Advertisement

ಕಾಸರಗೋಡು ಜಿಲ್ಲೆ: ಪ್ರವಾಸಿ ಕೇಂದ್ರಗಳ ಅಭಿವೃದ್ಧಿಯತ್ತ ನಿರ್ಲಕ್ಷ್ಯ

01:35 PM May 13, 2018 | |

ಐತಿಹಾಸಿಕ ಕೋಟೆಗಳು, ಇತಿಹಾಸ ಪ್ರಸಿದ್ಧ ದೇವಸ್ಥಾನಗಳು, ಇಗರ್ಜಿಗಳು, ಮಸೀದಿಗಳು ಹೀಗೆ ಪ್ರವಾಸಿಗರನ್ನು ಕೈಬೀಸಿ ಕರೆಯುವ ಹಲವು ಕೇಂದ್ರಗಳು ಕಾಸರಗೋಡು ಜಿಲ್ಲೆಯಲ್ಲಿವೆ. ಪ್ರಕೃತಿ ರಮಣೀಯ ಪ್ರದೇಶವಾದ ಕಾಸರಗೋಡು ಹಚ್ಚ ಹಸಿರಿನಿಂದ ಕೂಡಿದ್ದು, ಐತಿಹಾಸಿಕ ಪರಂಪರೆ ಈ ಜಿಲ್ಲೆಗಿದೆ. ಆದರೆ ಅಂತಹ ಎಲ್ಲ ಐತಿಹಾಸಿಕ ಕುರುಹುಗಳು, ಕೋಟೆಕೊತ್ತಲಗಳು, ದೇವಾಲಯ, ಇಗರ್ಜಿ, ಮಸೀದಿಗಳಿದ್ದರೂ ಅವುಗಳನ್ನು ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ದಿಸೆಯಲ್ಲಿ ಸಂಬಂಧಪಟ್ಟವರು ಹೆಚ್ಚಿನ ಆಸಕ್ತಿ ವಹಿಸಿಲ್ಲ.

Advertisement

ಕಾಸರಗೋಡು: ಸಾಕಷ್ಟು ಐತಿಹಾಸಿಕ ಹಿನ್ನೆಲೆಯಿರುವ ಹತ್ತು ಹಲವು ಭಾಷೆಗಳ ಸಂಗಮ ಭೂಮಿಯಾದ ಕಾಸರಗೋಡು ಹಲವು ಸಂಸ್ಕೃತಿಗಳನ್ನು ಮೈಗೂಡಿಸಿಕೊಂಡ ಸಂಪನ್ನ ಪ್ರದೇಶ. ದೇಶಕ್ಕೇ ಮಾದರಿಯಾಗಿರುವ ಅಥವಾ “ಮಿನಿ ಭಾರತ’ ಎಂದೇ ಗುರುತಿಸಿ ಕೊಂಡಿರುವ ಇಲ್ಲಿನ ಜನಜೀವನ, ಆಚಾರ, ವಿಚಾರಗಳು, ನಡೆ, ನುಡಿ ಎಲ್ಲವು ಭಿನ್ನ. ಒಂದೇ ಪ್ರದೇಶದಲ್ಲಿ ಎಲ್ಲೂ ಸಿಗದಷ್ಟು ಭಾಷಾ ವೈವಿಧ್ಯ. ಆರಾಧನಾಲಯಗಳಿಲ್ಲದ ಒಂದೇ ಒಂದು ಪ್ರದೇಶ ದುರ್ಬೀನಿಟ್ಟು ನೋಡಿದರೂ ಕಾಣಸಿಗದು. ಇಂತಹ ಸಾಂಸ್ಕೃತಿಕ ವೈವಿಧ್ಯದ ಮಣ್ಣಿನಲ್ಲಿ ಸಾಕಷ್ಟು ಪ್ರವಾಸಿ ಕೇಂದ್ರಗಳಿದ್ದರೂ, ನಿರೀಕ್ಷೆಯ ಮಟ್ಟಕ್ಕೆ ಬೆಳೆದಿಲ್ಲ. ಪ್ರವಾಸಿ ಕೇಂದ್ರಗಳ ಸಮಗ್ರ ಅಭಿವೃದ್ಧಿಗೆ ಸಾಧ್ಯತೆಗಳಿದ್ದರೂ ಸಂಬಂಧಪಟ್ಟವರ ನಿರ್ಲಕ್ಷÂ ಮನೋಭಾವ ಅಥವಾ ಇಚ್ಛಾಶಕ್ತಿ ಇಲ್ಲದಿರುವುದರಿಂದ ಕಾಸರಗೋಡಿನ ಪ್ರವಾಸಿ ಕೇಂದ್ರಗಳು ಅಭಿವೃದ್ಧಿ ಪಥದತ್ತ ಸಾಗ‌ಲು ಸಾಧ್ಯವಾಗಿಲ್ಲ ಎಂಬುದು ದುರಂತವೇ ಸರಿ.

