Advertisement

ಮೂತ್ರಪಿಂಡ (ಕಿಡ್ನಿ); ಆರೋಗ್ಯ ಅಭಿಯಾನ

02:13 PM Mar 05, 2023 | Team Udayavani |

ಸಂಶೋಧನ ವರದಿಗಳ ಪ್ರಕಾರ ದೀರ್ಘ‌ಕಾಲೀನ ಕಾಯಿಲೆಗಳ ಕಾರಣದಿಂದ ಸಾವನ್ನಪ್ಪುವವರ ಪ್ರಮಾಣವು ಜಾಗತಿಕವಾಗಿ ತೀವ್ರವಾಗುತ್ತಿದೆ. ಅಸಾಂಕ್ರಾಮಿಕ ದೀರ್ಘ‌ಕಾಲೀನ ಕಾಯಿಲೆಗಳ ಪೈಕಿ ಈ ದಿನಗಳಲ್ಲಿ ಅಧಿಕವಾಗಿ ಕೇಳಿಬರುತ್ತಿರುವುದು “ಮೂತ್ರಪಿಂಡ ವೈಫಲ್ಯ (Varughese,S. et.al 2018). Chronic kidney disease in India: A clarion call for change. Clinical Journal of the American Society of Nephrology, 13(5), 802&804.).

Advertisement

ಇದು ಜಾಗತಿಕವಾಗಿ ವೈದ್ಯಕೀಯ ಕ್ಷೇತ್ರಕ್ಕೆ ದೊಡ್ಡ ಸವಾಲಾಗಿಯೇ ಕಾಡುತ್ತಿದೆ. ಆತಂಕದ ವಿಚಾರವೆಂದರೆ ಮೊದಲೆಲ್ಲ ಇದು ಪ್ರೌಢ ವಯಸ್ಕರಲ್ಲಿ ಹಾಗೂ ವೃದ್ಧರಲ್ಲಿ ಕಂಡುಬರುತಿದ್ದರೆ ಈಗ ಮಕ್ಕಳಲ್ಲಿಯೂ ಕಾಣಿಸಿಕೊಳ್ಳುತ್ತಿದೆ. (Kanitkar, M. et.al (2009). Chronic kidney disease in children: an Indian perspective. Medical Journal, Armed Forces India, 65(1), 45.)

ವಿಶ್ವ ಕಿಡ್ನಿ ದಿನ (World Kidney Day) ಒಂದು ಜಾಗತಿಕ ಅಭಿಯಾನವಾಗಿದ್ದು, ಇದು ವಿಶ್ವಾದ್ಯಂತ ಮೂತ್ರಪಿಂಡಗಳ ಆರೋಗ್ಯ ಪ್ರಾಮುಖ್ಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮೂತ್ರಪಿಂಡದ ಕಾಯಿಲೆಯ ಆವರ್ತನ ಮತ್ತು ಪರಿಣಾಮವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

ಈ ಜಾಗತಿಕ ಅಭಿಯಾನವು ಇಂಟರ್‌ನ್ಯಾಶನಲ್‌ ಸೊಸೈಟಿ ಆಫ್‌ ನೆಫ್ರಾಲಜಿ (ISN) ಮತ್ತು ಇಂಟರ್‌ನ್ಯಾಶನಲ್‌ ಫೆಡರೇಶನ್‌ ಆಫ್‌ ಕಿಡ್ನಿ ಫೌಂಡೇಶನ್ಸ್ ನ (IFKF) ಜಂಟಿ ಉಪಕ್ರಮವಾಗಿದೆ. ‌

ಕೋವಿಡ್‌ -19 ಸಾಂಕ್ರಾಮಿಕವು ಅಗತ್ಯ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ಆರೋಗ್ಯ ರಕ್ಷಣಾ ವ್ಯವಸ್ಥೆಗಳು ಎದುರಿಸಿದ ಸವಾಲುಗಳ ಸ್ಪಷ್ಟ ಚಿತ್ರಣವನ್ನು ಒದಗಿಸಿದೆ. ಕೋವಿಡ್‌ -19ರ ಪರಿಣಾಮವು ಈ ದುರ್ಬಲ ಸಮುದಾಯದ (ಉದಾ: ಮಕ್ಕಳು, ಹೆಂಗಸರು, ಅಶಕ್ತರು ವೃದ್ಧರು ಇತ್ಯಾದಿ) ಜನಸಂಖ್ಯೆಯ ಮೇಲೆ ಹೆಚ್ಚಿನ ಒತ್ತಡವನ್ನು ಉಂಟು ಮಾಡಿತು.

