Advertisement

ವಿದ್ಯಾರ್ಥಿಗಳು ನಿರಂತರ ಗೈರು; ಮುಖ್ಯಶಿಕ್ಷಕರೇ ಎತ್ತಂಗಡಿ!

10:44 PM Jul 03, 2023 | Team Udayavani |

ಕಾಸರಗೋಡು: ಕಾಸರಗೋಡು ಜಿಲ್ಲೆಯ ಅಚ್ಚಗನ್ನಡ ಪ್ರದೇಶವಾದ ಅಡೂರಿನ ಸರಕಾರಿ ಹೈಯರ್‌ ಸೆಕೆಂಡರಿ ಶಾಲೆಯ ಕನ್ನಡ ವಿದ್ಯಾರ್ಥಿಗಳ ಹಾಗು ಪೋಷಕರ ಹೋರಾಟಕ್ಕೆ ಇಂದಿಗೆ ಸರಿಯಾಗಿ ಒಂದು ತಿಂಗಳು ತುಂಬಿದೆ.

Advertisement

ಕಳೆದ ಜೂನ್‌ 3 ರಂದು ಅಡೂರು ಶಾಲೆಯ ಕನ್ನಡ ಮಕ್ಕಳಿಗೆ ಸಮಾಜ ವಿಜ್ಞಾನ ಕಲಿಸಲು ಮಲಯಾಳಿ ಭಾಷೆಯ ಶಿಕ್ಷಕಿಯನ್ನು ಕೇರಳ ಸರಕಾರ ನೇಮಿಸಿದಾಗ ಕನ್ನಡಿಗ ವಿದ್ಯಾರ್ಥಿಗಳು ಅವರ ಪಾಠದ ಶೈಲಿಯ ಬಗ್ಗೆ ಆತಂಕ ವ್ಯಕ್ತಪಡಿಸಿ ಪ್ರತಿಭಟನೆಗೆ ಇಳಿದಿದ್ದರು. ಜೂ.3 ರ ಪ್ರತಿಭಟನೆಯಂದಾಗಿ ನೇಮಕವಾಗದೆ ತೆರಳಿದ್ದ ಶಿಕ್ಷಕಿಯು ಆದೂರು ಪೊಲೀಸರನ್ನು ಕರೆದುಕೊಂಡು ಬಂದು ನೇಮಕಗೊಳ್ಳಲು ಪ್ರಯತ್ನಿಸಿದರು. ಆದರೆ ಮುಖ್ಯ ಶಿಕ್ಷಕರು ಅಸ್ವಸ್ಥರಾದ ಹಿನ್ನೆಲೆಯಲ್ಲಿ ನೇಮಕಾತಿ ಸಾಧ್ಯವಾಗಿರಲಿಲ್ಲ. ಅನಂತರ ಜಿಲ್ಲಾಧಿಕಾರಿ ಸಹಿತ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಶಿಕ್ಷಕಿಯ ನೇಮಕಾತಿಯಿಂದಾಗುವ ಸಮಸ್ಯೆಗಳ ಬಗ್ಗೆ ಕನ್ನಡ ಪೋಷಕರು ಮನವರಿಕೆ ಮಾಡಿದ್ದರು. ಆದರೆ ಜೂ.16 ರಂದು ಏಕಾಏಕಿಯಾಗಿ ಶಾಲೆಗೆ ಆಗಮಿಸಿ, ನೇಮಕಾತಿ ಪಡೆದು ತರಗತಿಗೆ ಮಲಯಾಳಿ ಭಾಷೆಯ ಶಿಕ್ಷಕಿಯು ತೆರಳಿದಾಗಲೇ ಕನ್ನಡ ಮಕ್ಕಳ ಹಾಗು ಪೋಷಕರ ಅಸಮಾಧಾನ ಕಟ್ಟೆಯೊಡೆದಿತ್ತು. ಆ ನಂತರ ಕನ್ನಡದ ಮಕ್ಕಳು ಮಲಯಾಳಿ ಶಿಕ್ಷಕಿಯ ಪಾಠ ಅರ್ಥವಾಗುತ್ತಿಲ್ಲ ಎಂದು ನಿರಂತರವಾಗಿ ತರಗತಿ ಬಹಿಷ್ಕರಿಸುತ್ತಿದ್ದಾರೆ. ಆದರೂ ಕೂಡಾ ಕೇರಳ ಸರಕಾರ ಮಕ್ಕಳ ಹಿತರಕ್ಷಣೆಯ ಬಗ್ಗೆ ಚಿಂತಿಸುತ್ತಿಲ್ಲ ಎಂದು ಪೋಷಕರು ದೂರಿದ್ದಾರೆ.

