Advertisement

ಸಿಎಂ ಬರುವ ಮುನ್ನವೇ ಹೊರ ನಡೆದ ಕತ್ತಿ

11:18 PM Mar 15, 2020 | Team Udayavani |

ಬೆಳಗಾವಿ: ಸಚಿವ ಸ್ಥಾನ ಸಿಗದೆ ಮುನಿಸಿಕೊಂಡು ಆಗಾಗ ಮುಖ್ಯಮಂತ್ರಿ ವಿರುದ್ಧ ಅಸಮಾಧಾನ ಹೊರ ಹಾಕುತ್ತಿರುವ ಬಿಜೆಪಿಯ ಹಿರಿಯ ಶಾಸಕ ಉಮೇಶ ಕತ್ತಿ ಅವರು ಯಡಿಯೂರಪ್ಪ ಬರುವ ಮುನ್ನವೇ ಮದುವೆ ಸಮಾರಂಭದಿಂದ ವಾಪಸ್‌ ಹೋದರು.

Advertisement

ವಿಧಾನ ಪರಿಷತ್‌ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರ ಪುತ್ರಿ ಮದುವೆ ವೇಳೆ ಭಾಗವಹಿಸಿದ್ದ ಉಮೇಶ ಕತ್ತಿ, ಯಡಿಯೂರಪ್ಪ ಅವರನ್ನು ಭೇಟಿ ಆಗಲಿಲ್ಲ. ಸಿಎಂ ಬರುತ್ತಾರೆ ಎನ್ನುವಷ್ಟರಲ್ಲಿಯೇ ಅಲ್ಲಿಂದ ಹೋಗಿ ಬಿಟ್ಟರು. ನಂತರದಲ್ಲಿ ಯಡಿಯೂರಪ್ಪ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದಾಗ ಉಮೇಶ ಕತ್ತಿ ಹೊರತು ಪಡಿಸಿ ಜಿಲ್ಲೆಯ ಬಹುತೇಕ ನಾಯಕರು ಇದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಉಮೇಶ ಕತ್ತಿ, “ಮುಖ್ಯಮಂತ್ರಿಯೊಂದಿಗೆ ನಾನು ಮುನಿಸಿಕೊಂಡಿಲ್ಲ. ಯಾವುದೇ ಅಸಮಾಧಾನ, ಭಿನ್ನಮತವಿಲ್ಲ. ಯಡಿಯೂರಪ್ಪ ಅವರೇ ನಮ್ಮ ನಾಯಕರು. ಬಿಜೆಪಿಗೆ ಸೇರ್ಪಡೆಯಾಗಿ ಶಾಸಕರಾದವರಿಗೆ ಸಚಿವ ಸ್ಥಾನ ಕೊಟ್ಟಿದ್ದಕ್ಕೆ ನನ್ನನ್ನು ಕೈ ಬಿಟ್ಟಿರಬಹುದು’ ಎಂದರು.

ಮುಂದೆ ನಾನೇ ಸಿಎಂ ಆಗುತ್ತೇನೆ – ಕತ್ತಿ: ನನಗೀಗ 63 ವರ್ಷ. ಇನ್ನೂ 20 ವರ್ಷ ರಾಜಕಾರಣ ಮಾಡುತ್ತೇನೆ. ರಾಜಕೀಯ ಜೀವನ ಇನ್ನೂ ಅನೇಕ ವರ್ಷಗಳ ಕಾಲ ಇದೆ. ಬಿಜೆಪಿಯಲ್ಲಿ ಇದ್ದುಕೊಂಡು ಇದೇ ಸರ್ಕಾರದಲ್ಲಿ ಮಂತ್ರಿ ಆಗುತ್ತೇನೆ. ರಾಜ್ಯದ ಜನರ ಆಶೀರ್ವಾದ ಇದೆ. ಮುಂದೆ ಮುಖ್ಯಮಂತ್ರಿಯೂ ಆಗುತ್ತೇನೆ ಎಂದು ಉಮೇಶ್‌ ಕತ್ತಿ ನಗುತ್ತ ಅಲ್ಲಿಂದ ಕಾಲ್ಕಿತ್ತರು.

Advertisement

Udayavani is now on Telegram. Click here to join our channel and stay updated with the latest news.

Next