Advertisement

ಕೆಲಸ ಮಾಡಲು ಇಚ್ಛೆ ಇಲ್ಲದಿದ್ರೆ ವರ್ಗವಾಗಿ ಹೋಗಿ

01:30 PM Mar 02, 2021 | Team Udayavani |

ಗದಗ: ಕೆಲಸ ಮಾಡಲು ಇಚ್ಛೆ ಇಲ್ಲದಿದ್ದರೆ ಬೇರೆಡೆ ವರ್ಗವಾಗಲು ಯಾವುದೇ ಅಡ್ಡಿ ಇಲ್ಲ. ಉದಾಸೀನತೆ ಮುಂದುವರಿಸಿದರೆ ತೊಂದರೆಗೆ ಸಿಲುಕುವಿರಿ ಎಂದು ಸಣ್ಣ ಕೈಗಾರಿಕೆ, ವಾರ್ತಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಎಚ್ಚರಿಕೆ ನೀಡಿದರು.

Advertisement

ಇಲ್ಲಿನ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೋವಿಡ್‌ ನಿಯಂತ್ರಣಕ್ಕೆ ಬಂದು ಕೆಲ ತಿಂಗಳು ಕಳೆದರೂ ಅಧಿಕಾರಿಗಳು ನಿದ್ರೆಯಿಂದ ಹೊರ ಬಂದಿಲ್ಲ. ಕೋವಿಡ್‌ ಕಾರಣಕ್ಕಾಗಿ ಅಧಿಕಾರಿಗಳ ಮಂದಗತಿ ಸಹಿಸಿದ್ದೇವೆ. ಆದರೆ ಇನ್ನು ಬದಲಾಗಬೇಕು. ಆಡಳಿತ ಚುರುಕುಗೊಳ್ಳದಿದ್ದರೆ ಆಯಾ ಇಲಾಖೆಗಳ ಮುಖ್ಯಸ್ಥರ ತಲೆದಂಡವಾಗುತ್ತದೆ ಎಂದು ಎಚ್ಚರಿಸಿದರು.

ಅಧಿಕಾರಿಗಳು ಕರ್ತವ್ಯ ನಿರ್ವಹಣೆ ಚುರುಕುಗೊಳಿಸಬೇಕು. ಸರಕಾರದ ಅಪೇಕ್ಷೆಯಂತೆ ಅರ್ಹರಿಗೆ ಸರಕಾರದ ಯೋಜನೆಗಳನ್ನು ತಲುಪಿಸುವುದರೊಂದಿಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕೆಂದರು.ಇದಕ್ಕೂ ಮುನ್ನ ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶ್‌ ಮಾತನಾಡಿ, ಪಿಎಂ ಕಿಸಾನ್‌ ಯೋಜನೆಯಡಿ ಜಿಲೆಯ ಅರ್ಹ 132231 ರೈತರಿಗೆ ಮೂರನೇ ಕಂತು ಸೇರಿದಂತೆ ಒಟ್ಟು 79.33 ಕೋಟಿ ರೂ. ಸಹಾಯಧನ ಒದಗಿಸಲಾಗಿದೆ. ಜತೆಗೆ ಅಕ್ರಮವಾಗಿ ಯೋಜನೆಯ ಲಾಭ ಪಡೆದ 2800 ಜನರಿಗೆ ಹಣ ವಾಪಸ್‌ ಮಾಡುವಂತೆ ನೋಟಿಸ್‌ ನೀಡಲಾಗಿದೆ. ಮುಂಗಾರಿನಲ್ಲಿ ಅತಿವೃಷ್ಟಿ ಉಂಟಾಗಿದ್ದರಿಂದ ಬೆಳೆ ಹಾನಿಯಾಗಿದ್ದಕ್ಕೆ 1,59,937 ರೈತರಲ್ಲಿ 91002ರೈತರಿಗೆ ಈಗಾಗಲೇ 88.66 ಕೋಟಿ ರೂ. ಪರಿಹಾರ ಒದಗಿಸಲಾಗಿದೆ. ಬೆಳೆ ಸಮೀಕ್ಷೆ-2020 ಯೋಜನೆಯಡಿಮುಂಗಾರು ಹಂಗಾಮಿನಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಿದೆ. ಹಿಂಗಾರಿನಲ್ಲಿ ಈ ವರೆಗೆ ಶೇ.70 ಪ್ರಗತಿಯಾಗಿದೆ. ಬೆಂಬಲ ಬೆಲೆ ಯೋಜನೆಯಡಿ ಕಡಲೆ ಹಾಗೂ ಗೋಧಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಸಿಸಿಐ ನಿಂದ ಹತ್ತಿ ಖರೀದಿಸಲಾಗುತ್ತಿದೆ. ಜತೆಗೆ ಜೋಳ ಖರೀದಿಗೂ ಸರಕಾರ ಆದೇಶಿಸಿದೆ ಎಂದು ವಿವರಿಸಿದರು.

