ಹೊಸದಿಲ್ಲಿ : ಕಾಶ್ಮೀರ ಕಣಿವೆಯಲ್ಲಿನ ಪ್ರಕ್ಷುಬ್ಧ ಪರಿಸ್ಥಿತಿ ಕಳವಳಕಾರಿ ಮಟ್ಟದಲ್ಲಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರಿಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ನಿವಾರಣೋಪಾಯಗಳನ್ನು ಚರ್ಚಿಸಲು ಮಾತುಕತೆ ನಡೆಸಲಿದ್ದಾರೆ.
ಪ್ರಧಾನಿ ಅವರನ್ನು ಮಾತ್ರವಲ್ಲದೆ ಮೆಹಬೂಬ ಅವರು ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೆಹಬೂಬ ಅವರ ಆಹ್ವಾನದ ಪ್ರಕಾರ ಪ್ರಧಾನಿ ಮೋದಿ ಅವರು ನಿನ್ನೆ ಭಾನುವಾರ ಇತರ ರಾಜ್ಯಗಳು ಕೂಡ ಜಮ್ಮು ಕಾಶ್ಮೀರದಲ್ಲಿ ಸಮ್ಮಿಲನ ಕಾರ್ಯಕ್ರಮಗಳನ್ನು ಸಂಘಟಿಸಿ ಇತರ ರಾಜ್ಯಗಳಲ್ಲಿ ಶಿಕ್ಷಣ ಕೈಗೊಂಡಿರುವ ಕಾಶ್ಮೀರ ಕಣಿವೆಯ ವಿದ್ಯಾರ್ಥಿಗಳನ್ನು ತಲುಪಿ ಅವರ ಮನಸ್ಸನ್ನು ಗೆಲ್ಲಬೇಕು ಎಂದು ಸೂಚಿಸಿದ್ದಾರೆ.
ಇತರ ರಾಜ್ಯಗಳು ಕೂಡ ತಮ್ಮಲ್ಲಿ ಶಿಕ್ಷಣ ನಿರತರಾಗಿರುವ ಕಾಶ್ಮೀರ ಕಣಿವೆಯ ವಿದ್ಯಾರ್ಥಿಗಳ ಬಗ್ಗೆ ಆಸಕ್ತಿ ತೋರಬೇಕು ಎಂಬ ಜಮ್ಮು ಕಾಶ್ಮೀರ ಮುಖ್ಯಮಂತ್ರಿಗಳ ಸಲಹೆಯನ್ನು ಪ್ರಧಾನಿ ಮೋದಿ ಅವರು ಅನುಮೋದಿಸಿರುವುದಾಗಿ ನೀತಿ ಆಯೋಗವು ಹೊರಡಿಸಿರುವ ಹೇಳಿಕೆಯಲ್ಲಿ ತಿಳಿಸಿದೆ.
ಈ ನಡುವೆ ಜುಮ್ಮು ಕಾಶ್ಮೀರ ಆಡಳಿತೆಯ ಪಾಲುದಾರ ಪಕ್ಷವಾಗಿರುವ ಬಿಜೆಪಿಯು, ಮೈತ್ರಿಕೂಟದ ಪಕ್ಷವಾಗಿರುವ ಪಿಡಿಪಿ ಜತೆಗೆ ತನಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ; ಮೇಲಾಗಿ ಪಿಡಿಪಿ ನೇತೃತ್ವದ ರಾಜ್ಯ ಸರಕಾರವು ಚೆನ್ನಾಗಿ ಆಡಳಿತೆ ನಡೆಸುತ್ತಿದೆ ಎಂದು ಹೇಳಿರುವುದಾಗಿ ವರದಿಯಾಗಿದೆ.
ಇದೇ ವೇ ಜಮ್ಮು ಕಾಶ್ಮೀರದ ಅಧಿಕಾರಿಗಳು ರಾಜ್ಯದಲ್ಲಿ ಪ್ರತ್ಯೇಕತಾವಾದಿಗಳೊಂದಿಗಿನ ಸಂಘರ್ಷದಲ್ಲಿ ಕಲ್ಲೆಸೆತದಲ್ಲಿ ನಿರತರಾಗಿರುವ ಪ್ರತಿಭಟನಕಾರರನ್ನು ಈ ದುಷ್ಕೃತ್ಯದಲ್ಲಿ ತೊಡಗಿಸುವುದಕ್ಕೆ ಸುಮಾರು 300 ವಾಟ್ಸಪ್ ಸಮೂಹಗಳು ಕಾರ್ಯಾಚರಿಸುತ್ತಿವೆ ಎಂದು ಹೇಳಿರುವುದಾಗಿ ವರದಿಯಾಗಿದೆ.