Advertisement

ಬೆಂಗಳೂರಲ್ಲಿ ಸ್ವಪ್ನಾ ಪತ್ತೆಯಾಗಿದ್ದು ಹೇಗೆ?

02:25 AM Jul 13, 2020 | Hari Prasad |

ಪಾಲಕ್ಕಾಡ್‌/ಕೊಚ್ಚಿ: ತೀವ್ರ ಕುತೂಹಲ ಕೆರಳಿಸಿದ್ದ ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿಗಳಾದ ಸ್ವಪ್ನಾ ಹಾಗೂ ಸಂದೀಪ್‌ ಪತ್ತೆಯಾಗಿದ್ದರ ಹಿಂದೆ ಎರಡು ಕುತೂಹಲಕಾರಿ ಕಥೆಗಳಿವೆ.

Advertisement

ಜು. 4ರಂದು ಪ್ರಕರಣ ಹೊರಬರುತ್ತಲೇ ನಾಪತ್ತೆಯಾಗಿದ್ದ ಸ್ವಪ್ನಾ ಸುರೇಶ್‌ ಹಾಗೂ ಸಂದೀಪ್‌ ಬಂಧನಕ್ಕೊಳಗಾಗಿರುವುದು ಜು. 11ರ ರಾತ್ರಿ 7 ಗಂಟೆಗೆ.

ಆರಂಭದಲ್ಲಿ ಅನೇಕ ತನಿಖಾಧಿಕಾರಿಗಳು ಸ್ವಪ್ನಾ ಹಾಗೂ ಸಂದೀಪ್‌ ಕೇರಳದ ಕೊಚ್ಚಿಯಲ್ಲೇ ಇರಬಹುದು ಎಂದು ಶಂಕಿಸಿದ್ದರು.

ಆದರೆ ಕೆಲವರು ಮಾತ್ರ ಅವರಿಬ್ಬರೂ ಹೊರರಾಜ್ಯಗಳಿಗೆ ಪಲಾಯನ ಮಾಡಿರಬಹುದು ಎಂದು ಊಹಿಸಿದ್ದರು. ಕೊನೆಗೆ ಆ ಊಹೆಯೇ ನಿಜವಾಯಿತು. ಅಷ್ಟಕ್ಕೂ ಅವರಿಬ್ಬರೂ ಪತ್ತೆಯಾಗಿದ್ದೇ ಒಂದು ಕುತೂಹಲಕಾರಿ ಕಥೆ.

ಇದೇ ಪ್ರಕರಣದ ಬೆನ್ನು ಹತ್ತಿದ್ದ ಕಸ್ಟಮ್ಸ್‌ ಅಧಿಕಾರಿಗಳು, ಜು. 10ರಂದು ಸಂದೀಪ್‌ನ ಸಹೋದರನ ಮನೆಯ ಮೇಲೆ ದಾಳಿ ನಡೆಸಿದ್ದರು. ಅದೇ ಸಮಯದಲ್ಲಿ ಸಂದೀಪ್‌ ಸಹೋದರನ ಮೊಬೈಲಿಗೆ, ಆ ಮೊಬೈಲಿನಲ್ಲಿ ಸೇವ್‌ ಆಗಿರದ ಸಂಖ್ಯೆಯೊಂದರಿಂದ ಫೋನ್‌ ಕರೆ ಬಂದಿತ್ತು. ಆ ಕರೆಯನ್ನು ಅಧಿಕಾರಿಗಳೇ ಸ್ವೀಕರಿಸಿದ್ದರು. ಆ ಕರೆಯ ತನಿಖೆ ನಡೆಸಿದಾಗ ಅದು ಸಂದೀಪ್‌ನದ್ದೇ ಕರೆ ಎಂಬುದು ಗೊತ್ತಾಗಿತ್ತು.

Advertisement

ಆಗ ಆ ಕರೆಯ ಜಾಡು ಹಿಡಿದ ಅಧಿಕಾರಿಗಳಿಗೆ ಸಂದೀಪ್‌ ಬೆಂಗಳೂರಿನಲ್ಲಿ ಇರುವುದು ತಿಳಿದುಬಂದಿತ್ತು.
ಇನ್ನು ಸ್ವಪ್ನಾ ಅವರು ಬೆಂಗಳೂರಿನಲ್ಲೇ ಇರುವುದು ತಿಳಿದಿದ್ದು ಹೇಗೆಂದರೆ ವಾರದಿಂದ ಸ್ವಿಚ್‌ ಆಫ್ ಆಗಿದ್ದ ಸ್ವಪ್ನಾರ ಮೊಬೈಲನ್ನು ಶನಿವಾರ ಅಪರಾಹ್ನ ಆಕೆಯ ಮಗಳು ಆನ್‌ ಮಾಡಿದ್ದಳು. ಆಗ ಸಿಗ್ನಲ್‌ ಕ್ಯಾಚ್‌ ಆದ ಕೂಡಲೇ ಅದರ ಲೊಕೇಶನ್‌ ವಿವರಗಳನ್ನು NIA ಅಧಿಕಾರಿಗಳು ಹೈದರಾಬಾದ್‌ನಲ್ಲಿರುವ ತಮ್ಮ ವಿಭಾಗಕ್ಕೆ ತಲುಪಿಸಿದರು.