ಕೃಷಿ ಇಲಾಖೆಯಿಂದ ಸಬ್ಸಿಡಿ ದರದಲ್ಲಿ ರೈತರಿಗೆ ನೀಡಲಾಗುವ ಕೂರಿಗೆ, ಕುಂಟೆ, ಟ್ರ್ಯಾಕ್ಟರ್‌, ಟ್ರೇಲರ್‌ ಹಾಗೂ ಸ್ಪಿಂಕ್ಲರ್‌ಗಳು ನೂರಾರು ಎಕರೆ ಭೂಮಿ ಹೊಂದಿರುವ ಜಮೀನ್ದಾರ್‌ ಮನೆಗಳಲ್ಲಿವೆ. ಅಧಿಕಾರಿಗಳು ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡಿ, ಪರಿಶೀಲಿಸಬೇಕೆಂದು ನಿರ್ದೇಶಿಸಿದರು. ಜಿಮ್ಸ್‌ನ ಹೊರಗುತ್ತಿಗೆ ನೌಕರರಿಗೆ 3 ತಿಂಗಳಿಂದ ವೇತನ ನೀಡದಿರುವುದಕ್ಕೆ ಸಚಿವ ಸಿ.ಸಿ.ಪಾಟೀಲ ಜಿಮ್ಸ್‌ ನಿರ್ದೇಶಕ ಡಾ|ಪಿ.ಎಸ್‌.ಭೂಸರೆಡ್ಡಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಕೂಡಲೇವೇತನ ಬಿಡುಗಡೆಗೆ ಸೂಚಿಸಿದರು. ಬಳಿಕ ಸಮಾಜಕಲ್ಯಾಣ ಇಲಾಖೆಯಲ್ಲೂ ಹೊರಗುತ್ತಿಗೆ ನೌಕರರ ಸಮಸ್ಯೆಯನ್ನರಿತ ಸಚಿವರು, ಡಿ ಗ್ರುಪ್‌ಗೆ ಬರುವ ಬಡವರ ವೇತನ ಪಾವತಿ ವಿಳಂಬ ಯಾಕೆ ಎಂದು ಹರಿಹಾಯ್ದರು.

ಜಿಲ್ಲೆಯಲ್ಲಿ 439 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, 422 ಸುಸ್ಥಿತಿಯಲ್ಲಿವೆ. ಪ್ರತಿ ಘಟಕಕ್ಕೆ ಪ್ರತಿ ಮಾಹೆ 3000 ರೂ.ನಂತೆ ಮಾಸಿಕ 12 ಲಕ್ಷರೂ. ಅನುದಾನವನ್ನು ಸಂಬಂ ಧಿಸಿದ ಏಜೆನ್ಸಿಗಳಿಗೆ ಒದಗಿಸಲಾಗುತ್ತಿದೆ ಎಂದು ಅ ಧಿಕಾರಿಗಳು ಮಾಹಿತಿ ನೀಡಿದರು. ಜಿಲ್ಲೆಯ ಬಹುತೇಕ ಘಟಕಗಳ ಕೆಟ್ಟು ನಿಂತಿವೆ. ಬೇಸಿಗೆಯಲ್ಲಿ ಅಧಿ ಕಾರಿಗಳ ಬಣ್ಣ ಬಯಲಾಗುತ್ತದೆ. ಈ ಬಗ್ಗೆ ಎರಡು ದಿನಗಳಲ್ಲಿ ಜಿಪಂ ಸಿಇಒಗೆ ವರದಿ ನೀಡುವಂತೆ ಸೂಚಿಸಲಾಯಿತು.

Advertisement

ನರಗುಂದ ತಾಲೂಕಿನಲ್ಲಿ ಎ ಕೆಟಗೇರಿಯ 360 ಮನೆಗಳ ಪೈಕಿ 140 ಮನೆಗಳ ನಿರ್ಮಾಣ ಪೂರ್ಣಗೊಂಡಿವೆ. ಬಿ ಕೆಟಗೆರಿಯ 624 ಮನೆಗಳ ಪೈಕಿ 274 ಮನೆಗಳು ಪೂರ್ಣಗೊಂಡಿದ್ದು, 200 ಮನೆಗಳು ಚಾವಣಿ ಹಂತದಲ್ಲಿವೆ. 85 ಮನೆಗಳ ನಿರ್ಮಾಣ ಆರಂಭವಾಗಿಲ್ಲ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಅನುದಾನ ಸರಕಾರಕ್ಕೆ ವಾಪಸ್ಸಾಗದಂತೆ ಆಯಾ ತಹಶೀಲ್ದಾರರು ಗಮನ ಹರಿಸಬೇಕೆಂದರು. ಲೋಕೋಪಯೋಗಿ ಅಧಿಕಾರಿಗಳು ನಿಗಾ ವಹಿಸಿ ಜಿಲ್ಲೆಯ ರಸ್ತೆಗಳನ್ನು ರಾಜ್ಯ ಹೆದ್ದಾರಿಗಳಾಗಿ ಪರಿವರ್ತಿಸಲು ಶ್ರಮಿಸಬೇಕು ಎಂದರಲ್ಲದೇ ಈಗಾಗಲೇ 16 ಕೋಟಿ ರೂ.ವೆಚ್ಚದಲ್ಲಿ ರಸ್ತೆಗಳ ಗುಂಡಿಮುಚ್ಚುವ ಕಾರ್ಯ ಕೈಗೊಂಡಿದ್ದು, ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳಬೇಕು ಎಂದರು.

