ಸಂಸ್ಥಾನದಿಂದ ಹೊರಗೆ ಹೋಗಬೇಕೆಂದು ಆದೇಶಿಸಿದ.

ಆಗ ಚನ್ನಮ್ಮ ರಾಜಕುಮಾರ ಇಲ್ಲಿ ಇರಲು ಅವಕಾಶವಿಲ್ಲದಿದ್ದರೆ ನಮಗೂ ಸಂಸ್ಥಾನ ಬಿಟ್ಟು ಹೋಗಲು ಅನುಮತಿ ನೀಡಬೇಕೆಂದು ಕೇಳಿದಳು. ಆಗ ಚನ್ನಮ್ಮಾಜಿ ಹೋಗಬಹುದು ಆದರೆ ವೀರಮ್ಮಾಜಿ ಹೋಗಲು ಅವಕಾಶವಿಲ್ಲ ಎಂದು ಒಡಕಿನ ಮಾತನಾಡಿ ಸಂಸ್ಥಾನ ಬಿಟ್ಟು ಹೋಗಲು ಪ್ರಯಾಣಕ್ಕೆ ಬೇಕಾಗುವ ಖರ್ಚನ್ನು ಭರಿಸುವುದಾಗಿ ಎಂಬ ಕುಹಕದ ಮಾತುಗಳನ್ನು ಕೇಳಿ ಅಂತಿಮವಾಗಿ ಚನ್ನಮ್ಮ ಮಾಡು ಇಲ್ಲವೆ ಮಡಿ ಎಂದು ಯುದ್ಧಕ್ಕೆ ಅಣಿಯಾದಳು.

ಥ್ಯಾಕರೆ ಬ್ರಿಟಿಷ್‌ ಅಧಿಕಾರಿಗಳನ್ನು ಚನ್ನಮ್ಮನವರ ಬಳಿಗೆ ಕಳುಹಿಸಿ ಕಪ್ಪು ಕಾಣಿಕೆ ಕೊಡಲು ಬ್ರಿಟಿಷ್‌ ಆಡಳಿತ ಕೇಳಿಕೊಂಡಾಗ
ಅದನ್ನು ನಿರಾಕರಿಸಿದ ವೀರಮಾತೆ ಕಪ್ಪ ಕೊಡಬೇಕೇ ಕಪ್ಪ ನಿಮಗೇಕೆ ಕೊಡಬೇಕು ಕಪ್ಪ ಎಂಬ ಗುಡುಗು ಸಿಡಿಲಿನ ಉತ್ತರದಿಂದ ಬ್ರಿಟಿಷ್‌ ಅಧಿಕಾರಿಗಳು ರೋಷಿ ಹೋದರು. ನಂತರ ಕಿತ್ತೂರ ಸಂಸ್ಥಾನದ ಮೇಲೆ ದಾಳಿ ನಡೆಸಿದರು. ಸ್ವಾತಂತ್ರ್ಯ ಸಂಗ್ರಾಮದ ಕಿತ್ತೂರಿನ ಗಂಡು ಮೆಟ್ಟಿನ ನಾಡಿನಲ್ಲಿ 1824ರಲ್ಲಿ ಭಾರತ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಗುಂಡು ಹಾರಿತು. ಆ ಕಾಳಗವೇ ಮೊದಲನೇ ಸ್ವಾತಂತ್ರ್ಯ ಸಂಗ್ರಾಮವಾಗಿದೆ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ಈ ಸಂಗ್ರಾಮದಲ್ಲಿ ಅಮಟೂರು ಬಾಳಪ್ಪ ಥ್ಯಾಕರೆ ಸಾಹೇಬನ ಎದೆಗೆ ಗುಂಡು ಹಾರಿಸಿ ಹತ್ಯೆ ಮಾಡುತ್ತಾನೆ. ಥ್ಯಾಕರೆನ ಹತ್ಯೆ ಬ್ರಿಟಿಷ್‌ ಅಧಿಕಾರಿಗಳ ನಿದ್ದೆ ಕೆಡಿಸಿತು. ನಂತರ ಎರಡನೇ ಬಾರಿ ಕಿತ್ತೂರ ಸಂಸ್ಥಾನದ ಮೇಲೆ ದಾಳಿ ನಡೆಸಿದ ಬ್ರಿಟಿಷರು ಕುತಂತ್ರದಿಂದ ಅಲ್ಲಿನ ಕೆಲ ದೇಶದ್ರೋಹಿಗಳ ಸಹಯೋಗ ಪಡೆದು ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡಿನ ಸಂಗ್ರಹಗಾರಕ್ಕೆ ಸಗಣೆ ರಾಡಿ ಬೆರೆಸಿದ ಪ್ರಸಂಗದಿಂದ ಯುದ್ಧ ಸಾಮಗ್ರಿಗಳು ನಿಷ್ಪ್ರಯೋಜಕವಾಗಿ ರಾಣಿ ಚೆನ್ನಮ್ಮ ಸೋಲು ಅನುಭವಿಸುವಂತಾಯಿತು. ನಂತರ ಕಿತ್ತೂರು ಸಂಸ್ಥಾನದ ರಾಣಿ ಚನ್ನಮ್ಮ ಮತ್ತು ರಾಣಿ ರುದ್ರಮ್ಮ ಅವರ ಸೊಸೆ, ವೀರಮ್ಮ ಅವರೆಲ್ಲರನ್ನು ರಾಜಕೀಯ ಕೈದಿಗಳನ್ನಾಗಿ
ಬೈಲಹೊಂಗಲ ಜೈಲಿನಲ್ಲಿ ಬಂಧಿಸಿ ಇಡುತ್ತಾರೆ.

