Advertisement

ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

10:37 PM Jul 18, 2019 | Sriram |

ಅಲ್ತಾಫ್‌ ಕೊಲೆ ಪ್ರಕರಣ:
ಇನ್ನಿಬ್ಬರ ಬಂಧನ
ಉಪ್ಪಳ: ಇಲ್ಲಿನ ಪ್ರತಾಪನಗರ ಪುಳಿಕುತ್ತಿಯ ಅಲ್ತಾಫ್‌(47) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಇಬ್ಬರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.

Advertisement

ಬೇಕೂರು ಉರುಮಿಚ್ಚಿಯ ರಿಯಾಸ್‌ ಯಾನೆ ರಿಯ (26) ಮತ್ತು ಶಿರಿಯ ಕುನ್ನಿಲ್‌ನ ಮುಹಮ್ಮದ್‌ ರಫೀಕ್‌(26)ರನ್ನು ಬಂಧಿಸಲಾಗಿದೆ. ಇವರನ್ನು ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್‌ ನ್ಯಾಯಾಲಯ (2)ದಲ್ಲಿ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದೆ. ಇಬ್ಬರನ್ನು ಈ ಹಿಂದೆಯೇ ಬಂಧಿಸಲಾಗಿತ್ತು.

ಸಿ.ಸಿ. ಕೆಮರಾಗೆ ಹಾನಿ, ಹಲ್ಲೆ
ಪ್ರಕರಣ: ಕೇಸು ದಾಖಲು
ಬದಿಯಡ್ಕ: ಕುಂಬಾxಜೆ ಸೇವಾ ಸಹಕಾರಿ ಬ್ಯಾಂಕ್‌ನ ಮಾರ್ಪನಡ್ಕದಲ್ಲಿರುವ ಶಾಖೆಯ ಸಿ.ಸಿ. ಕೆಮರಾ ನಾಶಗೊಳಿಸಿದ್ದು, ಇದನ್ನು ಪ್ರಶ್ನಿಸಿದ ಕಾವಲುಗಾರ ಸುರೇಶ್‌ ಕುಮಾರ್‌(28) ಅವರಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ನಿವಾಸಿ ಪ್ರದೀಪ್‌(28) ನನ್ನು ಬದಿಯಡ್ಕ ಪೊಲೀಸರು ಬಂಧಿಸಿ, ಆ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಳಿಸಿದ್ದಾರೆ. ಕೇಸು ದಾಖಲಿಸಿಕೊಂಡಿದ್ದಾರೆ.ಜು. 17ರಂದು ರಾತ್ರಿ ಸಿ.ಸಿ. ಕ್ಯಾಮರಾ ಹಾನಿಗೊಳಿಸಿ, ಹಲ್ಲೆ ಮಾಡಿದ ಪ್ರಕರಣದ ಆರೋಪಿ ಪ್ರದೀಪ್‌ ಮಾನಸಿಕ ಅಸ್ವಸ್ಥನೆಂದು ತಿಳಿದು ಬಂದ ಹಿನ್ನೆಲೆಯಲ್ಲಿ ಜಾಮೀನಿನಲ್ಲಿ ಬಿಡುಗಡೆಗೊಳಿಸಿ ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ.

ವಿದ್ಯಾರ್ಥಿನಿಯ
ಮಾನಹಾನಿ ಯತ್ನ : ಬಂಧನ
ಕುಂಬಳೆ: ನಾಲ್ಕನೇ ತರಗತಿ ವಿದ್ಯಾರ್ಥಿನಿಯ ಮಾನಹಾನಿಗೊಳಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಶಿವಮೊಗ್ಗ ಶಿಂಗಾರಿಪುರದ ಅಖೀಲೇಶ್‌(40)ನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಮುಟ್ಟಂ ಪರಿಸರದಲ್ಲಿ ವಾಸಿಸುವ ಬಾಲಕಿ ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಬಾತ್‌ರೂಂಗೆ ನುಗ್ಗಿದ ಈತ ಬಾಲಕಿಯ ಮಾನಹಾನಿಗೆತ್ನಿಸಿದ್ದಾಗಿ ದೂರು ನೀಡಲಾಗಿತ್ತು. ಇದರಂತೆ ಬಂಧಿಸಲಾಗಿದೆ.

