Advertisement

ಸಂವಿಧಾನ ರಕ್ಷಣೆಗೆ ಕೊಡುಗೆ ನೀಡಿದ ಎಡನೀರು ಕೇಶವಾನಂದ ಭಾರತೀ ಶ್ರೀಗಳು

12:57 PM Sep 07, 2020 | sudhir |

ಕಾನೂನು ವಿದ್ಯಾರ್ಥಿಯಾಗಿದ್ದವರಿಗೆಲ್ಲ ಎಡನೀರು ಶ್ರೀ ಕೇಶವಾನಂದ ಭಾರತೀ ಶ್ರೀಪಾದ‌ರ ಹೆಸರು ಚಿರಪ
ರಿಚಿತ. ಭಾರತದ ಸಂವಿಧಾನದ ಪಾಠ ಮಾಡುವಾಗ ಎಲ್ಲ ಪ್ರಾಧ್ಯಾಪಕರು ಈ ಕೇಸಿನ ಉದಾಹರಣೆ ನೀಡದೆ ಇದ್ದರೆ ಆ ಪಾಠ ಅಪೂರ್ಣ: “”ಕೇಶವಾನಂದ ಭಾರತೀ ವರ್ಸಸ್‌ ಯೂನಿಯನ್‌ ಆಫ್ ಕೇರಳ ಆ್ಯಂಡ್‌ ಅನದರ್‌”.

Advertisement

ಆದರೆ ಆಧ್ಯಾತ್ಮದ ಗುರುಗಳಾದ, ಮಠಾಧಿಪತಿಗಳಾದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಗಳೆಲ್ಲಿ, ಈ ಕಾನೂ ನಿನ ಪುಸ್ತಕಗಳೆಲ್ಲಿ? ಇದು ಎತ್ತಣಿಂದೆತ್ತ ಸಂಬಂಧ? ಭಾರತದ ಸಂವಿಧಾನದ ಪಾಠದಲ್ಲಿ ಅವರ ಹೆಸರು ಬರುವು ದೆಂದರೇನು? ಹೌದು.. ಅದಕ್ಕೆ ಕಾರಣವಾದದ್ದು ಸ್ವಾಮೀ ಜಿಗಳು ಕೇರಳ ಸರಕಾರದ ವಿರುದ್ಧ ಹಾಕಿದ ಒಂದು ಕೇಸು ಮತ್ತು ಅದಕ್ಕೆ ಪೂರಕವಾಗಿ ಸರ್ವೋಚ್ಚ ನ್ಯಾಯಾಲಯ ನೀಡಿದ ಒಂದು ಅಭೂತಪೂರ್ವ ತೀರ್ಪು.

ಸಂವಿಧಾನದ ಆರ್ಟಿಕಲ್‌ 368 ದೇಶದ ಸಂಸತ್‌ಗೆ ಒಂದು ವಿಶೇಷ ಅಧಿಕಾರವನ್ನು ನೀಡುತ್ತದೆ. ಆ ಪ್ರಕಾರ ಸಂಸತ್‌ ತನಗೆ ದಕ್ಕಿದ ಸಾಂವಿಧಾನಾತ್ಮಕ ಅಧಿಕಾರವನ್ನು ಚಲಾಯಿಸಿ ಸಂವಿಧಾನವನ್ನು ತಿದ್ದುಪಡಿ ಮಾಡಲು, ಹೊಸದಾಗಿ ಕಾನೂನು ಸೇರ್ಪಡೆ ಮಾಡಲು, ವ್ಯತ್ಯಾಸಗೊ ಳಿಸಲು ಅಥವಾ ಯಾವುದಾದರೂ ಆರ್ಟಿಕಲ್‌ನ್ನು ತೊಡೆದುಹಾಕಬಹುದಾಗಿದೆ. ಈ ಅನುಚ್ಛೇದ ನೀಡುವ ಅಧಿಕಾರದಿಂದಾಗಿ ಯಾವುದೇ ಸರಕಾರ, ಸಂಸತ್‌ನಲ್ಲಿ ತನಗೆ ಬೇಕಾದಂತೆ ಸಂವಿಧಾನ ತಿದ್ದುಪಡಿ, ಸಾರ್ವಜನಿಕರ ಹಕ್ಕು ಮೊಟಕು ಮಾಡುವ ಸಾಧ್ಯತೆಗಳಿವೆ. ಆದರೆ ಹಾಗೆ ತಿದ್ದುಪಡಿ ಮಾಡಲು ಹೊರಡುವಾಗ, ವ್ಯಕ್ತಿಯ ಮೂಲಭೂತ ಹಕ್ಕು ಗಳಿಗೆ ಅಥವಾ ಸಂವಿಧಾನದ ಮೂಲ ರೂಪ/ಸ್ವರೂಪಕ್ಕೆ ಧಕ್ಕೆ ಬಂದರೆ ಅದು ಸಾಧುವೋ, ಅಲ್ಲವೋ ಎಂಬ ಪ್ರಶ್ನೆಗೆ ನಿಖರ ಉತ್ತರದಂತೆ ಶ್ರೀ ಕೇಶವಾ ನಂದ ಭಾರತೀ ಶ್ರೀಪಾದರ ಕೇಸಿನ ತೀರ್ಪು ಬಂತು. ಆ ಕೇಸಿನ ತೀರ್ಪು ಬಂದ ದಿನದಿಂದ ಇಂದಿನ ವರೆಗೂ ಕಾನೂನಿನ ಇತಿಹಾಸದಲ್ಲಿ ಅದೊಂದು ಮೈಲಿಗಲ್ಲಾಗಿ ಮತ್ತು ಹಲವಾರು ಸಂವಿಧಾನಾತ್ಮಕ ಪ್ರಶ್ನೆಗಳು ಒಳಗೊಂಡಿ ರುವ ಕೇಸುಗಳಿಗೆ ದಿಕ್ಸೂಚಿಯಾಗಿ ನಿಂತಿದೆ.

