Advertisement

ಯುವಕನನ್ನು ಅಪಹರಿಸಿ ಮರಣಾಂತಿಕ ಹಲ್ಲೆ; ಹಣ ಲೂಟಿ

11:18 AM Dec 07, 2018 | Team Udayavani |

ಮಂಗಳೂರು: ಐವರ ಗುಂಪೊಂದು ಫ‌ಳ್ನೀರ್‌ ನಿವಾಸಿ ಶಿಮಾಕ್‌ ಹಸನ್‌(22) ಅವರನ್ನು ಅಪಹರಿಸಿ, ಸಸಿಹಿತ್ಲು ಸಮೀಪ ಮರಣಾಂತಿಕ ಹಲ್ಲೆ ನಡೆಸಿ, ಹಣ ಲೂಟಿ ಮಾಡಿದ ಘಟನೆ ಡಿ. 5ರಂದು ಸಂಭವಿಸಿದೆ.

Advertisement

ಗೌತಮ್‌, ಲಾಯ್‌ ವೇಗಸ್‌, ಗೌತಮ್‌, ಅಂಕಿತ್‌, ಆದಿತ್ಯ ವಾಲ್ಕೆ  ಹಲ್ಲೆ ಆರೋಪಿಗಳೆನ್ನಲಾಗಿದೆ. ಶಿಮಾಕ್‌ ನಗರದ ಕಾಲೇಜೊಂದರಲ್ಲಿ ಬಿಬಿಎಂ ಮಾಡುತ್ತಿದ್ದರು. ಡಿ.5ರಂದು  ಸಂಜೆ 5 ಗಂಟೆಗೆ ಅತ್ತಾವರದ ಮಳಿಗೆಯೊಂದರಲ್ಲಿ  ಸ್ನೇಹಿತರಾದ ನೌಶಾದ್‌, ಸೌರವ್‌ ಜತೆ ಕಾಫಿ ಕುಡಿಯುತ್ತಿದ್ದರು. ಆಗ ಬೈಕಿನಲ್ಲಿ ಬಂದ ಶಿಮಾಕ್‌ನ ಕ್ಲಾಸ್‌ಮೇಟ್‌ ಎನ್ನಲಾದ ಅಂಕಿತ್‌, ಸ್ವಲ್ಪ ಕೆಲಸವಿದೆ ಬಾ ಎಂದು ಕರೆದೊಯ್ದಿದ್ದ. ಅರ್ಧ ಗಂಟೆ ಕಳೆದರೂ ಶಿಮಾಕ್‌ ವಾಪಸಾಗದ ಕಾರಣ ಸ್ನೇಹಿತರು ಮೊಬೈಲ್‌ನಲ್ಲಿ ಸಂಪರ್ಕಿಸಿದ್ದರು. ಮೊದಲು ಕರೆಯನ್ನು ಸ್ವೀಕರಿಸಿರ ಲಿಲ್ಲ. ಬಳಿಕ ಮತ್ತೂಂದು ಮೊಬೈಲ್‌ನಿಂದ ಪ್ರಯತ್ನಿಸಿದಾಗ ಕರೆ ಸ್ವೀಕರಿಸಿ, “ಶಿಮಾಕ್‌ನನ್ನು ಮೂಡುಬಿದಿರೆಗೆ ಕರೆದೊಯ್ಯುತ್ತಿದ್ದೇವೆ’ ಎಂದರು.

ಬಳಿಕ ರಾತ್ರಿ ವೇಳೆ  ಕರೆ ಮಾಡಿ, “ನಮಗೆ 50,000 ರೂ. ಕೊಡಬೇಕು. ಇಲ್ಲದಿದ್ದರೆ ಶಿಮಾಕ್‌ನನ್ನು ಬಿಡುವುದಿಲ್ಲ’ ಎಂದಿದ್ದರು. ಕೆಲವು ಗಂಟೆಗಳ ಬಳಿಕ ಕರೆ ಮಾಡಿ ಆತನನ್ನು ಕೊಲ್ಲುವುದಾಗಿ ಬೆದರಿಸಿದ್ದರು. ಬಳಿಕ ನಗರದ ಕೆಪಿಟಿ ಬಳಿ ದುಷ್ಕರ್ಮಿಗಳಿಗೆ  ಹಣ ತಲುಪಿಸಿದ ಕೂಡಲೇ ಶಿಮಾಕ್‌ನನ್ನು ಸ್ವಿಫ್ಟ್ ಕಾರಿನಿಂದ ತಳ್ಳಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ದುಷ್ಕರ್ಮಿಗಳು ಶಿಮಾಕ್‌ನಿಗೆ ಕಬ್ಬಿಣದ ರಾಡ್‌ನಿಂದ ತಲೆ, ಮುಖ ಮತ್ತು ಬೆನ್ನಿಗೆ ಹಲ್ಲೆ ನಡೆಸಿದ್ದಾರೆ ಹಾಗೂ ಸಿಗರೇಟ್‌ನಿಂದ ದೇಹದ ಮೇಲೆ ಅಲ್ಲಲ್ಲಿ ಸುಟ್ಟಿದ್ದಾರೆ. ಅವರ ಬೆನ್ನಿನ ಭಾಗ ಜರ್ಝರಿತಗೊಂಡಿದೆ.  ಗಾಯಾಳನ್ನು  ವೆನ್ಲ್ಯಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳ ಬಂಧನಕ್ಕೆ ಪಾಂಡೇಶ್ವರ ಪೊಲೀಸರು ಬಲೆ ಬೀಸಿದ್ದಾರೆ. ಅಪಹರಣಕ್ಕೆ ಬಳಸಿದ ಸ್ವಿಫ್ಟ್ ಕಾರು ಹಾಗೂ ಅದರಲ್ಲಿದ್ದ ಕಬ್ಬಿಣದ ರಾಡ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next