Advertisement

ಕಾತ್ರಜ್‌  ಶ್ರೀ ಅಯ್ಯಪ್ಪ ಸ್ವಾಮೀ ದೇವಸ್ಥಾನ: ಮಹಾಪೂಜೆ

05:11 PM Dec 20, 2018 | Team Udayavani |

ಪುಣೆ: ಪುಣೆಯ ಕಾತ್ರಜ್‌  ಶ್ರೀ ಅಯ್ಯಪ್ಪ ಸ್ವಾಮೀ ದೇವಸ್ಥಾನದಲ್ಲಿ  ಶ್ರೀ ಅಯ್ಯಪ್ಪ ಸ್ವಾಮಿಯ  ಮಹಾಪೂಜೆ ಮತ್ತು ವಾರ್ಷಿಕ ಮಹೋತ್ಸವವು ವಿವಿಧ ಧಾರ್ಮಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ  ಡಿ.16ರಂದು ಬಹಳ ವಿಜೃಂಭಣೆ ಯಿಂದ ಜರಗಿತು

Advertisement

ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ಹರೀಶ್‌ ಭಟ್‌ ಮತ್ತು ತಂಡದವರ  ನೇತೃತ್ವದಲ್ಲಿ   ಧಾರ್ಮಿಕ ಸೇವಾ ಪೂಜಾ ಕಾರ್ಯಗಳು ನಡೆದವು.

ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಮೊದಲು ಡಿ.15ರಂದು  ಸಂಜೆ 6ರಿಂದ ಸುದರ್ಶನ ಹೋಮ  ಮತ್ತು¤ ವಾಸ್ತು ಪೂಜೆ ನಡೆಯಿತು.

ಡಿ.16ರಂದು  ಬೆಳಗ್ಗೆ 7 ಗಂಟೆಗೆ ಗಣಹೋಮ, ಶ್ರೀ ಅಯ್ಯಪ್ಪಸ್ವಾಮಿ  ದೇವರ ಪ್ರಧಾನ ಹೋಮ, ಬೆಳಗ್ಗೆ 8.30 ರಿಂದ ಆರಾಧ್ಯ ದೇವರಾದ ಅಯ್ಯಪ್ಪ ಸ್ವಾಮಿಗೆ ವಿವಿಧ ಅಭಿಷೇಕಗಳು ಮತ್ತು ಅಲಂಕಾರ, ಅನಂತರ ಶ್ರೀ ಅಯ್ಯಪ್ಪ ಸೇವಾ ಸಂಘದ ಸದಸ್ಯರು, ಭಕ್ತರು  ಹಾಗೂ ಅಯ್ಯಪ್ಪ ವ್ರತಧಾರಿಗಳಿಂದ ಭಜನೆ ನಡೆಯಿತು.   ಬೆಳಗ್ಗೆ 11ರಿಂದ   ಅಯ್ಯಪ್ಪ  ದೇವಸ್ಥಾನದ ಪರಿಸರದಲ್ಲಿ  ಶ್ರೀ ದೇವರನ್ನು  ಪಲ್ಲಕಿಯಲ್ಲಿ ಕುಳ್ಳಿರಿಸಿ ಬಲಿ ಮೆರವಣಿಗೆಯು  ಚೆಂಡೆ ವಾದ್ಯಘೋಷ, ಭಕ್ತರ ನೃತ್ಯದೊಂದಿಗೆ    ಜರಗಿತು. ಮಧ್ಯಾಹ್ನ  12ರಿಂದ ಪ್ರಭಾಕರ ಗುರುಸ್ವಾಮಿ ಮತ್ತು ವ್ರತದಾರಿಗಳ ನೇತೃತ್ವದಲ್ಲಿ  ಪಡಿಪೂಜೆ  ಜರಗಿತು. ಅನಂತರ  12.30ರಿಂದ ಶ್ರೀ ಅಯ್ಯಪ್ಪ ಸ್ವಾಮಿಗೆ ಮಹಾಪೂಜೆ ಮಂಗಳಾರತಿ ನೆರವೇರಿತು. ಸಾವಿರಾರು ಭಕ್ತರು ಗಂಧಪ್ರಸಾದ ಸ್ವೀಕರಿಸಿ  ಮಹಾ ಅನ್ನಸಂತರ್ಪಣೆಯ ಅನ್ನಪ್ರಸಾದ ಸ್ವೀಕರಿಸಿದರು.

ರಾತ್ರಿ 7ರಿಂದ ಶ್ರೀ ಅಯ್ಯಪ್ಪ ಸ್ವಾಮಿಗೆ ರಂಗ ಪೂಜೆ ಮತ್ತು ಮಹಾಆರತಿಯ ಅನಂತರ ದೇವಸ್ಥಾನದ ವಠಾರದಲ್ಲಿ ದೇವರ ಬಲಿ ಉತ್ಸವವು  ಬಹಳ ವಿಜೃಂಭಣೆಯಿಂದ ಜರಗಿತು ಹಾಗು ಸಾವಿರಾರು ಭಕ್ತರನ್ನು ಪುಳಕಿತಗೊಳಿಸಿತು.

