Advertisement

Kasaragod ; ತಾಯಿ, ಪತ್ನಿಯ ಕೊಲೆಗೈದು ವ್ಯಕ್ತಿ ಆತ್ಮಹತ್ಯೆ

10:05 PM Feb 17, 2024 | Team Udayavani |

ಕಾಸರಗೋಡು: ತಾಯಿ ಹಾಗೂ ಪತ್ನಿಯನ್ನು ಕೇಬಲ್‌ನಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆಗೈದು ಮಧ್ಯವಯಸ್ಕ ವ್ಯಕ್ತಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಂಞಂಗಾಡ್‌ನ‌ ಮುತ್ತಪ್ಪನ್‌ ಕ್ಷೇತ್ರ ಸಮೀಪದ ಹಬೀಬ್‌ ಕ್ವಾರ್ಟರ್ಸ್‌ನಲ್ಲಿ ನಡೆದಿದೆ.

Advertisement

ಕಾಂಞಂಗಾಡ್‌ ಬಸ್‌ ನಿಲ್ದಾಣ ಪರಿಸರದಲ್ಲಿ ವಾಚ್‌ ವರ್ಕ್ಸ್ ಅಂಗಡಿ ನಡೆಸುತ್ತಿದ್ದ ಸೂರ್ಯಪ್ರಕಾಶ್‌ (55), ಪತ್ನಿ ಗೀತಾ (48) ಮತ್ತು ತಾಯಿ ಲೀಲಾ (93) ಅವರ ಮೃತದೇಹ ಮನೆಯೊಳಗೆ ಪತ್ತೆಯಾಗಿದೆ. ಕ್ವಾರ್ಟರ್ಸ್‌ನ ಎರಡು ಕೊಠಡಿಯಲ್ಲಿ ಲೀಲಾ ಹಾಗೂ ಗೀತಾ ಅವರ ಮೃತದೇಹ ಮಲಗಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಸೂರ್ಯಪ್ರಕಾಶ್‌ ಅವರ ಮೃತದೇಹ ಅಡುಗೆ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿತ್ತು. ಆರ್ಥಿಕ ಹೊರೆ ಘಟನೆಗೆ ಕಾರಣವೆನ್ನಲಾಗಿದೆ.

ಸೂರ್ಯಪ್ರಕಾಶ್‌ ಬರೆದಿಟ್ಟಿದ್ದೆನ್ನಲಾದ ಪತ್ರವೊಂದು ಮನೆಯಲ್ಲಿ ಲಭಿಸಿದ್ದು, ಆರ್ಥಿಕ ಸ್ಥಿತಿ ಹದಗೆಟ್ಟ ಬಗ್ಗೆ ಇದರಲ್ಲಿ ಉಲ್ಲೇಖೀಸಲಾಗಿದೆ. ಕುತ್ತಿಗೆ ಬಿಗಿದ ಕೇಬಲ್‌ ಸ್ಥಳದಲ್ಲಿ ಪತ್ತೆಹಚ್ಚಲಾಗಿದೆ. ದಂಪತಿಗೆ ಮೂವರು ಮಕ್ಕಳಿದ್ದು, ಇಬ್ಬರು ಹೆಣ್ಣು ಮಕ್ಕಳನ್ನು ವಿವಾಹ ಮಾಡಿಕೊಡಲಾಗಿದೆ. ಪುತ್ರ ಅಜಯ್‌ ಉದ್ಯೋಗ ನಿಮಿತ್ತ ಎರ್ನಾಕುಳಂನಲ್ಲಿ ವಾಸವಾಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಹೊಸದುರ್ಗ ಪೊಲೀಸರು ತಲುಪಿ ತನಿಖೆ ನಡೆಸಿದರು.

