Advertisement

ಕಾಸರಗೋಡು ಅಪರಾಧ ಸುದ್ದಿಗಳು

05:02 PM May 17, 2022 | Team Udayavani |

ನಿಲ್ಲಿಸಿದ್ದ ಬಸ್‌ನಿಂದ ಕಂಡೆಕ್ಟರ್‌ ನಾಪತ್ತೆ
ಕಾಸರಗೋಡು: ಪ್ರಯಾಣಿಕರನ್ನು ಹತ್ತಿಸಲೆಂದು ನಿಲ್ಲಿಸಿದ್ದ ಖಾಸಗಿ ಬಸ್‌ವೊಂದರ ಕಂಡೆಕ್ಟರ್‌ ನಾಪತ್ತೆಯಾದ ಘಟನೆ ನಡೆದಿದೆ.

Advertisement

ಬಂದಡ್ಕ-ಕಾಂಞಂಗಾಡ್‌ ರೂಟ್‌ನಲ್ಲಿ ಸಂಚರಿಸುತ್ತಿದ್ದ ಶ್ರೀಯ ಬಸ್‌ನ ಕಂಡೆಕ್ಟರ್‌ ಕುತ್ತಿಕೋಲ್‌ ಕರಿವೇಡಗಂ ನಿವಾಸಿ ಗಣೇಶನ್‌(37) ನಾಪತ್ತೆಯಾಗಿದ್ದಾರೆ.

ಮೇ 16 ರಂದು ಮಧ್ಯಾಹ್ನ ಕಾಂಞಂಗಾಡ್‌ ಬಸ್‌ ನಿಲ್ದಾಣದಲ್ಲಿ ಬಸ್‌ ನಿಲ್ಲಿಸಲಾಗಿತ್ತು. ಈ ವೇಳೆ ಚಾಲಕನೊಂದಿಗೆ ಈಗ ಬರುವುದಾಗಿ ಹೇಳಿ ಹೋದ ಗಣೇಶನ್‌ ವಾಪಸಾಗಿಲ್ಲ. ಬಸ್‌ ಹೊರಡಲು ಸಿದ್ಧವಾದಾಗ ಕಂಡೆಕ್ಟರ್‌ ಇಲ್ಲವೆಂಬ ವಿಷಯ ತಿಳಿಯಿತು. ಕೂಡಲೇ ಪರಿಸರದಲ್ಲಿ ಹುಡುಕಾಡಿದರೂ ಪತ್ತೆಯಾಗಲಿಲ್ಲ.

ಮೊಬೈಲ್‌ ಫೋನ್‌ಗೆ ಕರೆ ಮಾಡಿದಾಗ ಅದು ಸ್ವಿಚ್‌ ಆಫ್‌ ಆಗಿತ್ತು. ಇದೇ ಸಂದರ್ಭದಲ್ಲಿ ಕಂಟೆಕ್ಟರ್‌ನ ಬ್ಯಾಗ್‌ ಮತ್ತು ಟಿಕೆಟ್‌ ಮೆಶಿನ್‌ ಬಸ್‌ನೊಳಗೆ ಪತ್ತೆಯಾಗಿದೆ. ಬೇರೊಬ್ಬ ಕಂಡೆಕ್ಟರ್‌ನ ನೆರವಿನಿಂದ ಬಸ್‌ ಪ್ರಯಾಣ ಮುಂದುವರಿಸಲಾಯಿತು. ಆದರೆ ಕಂಡೆಕ್ಟರ್‌ ನಾಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಬಸ್‌ ಚಾಲಕ ಗೋಪಾಲಕೃಷ್ಣನ್‌ ಹೊಸದುರ್ಗ ಪೊಲೀಸರಿಗೆ ದೂರು ನೀಡಿದ್ದಾರೆ.