ಅದು ಸುಮಾರು 1970ರ ಸಮಯ. ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಗಳಿಗೆ ಕೇರಳ ಸರಕಾರ ಒಂದು ನೋಟಿಸ್‌ ನೀಡುತ್ತದೆ. ಆ ನೋಟಿಸ್‌ನ ಪ್ರಕಾರ ಶ್ರೀಗಳ ಎಡನೀರು ಮಠದ ಸ್ವಾಧೀನದಲ್ಲಿರುವ ಆಸ್ತಿಗಳನ್ನು ಕೇರಳ ಸರಕಾರ ನೂತನವಾಗಿ ತಿದ್ದುಪಡಿ ಮಾಡಿದ ಭೂಸು ಧಾರಣೆ ಕಾನೂನಿನ ಪ್ರಕಾರ ಸರಕಾರಕ್ಕೆ ಬಿಟ್ಟುಕೊಡ ಬೇಕೆಂದು ಸೂಚಿಸಲಾಗಿತ್ತು. ಇದನ್ನು ಸ್ವಾಮೀಜಿಗಳು ಪ್ರಬಲವಾಗಿ ವಿರೋಧಿಸಿದರು. ದೇಶದೆಲ್ಲೆಡೆ ಇದೊಂದು ಸಂಚಲನ ಸೃಷ್ಟಿಸುವ ವಿಚಾರವಾಗಿ ಸುದ್ದಿಯಾಯಿತು. ಹಿರಿಯ ವಕೀಲರಾಗಿದ್ದ ನಾನಿ ಪಾಲ್ಕಿವಾಲರ ಗಮನಕ್ಕೆ ಈ ಸುದ್ದಿ ಬಂತು. ಮೊದಲಿಂದಲೂ ಸಂಸತ್‌ನ ಈ ಸರ್ವಾಧಿ ಕಾರಿ ಧೋರಣೆ ಬಗೆಗಿನ ಸಂವಿಧಾನದ ಈ ಅನುಚ್ಛೇದದ ಬಗ್ಗೆ ತಾತ್ವಿಕವಾಗಿ ಅಸಮಾಧಾನವಿದ್ದ ಅವರು, ಇದನ್ನು ಪ್ರತಿಭಟಿಸಲು ಮಠದ ನೋಟಿಸ್‌ನ ವಿವಾದ ಒಂದು ಒಳ್ಳೆಯ ಅವಕಾಶ ಎಂದು ಪರಿಗಣಿಸಿದರು. ಕೂಡಲೇ ಸ್ವಾಮೀಜಿಗಳನ್ನು ಸಂಪರ್ಕಿಸಿದ ನಾನಿ ಪಾಲ್ಕಿವಾಲ ಅವರು, ಕೇರಳ ಸರಕಾರದ ವಿರುದ್ಧ ಕೇಸು ಹಾಕುವಂತೆ ಮನವೊಲಿಸಿ, ಅದರಲ್ಲಿ ಯಶಸ್ವಿಯಾದರು. ಅಲ್ಲಿಂದ ಮತ್ತೆ ಕಾನೂನಿನ ಹೋರಾಟ ಆರಂಭಗೊಂಡಿತು.