1956 ರಲ್ಲಿ ಆಡಳಿತೆಯ ದೃಷ್ಟಿಯಿಂದ ರಾಜ್ಯ ವಿಂಗಡಣೆ ಆದ ಸಂದರ್ಭದಲ್ಲಿ ಅಚ್ಚಗನ್ನಡ ಪ್ರದೇಶವಾದ ಕಾಸರಗೋಡು ಕೇರಳಕ್ಕೆ ಸೇರಿತ್ತು. ಕೇರಳದ ರಾಜಧಾನಿಯಿಂದ ಬಹಳಷ್ಟು ದೂರದ ಉತ್ತರದಲ್ಲಿದಲ್ಲಿರುವ ಕಾಸರಗೋಡು ಕರ್ನಾಟಕ ಗಡಿಗೆ ತಾಗಿಕೊಂಡಿದೆ. ರಾಜ್ಯದ ಪ್ರಮುಖ ಪ್ರವಾಸಿ ಕೇಂದ್ರವಾಗಿ ಗುರುತಿಸಬಹುದಾಗಿದ್ದ ಕಾಸರಗೋಡು ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿ ಕೇಂದ್ರಗಳಿದ್ದರೂ, ಸ್ಥಳೀಯ ಪ್ರವಾಸಿಗರ ಸಹಿತ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ವಿಫಲವಾಗಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೊಳಿಸಲು ಸಾಧ್ಯತೆಗಳಿದ್ದರೂ, ಸೂಕ್ತವಾಗಿ ಬಳಸಿಕೊಳ್ಳುವಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸಾಧ್ಯವಾಗಿಲ್ಲ. ಪ್ರವಾಸೋದ್ಯಮ ವಲಯದಲ್ಲಿ ವಿವಿಧ ಸಾಧ್ಯತೆಗಳಿರುವ ಜಿಲ್ಲೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅಭಿವೃದ್ಧಿ ಮರೀಚಿಕೆಯಾಗಿದೆ.

ಬೇಕಲ ಕೋಟೆ : ಕನ್ನಡಿಗರಾದ ಇಕ್ಕೇರಿ ಅರಸರು ನಿರ್ಮಿಸಿದ, ಪ್ರವಾಸಿಗರ ಸ್ವರ್ಗ ಎಂದೇ ಗುರುತಿಸಿಕೊಂಡಿರುವ ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರ ಬೇಕಲ ಕೋಟೆ ಸಹಿತ ಹತ್ತು ಹಲವು ಪ್ರವಾಸಿ ತಾಣಗಳಿದ್ದರೂ, ಇವುಗಳನ್ನು ಅಭಿವೃದ್ಧಿಗೊಳಿಸಿ ಪ್ರವಾಸಿಗರನ್ನು ಆಕರ್ಷಿಸಿ ಕೈಬೀಸಿ ಕರೆಯುವಂತಾಗಲು ಮೂಲಭೂತ ಸೌಕರ್ಯಗಳನ್ನೂ ಕಲ್ಪಿಸಲು ಪ್ರವಾಸೋದ್ಯಮ ಇಲಾಖೆ ಯಿಂದ ನಿರೀಕ್ಷೆಯಂತೆ ಸಾಧ್ಯವಾಗಿಲ್ಲ. ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರ ವಾದ ಬೇಕಲ ಕೋಟೆ ಸಹಿತ ಹಲವಾರು ಪ್ರವಾಸಿ ಕೆಂದ್ರಗಳಿರುವ  ಜಿಲ್ಲೆಯ ಪ್ರವಾಸೋದ್ಯಮ  ಅಭಿವೃದ್ಧಿಗೆ ಅಧಿಕಾರಿ ಗಳು ಆದ್ಯತೆ ನೀಡದಿರುವು ದರಿಂದ ಪ್ರವಾಸಿಗಳ ಸಂಖ್ಯೆ ಕುಸಿಯುತ್ತಿದೆ. ಬೇಕಲಕೋಟೆ ಹಾಗೂ ಪಳ್ಳಿಕೆರೆ ಬೀಚನ್ನು ಆಂತಾರಾಷ್ಟ್ರೀಯ ಮಟ್ಟಕ್ಕೇರಿಸಿದರೂ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ಯಾವುದೇ ಕ್ರಮ ಅಧಿಕಾರಿಗಳಿಂದ ಉಂಟಾಗಿಲ್ಲ. ಅಲ್ಲದೆ ಇಲ್ಲಿನ ಪ್ರವಾಸಿ ಕೇಂದ್ರಗಳಿಗೆ ತಲುಪಲು ಅಗತ್ಯದ ರಸ್ತೆಯಾಗಲೀ, ರೈಲು ನಿಲ್ದಾಣವಾಗಲೀ ಸುಸಜ್ಜಿತವಾಗಿಲ್ಲ. ಹೊಂಡ ಗುಂಡಿ ರಸ್ತೆಯಲ್ಲಿ ಸಾಗಬೇಕಾದ ದುಃಸ್ಥಿತಿ ಪ್ರವಾಸಿಗರದ್ದು.  

