Advertisement

ನಕ್ಸಲ್‌ ನೆರಳಿನ ಎಳನೀರಿಗೆ ಕಿಂಡಿ ಅಣೆಕಟ್ಟು

08:30 PM Dec 14, 2019 | mahesh |

ಬೆಳ್ತಂಗಡಿ: ನಕ್ಸಲ್‌ ನೆರಳಿನಲ್ಲೇ ಜೀವನ ಸಾಗಿಸುತ್ತಿದ್ದ ಮಂದಿಗೆ ಇದೀಗ ಕೊಂಚ ನಿಟ್ಟುಸಿರು ಬಿಡುವ ಕಾಲ. ಬಹುಕಾಲದಿಂದ ಬೇಡಿಕೆಗೆ ಕಡೆಗೂ ಸರಕಾರ ಅಸ್ತು ನೀಡಿದೆ. ಚಿಕ್ಕಮಗಳೂರು ಜಿಲ್ಲೆಯ ಅಂಚಿನಲ್ಲಿರುವ ಬೆಳ್ತಂಗಡಿ ತಾ|ನ ಮಿತ್ತಬಾಗಿಲು ಗ್ರಾಮದ ಎಳನೀರು ಸಮೀಪದ ಬಂಗಾರಪಲ್ಕೆ ಸೇತುವೆ ಅಡ್ಡಲಾಗಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಸರಕಾರ 5 ಕೋ. ರೂ. ಮಂಜೂರು ಗೊಳಿಸಿದ್ದು, ಮುಖ್ಯಮಂತ್ರಿಯವರು ಶಂಕುಸ್ಥಾಪನೆಯನ್ನೂ ನೆರವೇರಿಸಿದ್ದಾರೆ.

Advertisement

ಊರಿನ ಸಮಸ್ಯೆ ಬಗ್ಗೆ ಉದಯವಾಣಿ ಸುದಿನದಲ್ಲಿ ಜು.28 ರಂದು ನೂತನ ಸರಕಾರದಿಂದ ಮೂಲ ಸೌಕರ್ಯ ನಿರೀಕ್ಷೆ ಎಂಬ ವರದಿ ಪ್ರಕಟಿಸಲಾಗಿತ್ತು. ಇದಕ್ಕೆ ಶಾಸಕ ಹರೀಶ್‌ ಪೂಂಜ ಅನುದಾನ ಮೀಸಲಿಡುವ ಭರವಸೆ ನೀಡಿದ್ದರು. ಅದರಂತೆ ಎಳನೀರು ಭಾಗದ ಕೃಷಿಕರ ಅನುಕೂಲಕ್ಕಾಗಿ ಮತ್ತು ಬಂಗಾರಪಲ್ಕೆ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವುದಕ್ಕಾಗಿ ಬಂಗಾರಪಲ್ಕೆ ಎಂಬಲ್ಲಿ ನೇತ್ರಾವತಿ ನದಿಗೆ 5 ಕೋ. ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ಮಂಜುರಾಗಿದೆ. ಸಿ.ಎಂ. ಡಿ. 8ರಂದು ಉಜಿರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಂಕುಸ್ಥಾಪನೆಯನ್ನು ನೆರವೇರಿಸಿದ್ದಾರೆ.

ಹಲವು ರಸ್ತೆಗಳ ಅಭಿವೃದ್ಧಿ
ಎಳನೀರು ರಸ್ತೆಗೆ 5 ಲಕ್ಷ ರೂ., ಗುತ್ಯಡ್ಕ ಕುರೆಕಲ್‌ ರಸ್ತೆಗೆ 10 ಲಕ್ಷ ರೂ., ಗುತ್ಯಡ್ಕ ಶಾಲೆ ರಸ್ತೆಗೆ 10 ಲಕ್ಷ ರೂ., ಬಂಗಾರ ಪಲ್ಕೆ ಮಲೆಕುಡಿಯ ಕಾಲನಿ ರಸ್ತೆಗೆ 5 ಲಕ್ಷ ರೂ. ಮಂಜೂರಾಗಿದೆ. ಗುತ್ಯಡ್ಕ, ಎಳನೀರು ರಸ್ತೆಗೆ ತಲಾ 3 ಲಕ್ಷ ರೂ. ಮಂಜೂ ರಾಗಿ ಕಾಮಗಾರಿ ಪೂರ್ಣಗೊಂಡಿದೆ. ಬಡಮನೆ ರಸ್ತೆ ಅಭಿವೃದ್ಧಿಗೆ 10 ಲಕ್ಷ ರೂ. ಅನುದಾನದ ಪ್ರಸ್ತಾವನೆ ಮಂಜೂರಾತಿ ಹಂತ ದಲ್ಲಿದೆ. ವಿಧಾನ ಪರಿಷತ್‌ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯಿಂದ ಕುರ್ಚಾರು ಪ. ಪಂಗಡ ಕಾಲನಿ ರಸ್ತೆ ಕಾಂಕ್ರೀಟ್‌ ರಸ್ತೆಗೆ 5.91 ಲಕ್ಷ ರೂ.ಮಂಜೂರಾಗಿದೆ.