Advertisement

ಆದ್ದರಿಂದ ಅನಾರೋಗ್ಯದ ಅನಿರೀಕ್ಷಿತ ಘಟನೆಗಳನ್ನು ಎದುರಿಸಲು ಹಾಗೂ ಅವುಗಳ ನಿಯಂತ್ರಣಕ್ಕೆ ಬೇಕಾಗುವ ಪೂರ್ವ ತಯಾರಿಯು ಬಹಳಷ್ಟು ಮುಖ್ಯವಾಗುತ್ತದೆ. ಇದರ ಅಗತ್ಯವನ್ನು ಗುರುತಿಸಿ 2023ರ ಕಿಡ್ನಿ ಆರೋಗ್ಯ ಅಭಿಯಾನವು “ಅನಿರೀಕ್ಷಿತಕ್ಕೆ ತಯಾರಿ ಮತ್ತು ದುರ್ಬಲ ಸಮುದಾಯಕ್ಕೆ ಬೆಂಬಲ’ ಎಂಬ ಘೋಷಣಾ ವಾಕ್ಯ ವನ್ನು ಹೊಂದಿದ್ದು, ಜನಜಾಗೃತಿ ತಯಾರಿಯನ್ನು ಯೋಜಿಸಿಕೊಂಡಿದೆ.

ಸಾರ್ವಜನಿಕ ಸ್ವಾಸ್ಥ್ಯ, ಆರೋಗ್ಯ ನಿರ್ವಹಣೆ ಹಾಗೂ ಕಾಪಾಡುವಿಕೆಯ ವಿಚಾರ ಬಂದಾಗ ಪ್ರತಿಯೊಬ್ಬ ನಾಗರಿಕನೂ ಜವಾಬ್ದಾರನಾಗುತ್ತಾನೆ. ಆದ್ದರಿಂದ ವಿವಿಧ ಜನಸಮುದಾಯಗಳಿಗೆ (ಮಕ್ಕಳು, ಹದಿಹರೆಯದವರು, ಪ್ರೌಢರು ಮತ್ತು ವಯೋವೃದ್ಧರು) ಅನುಗುಣವಾಗಿ ಕಿಡ್ನಿ ಆರೋಗ್ಯ ಕ್ಷಮತೆಯನ್ನು ಕಾಯ್ದುಕೊಳ್ಳುವುದರ ಬಗ್ಗೆ ಈ ಕೆಳಗಿನ ಶೀರ್ಷಿಕೆಗಳಲ್ಲಿ ಅರಿವನ್ನು ಪಡೆಯೋಣ.

ಆರೋಗ್ಯವಂತರಲ್ಲಿ ಸ್ವಂತ ಹಾಗೂ ಕುಟುಂಬದವರ ಆರೋಗ್ಯ ಕಾಳಜಿ ಮತ್ತು ಆರೋಗ್ಯ ಸಂರಕ್ಷಣೆ

ಆರೋಗ್ಯವೆಂಬುದು ಮಾನವನ ದೈಹಿಕ ಹಾಗೂ ಮಾನಸಿಕ ಗುಣಮಟ್ಟವನ್ನು ಸೂಚಿಸುವ ಮಾಪನವಾಗಿದ್ದು, ಅದು ದೀರ್ಘಾವಧಿಯ ಜೀವನವನ್ನು ನಡೆಸಲು ಅನುವು ಮಾಡಿಕೊಡುತ್ತದೆ. ಸ್ವಆರೋಗ್ಯ ಕಾಳಜಿ, ಸಂರಕ್ಷಣೆ ಮತ್ತು ನೈರ್ಮಲ್ಯವು ಮಾನವ ಜೀವನಕ್ಕೆ ಬೇಕಾದ ಅಗತ್ಯ ಪರಿಕಲ್ಪನೆಗಳು. ಸಾಮಾನ್ಯವಾಗಿ ಪ್ರತಿಯೊಬ್ಬರೂ ಸ್ವಂತ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ಮನಸ್ಸಿನ ದೃಢತೆ ಹಾಗು ಪಾಲಿಸುವ ಸಂಕಲ್ಪವಷ್ಟೇ.