ಸ್ವಾಮೀಜಿಗಳು ಒಟ್ಟು ಆರು “ರಿಟ್‌’ ಪಿಟಿಶನ್‌ಗಳನ್ನು ದಾಖಲಿಸಿದರು. ಅವುಗಳಲ್ಲಿ ಬಹಳ ಮುಖ್ಯವಾಗಿ ಭಾರತದ ಸಂವಿಧಾನಕ್ಕೆ ತರಲಾದ 24, 25 ಮತ್ತು 29ನೇ ತಿದ್ದುಪಡಿ ಕಾನೂನುಬಾಹಿರ ಮತ್ತು ಅವುಗಳನ್ನು ಅಸಿಂಧು ಎಂದು ಘೋಷಿಸಬೇಕು, ಹಾಗೆಯೇ ಅನುಚ್ಛೇದ 14 (ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಒಂದೇ ಮತ್ತು ಸಮಾನ ರಕ್ಷಣೆ (ರಾಜ್ಯ ಯಾವುದೇ ನಾಗರಿಕರಿಗೆ ಸಮಾನ ರಕ್ಷಣೆ ನೀಡಲು ನಿರಾಕರಿಸುವಂತಿಲ್ಲ), ಅನುಚ್ಛೇದ 19, 25 ಮತ್ತು 26 (ಸಮಾನ ಹಕ್ಕುಗಳು, ಅಭಿವ್ಯಕ್ತಿ ಸ್ವಾತಂತ್ರ್ಯ, ನೀರು, ವಾಸಿಸುವ ಹಕ್ಕು, ಯಾವುದೇ ಧರ್ಮವನ್ನು ಅನುಸರಿಸುವ ಹಕ್ಕುಗಳು ಇತ್ಯಾದಿ)- ಮೇಲೆ ಹೇಳಿದ ಅನುಚ್ಛೇದಗಳನ್ನು ಮೊಟಕುಗೊಳಿಸಲಾಗಿದೆ ಮತ್ತು ಕೇರಳ ಸರಕಾರ ಜಾರಿಗೆ ತಂದ ಭೂಸುಧಾರಣ ಕಾನೂನು-1963 (ತಿದ್ದುಪಡಿ ಮಸೂದೆ 1969) ಇದನ್ನು ಕಾನೂನು ಬದ್ಧವಲ್ಲ ಮತ್ತು ಅಸಾಂವಿಧಾನಾತ್ಮಕ ಎಂದು ಘೋಷಿಸಬೇಕೆಂದು ಕೇಸು ಹಾಕಿದರು. ಕೇಸು ಇತ್ಯರ್ಥಕ್ಕೆ ಬಾಕಿ ಇರುವಾಗ ಕೇರಳ ಸರಕಾರ ಮತ್ತೆ ಕೇರಳ ಭೂಸುಧಾರಣ ತಿದ್ದುಪಡಿ ಮಸೂದೆ 1971ನ್ನು ಜಾರಿಗೆ ತಂದಿತು. ಅದಕ್ಕೆ ರಾಷ್ಟ್ರಪತಿಗಳ ಅಂಕಿತವೂ ದೊರಕಿತು. ಅದನ್ನೂ ಈ ಕೇಸಿನಲ್ಲಿ ಸೇರಿಸುವಂತೆ ಮತ್ತೂಂದು ಅರ್ಜಿ ಸಲ್ಲಿಸಲಾಯಿತು.

Advertisement

ಸುಮಾರು 66 ದಿನಗಳ ಕಾಲ ಸತತವಾಗಿ ನಡೆದ ವಾದ-ಪ್ರತಿವಾದಗಳನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಎಂ.ಸಿಖ್ರಿ ನೇತೃತ್ವದ 13 ನ್ಯಾಯಮೂರ್ತಿಗಳ ನ್ಯಾಯಪೀಠ, ತನ್ನ 502 ಪುಟಗಳ ತೀರ್ಪು ನೀಡಿತು. ಮೇಲ್ನೋಟಕ್ಕೆ ತೀರ್ಪು ಸರಕಾರದ ಪರವಾಗಿ ಇದ್ದಂತೆ ಕಂಡರೂ ನ್ಯಾಯಪೀಠ, ವಿವೇಚನಾ ಯುಕ್ತವಾಗಿ ಮತ್ತು ಬಹಳ ನಿಖರವಾಗಿ ಸಂಸತ್‌ನ ಅಧಿಕಾರವನ್ನು ಮತ್ತು ಸಂವಿಧಾನವನ್ನು ತಿದ್ದುಪಡಿ ಮಾಡುವ ಭರದಲ್ಲಿ ಸಂವಿಧಾನದ ಮೂಲ ಸ್ವರೂಪವನ್ನು ಬದಲಾಯಿಸಲು ಆಗದು ಎಂದು ತಿಳಿಸಿತ್ತು.