ಮದ್ಯ ಸಹಿತ ಬಂಧನ
ಬದಿಯಡ್ಕ: ವ್ಯಾನ್‌ನಲ್ಲಿ ಸಾಗಿಸುತ್ತಿದ್ದ 17.28 ಲೀಟರ್‌ ವಿದೇಶಿ ಮದ್ಯವನ್ನು ಪಯರ್‌ಪಳ್ಳದಿಂದ ವಶಪಡಿಸಿಕೊಂಡ ಬದಿಯಡ್ಕ ರೇಂಜ್‌ ಅಬಕಾರಿ ದಳ ಈ ಸಂಬಂಧ ಪಯೋಲಂ ನಿವಾಸಿ ಸುರೇಂದ್ರನ್‌ ಟಿ. (40) ಅನ್ನು ಬಂಧಿಸಿದೆ. ಮದ್ಯ ಸಾಗಾಟದ ಕುರಿತಾಗಿ ರಹಸ್ಯ ಮಾಹಿತಿಯಂತೆ ಅಬಕಾರಿ ದಳ ಕಾರ್ಯಾಚರಣೆ ನಡೆಸಿತ್ತು.

Advertisement

ತೋಡಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು
ಕಾಸರಗೋಡು: ಸ್ನೇಹಿತರೊಂದಿಗೆ ತೋಡಿನಲ್ಲಿ ಸ್ನಾನ ಮಾಡುತ್ತಿದ್ದಾಗ ನೀರಿನಲ್ಲಿ ಮುಳುಗಿ ವಿದ್ಯಾರ್ಥಿಯೋರ್ವ ಸಾವಿಗೀಡಾದ ಘಟನೆ ನಡೆದಿದೆ.

ಮಾವಿಲ ಕಡಪ್ಪುರ ವೆಳುತ್ತ ಪೊಯ್ಯೆಲ್‌ ನಿವಾಸಿ ಕೆ.ಸಿ.ಶುಕೂರ್‌ ಅವರ ಪುತ್ರ ವಿ.ಬಿಲಾಲ್‌(17) ಸಾವಿಗೀಡಾದ ವಿದ್ಯಾರ್ಥಿ. ಕಯ್ಯೂರು ಚೀಮೇನಿ ಪಂಚಾಯತ್‌ ವ್ಯಾಪ್ತಿಯಲ್ಲಿರುವ ಪೋತ್ತಕಂಡಂ ಅರುಕರ ತೋಡಿನಲ್ಲಿ ಸ್ನಾನ ಮಾಡುತ್ತಿದ್ದಾಗ ಈ ಘಟನೆ ನಡೆಯಿತು.

2.50 ಕೋಟಿ ರೂ. ಮೌಲ್ಯದ ಚಿನ್ನ ಸಹಿತ ಐವರ ಬಂಧನ
ಕಾಸರಗೋಡು: ಅಕ್ರಮವಾಗಿ ಸಾಗಿಸುತ್ತಿದ್ದ 2.50 ಕೋಟಿ ರೂ. ಮೌಲ್ಯದ 4.15 ಕಿಲೋ ಚಿನ್ನ ಸಹಿತ ಐವರನ್ನು ಕರಿಪೂರ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ದಳ ಬಂಧಿಸಿದೆ.

ಕಾಸರಗೋಡು ನಿವಾಸಿಗಳಾದ ರಂಶಾದ್‌(32), ಮುಹಮ್ಮದ್‌ ಅಜ್ಮಲ್‌ ನಿಯಾಸ್‌(23), ಮುಹಮ್ಮದ್‌ ನಿಶಾದ್‌(24), ಮಲಪ್ಪುರಂ ನಿವಾಸಿ ಸಾಹಿರ್‌(42), ನಿಸಾರ್‌(23)ನನ್ನು ಬಂಧಿಸಲಾಗಿದೆ.

ಕಳವಿಗೆ ಯತ್ನ
ಕಾಸರಗೋಡು: ಎಡನೀರು ಚಾತಪ್ಪಾಡಿ ಸಿಂಧ್ಯಾ ತರವಾಡು ಮನೆಯ ಕ್ಷೇತ್ರದಿಂದ ಕಳವಿಗೆ ಯತ್ನಿಸಿದ ಘಟನೆ ನಡೆದಿದೆ.

ಕ್ಷೇತ್ರದ ಹೊರಗಿನ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಗರ್ಭಗುಡಿಯ ಬಾಗಿಲ ಬೀಗ ಮುರಿದಿದ್ದಾರೆ. ಕ್ಷೇತ್ರದಿಂದ ಕಳವಾದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next