Advertisement

ಕಾನೂನು-ಸುವ್ಯವಸ್ಥೆ ಪಾಲನೆಗಿರಲಿ ಸರಕಾರದ ಮೊದಲ ಆದ್ಯತೆ

11:32 PM May 19, 2023 | Team Udayavani |

ರಾಜ್ಯ ವಿಧಾನಸಭೆ ಚುನಾವಣೆ ಫ‌ಲಿತಾಂಶ ಪ್ರಕಟವಾಗಿ ವಾರ ಕಳೆದಿದೆ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಸಿದ್ದರಾಮಯ್ಯ ಅವರು ಶನಿವಾರದಂದು ರಾಜ್ಯದ ಹೊಸ ಮುಖ್ಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹೊಸ ಸರಕಾರದ ಮುಂದೆ ಹತ್ತು ಹಲವು ಸವಾಲುಗಳಿದ್ದು ಇವೆಲ್ಲವನ್ನೂ ಸಮರ್ಥವಾಗಿ ಎದುರಿಸುವ ದಿಟ್ಟತನವನ್ನು ಸಿದ್ದರಾಮಯ್ಯ ಮತ್ತವರ ತಂಡ ಪ್ರದರ್ಶಿ ಸಬೇಕಿದೆ. ಎಲ್ಲದಕ್ಕಿಂತ ಮುಖ್ಯವಾಗಿ ರಾಜ್ಯದ ಕಾನೂನು- ಸುವ್ಯ ವಸ್ಥೆಯ ಪಾಲನೆಯ ವಿಚಾರದಲ್ಲಿ ನೂತನ ಸರಕಾರ ಒಂದಿಷ್ಟು ಎಚ್ಚರಿಕೆಯ ಮತ್ತು ಜಾಣ್ಮೆಯ ನಡೆಯನ್ನು ಇರಿಸುವುದು ಪ್ರಸಕ್ತ ಸನ್ನಿವೇಶದಲ್ಲಿ ಅನಿವಾರ್ಯವಾಗಿದೆ.

Advertisement

ಫ‌ಲಿತಾಂಶ ಪ್ರಕಟವಾದ ವಾರದ ಅವಧಿಯಲ್ಲಿ ರಾಜ್ಯದ ಹಲವೆಡೆ ವಿವಿಧ ಪಕ್ಷಗಳ ಕಾರ್ಯಕರ್ತರ ನಡುವೆ ಹೊಡೆದಾಟ, ಸಂಘರ್ಷ, ಹಲ್ಲೆ, ಹಿಂಸಾಚಾರಗಳಂತಹ ಹಲವಾರು ಪ್ರಕರಣಗಳು ನಡೆ ದಿವೆ. ಯಾವೊಂದೂ ಪ್ರಕರಣಗಳು ಅತಿರೇಕಕ್ಕೆ ಹೋಗದಿರುವುದು ಸಮಾ ಧಾನ ತರುವ ವಿಚಾರವಾದರೂ ಈ ಘಟನಾವಳಿಗಳು ಮುಂದಿನ ದಿನ ಗಳ ಬೆಳವಣಿಗೆಗಳ ಮುನ್ಸೂಚನೆಗಳೇನೋ ಎಂಬಂತೆ ಗೋಚರವಾ ಗು ತ್ತಿದೆ. ಚುನಾವಣೆ ಎಂದಾಗಲೆಲ್ಲ ಸೋಲು-ಗೆಲುವು ಇದ್ದದ್ದೇ ಆದರೂ ನಿರೀಕ್ಷಿತ ಫ‌ಲಿತಾಂಶ ಬಾರದೆ ಹೋದಾಗ ಆಯಾಯ ಪಕ್ಷಗಳ ಕಾರ್ಯ ಕರ್ತರು ಒಂದಿಷ್ಟು ಹತಾಶರಾಗಿ ಸಂಘರ್ಷಕ್ಕಿಳಿಯುವುದು ಈ ಹಿಂದಿನಿಂದಲೂ ನಡೆದು ಬಂದಿದೆ.