ಸಂಸತ್‌ಗೆ ಸಂವಿಧಾನವನ್ನು ತಿದ್ದುಪಡಿ ಮಾಡಲು ಅಧಿಕಾರವಿರುತ್ತದೆ. ಆದರೆ ನಾಗರಿಕ ಹಕ್ಕುಗಳನ್ನು ಮೊಟಕುಗೊಳಿಸುವ ಅಥವಾ ಸಂವಿಧಾನದ ಮೂಲ ಆಶಯಕ್ಕೆ ಎಲ್ಲಿಯೂ ಧಕ್ಕೆ ಬರಬಾರದು ಎಂದು ನ್ಯಾಯಪೀಠ ತಾಕೀತು ಮಾಡಿತು. ವ್ಯಕ್ತಿಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಮೂಲಭೂತ ಹಕ್ಕನ್ನು ಮೊಟಕುಗೊಳಿಸಲಾಗದು ಮತ್ತು ಸಂವಿಧಾನದಲ್ಲಿ ಹೇಳಲಾದ ಹಕ್ಕುಗಳನ್ನು ಕಸಿದುಕೊಳ್ಳಲಾಗದು ಹಾಗೂ ಯಾವುದೇ ತಿದ್ದುಪಡಿ ಸಂವಿಧಾನದ ಮೂಲ ಆಶಯಕ್ಕೆ ಭಂಗ ತರಬಾರದು ಎಂದು ನ್ಯಾಯಪೀಠ ಪುನರು ಚ್ಚರಿಸಿತು. ಆಗಿನ ಕಾಲಕ್ಕೆ ಈ ತೀರ್ಪು ಅಧಿಕಾರದಲ್ಲಿದ್ದ ಸರಕಾರಕ್ಕೆ ಇರಿಸು ಮುರಿಸು ತಂದಿಟ್ಟ ತೀರ್ಪಾಗಿತ್ತು.

ಒಟ್ಟಿನಲ್ಲಿ ಈ ತೀರ್ಪು ಭಾರತದ ಚಾರಿತ್ರಿಕ ಪುಟಗಳಲ್ಲಿ ಅಚ್ಚಳಿಯದೆ ಉಳಿದ, ಉಳಿಯುವ ಒಂದು ತೀರ್ಪು ಆಗಿ ಹೊರಹೊಮ್ಮಿದ್ದಂತೂ ಸತ್ಯ. ಕಲೆ, ಸಾಹಿತ್ಯ, ಯಕ್ಷಗಾನದ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡ, ಸ್ವತಃ ಒಳ್ಳೆಯ ಯಕ್ಷಗಾನ ಭಾಗವತರೂ ಆಗಿದ್ದ, ಮಾನವ ಪ್ರೇಮಿ, ಸಜ್ಜನ ಸ್ವಾಮೀಜಿಯವರು ಇನ್ನು ನೆನಪು ಮಾತ್ರ.

ಅಸಾಂವಿಧಾನಾತ್ಮಕ ಕಾನೂನಿನ ವಿರುದ್ಧ ಪ್ರತಿಭಟಿಸಿದ ಮತ್ತು ಆ ಮೂಲಕ ಸಮಸ್ತ ಭಾರತೀಯರ ಮೂಲಭೂತ ಹಕ್ಕಿನ ಬಗ್ಗೆ ಕಾಳಜಿ ವಹಿಸಿದ ಒಂದು ತೀರ್ಪನ್ನು ಸರ್ವೋಚ್ಛ ನ್ಯಾಯಾಲಯ ನೀಡುವಂತೆ ಮಾಡಿದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಪಂಚಭೂತಗಳಲ್ಲಿ ಲೀನವಾದ ಸಮಯದಲ್ಲಿ, ಅವರನ್ನು ಭಕ್ತಿಪೂರ್ವಕವಾಗಿ ನೆನೆಯುತ್ತ ಅವರಿಗೊಂದು ನುಡಿನಮನ.

– ಶಶಿರಾಜ್‌ ಕಾವೂರು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next