ಈ ಮಕ್ಕಳಿಗೆ ಕಳೆದ ಒಂದು ತಿಂಗಳಿನಿಂದ ಸಮಾಜ ವಿಜ್ಞಾನ ತರಗತಿಗಳು ನಡೆಯುತ್ತಿಲ್ಲ, ಮಲಯಾಳಿ ಶಿಕ್ಷಕಿಯ ಪಾಠ ಕೇಳಲು ಮಕ್ಕಳು ಸಿದ್ಧರಾಗುತ್ತಿಲ್ಲ. ಮಕ್ಕಳಿಗೆ ಮಾತೃ ಭಾಷಾ ಶಿಕ್ಷಣವನ್ನು ನೀಡುವ ಜವಾಬ್ದಾರಿಯಿರುವ ಕೇರಳ ಸರಕಾರದ ಈಗಿನ ನಿಲುವಿನ ಬಗ್ಗೆ ಸಾರ್ವತ್ರಿಕವಾಗಿ ಅಸಮಾಧಾನ ಕೇಳಿ ಬಂದಿದೆ.

ಮಕ್ಕಳಿಂದ ತರಗತಿ ಬಹಿಷ್ಕಾರ : ಕಳೆದ ಸುಮಾರು 15 ದಿನಗಳಿಂದ ಮಲಯಾಳಿ ಶಿಕ್ಷಕಿಯು ಕನ್ನಡ ತರಗತಿಗೆ ಪಾಠಕ್ಕೆ ಬಂದಾಗ ಸುಮಾರು 200 ಮಂದಿ ಕನ್ನಡದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಹೊರ ನಡೆಯುತ್ತಾರೆ. ಮಲಯಾಳಿ ಶಿಕ್ಷಕಿಯ ಪಾಠ ಬೇಡವೇ ಬೇಡ. ನಮಗೆ ಕನ್ನಡ ಶಿಕ್ಷಕರನ್ನು ನೀಡಿ ಎಂಬ ಮಕ್ಕಳ ಆರ್ತನಾದಕ್ಕೆ ಕೇರಳ ಸರಕಾರ ಇನ್ನೂ ಸ್ಪಂದಿಸಿಲ್ಲ. ಈಗಾಗಲೇ ಈ ವರ್ಷದ ಶೈಕ್ಷಣಿಕ ಅವಧಿಯ ಒಂದು ತಿಂಗಳು ಮುಗಿದಿರುವುದರಿಂದ ಕನ್ನಡ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಕೇರಳ ಸರಕಾರ ಚೆಲ್ಲಾಟವಾಡಬಾರದು ಎಂದು ಪೋಷಕರು ಮನವಿ ಮಾಡಿದ್ದಾರೆ.

