ಕಟೀಲು: ನಮ್ಮ ಆಹಾರ-ವಿಹಾರದ ಬಗ್ಗೆ ಜಾಗ್ರತೆ ಇರಬೇಕು. ಇದರಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಉಡುಪಿ ಅದಮಾರು ಮಠದ ಮಠದ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಮಣಿಪಾಲ ವಿಶ್ವವಿದ್ಯಾನಿಲಯ ಹಾಗೂ ಮುಂಬಯಿಯ ಸಂಜೀವನಿ ಟ್ರಸ್ಟ್ ಸಹಭಾಗಿತ್ವದಲ್ಲಿ ಕಟೀಲಿನ ಅಜಾರು ಬಳಿ ನಿರ್ಮಾಣಗೊಳ್ಳಲಿರುವ ದುರ್ಗಾ ಸಂಜೀವನಿ ಚಾರಿಟೆಬಲ್ ಆಸ್ಪತ್ರೆಗೆ ರವಿವಾರ ನಡೆದ ಶಿಲಾನ್ಯಾಸ ಸಮಾರಂಭದಲ್ಲಿ ಅವರು ಮಾತನಾಡಿದರು.
ದುರ್ಗೆಯ ಮಡಿಲಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವಂತೆ ಆಸ್ಪತ್ರೆ ನಿರ್ಮಾಣವಾಗು ತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.
ಸಚಿವ ರಮಾನಾಥ ರೈ ಮಾತನಾಡಿ, ಯಕ್ಷಗಾನ, ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಕಟೀಲು ಕ್ಷೇತ್ರವು ಇದೀಗ ಜನರ ಆರೋಗ್ಯ ಕಾಳಜಿಯಿಂದ ಸಂಜೀವನಿ ಟ್ರಸ್ಟ್ ಹಾಗೂ ಮಣಿಪಾಲ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಆಸ್ಪತ್ರೆಯನ್ನು ನಿರ್ಮಿಸುತ್ತಿರುವುದು ಮಹತ್ವದ ಕೆಲಸ ಎಂದು ಹೇಳಿದರು. ಕಟೀಲು ದೇವಸ್ಥಾನ ಆನುವಂಶಿಕ ಮೊಕ್ತೇಸರ ರಾದ ವಾಸುದೇವ ಆಸ್ರಣ್ಣ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಕೆ. ಅನಂತಪದ್ಮನಾಭ ಆಸ್ರಣ್ಣ ಶುಭಾಶಂಸನೆಗೈದರು.
ಮೂಲ್ಕಿ-ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು. ದ.ಕ. ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು, ದ.ಕ. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾ.ಪಂ. ಸದಸ್ಯ ಸುಕುಮಾರ್ ಸನಿಲ್, ಕಟೀಲು ಗ್ರಾ.ಪಂ. ಅಧ್ಯಕ್ಷೆ ಗೀತಾ ಪೂಜಾರ್ತಿ, ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಮಣಿಪಾಲ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್, ಸಹಕುಲಪತಿ ಡಾ| ಸುರೇಂದ್ರ ಶೆಟ್ಟಿ, ರಿಜಿಸ್ಟ್ರಾರ್ ಡಾ| ನಾರಾಯಣ ಸಭಾಹಿತ್, ರಾಷ್ಟ್ರೀಯ ಚಿಂತಕ ಚಕ್ರವರ್ತಿ ಸೂಲಿಬೆಲೆ, ಎಂಆರ್ಪಿಎಲ್ ಉಪಾಧ್ಯಕ್ಷ ಹರಿಕುಮಾರ್, ಅಕ್ವಾಟಿಎಂ ಮುಖ್ಯಸ್ಥ ಸುಬ್ರಹ್ಮಣ್ಯ ಕುಸುನೂರು, ಸಂಜೀವನಿ ಟ್ರಸ್ಟ್ ಟ್ರಸ್ಟಿಗಳಾದ ಜಯಲಕ್ಷ್ಮೀ ರಾವ್, ಡಾ| ದೇವಿಪ್ರಸಾದ್, ಮುಂಬಯಿ ಸಂಜೀವನಿ ಟ್ರಸ್ಟ್ನ ಲಕ್ಷ್ಮೀ ಜಿ. ಆಚಾರ್ಯ, ಡಾ| ಶ್ರುತಿ ರಾವ್, ಡಾ| ಪ್ರಶಾಂತ್ ರಾವ್ ಉಪಸ್ಥಿತರಿದ್ದರು.
ಸಂಜೀವನಿ ಟ್ರಸ್ಟ್ ಅಧ್ಯಕ್ಷ ಡಾ| ಸುರೇಶ್ ರಾವ್ ಪ್ರಸ್ತಾವನೆಗೈದರು. ಶ್ರೀಪತಿ ರಾವ್ ಮಣಿಪಾಲ ಆಸ್ಪತ್ರೆಯ ಆರೋಗ್ಯ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಕಟೀಲು ಅರ್ಚಕ ಶ್ರೀ ಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು.