Advertisement

ಕೆ.ಸಿ.ವ್ಯಾಲಿ ನೀರಿನಿಂದ ಕೆರೆಗಳಿಗೆ ಕೋಡಿ ಭಾಗ್ಯ

04:11 PM Oct 09, 2020 | Suhan S |

ಕೋಲಾರ: ಹದಿನೈದು ವರ್ಷಗಳಿಂದಲೂ ಮಳೆಗೆ ತುಂಬದ ಕೋಲಾರ ಜಿಲ್ಲೆಯಲ್ಲೇ ಒಂದಷ್ಟು ಕೆರೆಗಳನ್ನು ಕೆ.ಸಿ ವ್ಯಾಲಿ ನೀರು ತುಂಬಿ ತುಳುಕಿಸುತ್ತಿದ್ದು, ಸತತ ಬರಗಾಲ ಪೀಡಿತ ಪ್ರದೇಶವನ್ನು ಮಲೆನಾಡಿನಂತೆ ಕಂಗೊಳಿಸಲು ಸಹಕಾರಿಯಾಗಿದೆ.

Advertisement

ಕೋಲಾರಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ 138 ಮತ್ತು ಜಿಲ್ಲಾ ಪಂಚಾಯತ್‌ ವ್ಯಾಪ್ತಿಗೆ ಸೇರುವ 2,328ಕೆರೆಗಳಿದ್ದು, ಒಟ್ಟು 2,466 ಕೆರೆಗಳಲ್ಲಿ ಬಹುತೇಕಕೆರೆಗಳು 2006 ರಿಂದಲೂ ತುಂಬಿ ಕೋಡಿಹರಿದಿರಲಿಲ್ಲ.2017 ರಲ್ಲಿ ಒಂದಷ್ಟುಕೆರೆಗಳುಕೋಡಿ ಹರಿದವಾದರೂ ಕೆರೆ ಅಂಗಳದಲ್ಲಿ ಹೆಚ್ಚು ದಿನ ನೀರು ನಿಲ್ಲಲಿಲ್ಲ.

ತುಂಬಿದ ಕೆರೆಗಳು: ಕೋಲಾರ ಜಿಲ್ಲೆಯ ಸಣ್ಣನೀರಾವರಿ ಇಲಾಖೆಯ 138 ಕೆರೆಗಳ ಪೈಕಿ ಮೊದಲಹಂತದಲ್ಲಿ 126 ಕೆರೆಗಳಿಗೆ ನೀರು ಹರಿಸುವ ಗುರಿ ಹೊಂದಲಾಗಿತ್ತು. ಇದೀಗ ಯೋಜನೆಯನ್ನುಮಾರ್ಪಡಿಸಿ 138 ಕೆರೆಗಳಿಗೂ ನೀರು ತುಂಬಿಸಲು ಯೋಜಿಸಲಾಗಿದೆ. ಈಗಾಗಲೇ ಕೆ.ಸಿ ವ್ಯಾಲಿ ಯೋಜನೆಯಡಿ ನಿತ್ಯವೂ 250 ರಿಂದ 280 ಎಂಎಲ್‌ಡಿ ನೀರು ಹರಿಯುತ್ತಿದ್ದು, 70 ಕೆರೆಗಳು ತುಂಬಿವೆ. ಈ ವೇಳೆಗಾಗಲೇ ಪೂರ್ಣಪ್ರಮಾಣದ 400 ಎಂಎಲ್‌ಡಿ ನೀರುಹರಿಯಬೇಕಾಗಿತ್ತಾದರೂ ಕೊರೊನಾ ಕಾರಣದಿಂದಸಾಧ್ಯವಾಗಿಲ್ಲ. ಜನವರಿ ವೇಳೆಗೆ ಕೋಲಾರ ಜಿಲ್ಲೆಗೆ400ಎಂಎಲ್‌ಡಿನೀರು ಕೆ.ಸಿ.ವ್ಯಾಲಿಯೋಜನೆಯಡಿ ಹರಿಯಬಹುದು ಎಂದು ನಿರೀಕ್ಷಿಸಲಾಗಿದೆ.