ಕಿಡ್ನಿ ಆರೋಗ್ಯ ಕಾಳಜಿಗೆ ಕೆಳಗಿನ ಅಂಶಗಳನ್ನು ಗಮನಕ್ಕೆ ತೆಗೆದುಕೊಳ್ಳಬೇಕು ­

*ಕಿಡ್ನಿ ಅಂಗದ ರಚನೆ, ಕಾರ್ಯವೈಖರಿ ಹಾಗೂ ಸಂರಕ್ಷಣೆಯ ಅರಿವನ್ನು ಹೊಂದುವುದು ­

*ಉತ್ತಮ ಆರೋಗ್ಯ ಜೀವನಶೈಲಿಯನ್ನು ಪಾಲಿಸುವುದು

*­ಪೌಷ್ಟಿಕ ಸಮತೋಲಿತ ಆಹಾರಕ್ಕೆ ಆದ್ಯತೆ ನೀಡುವುದು, ಉಪ್ಪು ಸೇವನೆ ಕಡಿಮೆಗೊಳಿಸುವುದು.

*­ಒತ್ತಡ ರಹಿತ ಆರೋಗ್ಯಕರ ಪರಿಸರವನ್ನು ನಿರ್ಮಿಸುವುದು ­

*ದೈಹಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ ಸ್ಥೂಲಕಾಯ ಹೊಂದದಂತೆ ನೋಡಿಕೊಳ್ಳುವುದು ಮತ್ತು ಕಿಡ್ನಿ ಆರೋಗ್ಯಕ್ಕೆ ಧಕ್ಕೆ ಉಂಟು ಮಾಡಲು ಮುಖ್ಯ ಕಾರಣಗಳಾದ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡಗಳನ್ನು ತಡೆಯುವುದು ­*ದೇಹದ ಅಗತ್ಯಕ್ಕೆ ತಕ್ಕಂತೆ ನೀರು ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳುವುದು ಮತ್ತು ಅನಾವಶ್ಯಕವಾಗಿ ಮೂತ್ರ ತಡೆಗಟ್ಟದಿರುವುದು.

*­ಅನಗತ್ಯವಾಗಿ ನೋವು ನಿವಾರಕ ಔಷಧಗಳ ಸೇವನೆ ಮಾಡದಿರುವುದು

*­ಅಶಿಸ್ತಿನ ಜೀವನ ಶೈಲಿ ಹಾಗೂ ದುರಾಭ್ಯಾಸಗಳನ್ನು ದೂರವಿಡುವುದು.

*­ಶೌಚಾಲಯಗಳ ನೈರ್ಮಲ್ಯ ಮತ್ತು ಜನನಾಂಗಗಳ ಶುಚಿತ್ವದ ಪಾಲನೆ ಮಾಡುವುದು. ಮನೆಯ ಎಲ್ಲ ವಯಸ್ಸಿನ ಸದಸ್ಯರಲ್ಲಿ ಈ ಅಭ್ಯಾಸವು ರೂಢಿಯಾಗುವಂತೆ ನೋಡಿಕೊಳ್ಳುವುದು

ಕಿಡ್ನಿ ಆರೋಗ್ಯ ಸಂರಕ್ಷಣೆಗೆ ಎಂಟು ಆರೋಗ್ಯ ಸೂತ್ರಗಳು

*­ಕಿಡ್ನಿ,ಕಾಯಿಲೆ ಉಂಟಾಗಲು ಕಾರಣವಾಗುವ ಅಂಶಗಳ ಬಗ್ಗೆ ಆರೋಗ್ಯ ತಜ್ಞರಲ್ಲಿ ಮಾಹಿತಿ ಪಡೆಯುವುದು. ­

*ದೀರ್ಘ‌ಕಾಲದ ಮೂತ್ರಪಿಂಡ ಕಾಯಿಲೆಯ ಅಪಾಯವನ್ನು ಉಂಟುಮಾಡುವ ತೊಂದರೆಗಳಲ್ಲಿ ಬಹು ಸಾಮಾನ್ಯವಾಗಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡಗಳು ಮುಖ್ಯ ಕಾರಣಗಳಾಗಿವೆ. ಇವುಗಳಿಗೆ ಹೊರತಾಗಿ ಬೇರೆ ತೊಂದರೆಗಳು ಈ ಕೆಳಗಿನಂತಿವೆ:

­*ಹೃದಯ ಸಂಬಂಧಿತ ಕಾಯಿಲೆ ­

*ಮೂತ್ರನಾಳದ ಸೋಂಕು

*­ಆನುವಂಶೀಯ ಕಿಡ್ನಿ ಕಾಯಿಲೆಗಳು

*­ಕಿಡ್ನಿಕಲ್ಲು ಕಾಯಿಲೆ

*­ನೆಫ್ರೋಟಿಕ್‌ ಸಿಂಡ್ರೋಮ್‌

ಈ ಅಪಾಯಕಾರಿ ಅಂಶಗಳ ಬಗ್ಗೆ ನೀವು ಮಾಹಿತಿ ಪಡೆದು, ಚಿತ್ರದಲ್ಲಿ ತೋರಿಸಿರುವಂತೆ ಮೂತ್ರಪಿಂಡದ ಆರೋಗ್ಯಕ್ಕಾಗಿ 8 ನಿಯಮಗಳನ್ನು ಅನುಸರಿಸುವ ಮೂಲಕ ನೀವು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬಹುದು ಮತ್ತು ಆರೋಗ್ಯವಾಗಿರಬಹುದು.

ಕೊನೆಯದಾಗಿ ಮನನ ಮಾಡಿಕೊಳ್ಳಬೇಕಾದ ಮಾತು

ಮನೆಯ ಒಬ್ಬ ಸದಸ್ಯ ಆರೋಗ್ಯ ಪ್ರಜ್ಞೆಯನ್ನು ಪಡೆದರೆ ಅವನು ಇಡೀ ಕುಟುಂಬವನ್ನು ಜಾಗೃತಿಗೊಳಿಸುತ್ತಾನೆ. ಇದನ್ನೇ ಅಲ್ಲವೇ “ಜ್ಞಾನ ದೀವಿಗೆಯನ್ನು ಬೆಳಗುವುದು’ ಎಂದು ನಮ್ಮ ಪೂರ್ವಜರು ಹೇಳುತ್ತಾ ಬಂದಿರುವುದು. “ಲೋಕಾಃ ಸಮಸ್ತಾಃ ಸುಖೀನೋ ಭವಂತು’ ಅಂದರೆ ಪ್ರಪಂಚದಲ್ಲಿರುವ ಪ್ರತಿಯೊಬ್ಬರೂ ಎಲ್ಲೆಡೆ ಸುಖ, ಸಂತೋಷ, ಮುಕ್ತವಾಗಿ ಬದುಕಲಿ ಎಂದರ್ಥ.

ವೀಣಾ ಎನ್‌.ಕೆ., ಅಸಿಸ್ಟೆಂಟ್‌ ಪ್ರೊಫೆಸರ್‌, ಸೀನಿಯರ್‌ ಸ್ಕೇಲ್‌ ರೀನಲ್‌ ರಿಪ್ಲೇಸ್‌ಮೆಂಟ್‌ ಥೆರಪಿ ಮತ್ತು ಡಯಾಲಿಸಿಸ್‌ ಟೆಕ್ನಾಲಜಿ ವಿಭಾಗ (ಆರ್‌ಆರ್‌ಟಿ ಮತ್ತು ಡಿಟಿ), ಎಂಸಿಎಚ್‌ಪಿ, ಮಾಹೆ, ಮಣಿಪಾಲ

ಡಾ| ಜಿ. ಅರುಣ್‌ ಮಯ್ಯ, ಚೀಫ್ ಆಫ್ ಸೆಂಟರ್‌ ಫಾರ್‌ ಡಯಾಬಿಟಿಕ್‌ ಫ‌ುಟ್‌ ಕೇರ್‌ ಮತ್ತು ರಿಸರ್ಚ್‌ (ಸಿಡಿಎಫ್ ಸಿಆರ್‌) ಮತ್ತು ಡೀನ್‌ – ಎಂಸಿಎಚ್‌ಪಿ, ಮಾಹೆ, ಮಣಿಪಾಲ

ಡಾ| ಶಂಕರಪ್ರಸಾದ್‌ ಪ್ರೊಫೆಸರ್‌ ಮತ್ತು ಹೆಡ್‌, ನೆಫ್ರಾಲಜಿ ವಿಭಾಗ ಕಸ್ತೂರ್ಬಾ ಆಸ್ಪತ್ರೆ, ಮಾಹೆ, ಮಣಿಪಾಲ ಮೇಘಾ ನಟರಾಜ್‌ ಪಿಎಚ್‌ಡಿ ಸ್ಕಾಲರ್‌, ಸಿಡಿಎಫ್ಸಿಆರ್‌, ಫಿಸಿಯೋ ಥೆರಪಿ ವಿಭಾಗ, ಎಂಸಿಎಚ್‌ಪಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ನೆಫ್ರಾಲಜಿ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next