ಪಿ.ಎಸ್‌.ಸಿ. ಕಚೇರಿಗೆ ಜಾಥಾ: ಕೇಸು
ಕಾಸರಗೋಡು: ಯುವಮೋರ್ಚಾ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾ ಪಿಎಸ್‌ಸಿ ಕಚೇರಿಗೆ ನಡೆದ ಪ್ರತಿಭಟನಾ ಜಾಥಾ ಸಂಬಂಧಿಸಿ 17 ಮಂದಿ ಯುವಮೋರ್ಚಾ ಕಾರ್ಯಕರ್ತರ ವಿರುದ್ಧ ಕಾಸರಗೋಡು ಪೊಲೀಸರು ಕೇಸು ದಾಖಲಿಸಿದ್ದಾರೆ. ರಾಜೇಶ್‌ ಕೆ., ಚಿತ್ತರಂಜನ್‌, ಎಂ. ಪ್ರದೀಪ್‌, ಕೆ. ಅನಿಲ್‌ ಕುಮಾರ್‌, ಟಿ.ವಿ. ಶರತ್‌, ಅವಿನಾಶ್‌ ವಿ., ವಿನೀಶ್‌, ವಿನೀತ್‌ ಕುಮಾರ್‌, ರಾಹುಲ್‌, ರಮೇಶ್‌ ಸಹಿತ 17 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ.

Advertisement

ಎಸ್‌.ಪಿ. ಕಚೇರಿಗೆ ಜಾಥಾ: ಕೇಸು
ಕಾಸರಗೋಡು: ಕಾನೂನು ಪಾಲನೆ ವಿಷಯದಲ್ಲಿ ಪೊಲೀಸರು ನಿಷ್ಕ್ರಿಯ ನೀತಿ ಪಾಲಿಸುತ್ತಿದ್ದಾರೆಂದು ಆರೋಪಿಸಿ ಎಸ್‌.ಪಿ.ಕಚೇರಿಗೆ ನಡೆದ ಜಾಥಾ ಸಂಬಂಧ 157 ಮಂದಿ ಮುಸ್ಲಿಂ ಲೀಗ್‌ ಕಾರ್ಯಕರ್ತರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಫಾರಿಸ್‌ ಚೂರಿ, ಅಬ್ದುಲ್ಲ ಕುಂಞಿ, ಮಾಹಿನ್‌ ಕೇಳ್ಳೋಟ್‌, ಹಾಶಿಂ ಕಡವತ್‌, ಅಬ್ಟಾಸ್‌ ಬೀಗಂ, ಮಹಮೂದ್‌ ಕುಂಞಿ, ಅಶ್ರಫ್‌ ಎಡನೀರು ಸಹಿತ 157 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ.

ಮಟ್ಕಾ ದಂಧೆ : ಬಂಧನ
ಬದಿಯಡ್ಕ: ಪೆರ್ಲ ಪೇಟೆಯಲ್ಲಿ ಮಟ್ಕಾ ದಂಧೆಯಲ್ಲಿ ತೊಡಗಿದ್ದ ಸ್ಥಳೀಯ ನಿವಾಸಿಗಳಾದ ಕೃಷ್ಣ ನಾಯ್ಕ (39) ಮತ್ತು ಬಜಕೂಡ್ಲು ನಿವಾಸಿ ರಾಜೇಶ್‌ (35)ನನ್ನು ಬಂಧಿಸಿದ ಬದಿಯಡ್ಕ ಪೊಲೀಸರು ಇವರಿಂದ 1,100 ರೂ. ವಶಪಡಿಸಿಕೊಂಡಿದ್ದಾರೆ.

ನೀರ್ಚಾಲು ಪೇಟೆಯಿಂದ ನೀರ್ಚಾಲು ನಿವಾಸಿ ಮಣಿಕಂಠ (28)ನನ್ನು ಬಂಧಿಸಿದ ಪೊಲೀಸರು ಈತನಿಂದ 850 ರೂ. ವಶಪಡಿಸಿದ್ದಾರೆ.