ವರುಣ ಮತ್ತೆ ಕಣ್ಮರೆ: ಕೆ.ಸಿ ವ್ಯಾಲಿ ನೀರು ಹೊರತುಪಡಿಸಿ ಸುರಿದ ಮಳೆಯಿಂದ ಮುಳಬಾಗಿಲು ತಾಲೂಕಿನ ಕುರುಡುಮಲೆ ಭಾಗದ ಎರಡು ಮೂರುಕೆರೆಗಳು ಮಾತ್ರವೇ ತುಂಬಿವೆ. ಹತ್ತರಿಂದ ಹದಿನೈದು ಕೆರೆಗಳಲ್ಲಿ ಶೇ.50ರಷ್ಟುನೀರು ಬಂದಿದೆ. ಇದರ ಹೊರತುಪಡಿಸಿ ಕೋಲಾರ ಜಿಲ್ಲೆಯಲ್ಲಿ ಕೆರೆ ತುಂಬಿ ಹರಿಯುವಷ್ಟು ಮಳೆ ಸುರಿದಿಲ್ಲ. ಸಾಮಾನ್ಯ ವಾಗಿಕೋಲಾರ ಜಿಲ್ಲೆಯಲ್ಲಿ ದೀಪಾವಳಿ ವೇಳೆಗೆ ಕೆರೆಕುಂಟೆ ತುಂಬಲಿದ್ದು,ಈಬಾರಿ ಹಲವಾರು ಕೆರೆಗಳು ತುಂಬುವಷ್ಟು ಮಳೆ ಸುರಿಯಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಆದರೆ, ಎರಡು ವಾರಗಳಿಂದ ಮಳೆ ಮತ್ತೇ ಮರೆಯಾಗಿದೆ.

ಕೆರೆಗಳ ನಿರ್ವಹಣೆ: ಕೋಲಾರ ಜಿಲ್ಲೆಯಲ್ಲೇ ಸುಮಾರು 2500 ಕೆರೆಗಳಲ್ಲಿ ವರ್ಷವೂ ನೀರು ನಿಂತುಕೋಡಿ ಹರಿಯದೇ ಇದ್ದುದರಿಂದ ನಿರ್ವಹಣೆಯಿಂದ ದೂರವಾಗಿವೆ. 2017 ರಲ್ಲಿ ಭರ್ಜರಿ ಮಳೆ ಸುರಿದರೂ ಕೆಲವು ಕೆರೆಗಳ ಕಟ್ಟೆ ಒಡೆದು ಹಾನಿಯಾಗಿತ್ತು. ಕೆ.ಸಿ ವ್ಯಾಲಿ ಹರಿಯುವ ಕೆರೆಗಳನ್ನು ಹೊರತುಪಡಿಸಿ ಬಹುತೇಕ ಕೆರೆಗಳ ಕಟ್ಟೆಗಳುಶಿಥಿಲಗೊಂಡಿವೆ. ಮಳೆ ಸುರಿದರೂ ನೀರು ನಿಲ್ಲಿಸುವ ಸಾಮರ್ಥ್ಯವನ್ನುಕಳೆದುಕೊಂಡಿವೆ.

Advertisement

ನೀರು ಬಳಕೆದಾರರ ಸಂಘಗಳು: ಕೋಲಾರ  ಜಿಲ್ಲೆಯಲ್ಲಿ  ಕೆರೆಗಳನ್ನು ನೀರು ಬಳಕೆದಾರರ ಸಂಘಗಳ ಮೂಲಕ ನಿರ್ವಹಿಸುವ ಪ್ರಯತ್ನ ಎಸ್‌.ಎಂ.ಕೃಷ್ಣಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆಯಿತಾದರೂ ನೀರೇ ಇಲ್ಲದ ಕಾರಣದಿಂದ ಗುರಿ ತಲುಪಲಾಗಿಲ್ಲ. ಬಹುತೇಕ ಸಂಘಗಳು ಜವಾಬ್ದಾರಿ ಹೊತ್ತುಕೊಳ್ಳಲಾಗದೆ ನಿಷ್ಕ್ರಿಯ ಗೊಂಡಿವೆ. ಕೆರೆ ಮೀನುಸಾಕಾಣಿದಾರರ ಸಂಘಗಳು ಕೆ.ಸಿ ವ್ಯಾಲಿ ನೀರು ಹರಿಯುವ ಕೆರೆಗಳ ಭಾಗದಲ್ಲಿ ಸಕ್ರಿಯ ವಾಗುತ್ತಿವೆ. ಮೀನು ಸಾಕಾಣಿಕೆ ಆರಂಭ ವಾಗಿದೆ.