151 ಕುಟುಂಬ ವಾಸ
ಗಿರಿಶೃಂಗದ ನಡುವೆ ನೆಲೆಸಿರುವ ಊರಿನ ಸೊಬಗು ಸ್ವರ್ಗದಂತಿದೆ. ಎಳನೀರು, ಬಂಗಾರಪಲ್ಕೆ,
ಬಡಾವಣೆ, ಗುತ್ಯಡ್ಕ, ತಿಮ್ಮಯ್ಯ ಕಂಡವನ್ನು ಒಳಗೊಂಡಿರುವ ಪ್ರದೇಶದಲ್ಲಿ 151 ಕುಟುಂಬಗಳು ವಾಸಿಸುತ್ತಿವೆ. ಸುಮಾರು 500ಕ್ಕೂ ಹೆಚ್ಚು ಜನಸಂಖ್ಯೆ ಇರುವ ಎಳನೀರಲ್ಲಿ 463 ಮತದಾರರಿದ್ದಾರೆ. 130 ಒಕ್ಕಲಿಗ ಸಮುದಾಯ, 25 ಮಲೆಕುಡಿಯ ಹಾಗೂ 25 ಜೈನ್‌ ಸಮುದಾಯ ಸಹಿತ ಇತರ ಸಮುದಾಯ ನೆಲೆಸಿರುವ ಪ್ರದೇಶ ಹಲವು ದಶಕಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಅಂಕಿಅಂಶ
· ಮಲವಂತಿಗೆ ಗ್ರಾ.ಪಂ. ವಿಸ್ತೀರ್ಣ
-6,539.82 ಹೆಕ್ಟೇರ್‌.
· ಗ್ರಾಮದಲ್ಲಿನ ಕುಟುಂಬ- 620, ಜನಸಂಖ್ಯೆ 3,550.
· ಎಳನೀರು ಗ್ರಾಮದ ಜನಸಂಖ್ಯೆ-550, 463 ಮತದಾರರು, 151 ಕುಟುಂಬ.
· ಕೃಷಿ ಭೂಮಿ-340 ಎಕ್ರೆ
· ಸಾಮಾನ್ಯ ಬೆಳೆ- ಭತ್ತ, ವಾಣಿಜ್ಯ ಬೆಳೆಗಳಾದ
ಕಾಫಿ, ಅಡಿಕೆ, ತೆಂಗು, ರಬ್ಬರ್‌.
· ಕಿ.ಪ್ರಾ. ಶಾಲೆ-3, ಖಾಸಗಿ ಹಿ.ಪ್ರಾ.ಶಾಲೆ-1
· ಅಂಗನವಾಡಿ ಕೇಂದ್ರ-3
· ಪ್ರವಾಸಿ ತಾಣ-ಕಡವುಗುಂಡಿ ಜಲಪಾತ
· ಅಭಿವೃದ್ಧಿಗೆ ಸಿಕ್ಕ ಅನುದಾನ-ಒಟ್ಟು
6 ಕೋಟಿ 30 ಲಕ್ಷ ರೂ.

Advertisement

ಅಭಿವೃದ್ಧಿ ಆಗಬೇಕಿರುವ ರಸ್ತೆ
· ಗಡಿಯಿಂದ ಬಂಗಾರಪಲ್ಕೆ ಮಲೆಕುಡಿಯ ಕಾಲನಿ ರಸ್ತೆ.
· ಗಡಿಯಿಂದ
ಎಳನೀರು ರಸ್ತೆ.
· ಗಡಿಯಿಂದ
ಗುತ್ಯಡ್ಕ ಶಾಲೆ ರಸ್ತೆ.
· ಗಡಿಯಿಂದ
ಕುರೆಕಲ್‌ ರಸ್ತೆ.
· ಎಳನೀರು ಬ್ರಹ್ಮ ದೇವರ ಮನೆ ಕಾಲುಸಂಕ.
· 5 ಮೋರಿ ಕಾಮಗಾರಿ.

60 ಮನೆಗಳಿಗಿಲ್ಲ ವಿದ್ಯುತ್‌
ಎಳನೀರು ಪ್ರದೇಶ ವಿದ್ಯುತ್ತನ್ನೇ ಕಂಡಿಲ್ಲ. ಅರಣ್ಯ ಹಕ್ಕು ಕಾಯ್ದೆ ಇದಕ್ಕೆ ಅಡ್ಡಿ ತರುತ್ತಿದೆ. ಅರಣ್ಯ ಹಕ್ಕು ಕಾಯ್ದೆಯ ಚಾಪ್ಟರ್‌ 2ರಲ್ಲಿ ಸೆಕ್ಷನ್‌ 2ಎ ಯಲ್ಲಿ ಕೇಂದ್ರ ಸರಕಾರದ 13 ಅಭಿವೃದ್ಧಿ ಯೋಜನೆಗಳಿಗೆ ಯಾವುದೇ ಕಾನೂನನ್ನು ಮುಂದಿಟ್ಟು ತಡೆಯೊಡ್ಡುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಆದರೂ ಬಂಗಾರಪಲ್ಕೆ-ಎಳನೀರಿನ 60ಕ್ಕೂ ಹೆಚ್ಚು ಮನೆಗಳು ವಿದ್ಯುತ್‌ ಕಂಡಿಲ್ಲ.

 ಅಭಿವೃದ್ಧಿಗೆ ಅನುದಾನ
ಎಳನೀರು ಪ್ರದೇಶ ಅಭಿವೃದ್ಧಿ ವಿಚಾರವಾಗಿ ಈ ಮೊದಲ ಭರವಸೆ ನೀಡಿದಂತೆ ಹಂತ ಹಂತವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಹಲವು ರಸ್ತೆಗಳ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ. ಲಾರಿ ಹೋಗುವಷ್ಟು ಸಾಮರ್ಥ್ಯದ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.
– ಹರೀಶ್‌ ಪೂಂಜ, ಶಾಸಕರು

–  ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next