Advertisement

ಸಾವಿರ ಮನವಿಗೂ ಸ್ಪಂದಿಸಿಲ್ಲ ಖರ್ಗೆ

04:06 PM Mar 31, 2019 | Team Udayavani |

ಯಾದಗಿರಿ: ಒಂದಲ್ಲ, ಎರಡಲ್ಲ, ಸಾವಿರ ಸಲ ಖರ್ಗೆ ಕಾಲಿಗೆ ಬಿದ್ದರೂ ಕೋಲಿ ಸಮಾಜವನ್ನು ಎಸ್‌ಟಿ ಸೇರಿಸುವ ಕುರಿತು ಚಕಾರ ಎತ್ತಲಿಲ್ಲ ಎಂದು ಮಾಜಿ ಸಚಿವ ಬಾಬುರಾವ ಚಿಂಚನಸೂರ ತಿಳಿಸಿದರು. ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ಕೋಲಿ ಸಮಾಜದ ಏಳ್ಗೆಗೆ ಸಹಕರಿಸದೆ ಕೊಡಲಿ ಪೆಟ್ಟು ಹಾಕಲಾಗಿದೆ ಎಂದು ದೂರಿದರು.

Advertisement

ದಿ| ವಿಠuಲ ಹೆರೂರ ಕೋಲಿ ಸಮಾಜವನ್ನು ಎಸ್‌ಟಿ ಸೇರಿಸುವ ಸಂಬಂಧ ಹೋರಾಡಿ ಪ್ರಾಣವನ್ನೇ ಬಿಟ್ಟಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು 50 ವರ್ಷ ಅಧಿಕಾರದಲ್ಲಿದ್ದರೂ ಕೋಲಿ ಸಮಾಜದ ಹೆಸರು ನಾಲಿಗೆ ಮೇಲೆ ಬರಲಿಲ್ಲ. ಬಿಜೆಪಿಯಿಂದ ಸಮಾಜದವರಿಗೆ ಒಳ್ಳೆಯ ಸ್ಥಾನಮಾನ ಸಿಕ್ಕಿದೆ. ಸಮಾಜವನ್ನು ಎಸ್‌ಟಿಗೆ ಸೇರಿಸುವ ಜಿದ್ದಿನಿಂದ ಬಿಜೆಪಿಗೆ ಸೇರಿದ್ದಾಗಿ ತಿಳಿಸಿದರು.

ಎಸ್‌ಟಿ ಜನಾಂಗದ ಬೇಡ ಸಮುದಾಯಕ್ಕೆ ಶೇ.3ರಷ್ಟು ಮೀಸಲಾತಿ ಇದೆ. ಇದನ್ನು ಶೇ.10ಕ್ಕೆ ಏರಿಸುವಂತೆಯೂ ಬೇಡಿಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಕಲಬುರಗಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ| ಜಾಧವ ಸಮರ್ಥ ವ್ಯಕ್ತಿಯಾಗಿದ್ದಾರೆ. ಖರ್ಗೆ ಹಳೆ ಪರ್ವತವಾಗಿದೆ. ಜಾಧವ ಹೊಸ ಪರ್ವತ ಇದ್ದಂತೆ. ಖರ್ಗೆ ಅವರು 50 ವರ್ಷದಲ್ಲಿ ಮಾಡಿದ ಅಭಿವೃದ್ಧಿಯನ್ನು ಜಾಧವ 2 ವರ್ಷದಲ್ಲಿ ಮಾಡಿ ತೋರಿಸುತ್ತಾರೆ ಎಂದು ತಿಳಿಸಿದರು.

ಕೋಲಿ ಸಮಾಜದ ಮತ್ತೂಬ್ಬ ಮುಖಂಡ ಸಾಯಬಣ್ಣ ಬೋರಬಂಡ ಮಾತನಾಡಿ, ಗುರುಮಠಕಲ್‌ ವಿಧಾನಸಭೆ ಕ್ಷೇತ್ರದಿಂದ ಖರ್ಗೆ ಅವರು ಶಾಸಕರಾಗಿ ಇಲ್ಲಿನ 1ಲಕ್ಷದಷ್ಟು ಜನ ಗುಳೆ ಹೋಗುವುದನ್ನೇ ಬಳುವಳಿಯಾಗಿ ನೀಡಿದ್ದಾರೆ.

Advertisement

ದೇಶದಲ್ಲಿ ಯಾವುದೇ ಕ್ಷೇತ್ರದವರು ಒಬ್ಬರನ್ನೇ ಇಷ್ಟು ಬಾರಿ ಆರಿಸಿಲ್ಲ. ಇಲ್ಲಿನ ಮತದಾರರು ಸತತವಾಗಿ ಆಶೀರ್ವದಿಸಿದರೂ ಈ ಭಾಗಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಿಲ್ಲ ಎಂದು ದೂರಿದರು.