ಭತ್ತ, ಕಬ್ಬು ಬೆಳೆ: ಕೋಲಾರ ಜಿಲ್ಲೆಯಲ್ಲಿ ಈಗಾಗಲೇ ಸುಮಾರು 70 ಕೆರೆಗಳು ಕೆ.ಸಿ ವ್ಯಾಲಿ ನೀರಿನಿಂದ ತುಂಬಿದ್ದು,ಕೆರೆ ಏರಿ ಪಕ್ಕದ ಜಮೀನುಗಳಲ್ಲಿ ರೈತರು ಭತ್ತ, ಕಬ್ಬು ಬೆಳೆಯಲು ಆರಂಭಿಸಿದ್ದಾರೆ. ಮಳೆ ಇಲ್ಲದೆ ಭತ್ತ, ಕಬ್ಬು ಕೋಲಾರ ಜಿಲ್ಲೆ ರೈತರು ಕೈಬಿಟ್ಟುದಶಕಗಳೇ ಆಗಿತ್ತು. ಆಶ್ಚರ್ಯವೆಂದರೆ ಕೆ.ಸಿ ವ್ಯಾಲಿನೀರು ತುಂಬುತ್ತಿರುವ ಕೋಲಾರ, ಶ್ರೀನಿವಾಸಪುರ,ಮುಳಬಾಗಿಲು ಭಾಗದಲ್ಲಿ ಮಳೆಯುಈವರ್ಷ ಸಮಾಧಾನಕರವಾಗಿ ಸುರಿಯುತ್ತಿರುವುದು ರೈತಾಪಿ ವರ್ಗದಲ್ಲಿ ತೃಪ್ತಿ ತಂದಿದೆ.

ಅಂತರ್ಜಲ ಹೆಚ್ಚಳ: ಕೋಲಾರ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ 138 ಕೆರೆಗಳನ್ನು ಆದಷ್ಟು ಬೇಗ ತುಂಬಿಸಲು ಸಿದ್ಧತೆ ನಡೆಯುತ್ತಿದ್ದು, ನೀರುಹರಿಯುತ್ತಿರುವ ಸುಮಾರು5ರಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ಅಂತರ್ಜಲವು ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಬತ್ತಿ ಹೋಗಿದ್ದ ಕೊಳವೆ ಬಾವಿಗಳು ತುಂಬುತ್ತಿವೆ. ಅಲ್ವಸ್ವಲ್ಪ ಮಳೆಗೆ ಚೆಕ್‌ ಡ್ಯಾಂಗಳು ತುಂಬಿದ್ದು, ಇದರಿಂದ ರೈತರು ಉತ್ಸಾಹದಿಂದ ಕೃಷಿ ಹಾಗೂ ತೋಟಗಾರಿಕೆ ಚಟುವಟಿಕೆಗಳಲ್ಲಿ ತೊಡಗುವಂತಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಬೇಡಿಕೆ ಇರುವ ಹಣ್ಣು, ಹೂ, ತರಕಾರಿ,ಸೊಪ್ಪುಗಳಲ್ಲಿಬಹುಪಾಲುಕೋಲಾರಜಿಲ್ಲೆಯಿಂದಲೇ ಸರಬರಾಜಾಗುತ್ತದೆ.

 ಹೊಸಕೆರೆ ನಿರ್ಮಾಣಕ್ಕೆ ಪ್ರಯತ್ನ ನಡೆದಿಲ್ಲ :  ಕೆರೆಗಳ ಜಿಲ್ಲೆ ಎನಿಸಿಕೊಂಡಿರುವ ಕೋಲಾರ ಜಿಲ್ಲೆಯ ವ್ಯಾಪ್ತಿಯಲ್ಲಿ ಪೂರ್ವಿಕರೇ ಊರಿಗೊಂದು ಕೆರೆ ನಿರ್ಮಾಣ ಮಾಡಿ ಹೋಗಿದ್ದು, ಈ ಪೈಕಿ ಬಹುತೇಕ ಕೆರೆಗಳು ಬಸ್‌ ನಿಲ್ದಾಣ, ಆಟದ ಮೈದಾನಗಳಾಗಿ ಮಾರ್ಪಟ್ಟಿವೆ. ಇರುವ ಕೆರೆಗಳನ್ನು ಕಾಪಾಡಿಕೊಳ್ಳದ ಸಾರ್ವಜನಿಕರು ಮತ್ತು ಜಿಲ್ಲಾಡಳಿತ ಹೊಸಕೆರೆಯ ನಿರ್ಮಾಣಕ್ಕೆ ಕಾಳಜಿ ವಹಿಸಿಲ್ಲ. ಇರುವ ಕೆರೆಗಳನ್ನು ಕಾಪಾಡಿಕೊಂಡರೆ ಸಾಕಾಗಿದೆ. ಇದರಿಂದ ಹಸಿರು ನ್ಯಾಯಾಧೀಕರಣ ಆದೇಶ ಕೋಲಾರ ಜಿಲ್ಲೆಗೆ ಅನ್ವಯವಾಗುತ್ತಿಲ್ಲ

