Advertisement

ಖಾಸಗಿ ಶಾಲೆಗೆ ಸವಾಲೊಡ್ಡುವ ಕೆರ್ವಾಶೆ ಸರಕಾರಿ ಶಾಲೆ

10:29 PM Feb 20, 2020 | Sriram |

ಕಾರ್ಕಳ:ಕಾರ್ಕಳ ತಾಲೂಕಿನ ಮಲೆನಾಡು ತಪ್ಪಲಿನ ತಾಣ ಕೆರ್ವಾಶೆ. ಈ ಗ್ರಾಮದಲ್ಲೊಂದು ಮಾದರಿ ಸರಕಾರಿ ಶಾಲೆಯೊಂದಿದೆ. ಅದೇ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಂಗ್ಲೆಗುಡ್ಡೆ- ಕೆರ್ವಾಶೆ. ಶಾಲಾ ಆವರಣ ತಲುಪುತ್ತಿದ್ದಂತೆ ಮನಸ್ಸಿಗೆ ಮುದ ನೀಡುವ ವಾತಾವರಣ ಅಲ್ಲಿದೆ. ಹಸುರು ಗಿಡಬಳ್ಳಿ ಸೊಂಪಾಗಿ ಬೆಳೆದು ಕೈ ಬೀಸಿ ಕರೆಯುವಂತಿದ್ದು, ಬಗೆ ಬಗೆಯ ತರಕಾರಿ, ಹೂ, ಹುಲ್ಲಿನ ಹಾಸು ಹರಡಿ ಶಾಲೆಯ ಅಂದ ಹೆಚ್ಚಿಸಿದೆ. ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವ ಸಕಲ ಸೌಲಭ್ಯಗಳಿದ್ದು, ಯಾವೊಂದು ಖಾಸಗಿ ಶಾಲೆಗೂ ಕಡಿಮೆಯಿಲ್ಲದಂತಿದೆ.

Advertisement

1959 ರಲ್ಲಿ ಸ್ಥಾಪನೆಯಾದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಂಗ್ಲೆಗುಡ್ಡೆಗೆ 3.41 ಎಕ್ರೆ ವಿಸ್ತಾರವಾದ ಜಾಗವಿದೆ. 1 ರಿಂದ 5ರ ವರೆಗೆ ತರಗತಿಯಿದ್ದು, 5 ಕೊಠಡಿಗಳನ್ನು ಹೊಂದಿದೆ.

ವಿದ್ಯಾರ್ಥಿಗಳ ಸಂಖ್ಯೆ ವೃದ್ಧಿ
ಸರಕಾರಿ ಶಾಲೆಯೆಂದರೆ ಮೂಗು ಮುರಿಯುವವರೇ ಅಧಿಕವಾಗಿರುವ ಮತ್ತು ವಿದ್ಯಾರ್ಥಿಗಳ ಕೊರತೆಯನ್ನು ಎದುರಿಸುವ ಸಂದರ್ಭದಲ್ಲಿ ಈ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ಪ್ರಸ್ತುತ 5ರ ತನಕದ ತರಗತಿಯಲ್ಲಿ ಒಟ್ಟು 91 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

6 ಲಕ್ಷ ರೂ. ವೆಚ್ಚದಲ್ಲಿ 200 ಮೀಟರ್‌ ಟ್ರಾÂಕ್‌ನ ವಿಶಾಲವಾದ ಕ್ರೀಡಾಂಗಣ ರಚಿಸಲಾಗಿದೆ. ಶಾಲೆ ನವೀಕರಣ ದೊಂದಿಗೆ ಗೋಡೆ ಮೇಲೆ ಚಿತ್ರ ಬಿಡಿಸಿ ಅಂದಗೊಳಿಸ ಲಾಗಿದೆ. 80 ಲಕ್ಷ ರೂ. ವೆಚ್ಚದಲ್ಲಿ ನಲಿ-ಕಲಿ ತರಗತಿಗೆ ಆಕರ್ಷಕ ಪೀಠೊಪಕರಣ ಒದಗಿಸಲಾಗಿದೆ.

ಗ್ರಂಥ ಭಂಡಾರ
ಹೊಸಗನ್ನಡ ಮುಂಗೋಳಿ ಕವಿ ಮುದ್ದಣನ 150 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಕೇಂದ್ರ ಗ್ರಂಥಾಲಯ ಉಡುಪಿ ಇದರ ವತಿಯಿಂದ 1. 22 ಲಕ್ಷ ರೂ. ವೆಚ್ಚದಲ್ಲಿ ಆಧುನಿಕ ಶೈಲಿಯ ಗ್ರಂಥಾಲಯ ತೆರೆಯಲಾಗಿದೆ. ಗ್ರಂಥಾಲಯದ ಸುತ್ತ ಗೋಡೆ ಮೇಲೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ, ವಿಜ್ಞಾನಿಗಳ, ಮಹಾನ್‌ ವ್ಯಕ್ತಿಗಳ ಚಿತ್ರಗಳನ್ನು ಒಪ್ಪ ಓರಣವಾಗಿ ಜೋಡಿಸಿಡಲಾಗಿದೆ.