ತತ್‌ಕ್ಷಣವೇ ಕಾರ್ಯೋನ್ಮುಖರಾದ ಅಧಿಕಾರಿಗಳ ತಂಡ, ಬೆಂಗಳೂರಿಗೆ ಬಂದು ಆಕೆಯನ್ನು ವಶಕ್ಕೆ ಪಡೆಯಿತು.
ಕೇರಳಕ್ಕೆ ಬಂದ ಆರೋಪಿಗಳು: ಆರೋಪಿಗಳನ್ನು ವಶಕ್ಕೆ ಪಡೆದ ಅನಂತರ ಕೇರಳಕ್ಕೆ ಪ್ರಯಾಣಿಸಿದ್ದ ಎನ್‌ಐಎ ವಾಹನಗಳು, ರವಿವಾರ ಬೆಳಗ್ಗೆ 11 ಗಂಟೆಗೆ ಕೇರಳ ಗಡಿಯನ್ನು ಪ್ರವೇಶಿಸಿದವು. ಕೇರಳ ಗಡಿ ದಾಟುತ್ತಲೇ ಕೆಲವು ಜಾಗಗಳಲ್ಲಿ ಕೇರಳ ಕಾಂಗ್ರೆಸ್‌ ಕಾರ್ಯಕರ್ತರು, ದಾರಿಯ ಇಕ್ಕೆಲಗಳಲ್ಲಿ ಪ್ರತಿಭಟನಾ ಘೋಷಣೆಗಳನ್ನು ಕೂಗಿದರು.

ಅಪರಾಹ್ನ ಆರೋಪಿಗಳನ್ನು ಅಲುವಾದಲ್ಲಿರುವ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಅವರ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಅನಂತರ ಎನ್‌ಐಎ ಕಚೇರಿಯಲ್ಲಿ ಇಬ್ಬರನ್ನು ವಿಚಾರಣೆಗೆ ಒಳಪಡಿಸಲಾಯಿತು. ವಿಶೇಷ ಕೋರ್ಟ್‌ ಮುಂದೆ ಹಾಜರುಪಡಿಸಿದಾಗ ಹತ್ತು ದಿನಗಳ ಕಾಲ ವಶಕ್ಕೆ ಒಪ್ಪಿಸಬೇಕೆಂದು ಎನ್‌ಐಎ ಮನವಿ ಮಾಡಿತು. ಕೋರ್ಟ್‌ ಅವರಿಬ್ಬರನ್ನು ಮೂರು ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಿ ಆದೇಶ ನೀಡಿತು. ಸೋಮವಾರ ಮತ್ತೆ ವಿಚಾರಣೆ ಮುಂದುವರಿಯಲಿದೆ. ಸ್ವಪ್ನಾ ಸುರೇಶ್‌ಳನ್ನು ಕೋವಿಡ್ 19 ಕೇಂದ್ರಕ್ಕೆ ಕರೆದೊಯ್ಯಲಾಗಿದೆ.

ಪಂಕ್ಚರ್‌: ಆರಂಭದಲ್ಲಿ ಸ್ವಪ್ನಾ ಸುರೇಶ್‌ ಹಾಗೂ ಸಂದೀಪ್‌ ಅವರನ್ನು ಪ್ರತ್ಯೇಕ ಕಾರುಗಳಲ್ಲಿ ಕರೆದೊಯ್ಯಲಾಗುತ್ತಿತ್ತು. ಆದರೆ ತೃಶೂರ್‌ ಜಿಲ್ಲೆಯ ಗಡಿ ದಾಟಿದ ಅನಂತರ ವಡಕ್ಕಚೇರಿ ಬಳಿ ಸಂದೀಪ್‌ ಹಾಗೂ ಇನ್ನಿತರ ಅಧಿಕಾರಿಗಳು ಇದ್ದ ಕಾರಿನ ಚಕ್ರ ವೊಂದು ಪಂಕ್ಚರ್‌ ಆಯಿತು. ಆಗ ಕಾರು ನಿಲ್ಲಿಸಿದ ಅಧಿಕಾರಿಗಳು ಸಂದೀಪ್‌ನನ್ನು ಸ್ವಪ್ನಾ ಇದ್ದ ಕಾರಿನಲ್ಲಿ ಹತ್ತಿಸಿ ಪ್ರಯಾಣ ಮುಂದುವರಿಸಿದರು.

ಬೆಂಗಳೂರಿಗೆ ಹೇಗೆ ಹೋದರು?
ಇವರು ತಿರುವನಂತಪುರದಲ್ಲಿ ತ್ರಿಬಲ್‌ ಲಾಕ್‌ಡೌನ್‌ ಇದ್ದಾಗಲೂ ಹೇಗೆ ತಪ್ಪಿಸಿಕೊಂಡು ಬೆಂಗಳೂರಿಗೆ ಹೋದರು ಎನ್ನುವುದು ಚರ್ಚೆಯ ವಿಷಯವಾಗಿದೆ. ಎನ್‌ಐಎ ಅಧಿಕಾರಿಗಳ ಪ್ರಕಾರ, ರಸ್ತೆ ಮಾರ್ಗದಲ್ಲಿ ಬಂದಿರಬಹುದು ಎನ್ನಲಾಗಿದೆ. ಬೆಂಗಳೂರಿನಿಂದ ನಾಗಾಲ್ಯಾಂಡ್‌ಗೆ ತಪ್ಪಿಸಿಕೊಂಡು ಹೋಗುವ ಸಂಚು ಇವರದ್ದಾಗಿತ್ತು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next