ಜಿ.ಪಂ. ಅಧ್ಯಕ್ಷ ಈರಪ್ಪ ನಾಡಗೌಡ್ರ, ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ, ದ್ರಾಕ್ಷಾರಸ ನಿಗಮ ಅಧ್ಯಕ್ಷ ಕಾಂತಿಲಾಲ ಬನ್ಸಾಲಿ, ಜಿ.ಪಂ ಉಪಾಧ್ಯಕ್ಷೆ ಮಂಜುಳಾಹುಲ್ಲಣ್ಣವರ, ಜಿ.ಪಂ. ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರುಗಳು, ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು, ಸಿಇಒ ಭರತ ಎಸ್‌. ಎಸ್ಪಿ ಯತೀಶ್‌ ಎನ್‌., ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ವ್ಹಿ.ಸೂರ್ಯಸೇನ್‌, ಅಪರ ಜಿಲ್ಲಾಧಿಕಾರಿ ಸತೀಶ್‌ ಕುಮಾರ ಎಂ. ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಇತರರಿದ್ದರು.

ಡಿಡಿಪಿಐಗೆ ಸಚಿವ-ಶಾಸಕರ ಕ್ಲಾಸ್‌ :

ಸಭೆಯಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ ನಿರ್ಮಿಸಲಾಗುತ್ತಿರುವ ಮನೆಗಳ ಬಗ್ಗೆ ಶಾಸಕ ಕಳಕಪ್ಪ ಬಂಡಿ ಕೇಳಿದ ಪ್ರಶ್ನೆಗೆ ಪೂರ್ವಾಪರ ಯೋಚಿಸದೇ ಎಲ್ಲವೂ ಪೂರ್ಣಗೊಂಡಿದೆ ಎಂದು ಡಿಡಿಪಿಐ ಜಿ.ಎಂ.ಬಸವಲಿಂಗಪ್ಪ ಉತ್ತರಿಸಿದರು. ಇದರಿಂದ ಆಕ್ರೋಶಗೊಂಡ ಶಾಸಕ-ಸಚಿವರು, ಅಧಿ ಕಾರಿಗಳ ಬಳಿ ಮಾಹಿತಿ ಇಲ್ಲದಿದ್ದರೆ ಸಿಬ್ಬಂದಿಯಿಂದ ಪಡೆದು ಸಭೆಗೆ ಉತ್ತರಿಸಬೇಕು. ಎಲ್ಲವೂ ಅರ್ಧಕ್ಕೆ ನಿಂತಿವೆ. ನಾಗಾರ್ಜುನ ಎಂಬ ಗುತ್ತಿಗೆ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸುವ ಪ್ರಸ್ತಾವನೆಯೊಂದಿಗೆ ಕಾಮಗಾರಿಯನ್ನು ಜಿಪಂಗೆ ವಹಿಸಲಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.

ಬೆಂಕಿ ಇಟ್ಟವರನ್ನು ಬಿಡಬೇಡಿ :

ಕಪ್ಪತಗುಡ್ಡಕ್ಕೆ ಬೆಂಕಿ ತಾಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು. ಅರಣ್ಯ ಮತ್ತು ಪೊಲೀಸ್‌ ಅಧಿಕಾರಿಗಳು ಜಂಟಿಯಾಗಿ ತಪ್ಪಿತಸ್ಥರನ್ನು ಹಿಡಿದು ಶಿಕ್ಷೆಗೆ ಗುರಿಪಡಿಸಬೇಕೆಂದು ಸಚಿವರು ನಿರ್ದೇಶಿಸಿದರು.

ರೆಡ್‌ ಕಾರ್ಪೇಟ್‌ ಹಾಕಬೇಡಿ :

ಕಾರ್ಮಿಕ ಇಲಾಖೆಯಲ್ಲಿ ಏಜೆಂಟರಿಗೆ ರೆಡ್‌ ಕಾರ್ಪೇಟ್‌ ಹಾಕಬೇಡಿ. ಇಲಾಖೆಯಿಂದ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಬಹುತೇಕರಿಗೆ ಗೊತ್ತೇ ಇಲ್ಲ. ಏಜೆಂಟರೇ ಎಲ್ಲ ಕೆಲಸ

ಮಾಡುತ್ತಾರೆ. ನಮ್ಮ ಸರಕಾರದಲ್ಲಿ ಏಜೆಂಟರ ಹಾವಳಿ ಕಿತ್ತೂಗೆಯಬೇಕೆಂದು ಶಾಸಕ ಕಳಕಪ್ಪ ಬಂಡಿ ಕಾರ್ಮಿಕ ಅಧಿಕಾರಿ ಸುಧಾಗರಗ ಅವರಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next