Advertisement

ಕಳೆದ ವರ್ಷದಿಂದ ಪೂರ್ವ ಪ್ರಾಥಮಿಕ ಎಲ್‌.ಕೆ.ಜಿ./ ಯು.ಕೆ.ಜಿ. ತರಗತಿಗಳನ್ನು ಪ್ರಾರಂಭಿಸಲಾಗಿದೆ. ಪ್ರಸ್ತುತ 32 ಪುಟಾಣಿಗಳು ಎಲ್‌.ಕೆ.ಜಿ., ಯು.ಕೆ.ಜಿಯಲ್ಲಿದ್ದಾರೆ.

ಸರಕಾರಿ ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿರುವ ಇಂದಿನ ದಿನಗಳಲ್ಲಿ ಖಾಸಗಿ ಶಾಲೆಗಳನ್ನೇ ನಾಚಿಸುವಂತೆ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವ್ಯವಸ್ಥೆಯೊಂದಿಗೆ ಈ ಶಾಲೆ ಹೆಸರು ಮಾಡಿದೆ.

ಅಭಿವೃದ್ಧಿಯ ರೂವಾರಿಯಿವರು
2014ರಲ್ಲಿ ಈ ಶಾಲೆಗೆ ವರ್ಗಾವಣೆಗೊಂಡು ಬಂದು ಶಾಲೆಯ ಜವಾಬ್ದಾರಿ ಹೊತ್ತವರು ಶಿಕ್ಷಕ ಸಂಜೀವ ದೇವಾಡಿಗ. ಅವರು ಶಾಲೆಗೆ ಬಂದ ಬಳಿಕ ಶಾಲೆಯ ಅಭಿವೃದ್ಧಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಸ್ಪಷ್ಟ ಯೋಜನೆ ರೂಪಿಸಿ, ಕಾರ್ಯೋನ್ಮುಖರಾದರು. ಈ ನಿಟ್ಟಿನಲ್ಲಿ ಎಸ್‌ಡಿಎಂಸಿ, ಹಳೆ ವಿದ್ಯಾರ್ಥಿ ಸಂಘ, ಪೋಷಕರು ಸಾಥ್‌ ನೀಡಿದರು. ದಾನಿಗಳು ನೆರವು ನೀಡಿದರು.

ಶಾಲೆ ತೋಟದ್ದೇ ತರಕಾರಿ
ಪ್ರತೀವರ್ಷ ಪೋಷಕರು, ಶಿಕ್ಷಕರು,ಮಕ್ಕಳು ಸೇರಿ ತರಕಾರಿ ತೋಟ ಮಾಡುತ್ತ ಬಂದಿರುತ್ತಾರೆ. ಮಳೆಗಾಲದಲ್ಲಿ ಹೀರೇಕಾಯಿ, ಸೋರೆಕಾಯಿ, ಅಲಸಂಡೆ, ಮುಳ್ಳು ಸೌತೆಕಾಯಿಯನ್ನು ಸಾವಯವವಾಗಿ ಬೆಳೆದು ಬಿಸಿಯೂಟಕ್ಕೆ ಬೇಕಾಗುವಷ್ಟು ಬಳಸಿ ಉಳಿದ ತರಕಾರಿ ಅಂಗಡಿಗೆ ಮಾರಾಟ ಮಾಡಲಾಗುತ್ತಿದೆ. ಹರಿವೆ, ಬಸಳೆ, ತೊಂಡೆ, ಬೆಂಡೆ,ಬದನೆ, ನುಗ್ಗೆ ಬೆಳೆಸಿ ಮಧ್ಯಾಹ್ನದ ಬಿಸಿಯೂಟಕ್ಕೆ ತಾಜಾ ತರಕಾರಿ ಒದಗಿಸಲಾಗುತ್ತಿದೆ.

ಆಕರ್ಷಕ ಬಾಲವನ
ಸಂತಸದಾಯಕ ಶಾಲಾ ವಾತಾವರಣ, ಗುಣಮಟ್ಟದ ಶಿಕ್ಷಣಕ್ಕೆ ಸೋಪಾನ ಎಂಬ ಧ್ಯೇಯ ಹೊಂದಿರುವ ಕೆರ್ವಾಶೆ ಶಾಲೆಯಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ 10 ಸೆಂಟ್ಸ್‌ ಜಾಗದಲ್ಲಿ ಆಕರ್ಷಕ ಮತ್ತು ಉತ್ತಮ ಗುಣಮಟ್ಟದಲ್ಲಿ ಬಾಲವನ ನಿರ್ಮಾಣ ಮಾಡಲಾಗಿದೆ.

ಶಾಲಾಭಿವೃದ್ಧಿಗೆ ಉತ್ತಮ ನಿದರ್ಶನ
ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ, ಶಾಲೆ ಬೀಳುವ ಸ್ಥಿತಿಯಲ್ಲಿದೆ ಎಂದು ಮೂದಲಿಸುವ ಸರಕಾರಿ ಶಿಕ್ಷಕರೊಮ್ಮೆ ಇದ್ದ ವ್ಯವಸ್ಥೆಗಳನ್ನು ಉಪಯೋಗಿಸಿಕೊಂಡು ಯಾವ ರೀತಿ ಶಾಲೆಯನ್ನು ಅಭಿವೃದ್ಧಿಪಡಿಸಬಹುದು ಎನ್ನುವುದಕ್ಕೆ ಬಂಗ್ಲೆಗುಡ್ಡೆ-ಕೆರ್ವಾಶೆ ಶಾಲೆಯೇ ಉತ್ತಮ ನಿದರ್ಶನ.
-ಶಶಿಧರ್‌ ಜಿ.ಎಸ್‌., ಕ್ಷೇತ್ರ ಶಿಕ್ಷಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next