ಮುಖ್ಯ ಶಿಕ್ಷಕರ ವರ್ಗ : ಮಲಯಾಳ ಭಾಷೆಯ ಶಿಕ್ಷಕಿಯ ನೇಮಕಾತಿಯ ವಿಚಾರದಲ್ಲಿ ವಿಳಂಬ ಧೋರಣೆ ಅನುಸರಿಸಿದ ಹಾಗು ಕನ್ನಡ ವಿದ್ಯಾರ್ಥಿಗಳು ಹಾಗು ಪೋಷಕರ ಪ್ರತಿಭಟನೆಯ ಸಂದರ್ಭದಲ್ಲಿ ಮಲಯಾಳ ಶಿಕ್ಷಕಿಗೆ ಪೊಲೀಸ್‌ ಭದ್ರತೆ ನೀಡದ ಕಾರಣದಿಂದ ಅಡೂರು ಸರಕಾರಿ ಹೈಯರ್‌ ಸೆಕೆಂಡರಿ ಶಾಲೆಯ ಮುಖ್ಯ ಶಿಕ್ಷಕರನ್ನು ವಯನಾಡಿನ ಸರಕಾರಿ ಹೈಸ್ಕೂಲಿಗೆ ವರ್ಗಾವಣೆ ಮಾಡಲಾಗಿದೆ. ಜೂ.30 ರಂದು ಅವರು ವಯನಾಡು ಸರಕಾರಿ ಶಾಲೆಯಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ. ಮಲಯಾಳಿ ಶಿಕ್ಷಕಿಯನ್ನು ವರ್ಗಾವಣೆ ಮಾಡದೆ, ಮುಖ್ಯ ಶಿಕ್ಷಕರನ್ನೇ ವರ್ಗಾವಣೆ ಮಾಡಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಹೈಕೋರ್ಟ್‌ ಮೆಟ್ಟಲೇರಿದ ವಿವಾದ : ಇದೀಗ ಮಲಯಾಳಿ ಶಿಕ್ಷಕಿಯ ನೇಮಕಾತಿಯಿಂದಾಗಿ ಕನ್ನಡಿಗ ಮಕ್ಕಳು ಮಾತೃ ಭಾಷಾ ಶಿಕ್ಷಣದಿಂದ ವಂಚಿರಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿಕೊಂಡೆ ಅಡೂರಿನ ಕನ್ನಡಿಗ ಪೋಷಕರು ಕನ್ನಡ ಹೋರಾಟ ಕ್ರಿಯಾ ಸಮಿತಿಯನ್ನು ರಚಿಸಿಕೊಂಡು ಹೈಕೋರ್ಟ್‌ ಮೆಟ್ಟಲೇರಿದ್ದಾರೆ. ಇದೀಗ ಕಾಸರಗೋಡಿನ ಕನ್ನಡ ಪರ ಸಂಘಟನೆಗಳು, ಕರ್ನಾಟಕ ಸರಕಾರ ಹಾಗು ಸಾರ್ವತ್ರಿಕವಾಗಿ ಕನ್ನಡ ಭಾಷಾಭಿಮಾನಿಗಳು ಅಡೂರಿನ ಕನ್ನಡಿಗ ಮಕ್ಕಳಿಗೆ ಶಕ್ತಿಯಾಗಬೇಕಾಗಿದೆ. ಕನ್ನಡ ವಿದ್ಯಾರ್ಥಿಗಳಿಗೆ ಮಲಯಾಳಿ ಶಿಕ್ಷಕಿ ಪಾಠ ಮಾಡುವ ಶಿಫಾರಸ್ಸನೇ ತಿದ್ದುಪಡಿ ಮಾಡಬೇಕಾಗಿದೆ. ವಿವಾದ ಬಗೆಹರಿಯದಲ್ಲಿ ನೇಮಕವಾದ ಮಲಯಾಳಿ ಶಿಕ್ಷಕಿಯಾಗಲೀ, ಕೇರಳ ಸರಕಾರಕ್ಕಾಗಲೀ ಯಾವುದೇ ನಷ್ಟವಿಲ್ಲ. ಸರಕಾರಿ ಶಾಲೆಯಲ್ಲಿ ಕಲಿಯಲೆಂದು ಬಂದ ಕನ್ನಡದ ಮಕ್ಕಳ ಭವಿಷ್ಯ ಮಾತ್ರ ಭಾರೀ ಅಪಾಯಕ್ಕೆ ಸಿಲುಕಬಹುದು ಎಂದು ಪೋಷಕರು ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next