Advertisement

ಸಾಮರ್ಥ್ಯ ಪರೀಕ್ಷೆಯಲ್ಲಿ ಕೆಎಫ್‌ಡಿ ಲಸಿಕೆ ವಿಫಲ; ಲಕ್ಷಾಂತರ ಜನರಲ್ಲಿ ನಿರಾಳ

12:09 AM Mar 07, 2023 | Shreeram Nayak |

ಶಿವಮೊಗ್ಗ:ಮಂಗನ ಕಾಯಿಲೆಗೆ (ಕೆಎಫ್‌ಡಿ) 34 ವರ್ಷಗಳಿಂದ ಕೊಡುತ್ತಿದ್ದ ಲಸಿಕೆಯು ತನ್ನ ಸಾಮರ್ಥ್ಯ ಪರೀಕ್ಷೆಯಲ್ಲಿ ವಿಫಲವಾಗಿದೆ. ಅರೋಗ್ಯ ಇಲಾಖೆ ತನ್ನ ತಪ್ಪು ಮುಚ್ಚಿಕೊಳ್ಳಲು ಯತ್ನಿಸುತ್ತಿದ್ದ ವಿಚಾರ ಈಗ ಬಹಿರಂಗಗೊಂಡಿದೆ. ಈ ಮೂಲಕ ಲಸಿಕೆಯನ್ನು ಅಧಿಕೃತವಾಗಿ ಕೈಬಿಡಲಾಗಿದೆ.

Advertisement

ಮಂಗನ ಕಾಯಿಲೆ ಲಸಿಕೆ ಸಾಮರ್ಥ್ಯ ಕುಸಿದಿರುವ ಬಗ್ಗೆ ವಿಡಿಎಲ್‌ ಲ್ಯಾಬ್‌ ವರದಿ, ತಜ್ಞರ ಸಂಶೋಧನಾ ವರದಿಗಳು ಬಹಿರಂಗಗೊಂಡ ಮೇಲೆ 2022-23ರ ಅವ ಧಿಗೆ ನೀಡಬೇಕಿದ್ದ ಲಸಿಕೆಗಳನ್ನು ಆರೋಗ್ಯ ಇಲಾಖೆ ತಡೆಹಿಡಿದಿತ್ತು. ಈ ಬಗ್ಗೆ ಉದಯವಾಣಿ’ ಡಿ.8ರಂದು ದಾಖಲೆ ಸಮೇತ ವರದಿ ಮಾಡಿತ್ತು. ನಂತರ ಈ ಲಸಿಕೆಯನ್ನು ಹಿಮಾಚಲದ ಪ್ರದೇಶ ಸೆಂಟ್ರಲ್‌ ಡ್ರಗ್‌ ಲ್ಯಾಬೊರೇಟರಿ (ಸಿಡಿಎಲ್‌)ಗೆ ಕಳುಹಿಸಿತ್ತು. ಅಲ್ಲಿಂದ ವರದಿ ಆರೋಗ್ಯ ಇಲಾಖೆ ಕೈಸೇರಿದ್ದು, ಲಸಿಕೆ ಸಾಮರ್ಥ್ಯ ಪರೀಕ್ಷೆಯಲ್ಲಿ ವಿಫಲವಾಗಿರುವುದನ್ನು ಇಲಾಖೆ ಒಪ್ಪಿಕೊಂಡಿದೆ.

