Advertisement

ಕೇರಳ ಮಹಾಮಳೆಗೆ ಕಬಿನಿಯಿಂದ 2 ಲಕ್ಷ ಕ್ಯೂಸೆಕ್‌ ನೀರು ಬಿಡುಗಡೆ ಸಂಭವ

02:44 PM Aug 10, 2019 | Suhan S |

ಎಚ್.ಡಿ.ಕೋಟೆ: ಕೇರಳದ ವೈನಾಡು ಮತ್ತು ತಾಲೂಕಿನಾದ್ಯಂತ ಮುಂಗಾರು ಮಳೆ ಅಬ್ಬರ ಮತ್ತಷ್ಟು ಹೆಚ್ಚಾದ ಪರಿಣಾಮ ಕಬಿನಿ ಜಲಾಶಯದಿಂದ 1.50 ಲಕ್ಷ ಕ್ಯೂಸೆಕ್‌ ದಾಖಲೆ ಪ್ರಮಾಣದ ನೀರನ್ನು ಮುಂಭಾಗದ ನದಿಗೆ ಹರಿಸಲಾಗುತ್ತಿದೆ.

Advertisement

ಕಬಿನಿ ಮತ್ತು ತಾರಕ ಜಲಾಶಯ ಭರ್ತಿಯಾದ ಮರುದಿನವೇ ನುಗು ಮತ್ತು ಹೆಬ್ಬಳ್ಳ ಜಲಾಶಯಗಳು ಕೂಡ ಭರ್ತಿಯಾಗಿವೆ. ನುಗು ಜಲಾಶಯದಲ್ಲಿ ಸಂಗ್ರಹ ಮಟ್ಟ ಕಾಯ್ದುಕೊಂಡು ಡ್ಯಾಂನ ಸುರಕ್ಷತೆ ದೃಷ್ಟಿಯಿಂದ 10 ಸಾವಿರ ಕ್ಯೂಸೆಕ್‌ ನೀರನ್ನು ಹರಿಸಲಾಗುತ್ತಿದೆ.

1.50 ಲಕ್ಷ ಕ್ಯೂಸೆಕ್‌ ನೀರು ಹರಿವು: ಕಬಿನಿ ಡ್ಯಾಂನಿಂದ ಇತಿಹಾಸದಲ್ಲೇ ಮೊದಲ ಬಾರಿಗೆ 1.50 ಲಕ್ಷ ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗಿದೆ. ಜತೆಗೆ ವೈನಾಡು ಪ್ರದೇಶದಲ್ಲಿ ಮಳೆಯ ಪ್ರಮಾಣ ಮತ್ತಷ್ಟು ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ ರಾತ್ರಿ ವೇಳೆಗೆ ಹೊರ ಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ. ಕೇರಳದ ಬಾಣಾಸುರ ಡ್ಯಾಂ ಭರ್ತಿಯಾಗಿದ್ದು, ಇದರ ಜೊತೆಗೆ ಮತ್ತಷ್ಟು ಮಳೆ ಸುರಿಯುತ್ತಿರುವುದರಿಂದ 2 ಲಕ್ಷ ಕ್ಯೂಸೆಕ್‌ ನೀರು ಬಿಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಎಲ್ಲ್ಲಾ ಸೇತುವೆ ಮುಳುಗಡೆ: ಜಲಾಶಯ ಗರಿಷ್ಟ ಸಂಗ್ರಹ ಮಟ್ಟ 2284 ಅಡಿಗಳಿದ್ದು ಈಗಲೂ ಜಲಾಶಯದ ಹಿನ್ನೀರು ಮತ್ತು ಕೇರಳದ ವೈನಾಡು ಪ್ರದೇಶದಲ್ಲಿ ಹೆಚ್ಚಿನ ಮಳೆ ಅಬ್ಬರಿಸುತ್ತಿರುವುದರಿಂದ ಸಂಗ್ರಹ ಮಟ್ಟವನ್ನು 2281 ಅಡಿಗಳಿಗೆ ಕಾಯ್ದುಕೊಂಡು ಒಳ ಬರುತ್ತಿರುವ 1.50 ಲಕ್ಷ ಕ್ಯೂಸೆಕ್‌ ನೀರನ್ನು ಮುಂಭಾಗದ ನದಿಗೆ ಬಿಟ್ಟಿರುವುದರಿಂದ ಸರಗೂರು ಪಟ್ಟಣದಿಂದ ಎಚ್.ಡಿ.ಕೋಟೆ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ತುಂಬಸೋಗೆ ಸೇತುವೆ ಸೇರಿದಂತೆ ಕಪಿಲಾ ನದಿಗೆ ಅಡ್ಡಲಾಗಿ ಕಟ್ಟಲಾ ಗಿರುವ ಎಲ್ಲಾ ಸೇತುವೆಗಳು ಮುಳಗಡೆಯಾಗಿವೆ.