ಪುತ್ರನಿಗೆ ಕೊನೆಯ ಕರೆ
ಎರ್ನಾಕುಳಂನಲ್ಲಿರುವ ಪುತ್ರ ಅಜಯ್‌ ಅವರಿಗೆ ಫೋನ್‌ ಮಾಡಿ “ಅಜ್ಜಿ ಹಾಗೂ ತಾಯಿ ನಮ್ಮನ್ನು ಬಿಟ್ಟು ತೆರಳಿದ್ದು, ನಾನೂ ಅವರ ದಾರಿಯಲ್ಲಿ ಸಾಗುತ್ತೇನೆ’ ಎಂದು ಸಾವಿಗೆ ಮುನ್ನ ಕರೆ ಮಾಡಿ ತಿಳಿಸಿದ್ದರು. ಇದರಿಂದ ಗಾಬರಿಗೊಂಡ ಅಜಯ್‌ ನೆರೆಮನೆಯ ಗೆಳೆಯನಿಗೆ ಫೋನ್‌ ಮಾಡಿ ಮನೆಯತ್ತ ತೆರಳಿ ನೋಡಲು ತಿಳಿಸಿದ್ದಾರೆ. ಇದರಂತೆ ಗೆಳೆಯ ಹೋಗಿ ನೋಡಿದಾಗ ಮೂವರ ಮೃತದೇಹ ಕಂಡು ಬಂದಿದೆ. ಇದರಿಂದ ಘಟನೆ ಬಯಲಾಯಿತು.

ನೇಣು ಬಿಗಿದು ಮಹಿಳೆ ಆತ್ಮಹತ್ಯೆ
ಬದಿಯಡ್ಕ: ಮೂಲತಃ ಪುತ್ತೂರು ಕಡಬ ನಿವಾಸಿ ಹಾಗೂ ಅಡ್ಯನಡ್ಕ ಚವರ್ಕಾಡ್‌ನ‌ಲ್ಲಿ ವಾಸಿಸುತ್ತಿರುವ ನರಸಿಂಹ ಭಟ್‌ ಅವರ ಪುತ್ರಿ, ಭೀಮೇಶ್‌ ಅವರ ಪತ್ನಿ ವಿ. ವಿನುತಾ (36) ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

ದರೋಡೆ ಪ್ರಕರಣ : 7 ವರ್ಷ ಕಠಿನ ಸಜೆ, ದಂಡ
ಕಾಸರಗೋಡು: 2022ರ ಮಾರ್ಚ್‌ 9ರಂದು ಹಾಡುಹಗಲೇ ಹೊಸದುರ್ಗ ಕಾಞರಪೊಯಿಲಿನ ಅನಿಲ್‌ ಕುಮಾರ್‌ ಅವರ ಮನೆಗೆ ನುಗ್ಗಿ ಅವರ ಪತ್ನಿ ಬಿಜಿತಾ ಅವರ ತಲೆಗೆ ಹೊಡೆದು ಗಂಭೀರ ಗಾಯಗೊಳಿಸಿ ಅವರ ಮೈಮೇಲಿದ್ದ ಚಿನ್ನದ ಒಡವೆಗಳನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದುರ್ಗ ಮಡಿಕೈಯ ಕರುಕ್ಕವಳಪ್ಪಿನ್‌ ಅಶೋಕನ್‌ (45)ಗೆ ಹೊಸದುರ್ಗ ಅಸಿಸ್ಟೆಂಟ್‌ ಸೆಶನ್ಸ್‌ ನ್ಯಾಯಾಲಯ 7 ವರ್ಷ ಸಜೆ ಹಾಗು 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ನೇಣು ಬಿಗಿದು
ಮಹಿಳೆ ಆತ್ಮಹತ್ಯೆ
ಕಾಸರಗೋಡು: ಹೊಸದುರ್ಗ ಮುತ್ತಪ್ಪನ್‌ ಕಾವು ಸಮೀಪದ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿರುವ ನಿಬಿನ್‌ ಅವರ ಪತ್ನಿ ಮಂಜು (27) ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ಯುವಕನ ಕೊಲೆ ಪ್ರಕರಣ:
ತಲೆಮರೆಸಿಕೊಂಡ ಆರೋಪಿಗಳಿಗೆ ಶೋಧ
ಉಪ್ಪಳ: 2022ರ ಜೂನ್‌ 26ರಂದು ಪುತ್ತಿಗೆ ಮುಗುವಿನ ನಿವಾಸಿ, ಕೊಲ್ಲಿ ಉದ್ಯೋಗಿಯಾಗಿದ್ದ ಅಬೂಬಕರ್‌ ಸಿದ್ದಿಕ್‌ ಅವರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡ ಆರು ಮಂದಿ ಆರೋಪಿಗಳಿಗಾಗಿ ಪೊಲೀಸರು ಶೋಧ ತೀವ್ರಗೊಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಬಂಧಿತ ಆರೋಪಿ ಅಬೂಬಕರ್‌ ಸಿದ್ದಿಕ್‌ ಯಾನೆ ನೂರ್‌ಶನನ್ನು ವಿಚಾರಣೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next