ಮಂಗನ ಕಾಯಿಲೆ 1957ರಲ್ಲಿ ಮೊದಲು ಕಾಣಿಸಿಕೊಂಡಿದ್ದು, 1989ರಲ್ಲಿ ಲಸಿಕೆ ಕಂಡುಹಿಡಿಯಲಾಯಿತು. ಕೆಲ ವರ್ಷಗಳವರೆಗೆ ಶಿವಮೊಗ್ಗದಲ್ಲೇ ಇದ್ದ ಲಸಿಕೆ ಉತ್ಪಾದನಾ ಘಟಕ 2001ರಿಂದ ಬೆಂಗಳೂರಿನ ಇನ್‌ಸ್ಟಿಟ್ಯೂಟ್‌ ಆಫ್‌ ಅನಿಮಲ್‌ ಹೆಲ್ತ್‌ ಆ್ಯಂಡ್‌ ವೆಟರ್ನರಿ ಬಯೋಲಾಜಿಕಲ್ಸ್‌ (ಐಎಎಚ್‌ವಿಬಿ)ಗೆ ವರ್ಗಾವಣೆಗೊಂಡಿತು. ಸೀಮಿತ ಪ್ರದೇಶದಲ್ಲಿ ಕಾಣಿಸಿಕೊಳ್ಳುವ ಕಾಯಿಲೆ ಬಗ್ಗೆ ಆರಂಭದಿಂದಲೂ ಆರೋಗ್ಯ ಇಲಾಖೆ, ಜನಪ್ರತಿನಿಧಿಗಳು ನಿರ್ಲಕ್ಷé ವಹಿಸುತ್ತಲೇ ಬಂದಿದ್ದರು. ಈ ಕಾರಣದಿಂದ ಲಸಿಕೆ ಉತ್ಪಾದನೆ ವಿಚಾರಕ್ಕೆ ಹೆಚ್ಚು ಮಾನ್ಯತೆ ದೊರೆತಿರಲಿಲ್ಲ. ಯಾವುದೇ ಖಾಸಗಿ ಕಂಪನಿಗಳು ಮುಂದೆ ಬಾರದ ಕಾರಣ ಅನಿವಾರ್ಯವಾಗಿ ಪಶುಗಳ ಲಸಿಕೆ ಉತ್ಪಾದನೆ ಮಾಡುವ ಸಂಸ್ಥೆಗೆ ಈ ಜವಾಬ್ದಾರಿ ನೀಡಲಾಯಿತು.

1989ರಲ್ಲಿ ಸಿಕ್ಕ ಮಾಸ್ಟರ್‌ ಸೀಡ್‌ನಿಂದಲೇ ಈವರೆಗೆ ಲಸಿಕೆ ಉತ್ಪಾದನೆ ಮಾಡಲಾಗುತಿತ್ತು. ಇದು ಕಾಲಕ್ರಮೇಣ ಶಕ್ತಿ ಕಳೆದುಕೊಂಡಿತ್ತು. 2005-2010, 2011-12ರಲ್ಲಿ ನಡೆದ ಅಧ್ಯಯನ ವರದಿಗಳು ಲಸಿಕೆ ಸಾಮರ್ಥ್ಯ ಕ್ಷೀಣಿಸಿರುವುದನ್ನು ಒತ್ತಿ ಹೇಳಿತ್ತು. ಅದಾದ ಮೇಲೆ ನಡೆಸಿದ ವಿಡಿಎಲ್‌ ಲ್ಯಾಬ್‌ ಪರೀಕ್ಷೆಯಲ್ಲೂ ಅದು ವಿಫಲವಾಗಿತ್ತು. ಇದೆಲ್ಲವುದನ್ನು ಮರೆಮಾಚಿ ಲಸಿಕೆ ನೀಡಲಾಗುತಿತ್ತು.

ತಪ್ಪೊಪ್ಪಿಕೊಂಡ ಇಲಾಖೆ
ದೇಶದ ಯಾವುದೇ ಲಸಿಕೆಗಳು ಮೊದಲು ಸಿಡಿಎಲ್‌ನಲ್ಲಿ ಪರೀಕ್ಷೆಗೆ ಒಳಪಡಬೇಕು. ಅಲ್ಲಿ ಉತ್ತೀರ್ಣವಾದಾಗ ಮಾತ್ರ ಅದನ್ನು ಜನರ ಬಳಕೆ ನೀಡಬೇಕು. ಆದರೆ ಕೆಎಫ್‌ಡಿ ವಿಚಾರದಲ್ಲಿ ಇದು ಆಗಿರಲಿಲ್ಲ. ಸ್ಥಳೀಯವಾಗಿ ನಡೆಸುತ್ತಿದ್ದ ಪರೀಕ್ಷೆಗಳು ಅ ಧಿಕಾರಿಗಳ ವೈಫಲ್ಯವನ್ನು ಎತ್ತಿಹಿಡಿದಿತ್ತು. ಅದಕ್ಕಾಗಿ ಆ ವರದಿಗಳು ಹೊರಬಂದಿರಲಿಲ್ಲ. ಈಗ ಅನಿವಾರ್ಯವಾಗಿ ಆರೋಗ್ಯ ಇಲಾಖೆ ತನ್ನ ತಪ್ಪನ್ನು ಒಪ್ಪಿಕೊಂಡಿದೆ.