ಈ ಕಾರಣದಿಂದ ಜಿಲ್ಲೆಯ ಪ್ರವಾಸಿ ಕೇಂದ್ರಗಳನ್ನು ವೀಕ್ಷಿಸಬೇಕೆನ್ನುವ ಪ್ರವಾಸಿಗರೂ ಕೂಡಾ ಜಿಲ್ಲೆಗೆ ಬರಲು ಹಿಂದಡಿಯಿಡುತ್ತಿದ್ದಾರೆ.

Advertisement

ರಾಣಿಪುರಂ: ಚಾರಣಿಗರ ಸ್ವರ್ಗ 
ಚಾರಣಿಗರ ಸ್ವರ್ಗ ರಾಣಿಪುರಂ ಪ್ರವಾಸಿ ಕೇಂದ್ರದಲ್ಲಿ ಸಾಕಷ್ಟು ಅವಕಾಶಗಳಿದ್ದರೂ ನಿರೀಕ್ಷೆಯಂತೆ ಅಭಿವೃದ್ಧಿ ಸಾಧ್ಯವಾಗಿಲ್ಲ. ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲೂ ಸಾಧ್ಯವಾಗಿಲ್ಲ. ರಾಣಿಪುರಂ ಅರಣ್ಯ ಪ್ರದೇಶವನ್ನು ಹೊಕ್ಕಿದರೆ ದಾರಿ ತೋರದೆ ವಾಪಸಾಗಲು ಬಹಳಷ್ಟು ಸಂಕಷ್ಟ ಅನುಭವಿಸಬೇಕಾಗುತ್ತದೆ. ಹಲವು ಬಾರಿ ರಾಣಿಪುರಂಗೆ ಹೋಗಿದ್ದ ಪ್ರವಾಸಿಗರು ಅರಣ್ಯದೊಳಗೆ ಹೋದ ಬಳಿಕ ಹಿಂದೆ ಬರಲು ಸಾಧ್ಯವಾಗದೆ ಮೂರು ನಾಲ್ಕು ದಿನ ಅರಣ್ಯದಲ್ಲೇ ಉಳಿದುಕೊಂಡು ಸಾಹಸದಿಂದ ಹೊರಬಂದ ಘಟನೆಗಳೂ ನಡೆದಿತ್ತು. ಈ ಪ್ರದೇಶದಲ್ಲಿ ದೂರವಾಣಿ ಸಂಪರ್ಕ ಕೂಡಾ ಲಭಿಸುವುದಿಲ್ಲ. ಪ್ರವಾಸಿಗರಿಗೆ ಉಳಿದುಕೊಳ್ಳಲು ವ್ಯವಸ್ಥೆಯಿದ್ದರೂ, ಈ ಕಟ್ಟಡದಲ್ಲಿ ಸಾಕಷ್ಟು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಾಗಿಲ್ಲ.

