Advertisement

ಮತ್ತೆ ‘ಅ’ದಿಂದಲೇ ಆರಂಭವಾಗಬೇಕಿದೆ ಬದುಕು

09:26 AM Aug 27, 2018 | |

ಕೊಚ್ಚಿ: “ಜೀವನದ 70 ವರ್ಷಗಳನ್ನು ಒಂದು ಮನೆ ಕಟ್ಟಲು ಹಾಗೂ ಮೂರು ಹೊತ್ತಿನ ಊಟ ಸಂಪಾದಿಸಲು ವ್ಯಯಿಸಿದ್ದೇನೆ. ಹುಟ್ಟುತ್ತಲೇ ಬುದ್ಧಿಮಾಂದ್ಯಳಾದ ಮಗಳನ್ನು ಸಾಕುವ ಸವಾಲಿನ ಹಾದಿಯಲ್ಲಿ ಪತಿಯನ್ನು ಕಳೆದುಕೊಂಡೆ. ಈಗ ನನಗೆ 97 ವರ್ಷ. ಇಷ್ಟು ವರ್ಷ ಕಷ್ಟಪಟ್ಟು ಕಟ್ಟಿದ್ದೆಲ್ಲವೂ ಈಗ ಮುರಿದು ಬಿದ್ದಿದೆ. ಈಗ ಮತ್ತೆ ಶುರುವಿಂದಲೇ ಆರಂಭಿಸಬೇಕಾಗಿದೆ.  

Advertisement

ಕೊಚ್ಚಿಯ ಆಂಡಿಪಿಲ್ಲಿಕಾವು ನಿರಾಶ್ರಿತರ ಕೇಂದ್ರದಲ್ಲಿರುವ ಚೆಟ್ಟೇರಿಯ ಸುಮತಿ ಹೇಳಿದ್ದಿದು. ಮದುವೆಯಾದ ಬಳಿಕ ಸಂಬಂಧಿಕರಿಂದ ದೂರವಾಗಿ ಗಂಡನೊಂದಿಗೆ ಬಡತನದಲ್ಲೇ ಬದುಕು ತೂಗಿಸುತ್ತಿದ್ದೆ. ಕೆಲವೇ ವರ್ಷಗಳಲ್ಲಿ ಪತಿ ಇಲ್ಲವಾದರು. ಜತೆಗಿದ್ದದ್ದು ಇಬ್ಬರು ಹೆಣ್ಣುಮಕ್ಕಳು. ಹಣ ಇಲ್ಲ ಎನ್ನುವ ಕಾರಣಕ್ಕೆ ಬುದ್ಧಿಮಾಂದ್ಯ ಮಗಳಿಗೆ ಚಿಕಿತ್ಸೆ, ಮದುವೆ ಯಾವುದೂ ಮಾಡಿಲ್ಲ. ಕೂಡಿಟ್ಟ ಹಣ ಹಾಗೂ ದಾನಿಗಳ ನೆರವಿನಿಂದ ಕಟ್ಟಿದ ಪುಟ್ಟ ಮನೆಯೂ ಇಂದು ಇಲ್ಲವಾಗಿದೆ ಎಂದು ಕಣ್ಣೀರಾದರು ಆಕೆ. ಪಿಂಚಣಿ ಹಣದಲ್ಲಿ ಜೀವನ ನಡೆಸುತ್ತಿದ್ದ ಇವರೀಗ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.  ಮತ್ತೆ ಶೂನ್ಯದಿಂದ ಬದುಕು ಆರಂಭಿಸಬೇಕಾದ ಸ್ಥಿತಿ ಈ ಹಿರಿಜೀವವನ್ನು ತತ್ತರಗೊಳಿಸಿದೆ.

ರಿಟ್ರೇಟ್‌ ಸೆಂಟರ್‌ಗೆ ಹಾನಿ


ಇತಿಹಾಸ ಪ್ರಸಿದ್ಧ ಕ್ರೈಸ್ತರ ಪ್ರಾರ್ಥನಾ ಮಂದಿರ ಪೊಟ್ಟಂ ಡಿವೈನ್‌ ರಿಟ್ರೇಟ್‌ ಸೆಂಟರ್‌ಗೆ ಹಾನಿಯಾಗಿದೆ. ಸೆಂಟರ್‌ ಆವರಣದಲ್ಲಿ ಕಾರ್ಯಾಚರಿಸುತ್ತಿದ್ದ ಮುದ್ರಣಾಲಯ ಹಾಗೂ ದಾಸ್ತಾನು ಕೇಂದ್ರದಲ್ಲಿದ್ದ ಕೋಟ್ಯಂತರ ರೂ. ಮೌಲ್ಯದ ಕ್ರೈಸ್ತರ ಧಾರ್ಮಿಕ ಗ್ರಂಥಗಳು ಸಂಪೂರ್ಣ ಹಾಳಾಗಿವೆ. ಇದನ್ನು ತೆರವುಗೊಳಿಸುವ ಕಾರ್ಯದಲ್ಲಿ ಯೋಧರು ಹಾಗೂ ಪೊಲೀಸರು ತೊಡಗಿದ್ದಾರೆ. ಸಂಸ್ಥೆಯ ಡೈರಿ ಫಾರಂನಲ್ಲಿದ್ದ ನೂರಾರು ಜಾನುವಾರುಗಳು ನೆರೆಗೆ ಬಲಿಯಾಗಿದ್ದವು.