ಸಂಪರ್ಕ ಕಡಿತ: ತಾರಕ ಮತ್ತು ಕಪಿಲಾ ನದಿಗೆ ಕಟ್ಟಲಾಗಿರುವ ಎಲ್ಲಾ ಸೇತುವೆಗಳು ಮುಳುಗಡೆ ಯಾಗಿ ರುವುದರಿಂದ ಹತ್ತಾರೂ ಗ್ರಾಮಗಳಿಗೆ ಸಂಪರ್ಕ ಇಲ್ಲ ದಂತಾಗಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತ ಗೊಂಡಿದ್ದು, ಗ್ರಾಮಗಳ ಜನರು ಒಂದು ಕಡೆಯಿಂದ ಇನ್ನೊಂದು ಕಡೆಗೆ ತೆರಳಲು ಆಗದೆ ಮನೆಯಲ್ಲೇ ಕೂರುವಂತಾಗಿದೆ.

Advertisement

ಕ್ರಸ್ಟ್‌ಗೇಟ್‌ನಲ್ಲಿ ದೋಷ: ಕಬಿನಿಯಿಂದ 1.50 ಲಕ್ಷ ಕ್ಯೂಸೆಕ್‌ಗೂ ಅಧಿಕ ಪ್ರಮಾಣದ ನೀರನ್ನು ಹೊರಬಿಡುತ್ತಿದ್ದು, ಜಲಾಶಯ ಹೊಂದಿರುವ 4 ಕ್ರಸ್ಟ್‌ಗೇಟ್‌ಗಳಲ್ಲಿ ಮೊದಲ ಗೇಟ್‌ನ ಕಬ್ಬಿಣದ ವೈರ್‌ ತುಂಡಾಗಿ ಗೇಟ್ ದುರಸ್ತಿಯಾಗದ ಕಾರಣ ಜನರಲ್ಲಿ ಆತಂಕ ಸೃಷ್ಟಿಯಾಗಿತ್ತು.

ತಾರಕ ಡ್ಯಾಂನಿಂದ ನೀರು: ನಾರಹೊಳೆ ಹಾಗೂ ಸಾರಥಿಹೊಳೆ ಮತ್ತು ಕುಟ್ಟ ಅರಣ್ಯ ವಲಯದ ಕೊಡಗು ಭಾಗ ಸೇರಿದಂತೆ ತಾರಕ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಗರಿಷ್ಠ ಸಂಗ್ರಹ ಮಟ್ಟ 2425 (3.947 ಟಿಎಂಸಿ) ಅಡಿಗಳಷ್ಟಿದ್ದು, 5 ಅಡಿಗಳಷ್ಟು ಕಾಯ್ದುಕೊಂಡು ಒಳ ಹರಿದು ಬರುತ್ತಿರುವ 15 ಸಾವಿರಕ್ಕೂ ಹೆಚ್ಚು ಕ್ಯೂಸೆಕ್‌ಗೂ ಹೆಚ್ಚಿನ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಜಲಾಶಯದ ಮುಂಭಾಗದ ಸೇತುವೆ ಸೇರಿ ಎಚ್.ಡಿ.ಕೋಟೆ ಪಟ್ಟಣ ಹಾಗೂ ಆಲತಾಳಹುಂಡಿ, ಹೆಗ್ಗಡಾಪುರ, ಮೈಸೂರು ಮಾನಂದವಾಡಿ ರಸ್ತೆಯ ಎಚ್.ಮಟಕೆರೆ ಬಳಿಯ ದೊಡ್ಡ ಸೇತುವೆ ಮುಳುಗಡೆಯಾಗಿರುವುದರಿಂದ ಮೈಸೂರು ನಗರ, ಎಚ್.ಡಿ.ಕೋಟೆ ಸರಗೂರು ಪಟ್ಟಣ ಸೇರಿ ನೂರಾರು ಗ್ರಾಮಗಳ ಸಂಪರ್ಕ ಕಡಿತವಾಗಿದ್ದು, ಮಳೆಯ ರುದ್ರ ನರ್ತನಕ್ಕೆ ಜನರು ತತ್ತರಿಸಿ ಹೋಗಿದ್ದಾರೆ.

ನಗು ಜಲಾಶಯ ಭರ್ತಿ: ಕೇರಳದ ಮೂಲೆಹೊಳೆ ಮತ್ತು ಮುತ್ತಯ್ಯನ ಕೆರೆ ಹಾಗೂ ಬೆಲದಕುಪ್ಪೆ, ಕಲ್ಕರೆ ವನ್ಯಜೀವಿ ವಲಯದ ವ್ಯಾಪ್ತಿ ಪ್ರದೇಶದಲ್ಲಿ ಮುಂಗಾರು ಮಳೆ ಆರ್ಭಟಿಸಿದ್ದರಿಂದ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದು ಜಲಾಶಯ ಭರ್ತಿಯಾಗಿದೆ.