ಗುರುಮಠಕಲ್‌ ಜನರು ಅಧಿಕಾರ ನೀಡಿದ್ದರಿಂದ ಬೇರೆಯವರಿಗೆ ಲಾಭ ಮಾಡಿದ್ದಾರೆ ವಿನಃ ಇಲ್ಲಿಯವರಿಗಿಲ್ಲ. ಇದೊಂದು ಬಾರಿ ಗೆಲ್ಲಿಸಿದರೆ ಒಂದು ಡಜನ್‌ ಬಾರಿಯಾಗುತ್ತದೆ ಎನ್ನುತ್ತಿರುವ ಖರ್ಗೆ ಅವರು ಈ ಭಾಗದ ಜನರನ್ನು ತುಳಿಯುತ್ತ ಬಂದಿದ್ದಾರೆ. ಖರ್ಗೆ ಜನರಿಗಾಗಿ ಏನೂ ಮಾಡಿಲ್ಲ. ವೈಯಕ್ತಿಕ ವರ್ಚಸ್ಸು, ಸಂಪತ್ತು ಗಳಿಸಿದ್ದಾರೆ ಅಷ್ಟೆ ಎಂದು ದೂರಿದರು.

ಖರ್ಗೆ ಅನುಯಾಯಿಗಳಿಂದ ನನ್ನ ಸೋಲು: ಚಿಂಚನಸೂರ ಗುರುಮಠಕಲ್‌ ಮತಕ್ಷೇತ್ರದಲ್ಲಿ ಖರ್ಗೆ ಅವರ ಅನುಯಾಯಿಗಳ ಕುತಂತ್ರ ಬುದ್ಧಿಯಿಂದ ತನ್ನ ಸೋಲಾಗಿದೆ ಎಂದು ಮಾಜಿ ಸಚಿವ ಬಾಬುರಾವ ಚಿಂಚನಸೂರ ಆರೋಪಿಸಿದರು. ರಘುನಾಥರೆಡ್ಡಿ, ಮಹಿಪಾಲರೆಡ್ಡಿ, ಶರಣಪ್ಪ ಮಾನೇಗಾರ್‌, ವಿಶ್ವನಾಥ ನೀಲಹಳ್ಳಿ ಅವರು ದಳಕ್ಕೆ ಮತ ಹಾಕುವಂತೆ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ಮಾಡಿದರು. ಈಗ ಕಾಂಗ್ರೆಸ್‌ಗೆ ಹಾಕಲು ಹೇಳುತ್ತಿದ್ದಾರೆ.

ಅವರಿಗೆ ನಾಚಿಕೆ ಬರಬೇಕು ಎಂದು ತರಾಟೆಗೆ ತೆಗೆದುಕೊಂಡರು. ತಮ್ಮ ಮನೆ ಎದುರು ನಿತ್ಯ ಬೈಕ್‌ಗಳ ಮೇಲೆ ಮುಸುಕುಧಾರಿಗಳು ಸುತ್ತಾಡುತ್ತಿದ್ದಾರೆ. ಗುರುಮಠಕಲ್‌ ಪ್ರಚಾರಕ್ಕೆ ಹೋದರೆ ಕಾಲು ತೆಗೆಯುತ್ತೇವೆ ಎಂದು ಧಮ್ಕಿ ಹಾಕುತ್ತಿರುವುದಾಗಿ ತಿಳಿಸಿದರು

ಗುರುಮಠಕಲ್‌ ಮತದಾರರ ಶಾಪದಿಂದ ಖರ್ಗೆ ಸಿಎಂ ಆಗಿಲ್ಲ ಗುರುಮಠಕಲ್‌ ಕ್ಷೇತ್ರದ ಅಮಾಯಕ ಜನರನ್ನು ಮತಬ್ಯಾಂಕ್‌ನಂತೆ ಬಳಸಿಕೊಂಡು ಖರ್ಗೆ 47 ವರ್ಷ ಅಧಿಕಾರದಲ್ಲಿದ್ದರೂ ಇಲ್ಲಿನ ಜನರಿಗೆ ಏನು ಮಾಡಿಲ್ಲ. ಇಲ್ಲಿನ ಮತದಾರರ ಶಾಪದಿಂದಲೇ ಖರ್ಗೆ ಸಿಎಂ ಆಗಿಲ್ಲ. 12 ಬಾರಿ ಗೆದ್ದು ರೆಕಾರ್ಡ್‌ ಆಗುತ್ತದೆ ಎಂದು ಖರ್ಗೆ ಹೇಳುತ್ತಿದ್ದು, ನಮ್ಮನ್ನು ತುಳಿದು ನೀವು ಸಿಎಂ ಆಗಲಾರಿರಿ. ಯಾವುದರಲ್ಲಿ ರೆಕಾರ್ಡ್‌ ಮಾಡಲು ಹೊರಟಿದ್ದೀರಿ. 50 ವರ್ಷದಲ್ಲಿ ಮಾಡದ ಅಭಿವೃದ್ಧಿ ಈಗ ಏನು ಮಾಡುವಿರಿ ಎಂದು ಸಾಯಬಣ್ಣ ಬೋರಬಂಡ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next