ಕೆರೆಗಳು ಖಾಲಿ, ಒತ್ತುವರಿದಾರರಿಗೆ ಸುಗ್ಗಿ :  ಸುಮಾರು ಎರಡು ದಶಕಗಳಿಂದಲೂ ಕೋಲಾರ ಜಿಲ್ಲೆಯಲ್ಲಿ ಸಮರ್ಪಕ ಮಳೆ ಸುರಿದುಕೆರೆ ತುಂಬಿ ಹರಿದಿಲ್ಲವಾದ್ದರಿಂದ ಬಹುತೇಕ ಕೆರೆಗಳು ಬಟಾ ಬಯಲಾಗಿವೆ. ಇದರಿಂದ ಒತ್ತುವರಿದಾರರಿಗೆ ಸುಗ್ಗಿಯಾಗಿದ್ದು,ಕೆರೆ,ರಾಜಕಾಲುವೆಗಳು ಒತ್ತುವರಿಯಾಗಿವೆ. ಎರಡು ಮೂರು ವರ್ಷಗಳಿಂದಲೂ ಕೋಲಾರ ಜಿಲ್ಲೆಯಲ್ಲಿ ಕೆರೆ ಒತ್ತುವರಿ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದ್ದರೂ ಸಮಾಧಾನ ತಂದಿಲ್ಲವೆಂಬ ಆರೋಪ ರೈತ ಸಂಘಟನೆಗಳು ಮತ್ತು ಸಾರ್ವಜನಿಕರಿಂದ ಕೇಳಿ ಬರುವಂತಾಗಿದೆ. ಆದರೂ, ಡೀಸಿ ಕಚೇರಿಯು ಪ್ರತಿ ವಾರ ಕೆರೆ ಕಾಲುವೆ ಒತ್ತುವರಿ ತೆರವುಗೊಳಿಸಿದ ವರದಿಯನ್ನು ನಿಯಮಿತವಾಗಿ ಮಾಧ್ಯಮಗಳಿಗೆ ತಲುಪಿಸುತ್ತಿದೆ.

 ಕೆರೆ ಅಂಗಳದಲ್ಲಿ ಗಿಡಗಂಟಿ, ಜಾಲಿಮರ ತೆರವು :  ಮಳೆ ಇಲ್ಲದ ಕಾರಣದಿಂದ ಬಟಾಬಯಲಾಗಿದ್ದ ಕೋಲಾರ ಜಿಲ್ಲೆಯ  ಕೆರೆಗಳು ಮರಳು ದಂಧೆಯಿಂದ ಹಳ್ಳಕೊಳ್ಳಗಳನ್ನು ತುಂಬಿಕೊಂಡು ತನ್ನ ಮೂಲ ಆಕಾರವನ್ನೇ ಕಳೆದುಕೊಂಡಿತ್ತು. ಬಹುತೇಕ ಕೆರೆಗಳಲ್ಲಿ ಜಾಲಿ, ಗಿಡ ಗಂಟಿಗಳು ಬೆಳೆದು ಕೆರೆಯ ರೂ‌ಪವನ್ನೇ

ಬದಲಾಯಿಸಿದ್ದವು.ಆದರೆ,ಕೆ.ಸಿವ್ಯಾಲಿಯೋಜನೆಯಡಿ ಕೆರೆಗಳಿಗೆ ನೀರು ಹರಿಸುವ ಕಾರಣದಿಂದ ಕೆರೆಗಳಲ್ಲಿಬೆಳೆದಿದ್ದ ಜಾಲಿ ಮರ, ಗಿಡ ಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲಾಗಿದೆ. ಕೆ.ಸಿ ವ್ಯಾಲಿ ನೀರು ಹರಿಯಲು ರಾಜಕಾಲುವೆ ಗಳನ್ನು ಮುಕ್ತಗೊಳಿಸಲಾಗಿದೆ. ಉಳಿದ ಕೆರೆಗಳಕಡೆ ಗಮನಹರಿಸಬೇಕಷ್ಟೆ.