ಗರಿಷ್ಟ ಮಟ್ಟ 110 (4.2 ಟಿಎಂಸಿ) ಅಡಿಗಳಷ್ಟು ಸಂಗ್ರಹ ಸಾಮರ್ಥ್ಯವಿರುವ ನುಗು ಜಲಾಶಯಕ್ಕೆ 20 ಸಾವಿರ ಕ್ಯೂಸೆಕ್‌ಗೂ ಹೆಚ್ಚು ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಜಲಾಶಯದ ಸುರಕ್ಷತೆ ದೃಷ್ಟಿಯಿಂದ 9 ಅಡಿಗಳಷ್ಟು ಅಂತರ ಕಾಯ್ದುಕೊಂಡು ಮುಂಭಾಗದ ನದಿಗೆ 10 ಸಾವಿರ ಕ್ಯೂಸೆಕ್‌ ನೀರನ್ನು ಹರಿಸಲಾಗುತ್ತಿದೆ ಎಂದು ಜಲಾಶಯದ ಕಿರಿಯ ಇಂಜಿನಿಯರ್‌ ಶ್ರೀಪತಿ ‘ಉದಯವಾಣಿ’ಗೆ ತಿಳಿಸಿದ್ದಾರೆ.

ಡೀಸಿ, ಎಸ್‌ಪಿ ಭೇಟಿ: ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಿಷ್ಯಂತ್‌ ಎಲ್ಲಾ ಜಲಾಶಯ, ಪರಿಹಾರ ಕೇಂದ್ರ, ಮಳೆಹಾನಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹೆಬ್ಬಳ್ಳ ಜಲಾಶಯ ಭರ್ತಿ: 2311(1.42.ಟಿಎಂಸಿ) ಗರಿಷ್ಠ ಸಾಮರ್ಥ್ಯದ ಹೆಬ್ಬಳ ಜಲಾಶಯ ಕೂಡ ಭರ್ತಿಯಾಗಿದ್ದು, ಕೋಡಿ ಬಿದ್ದಿರುವುದರಿಂದ ಹೆಚ್ಚಿನ ನೀರು ಕೊಲ್ಲಿಗಳ ಮೂಲಕ ಹರಿದು ಮಟಕೆರೆ ಸಮೀಪದ ರಾಮಲಿಂಗೇಶ್ವರ ದೇವಸ್ಥಾನದ ಬಳಿ ಸಂಗಮವಾಗಿ ಕಬಿನಿ ನದಿ ಸೇರುತ್ತಿದೆ. ಹೆಬ್ಬಳ್ಳ ಜಲಾಶಯ ತುಂಬಿ ಕೋಡಿ ಬಿದ್ದರುವುದರಿಂದ ಎಚ್.ಮಟಕೆರೆ ಗ್ರಾಮದ ಸಮೀಪ ಮೈಸೂರು ಮಾನಂದವಾಡಿ ರಸ್ತೆಗೆ ಅಡ್ಡಲಾಗಿ ನಿರ್ಮಾಣವಾಗಿರುವ ತಾರಕ ಸೇತುವೆ ಮುಳುಗಡೆಯಾಗಿ ರಸ್ತೆ ತುಂಬಾ ನೀರು ಹರಿಯುತ್ತಿರುವುದರಿಂದ ಶುಕ್ರವಾರ ಬೆಳಿಗ್ಗೆಯಿಂದಲೇ ರಸ್ತೆ ಸಂಚಾರ ಸಂಪೂರ್ಣ ಕಡಿತಗೊಂಡಿರುವುದರಿಂದ ಪ್ರಯಾಣಿಕರ ಪಾಡು ಹೇಳತೀರದಾಗಿದೆ. ಒಟ್ಟಾರೆ ಕಾವೇರಿ ಕಣಿವೆಗೆ ಸೇರಿದ ತಾಲೂಕಿನ ಎಲ್ಲಾ 4 ಜಲಾಶಯಗಳು ಭರ್ತಿಯಾಗಿರುವುದರಿಂದ ರೈತಲ್ಲಿ ಹರ್ಷ ಮನೆ ಮಾಡಿದ್ದರೂ ಎಲ್ಲಾ ಡ್ಯಾಂಗಳಿಂದನೀರನ್ನು ಹೊರ ಬಿಡುತ್ತಿರುವುದರಿಂದ ಆತಂಕ ಸೃಷ್ಟಿಯಾಗಿದೆ.

● ಬಿ.ನಿಂಗಣ್ಣಕೋಟೆ

Advertisement

Udayavani is now on Telegram. Click here to join our channel and stay updated with the latest news.

Next