ನವಿಲುಗಳು ಗುಂಪುಗೂಡಿ ಆಗಮಿಸುವ ಮುಳಿ ಯಾರು- ಆದೂರು-ಮಯಿಲಾಟುಪ್ಪಾರ, ವಿದ್ಯಾನಗರ ಮೊದಲಾದ ಪ್ರದೇಶಗಳಲ್ಲಿ ಸೌಕರ್ಯ ಕಲ್ಪಿಸಿದರೆ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗಬಹುದು. ಈ ಪ್ರದೇಶದಲ್ಲಿ ನವಿಲು ಸಾಕಷ್ಟು ಇದ್ದು, ಈ ಪ್ರದೇಶವನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ದಿಪಡಿಸ ಬಹುದು. ಆದರೆ ಈ ಪ್ರದೇಶವನ್ನು   ಅಭಿವೃದ್ಧಿಪಡಿಸಲು ಸಂಬಂಧಪಟ್ಟವರಿಗೆ ಇಚ್ಛಾಶಕ್ತಿ ಬೇಕು.

ಕೋಟೆಗಳ ನಾಡು 
ಕಾಸರಗೋಡು ಜಿಲ್ಲೆಯಲ್ಲಿ ಹಲವು ಕೋಟೆಗಳಿದ್ದು, ಅವುಗಳ ಪೈಕಿ ಬೇಕಲ ಕೋಟೆ ತಾಯಿ ಕೋಟೆ ಎಂದೇ ಪ್ರಸಿದ್ಧಿ. ಇದರ ಜತೆಯಲ್ಲಿ ಕಾಸರಗೋಡಿನಲ್ಲಿ ಹಲವು ಕೋಟೆಗಳಿವೆ.  ಆರಿಕ್ಕಾಡಿ, ಚಂದ್ರಗಿರಿ, ಪೊವ್ವಲ್‌ ಕೋಟೆಗಳು ಪ್ರವಾಸಿ ಕೇಂದ್ರಗಳಲ್ಲಿ ಸೇರ್ಪಡೆ ಗೊಳಿಸ ಲಾಗಿದೆ. ಆದರೆ ಈ ಕೋಟೆ ಯನ್ನು ಅಭಿವೃದ್ಧಿ ಪಡಿಸಲು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕೆಲವು ದುರಸ್ತಿ ಕೆಲಸ ಬಿಟ್ಟರೆ ಪ್ರವಾಸಿಗರನ್ನು  ಆಕರ್ಷಿಸುವಂತಹ ಕೆಲಸ ನಡೆದಿಲ್ಲ. ಇದಲ್ಲದೇ ಇನ್ನೂ ಹಲವು ಕೋಟೆಗಳಿವೆ. ಕಾಸರಗೋಡು ಕೋಟೆ, ಹೊಸದುರ್ಗ ಕೋಟೆ, ಮಧೂರಿನ ಮಾಯಿಲ ಕೋಟೆ, ಬಂದ್ಯೋಡ್‌ ಅಡ್ಕದ ಕೋಟೆ ಮೊದಲಾದವು ಇನ್ನೂ ಅಭಿವೃದ್ಧಿ ಕಂಡಿಲ್ಲ.

ಮಂಜೇಶ್ವರ ಸುಂದರ ಪ್ರದೇಶ
ದೇಶದಲ್ಲೇ ಅಪೂರ್ವವಾದ ಮಂಜೇಶ್ವರ ಜೈನ ಬಸದಿ, ಮಂಜೇಶ್ವರ ಸಮುದ್ರ ಕಡಲ ಕಿನಾರೆ, ಆದೂರು ಪರಪ್ಪ ಮೀಸಲು ಅರಣ್ಯ, ಸಾಹಸಿಗಳಿಗೆ ಸ್ವರ್ಗವಾದ ಕೋಟಂಚೇರಿ ಹಿಲ್‌, ಅನಂತಪುರ ಸರೋವರ ಕ್ಷೇತ್ರ ಮೊದಲಾದ ಪ್ರವಾಸಿ ಕೇಂದ್ರಗಳಿವೆ. ಈ ಕೇಂದ್ರಗಳಲ್ಲಿ ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸಂಬಂಧಪಟ್ಟ ಪ್ರವಾಸೋದ್ಯಮ ಇಲಾಖೆ ಮುಂದಾಗಿಲ್ಲ.