ಈ ಬಾರಿಯ ಚುನಾವಣ ಹಣಾಹಣಿ ಈ ಹಿಂದಿನ ಎಲ್ಲ ಚುನಾ ವಣೆಗಳಿಗಿಂತ ಒಂದಿಷ್ಟು ಭಿನ್ನವಾಗಿತ್ತು. ಫ‌ಲಿತಾಂಶ ಕೂಡ ಎಲ್ಲರ ನಿರೀಕ್ಷೆ, ಊಹೆಯನ್ನು ಮೀರಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಲಭಿಸಿದೆ. ಕಳೆದೊಂದು ವಾರದ ಅವಧಿಯಲ್ಲಿ ರಾಜ್ಯದಲ್ಲಿ ನಡೆದ ಸಣ್ಣಪುಟ್ಟ ರಾಜಕೀಯ ಪ್ರೇರಿತ ಘಟನಾವಳಿಗಳತ್ತ ಬೆಳಕು ಚೆಲ್ಲಿದಾಗ ಪಕ್ಷಗ ಳೊಳಗಿನ ಆಂತರಿಕ ಭಿನ್ನಮತ, ಕಚ್ಚಾಟಗಳಿಗೆ ರಾಜಕೀಯ ಬಣ್ಣ ಬಳಿದಂತೆ ಕಂಡುಬರುತ್ತಿದೆ. ಇನ್ನು ಕೆಲವೊಂದು ಪ್ರಕರಣದಲ್ಲಿ ಕಿಡಿಗೇಡಿಗಳು, ಸಮಾಜ ದ್ರೋಹಿಗಳು ಪರಿಸ್ಥಿತಿಯ ಲಾಭ ಪಡೆಯಲೆತ್ನಿಸುತ್ತಿರುವಂತೆ ಭಾಸವಾಗುತ್ತಿದೆ. ಇಂತಹ ಘಟನಾವಳಿಗಳು ಮರುಕಳಿಸದಂತೆ ಸರಕಾರ ನಿಷ್ಪಕ್ಷ ಮತ್ತು ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು.

ಸರಕಾರ ರಚನೆಯಾಗುತ್ತಿದ್ದಂತೆಯೇ ರಾಜ್ಯದ ಕಾನೂನು-ಸುವ್ಯವಸ್ಥೆ ಪಾಲನೆಯತ್ತ ಮುಖ್ಯಮಂತ್ರಿ ಆದ್ಯತೆಯ ಮೇಲೆ ಗಮನಹರಿಸಬೇಕು. ಸೂಕ್ಷ್ಮ ಮತ್ತು ಆಯಕಟ್ಟಿನ ಸ್ಥಳ ಹಾಗೂ ಉನ್ನತ ಹುದ್ದೆಗಳಿಗೆ ದಕ್ಷ, ಸಮರ್ಥ ಅಧಿಕಾರಿಗಳನ್ನು ನೇಮಿಸುವ ಮೂಲಕ ಇಂತಹ ದುಷ್ಕೃತ್ಯ, ಹಿಂಸಾಚಾರಗಳನ್ನು ಮೊಳಕೆಯ ಹಂತದಲ್ಲಿಯೇ ಚಿವುಟಿ ಹಾಕುವ ಕೆಲಸಕ್ಕೆ ಮುಂದಾಗಬೇಕು. ಸೈದ್ಧಾಂತಿಕ ವಿಚಾರಧಾರೆ, ತತ್ವಾದರ್ಶಗಳು ಏನೇ ಇರಬಹುದು; ಅವೆಂದೂ ನಾಡಿನ ಕಾನೂನು-ಸುವ್ಯವಸ್ಥೆಗೆ ಭಂಗ ಉಂಟು ಮಾಡುವಂತಹ ಸನ್ನಿವೇಶವನ್ನು ನಿರ್ಮಾಣ ಮಾಡಬಾರದು. ತಮ್ಮ ಬೇಳೆ ಬೇಯಿಸಲೋಸುಗ ನಾಡಿನ ಶಾಂತಿಗೆ ಭಂಗ ತರುವ ಕಾರ್ಯಕ್ಕೆ ಯಾವುದೇ ರಾಜಕೀಯ ಪಕ್ಷವೂ ಕೈಹಾಕಬಾರದು. ಇನ್ನು ಕಾನೂನು ಮತ್ತು ಸುವ್ಯವಸ್ಥೆಯ ಹೊಣೆಯನ್ನು ಹೊಂದಿರುವ ಪೊಲೀಸ್‌ ಇಲಾಖೆ ಇಲ್ಲಿ ತನ್ನ ಜವಾಬ್ದಾರಿಯನ್ನು ಅತ್ಯಂತ ಪಾರದರ್ಶಕವಾಗಿ ನಿಭಾಯಿಸಬೇಕಿದೆ. ಯಾವುದೇ ತೆರನಾದ ಒತ್ತಡಕ್ಕೆ ಮಣಿಯದೆ, ಹಸ್ತಕ್ಷೇಪಕ್ಕೆ ಅವಕಾಶ ನೀಡದೆ ಕಾನೂನಿನ ನಿಯಮಾ ವಳಿಗಳಿಗನುಸಾರವಾಗಿ ಕಾರ್ಯನಿರ್ವಹಿಸಬೇಕು. ಇಂತಹ ಮುಕ್ತ ವಾತಾವರಣವನ್ನು ಪೊಲೀಸರಿಗೆ ಕಲ್ಪಿಸಿಕೊಡುವುದು ಸರಕಾರದ ಕರ್ತವ್ಯ. ಇದರ ಜತೆಯಲ್ಲಿ ಪೊಲೀಸರು ಕೂಡ ಒಂದಿಷ್ಟು ತಾಳ್ಮೆ, ಮಾನವೀಯತೆಯಿಂದ ಕರ್ತವ್ಯ ಪ್ರಜ್ಞೆ ಮೆರೆಯಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next