Advertisement

ಮುಂದೇನು?
ಹೊಸ ಲಸಿಕೆ ಉತ್ಪಾದನೆ ಹೊಣೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್‌) ಹೊತ್ತಿದೆ. ಫೆ.23ರಂದು ಐಸಿಎಂಆರ್‌ ಲಸಿಕೆ ಉತ್ಪಾದಕರಿಂದ ಅರ್ಜಿ ಆಹ್ವಾನಿಸಿದೆ. ಕೊರೊನಾ ಲಸಿಕೆಗೆ ನಡೆದ ತುರ್ತು ಅವಶ್ಯಕ ಪ್ರಕ್ರಿಯೆ ಮೂಲಕ ಕೆಎಫ್‌ಡಿಗೂ ಲಸಿಕೆ ತಯಾರು ಮಾಡಬೇಕಿದೆ. ಈ ಬಗ್ಗೆ ರಾಜ್ಯ ಸರ್ಕಾರ, ಜನಪ್ರತಿನಿಧಿಗಳು ಕೇಂದ್ರ ಸರ್ಕಾರಕ್ಕೆ ಒತ್ತಡ ತರಬೇಕು. ಆಗ ಮಾತ್ರ 8 ಜಿಲ್ಲೆಗಳ, 5 ರಾಜ್ಯಗಳ ಲಕ್ಷಾಂತರ ಜನರಿಗೆ ನೆಮ್ಮದಿ ಸಿಗಲಿದೆ.

2 ತಿಂಗಳು ನಿರ್ಣಾಯಕ
ಪ್ರಸ್ತುತ ಆರೋಗ್ಯ ಇಲಾಖೆ ಕೆಎಫ್‌ಡಿ ಮೇಲೆ ನಿಗಾ ವಹಿಸಿದೆ. ಈವರೆಗೆ 3 ಪ್ರಕರಣ ದಾಖಲಾಗಿವೆ. ಬೇಸಿಗೆ ಬಿಸಿ ಏರುತ್ತಿದ್ದು ಮಾರ್ಚ್‌, ಏಪ್ರಿಲ್‌ ನಿರ್ಣಾಯಕವಾಗಲಿದೆ. ಈ ಅವ ಧಿಯಲ್ಲಿ ವೈರಸ್‌ ಪ್ರೌಢಾವಸ್ಥೆಯಲ್ಲಿದ್ದು ಹೆಚ್ಚು ಹಾನಿ ಮಾಡುತ್ತದೆ. ಯಾವುದಾದರೊಂದು ಸ್ಥಳದಲ್ಲಿ ಇದು ಸ್ಫೋಟಗೊಂಡರೆ ಪರಿಸ್ಥಿತಿ ಕೈಮೀರುವುದು ಸಹಜ. ಪ್ರಸ್ತುತ ಇದಕ್ಕೆ ಯಾವುದೇ ಔಷಧಿ ಇಲ್ಲ.

ಕೆಎಫ್‌ಡಿ ಲಸಿಕೆ ವರದಿ ಕೈಸೇರಿದೆ. ಅದನ್ನು ಬಳಸಲು ಬರುವುದಿಲ್ಲ, ಮಾನದಂಡಕ್ಕೆ ಅನುಗುಣವಾಗಿಲ್ಲ ಎಂದು ತಿಳಿಸಿದ್ದಾರೆ. ಹೊಸ ಲಸಿಕೆ ಈಗ ಬೇಕಾಗಿದೆ. ಐಸಿಎಂಆರ್‌ ಜತೆ ಸಭೆಯಾಗಿದೆ. ಲಸಿಕೆ ಉತ್ಪಾದಕಾ ಕಂಪನಿಗಳಿಗೆ ಟೆಂಡರ್‌ ಕರೆಯಲಾಗಿದೆ.
– ಡಿ. ರಂದೀಪ್‌, ಆಯುಕ್ತರು, ಆರೋಗ್ಯ ಇಲಾಖೆ

-ಶರತ್‌ ಭದ್ರಾವತಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next