70 ಕೆರೆಭರ್ತಿ: ಸುರೇಶ್‌ಕುಮಾರ್‌ :  ಕೋಲಾರ ಜಿಲ್ಲೆಯಲ್ಲಿ ಕೆ.ಸಿ ವ್ಯಾಲಿ ಯೋಜನೆಯಡಿ 138 ಕೆರೆಗಳನ್ನು ತುಂಬಿಸಲು ಯುದ್ಧದೋಪಾದಿ ಕಾಮಗಾರಿ ನಡೆಯುತ್ತಿದೆ.ಈಗಾಗಲೇ 70 ಕೆರೆಗಳು ತುಂಬಿದ್ದು, ಇದು ತಮ್ಮ ಸೇವಾವಧಿಯಲ್ಲಿಯೇ ಅತಿ ಹೆಚ್ಚು ತೃಪ್ತಿ ತಂದಕಾರ್ಯವಾಗಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಇಇ ಸುರೇಶ್‌ಕುಮಾರ್‌ ತಿಳಿಸಿದರು. ಉದಯವಾಣಿಯೊಂದಿಗೆ ಮಾತನಾಡಿದ ಅವರು, ಮಳೆ ಸಹಕರಿಸಿ ವ್ಯಾಲಿ ನೀರು 400 ಎಂಎಲ್‌ಡಿಗೆ ಹೆಚ್ಚಳವಾದರೆ ವರ್ಷಾಂತ್ಯದೊಳಗೆ ಕನಿಷ್ಠ 100 ಕೆರೆಗಳನ್ನಾದರೂ ತುಂಬಿಸಲಾಗುವುದು. ಕೋಲಾರ ಜಿಲ್ಲೆಯ ರೈತರು ಇಸ್ರೇಲ್‌ ತಂತ್ರಜ್ಞಾನವನ್ನು ಈಗಾಗಲೇ ಅಳವಡಿಸಿ ಕೊಂಡಿರುವುದರಿಂದ ಯಥೇತ್ಛವಾಗಿ ಹೂ, ಹಣ್ಣ, ತರಕಾರಿ ಬೆಳೆದು ಬೆಂಗಳೂರು ಮಾರುಕಟನ್ನೇ ತುಂಬಿಸಲಿದ್ದಾರೆ.ಕೋಲಾರ ಜಿಲ್ಲೆ ಮಲೆನಾಡಿನಂತೆ ಕಂಗೊಳಿಸಲಿದೆ.

ಹೆಸರು ವಾಸಿ ಕೆರೆಗಳು : ಕೋಲಾರ ಜಿಲ್ಲೆಯಲ್ಲಿ ಕೆ.ಸಿ ವ್ಯಾಲಿ ನೀರು ಮೊದಲು ತುಂಬಿಸಿದ್ದ ನರಸಾಪುರ ಕೆರೆ, ಎಸ್‌. ಅಗ್ರಹಾರ ಕೆರೆ, ಮುದುವಾಡಿ ಕೆರೆ, ಹೊಳಲಿ ಕೆರೆ, ರಾಮಸಾಗರಕೆರೆ, ಬೇತಮಂಗಲ ಕೆರೆ,ಕೋಲಾರಮ್ಮ ಕೆರೆಗಳನ್ನು ದೊಡ್ಡ ಕೆರೆಗಳೆಂದು ಗುರುತಿಸಲಾಗಿದೆ. ಈ ಕೆರೆಗಳಿಗೆ ಕೆ.ಸಿ ವ್ಯಾಲಿ ನೀರು ಹರಿಯುತ್ತಿರುವುದರಿಂದ ಕೆರೆ ಅಭಿವೃದ್ಧಿ ಕಾರ್ಯ ನಡೆದಿದೆ.

 

-ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next