ಟೋಲ್‌ಗ‌ಳೆಲ್ಲ ಬಂದ್‌
ಕೇರಳದ ಹೆದ್ದಾರಿಗಳಲ್ಲಿ ಸದ್ಯ ಟೋಲ್‌ ಸಂಗ್ರಹ ಸ್ಥಗಿತ ಮಾಡಲಾಗಿದೆ. ಇತರ ರಾಜ್ಯಗಳಿಂದ ಅಥವಾ ರಾಜ್ಯದ ಇತರೆಡೆಗಳಿಂದ ನೆರೆ ಪೀಡಿತ ಭಾಗಗಳಿಗೆ ಸಹಾಯ ಮಾಡಲು ಬರುವ ಜನರಿಗೆ ಹೊರೆ ಆಗಬಾರದು ಎಂಬ ನೆಲೆಯಲ್ಲಿ ಟೋಲ್‌ ಸಂಗ್ರಹಕ್ಕೆ ಸುಂಕ ಸಂಗ್ರಹ ಮಾಡುತ್ತಿಲ್ಲ.  

ಮತ್ತೆ ಬದುಕು ಕಟ್ಟಿಕೊಳ್ಳುವ ಶ್ರಮ
ನೆರೆ ಪೀಡಿತ ಪ್ರದೇಶದ ಜನರು ವಾರಗಳ ಬಳಿಕ ರೂಢಿಯ ಜೀವನ, ವ್ಯಾಪಾರ ವಹಿವಾಟಿನತ್ತ ಮುಖ ಮಾಡಿದ್ದಾರೆ. ರಸ್ತೆ ಬದಿಯಲ್ಲಿ ಮನೆ ಸಾಮಗ್ರಿ, ಪೀಠೊಪಕರಣಗಳು, ಬಟ್ಟಬರೆ, ಪುಸ್ತಕ, ದಾಖಲೆ, ಎಲೆಕ್ಟ್ರಾನಿಕ್‌ ವಸ್ತುಗಳನ್ನು ಬಿಸಿಲಿಗೆ ಹಾಕಿ ತೇವ ಆರಿಸುವ ದೃಶ್ಯ ಎಲ್ಲೆಲ್ಲೂ ಕಾಣುತ್ತಿವೆ.

Advertisement

ಸೈನಿಕರಿಂದ ಕೇರಳದ ಪುನರುತ್ಥಾನ
ಎರ್ನಾಕುಲಂ: ನೆರೆಯಿಂದ ತತ್ತರಿಸಿದ ಕೇರಳ ಮತ್ತೆ ಎದ್ದು ನಿಲ್ಲಲು ಹವಣಿಸುತ್ತಿದೆ. ವಾರಗಳ ಬಳಿಕ ಸಂಘ ಸಂಸ್ಥೆಗಳ ನೆರವಿನಿಂದ ಮನೆ ಶುಚಿ, ಇತರ ಕಾರ್ಯಗಳು ಆರಂಭಗೊಂಡಿವೆ. ಇದಕ್ಕೆ ಯೋಧರೂ ಬೆನ್ನೆಲುಬಾಗಿದ್ದಾರೆ. ಮನೆ ಕಳೆದುಕೊಂಡ ಹಾಗೂ ಮನೆಗೆ ಹಾನಿ ಸಂಭವಿಸಿದ ಜನರಿಗೆ ಮೂಲಸೌಲಭ್ಯ ಸಿಗುವ ವರೆಗೆ ಪರಿಹಾರ ಕೇಂದ್ರದಲ್ಲೇ ವಾಸ್ತವ್ಯ ಕಲ್ಪಿಸುವ ಭರವಸೆಯನ್ನು ಕೇರಳ ಸರಕಾರ ನೀಡಿದೆ. ಮನೆ ತುಂಬೆಲ್ಲ ಆವರಿಸಿರುವ ಕೆಸರು ಶುಚಿ ಮಾಡಿ ಸಹಜ ಸ್ಥಿತಿಯತ್ತ ಬರುವ ವರೆಗೆ ನೆರವಿಗೆ ಸ್ಥಳೀಯ ಆಡಳಿತ ಸಂಸ್ಥೆ ಪಣ ತೊಟ್ಟಿದೆ.

ತತ್ತರಿಸಿದ ನೆರೆಗೆ  ಕೊಡೆ ಹಿಡಿದ ಜಿಎಸ್‌ಬಿ
ಅಲುವಾ: ಮಹಾಮಳೆಗೆ ಕೇರಳ ಅಕ್ಷರಶಃ ತತ್ತರಿಸಿ ಹೋಗಿರುವ ಸಂದರ್ಭದಲ್ಲಿ ಬೇರೆ ಬೇರೆ ಭಾಗಗಳಿಂದ ಸಂಘ ಸಂಸ್ಥೆಗಳು ವಿವಿಧ ರೀತಿಯಲ್ಲಿ ಕೇರಳಕ್ಕೆ ಸ್ಪಂದಿಸಿವೆ. ಈ ಪೈಕಿ ಸೇವಾ ಭಾರತಿಯ ಶ್ರಮ ಉಲ್ಲೇಖನೀಯ.ಅಲುವಾ ಪ್ರದೇಶದ ಜಿಎಸ್‌ಬಿ ಕೇಂದ್ರದಲ್ಲಿ ಆ. 16ರಂದು ಸುಮಾರು 260 ಮಂದಿಗೆ ನೆರವು ನೀಡಲಾಗಿತ್ತು. ನೆರೆ ನೀರು ಜಿಎಸ್‌ಬಿ ಕೇಂದ್ರದ ಒಳಭಾಗಕ್ಕೆ ಮುನ್ನುಗ್ಗುವಾಗಲೂ ಕಾರ್ಯಕರ್ತರು ನಿರಾಶ್ರಿತರ ರಕ್ಷಣೆಗೆ ಬದ್ಧರಾಗಿದ್ದರು. ಜಾತಿಧರ್ಮ ನೋಡದೆ ಸೇವಾ ಭಾರತಿ ಹಾಗೂ ಜಿಎಸ್‌ಬಿ ಸಮುದಾಯ ನಿರಾಶ್ರಿತರಿಗೆ ಸಹಾಯ ಮಾಡಿದೆ ಎಂದು “ಸೇವಾಭಾರತಿ’ಯ ದಿವಾಕರ್‌ ಶೆಣೈ ಹೇಳುತ್ತಾರೆ.

ನೆರೆಗೆ ಮುಳುಗಿದ ಬಳಿಕ ಈಗ ಮೈದಾನವೇ ಆಸ್ಪತ್ರೆ!
ಕೊಚ್ಚಿಯ ಚಾಲಕ್ಕುಡಿ ಸರಕಾರಿ ಆಸ್ಪತ್ರೆಗೆ ನೆರೆ ನೀರು ನುಗ್ಗಿ ಅವಾಂತರ ಆಗಿತ್ತು. ಈಗ ನೆರೆ ನೀರು ಕಡಿಮೆಯಾಗಿದೆ. ಆದರೆ ಆಸ್ಪತ್ರೆಯ ವೈದ್ಯಕೀಯ ಉಪಕರಣ, ವಸ್ತು, ಔಷಧಗಳು ನೆರೆ ನೀರಿನಲ್ಲಿ ತೋಯ್ದಿವೆ. ರವಿವಾರ ಆಸ್ಪತ್ರೆಯ ಮುಂಭಾಗದಲ್ಲಿರುವ ಮೈದಾನದಲ್ಲಿ ಆಸ್ಪತ್ರೆ ಪೀಠೊಪಕರಣ, ದಾಖಲೆಗಳು, ಉಪಕರಣಗಳು, ಔಷಧಗಳನ್ನು ಹರವಿ ಒಣಗಿಸುವ ಪ್ರಯತ್ನ ಮಾಡಲಾಯಿತು.  ಹೀಗಾಗಿ ಮೈದಾನವೇ ಆಸ್ಪತ್ರೆಯಂತೆ ಭಾಸವಾಗುತ್ತಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ವೈದ್ಯಕೀಯ ಉಪಕರಣಗಳು, ಔಷಧಗಳ ರಾಶಿ ಮೈದಾನದಲ್ಲಿದೆ. ಆಸ್ಪತ್ರೆ ಕಟ್ಟಡದ ಒಳಭಾಗದಲ್ಲಿ ಇನ್ನೂ ನೀರು ಇದೆ. ಪೊಲೀಸ್‌ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಒಣಗಿಸುವ ಕೆಲಸಕ್ಕೆ ಕೈಜೋಡಿಸಿದ್ದಾರೆ. ಸದ್ಯ ಈ ಸರಕಾರಿ ಆಸ್ಪತ್ರೆ ಜನ ಬಳಕೆಗೆ ಲಭ್ಯವಿಲ್ಲ.

ನೋಡುತ್ತಿದ್ದಂತೆಯೇ ಆಸ್ಪತ್ರೆಯಲ್ಲಿ ನೀರು ತುಂಬ ತೊಡಗಿತು. ಅಲ್ಲಿ ಗರ್ಭಿಣಿಯರು ಸೇರಿದಂತೆ 140 ಮಂದಿ ರೋಗಿಗಳಿದ್ದರು. ಬಳಿಕ ಎಲ್ಲರೊಂದಿಗೆ ಆಸ್ಪತ್ರೆಯ ಮೇಲ್ಛಾವಣಿಗೆ ತೆರಳಿದೆವು. ಯೋಧರು ಬಂದು ದೋಣಿಗಳಲ್ಲಿ ಎಲ್ಲರನ್ನೂ ಬೇರೆಡೆಗೆ ರವಾನಿಸಿದರು.
ಸಿಜೋಯ್‌, ಆಸ್ಪತ್ರೆ ಸಿಬಂದಿ

Advertisement

Udayavani is now on Telegram. Click here to join our channel and stay updated with the latest news.

Next