ಐದು ವರ್ಷಗಳ ಕಾಲ ಬಂಧಿಯಾಗಿದ್ದ ರಾಣಿ ಚನ್ನಮ್ಮ 1829ರಲ್ಲಿ ಲಿಂಗೈಕ್ಯಳಾದಳು. ಕಿತ್ತೂರಿನ ಕೀರ್ತಿ ಸ್ವಾತಂತ್ರ್ಯ ಭಾರತದ ಚರಿತ್ರೆಯಲ್ಲಿ ಅಜರಾಮರವಾಗಿ ಉಳಿದಿದೆ. ಸ್ವಾತಂತ್ರ್ಯದ ಕಿಚ್ಚು ಹಚ್ಚಿ ನಾಡ ಪ್ರೇಮ ತೋರಿಸಿದ ವೀರಮಾತೆಯ ವ್ಯಕ್ತಿತ್ವವನ್ನು ಲಾವಣಿ ಪದದ ಮೂಲಕ ನಾಡಿನೆಲ್ಲೆಡೆ ಹಾಡಿ ಹೊಗಳಿರುವ ಉದಾಹರಣೆಗಳಿವೆ. ರಾಣಿ ಚನ್ನಮ್ಮನವರ ಪರಾಕ್ರಮ, ಕೆಚ್ಚೆದೆಯ ಯುದ್ಧಕಲೆ ಹಾಗೂ ಜೀವಿತ ಕಾಲದುದ್ದಕ್ಕೂ ಹಂಗಿನ ಜೀವನಕ್ಕೆ ಆಸೆ ಪಡದೆ ಸರ್ವತಂತ್ರ ಸ್ವಾತಂತ್ರ್ಯ ಪ್ರೇಮಿ ಎಂಬ ಹಿರಿದಾದ ಪಟ್ಟ ಪಡೆದ ಇವರು ಸದಾ ಸ್ಮರಣೀಯರು.

*ಬಸವರಾಜ ಚಿನಗುಡಿ

Advertisement

Udayavani is now on Telegram. Click here to join our channel and stay updated with the latest news.

Next