ಪ್ರವಾಸೋದ್ಯಮ ಅಭಿವೃದ್ಧಿಗೆ ರಾಜ್ಯ ಸರಕಾರ ಆದ್ಯತೆ ನೀಡುತ್ತಿರುವಾಗ ಜಿಲ್ಲೆಯಲ್ಲಿ ಇದರ ಯಾವುದೇ ಚಟುವಟಿಕೆಗಳು ಸಕ್ರಿಯಗೊಂಡಿಲ್ಲ. ವಲಿಯಪರಂಬ ಟೂರಿಸಂ-ಕಾಯಲ್‌ ಟೂರಿಸಂ (ಹಿನ್ನೀರು ಪ್ರವಾಸೋ ದ್ಯಮ) ಅಭಿವೃದ್ಧಿ ಇದೀಗ ಮರೀಚಿಕೆಯಾಗಿದೆ. ಪ್ರವಾಸಿಗರನ್ನು   ಆಕರ್ಷಿಸುವ    ಪೈವಳಿಕೆ   ಪೊಸಡಿಗುಂಪೆಯ ಅಭಿವೃದ್ಧಿ ಇನ್ನೂ ಸಾರ್ಥಕಗೊಂಡಿಲ್ಲ. 

ಸಮುದ್ರ ತಳದಿಂದ 1,500  ಮೀಟರ್‌ ಎತ್ತರದಲ್ಲಿರುವ ಪೊಸಡಿಗುಂಪೆಯಲ್ಲಿ ಸಿನಿಮಾ, ಕಿರುಚಿತ್ರಗಳ ಚಿತ್ರೀಕರಣ ನಡೆದಿದ್ದರೂ ಬೆಟ್ಟದ ಮೇಲೆ ತಲುಪಲು ರಸ್ತೆ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿಲ್ಲ. ಗಾಳಿಯಿಂದ ವಿದ್ಯುತ್‌ ಉತ್ಪಾದಿಸಲು ಯೋಗ್ಯವಾದ ಈ ಪ್ರದೇಶ ಅಧಿಕಾರಿಗಳ ಅವಗಣನೆಯಿಂದಾಗಿ ಅಭಿವೃದ್ಧಿಯಿಂದ ಹಿಂದುಳಿದಿದೆ.ಆದೂರು ಪರಪ್ಪದ ರಿಸರ್ವ್‌ ಅರಣ್ಯ ಕೇಂದ್ರೀಕರಿಸಿ ಸರಕಾರಿ ಅತಿಥಿಗೃಹ ಕಾರ್ಯಾಚರಿಸುತ್ತಿದೆ. ಇದನ್ನು ಸದುಪಯೋಗಪಡಿಸಿ ಪ್ರವಾಸೋದ್ಯಮ ಅಭಿವೃದ್ಧಿಗೆ ಉಪಯೋಗಿಸಲಾಗುವುದು ಎಂದು ಈ ಹಿಂದೆಯೇ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇತಿಹಾಸ ಪ್ರಸಿದ್ಧವಾದ ಪೊವ್ವಲ್‌ಕೋಟೆ ಹಾಗೂ ಚಂದ್ರಗಿರಿ ಕೋಟೆಯ ದುರಸ್ತಿ ಕಾಮಗಾರಿ ಗಳನ್ನು ಆರ್ಕಿಯೋಲಜಿಕಲ್‌ ಸರ್ವೇ ಆಫ್‌ ಇಂಡಿಯಾ ನಡೆಸಿದ್ದರೂ ಇದನ್ನು ಪ್ರವಾಸಿಗಳಿಗೆ ಸದುಪಯೋಗ ಪಡಿಸಲು ಸಾಧ್ಯವಾಗಿಲ್ಲ. 

ಆರಿಕ್ಕಾಡಿಯ ಕಾಂಡ್ಲಾ ಪ್ರವಾಸಿ ಕೇಂದ್ರ ಕೇಂದ್ರೀಕರಿಸಿ ಪ್ರವಾಸೋದ್ಯಮದಲ್ಲಿ ಅನೇಕ ಸಾಧ್ಯತೆಗಳಿವೆ. ಈ ಎಲ್ಲಾ ಸಾಧ್ಯತೆಗಳನ್ನು ಸಾಕಾರಗೊಳಿಸಬೇಕಿದ್ದಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇಚ್ಛಾಶಕ್ತಿಯನ್ನು ತೋರಬೇಕಾಗಿದೆ. 

– ಪ್ರದೀಪ್‌ ಬೇಕಲ್‌

Advertisement

Udayavani is now on Telegram. Click here to join our channel and stay updated with the latest news.

Next