ಲೈಂಗಿಕ ಕಿರುಕುಳ: ಬಂಧನ
ಕಾಸರಗೋಡು: ಹತ್ತನೇ ತರಗತಿ ವಿದ್ಯಾರ್ಥಿನಿಗೆ ಕೆಲವು ತಿಂಗಳಿಂದ ಲೈಂಗಿಕ ಕಿರುಕುಳ ನೀಡಿದ ಆರೋಪದಂತೆ ವಿದ್ಯಾರ್ಥಿನಿಯ ಮಲತಂದೆ 45ರ ಹರೆಯದ ವ್ಯಕ್ತಿಯನ್ನು ಮೇಲ್ಪರಂಬದ ಪೊಲೀಸರು ಬಂಧಿಸಿದ್ದಾರೆ.

ಬಣ್ಣ ಮಿಶ್ರಿತ ನಾಡ
ಸಾರಾಯಿ ಸಹಿತ ಬಂಧನ
ಬದಿಯಡ್ಕ: ಬಣ್ಣ ಮಿಶ್ರಿತ ನಾಡ ಸಾರಾಯಿ ಸಹಿತ ಬೀಜದಕಟ್ಟೆ ಚೌನಿಗುಡ್ಡೆ ನಿವಾಸಿ ಮಹಾಲಿಂಗ ನಾಯ್ಕ (58)ನನ್ನು ಅಬಕಾರಿ ದಳ ಬಂಧಿಸಿದೆ. ಈತನಿಂದ 3 ಲೀಟರ್‌ ಮದ್ಯ ವಶಪಡಿಸಲಾಗಿದೆ.

ಬಸ್‌ನಲ್ಲಿ ಪರ್ಸ್‌ ಕಳವು
ಬಾಯಾರು: ಕೈಕಂಬದಿಂದ ಮಂಗಳೂರಿಗೆ ಹೋಗುತ್ತಿದ್ದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಬಾಯಾರುಪದವು ಶಿವನಿಲಯದ ಶ್ರೀದೇವಿ ಎನ್‌. ಅವರ ಪರ್ಸ್‌ ಕಳವು ಮಾಡಲಾಗಿದೆ. ಪರ್ಸ್‌ ನಲ್ಲಿ ಆಧಾರ್‌ ಕಾರ್ಡ್‌, ಎಟಿಎಂ ಕಾರ್ಡ್‌ ಮತ್ತು 2,600 ರೂ. ಇತ್ತೆಂದು ತಿಳಿಸಿದ್ದಾರೆ.

ರೈಲಿನಲ್ಲಿ ಕಳವು
ಕಾಸರಗೋಡು: ನೇತ್ರಾವತಿ ಎಕ್ಸ್‌ಪ್ರೆಸ್‌ನಲ್ಲಿ ಕೋಟೆಕ್ಕಲ್‌ಗೆ ಪ್ರಯಾಣಿಸುತ್ತಿದ್ದ ಮಹಾರಾಷ್ಟ್ರ ನಿವಾಸಿ ಮಹಮ್ಮದ್‌ ಅವರ ಪರ್ಸ್‌ ಕಳವು ಮಾಡಲಾಗಿದೆ. ಪರ್ಸ್‌ನಲ್ಲಿ 9000 ರೂ. ಇತ್ತೆಂದು ಕಾಸರಗೋಡು ರೈಲ್ವೇ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ತಂಬಾಕು ಉತ್ಪನ್ನ ವಶಕ್ಕೆ
ಬದಿಯಡ್ಕ: 200 ಪ್ಯಾಕೆಟ್‌ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡ ಅಬಕಾರಿ ದಳ ಈ ಸಂಬಂಧ ಪೊವ್ವಲ್‌ ಎಲ್‌ಬಿಎಸ್‌ ಕಾಲೇಜು ಬಳಿಯ ಮುಹಮ್ಮದ್‌ ಕುಂಞಿ(48) ವಿರುದ್ಧ ಕೇಸು ದಾಖಲಿಸಿದೆ.

ಕಾರು ಢಿಕ್ಕಿ : ಬೈಕ್‌ ಸವಾರನಿಗೆ ಗಾಯ
ಉಪ್ಪಳ: ಹಿದಾಯತ್‌ನಗರದಲ್ಲಿ ಕಾರು ಢಿಕ್ಕಿ ಹೊಡೆದು ಬೈಕ್‌ ಸವಾರ ಮಂಗಲ್ಪಾಡಿ ನಿವಾಸಿ ಮೂಸಾ ಅಬ್ದುಲ್ಲ (40) ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

=

Advertisement

Udayavani is now on Telegram. Click here to join our channel and stay updated with the latest news.

Next