Advertisement

ಕಾತ್ರಜ್‌ ಅಯ್ಯಪ್ಪ ದೇವಸ್ಥಾನದ ವಾರ್ಷಿಕೋತ್ಸವ ಸಂದರ್ಭದಲ್ಲಿ ಈ ಬಲಿ ಉತ್ಸವ ಸೇವೆಯು ಬಹಳ ಪ್ರಸಿದ್ಧಿಯನ್ನು ಪಡೆದಿದ್ದು,ಈ ಬಲಿ ಉತ್ಸವಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ಶ್ರೀ ಅಯ್ಯಪ್ಪ ದೇವರ ಅಲಂಕೃತ ಪ್ರಭಾವಳಿಯನ್ನು ಹೊರುವವರು ನಮ್ಮ ತುಳುನಾಡಿನ ಅತ್ಯಂತ ಪ್ರಸಿದ್ಧಿಯನ್ನು ಪಡೆದವರಾಗಿದ್ದು ಪುಣೆಯಲ್ಲಿ  ಈ ದೇವಸ್ಥಾನದ ವಾರ್ಷಿಕೋತ್ಸವ ಸಂದರ್ಭದಲ್ಲಿ ಪ್ರತಿ ವರ್ಷವೂ ಆಗಮಿಸುತ್ತಾರೆ. ಊರಿನಿಂದಲೇ ಆಗಮಿಸುವ ವಾದ್ಯ ಘೋಷದ ತಂಡದವರ  ಸ್ವರ ನಾದಕ್ಕೆ   ಮತ್ತು  ಬಲಿ ನರ್ತನ ಸೇವೆಯು  ಭಕ್ತರ ಮನದಲ್ಲಿ ಅಚ್ಚಳಿಯದೆ ನೆಲೆ ನಿಲ್ಲುವಂತಾಗಿದೆ.

ಈ   ಪುಣ್ಯ ಕಾರ್ಯಗಳಲ್ಲಿ ಪುಣೆ ತುಳು ಕನ್ನಡಿಗರಲ್ಲದೆ ಇತರೆ ಭಾಷಿಕರು, ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಗಂಧಪ್ರಸಾದ ಸ್ವೀಕರಿಸಿ ಶ್ರೀ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾದರು. ಮಧ್ಯಾಹ್ನ 1 ರಿಂದ ರಾತ್ರಿಯವರೆಗೆ ಪ್ರಸಾದ ರೂಪದಲ್ಲಿ ಅನ್ನದಾನ ನೆರವೇರಿತು.

ಧಾರ್ಮಿಕ ಕಾರ್ಯಕ್ರಮಗಳ ಜೊತೆ ಜೊತೆಯಾಗಿ  ದೇವಸ್ಥಾನದ ಹೋರಾಂಗಣದಲ್ಲಿ ಹಾಕಿದ ರಂಗ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಮಧ್ಯಾಹ್ನ 2ರಿಂದ ಮಕ್ಕಳಿಂದ  ವೈವಿಧ್ಯಮಯ ನೃತ್ಯ ಕಾರ್ಯಕ್ರಮ ಹಾಗೂ ಇತರೆ ಸಾಂಸ್ಕೃತಿಕ  ಕಾರ್ಯಕ್ರಮಗಳು, ಅಪರಾಹ್ನ 3.30 ರಿಂದ ಶಾರದಾ  ಆರ್ಟ್ಸ್ ಮಂಜೇಶ್ವರ ಕಲಾವಿದರಿಂದ ಗಡಿನಾಡ ಕಲಾನಿಧಿ ಕೃಷ್ಣ. ಜೆ.ಮಂಜೇಶ್ವರ  ನಿರ್ದೇಶನದ ತುಳುನಾಡ ಕಲಾ ಬಿರ್ಸೆ ದೀಪಕ್‌ ರೈ ಪಾಣಾಜೆ ಅಭಿನಯದ  ನಿತ್ಯೆ ಬನ್ನಗ   ಎಂಬ ತುಳು ಹಾಸ್ಯಮಯ ನಾಟಕ   ಪ್ರದರ್ಶನಗೊಂಡಿತು.

ಈ ಎಲ್ಲಾ ಕಾರ್ಯಕ್ರಮಗಳು  ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ  ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘದ  ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾದ ಸುಭಾಶ್‌ ಶೆಟ್ಟಿ  ಮತ್ತು ಪದಾಧಿಕಾರಿಗಳು, ಶ್ರೀ ಅಯ್ಯಪ್ಪ ಸೇವಾ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಪ್ರಕಾಶ್‌  ಹೆಗ್ಡೆ ಮತ್ತು ಪದಾಧಿಕಾರಿಗಳು, ಶ್ರೀ ಅಯ್ಯಪ್ಪ ಸೇವಾ ಮಹಿಳಾ ಮಂಡಳಿಯ ಅಧ್ಯಕ್ಷೆ ವಿನೋದಾ ಶೆಟ್ಟಿ ಮತ್ತು  ಪದಾಧಿಕಾರಿಗಳು ಮತ್ತು ಭಕ್ತರ  ಸಹಕಾರದೊಂದಿಗೆ ಬಹಳ  ವಿಜೃಂಭಣೆಯಿಂದ ಜರಗಿತು. ಶ್ರೀ ಅಯ್ಯಪ್ಪ ಸ್ವಾಮೀ ದೇವಸ್ಥಾನದಲ್ಲಿ ಮುಂಬರುವ ಜನವರಿ 14ರ  ಮಕರ   ಸಂಕ್ರಾಂತಿಯಂದು ವಿಶೇಷ ಪೂಜೆ ಹಾಗು ಧಾರ್ಮಿಕ  ಕಾರ್ಯಗಳು ನಡೆಯಲಿವೆ.

 ವರದಿ: ಹರೀಶ್‌ ಮೂಡಬಿದ್ರಿ

Advertisement

Udayavani is now on Telegram. Click here to join our channel and stay updated with the latest news.

Next