Advertisement

ಕಡಲ ಕಿನಾರೆಯಿಂದ ನುಸುಳುವಿಕೆ; ಕಟ್ಟೆಚ್ಚರ

04:34 AM Apr 08, 2020 | Sriram |

ವಿಶೇಷ ವರದಿ-ಮಹಾನಗರ: ಕಾಸರಗೋಡು- ಕರ್ನಾಟಕ ಸಂಪರ್ಕಿಸುವ ರಸ್ತೆ ಬಂದ್‌ ಮಾಡಿದ ಕಾರಣದಿಂದ, ಕೆಲವರು ಕಡಲ ಕಿನಾರೆಯ ಮೂಲಕ ಅಕ್ರಮವಾಗಿ ದ.ಕ. ಜಿಲ್ಲೆ ಪ್ರವೇಶಿಸಲು ಪ್ರಯತ್ನ ನಡೆಸುತ್ತಿರುವ ಸಂಗತಿ ಬೆಳಕಿಗೆ ಬಂದಿದ್ದು, ಈಗ ಕರಾವಳಿ ಕಾವಲು ಪೊಲೀಸ್‌ ಪಡೆ ಕಡಲ ಕಿನಾರೆಯಲ್ಲಿ ಹದ್ದಿನ ಕಣ್ಣಿರಿಸಿದೆ.

Advertisement

ಕಾಸರಗೋಡಿನ ಕೋವಿಡ್  19 ಸೋಂಕಿ ತರ ಸಂಪರ್ಕದಲ್ಲಿರುವ ಬಹುತೇಕ ಮಂದಿ ಗಡಿ ಭಾಗದಲ್ಲಿಯೇ ಇರುವ ಕಾರಣದಿಂದ ಅವರು ಕಡಲ ಕಿನಾರೆಯ ಮೂಲಕವೂ ದ.ಕ. ಜಿಲ್ಲೆ ಪ್ರವೇಶಿಸುವ ಸಾಧ್ಯತೆಯಿದೆ ಎಂಬ ಸುಳಿವಿನ ಆಧಾರದಲ್ಲಿ ಪೊಲೀಸ್‌ ಕಣ್ಗಾವಲು ಹೆಚ್ಚಿಸಲಾಗಿದೆ. ಜತೆಗೆ ಈ ಭಾಗದಲ್ಲಿ ಮರಳುಗಾರಿಕೆ ನಡೆಸುತ್ತಿರುವ ದೋಣಿಯ ಸಹಾಯದಿಂದಲೂ ದ.ಕ. ಪ್ರವೇಶಿಸುವ ಸಾಧ್ಯತೆ ಇರುವುದರಿಂದ ಈ ಬಗ್ಗೆಯೂ ಪೊಲೀಸ್‌ ಇಲಾಖೆ ಕಟ್ಟೆಚ್ಚರ ವಹಿಸಿದೆ.

ಕಾಸರಗೋಡು-ಮಂಗಳೂರು ನಡುವಿನ ರಸ್ತೆ ಗಡಿ ಬಂದ್‌ನಲ್ಲಿ ಕೊಂಚ ಬದಲಾವಣೆಯಾಗಿದ್ದು, ತುರ್ತು ಸೇವೆಗಳ ವಾಹನ ಓಡಾಟಕ್ಕೆ ಸುಪ್ರಿಂ ಕೋರ್ಟ್‌ ನಿರ್ದೇಶನ ನೀಡಿದೆ. ಆದರೆ ಬೇರೆಲ್ಲ ಗಡಿಗಳನ್ನು ಬಂದ್‌ ಮಾಡಿ ವಲಸೆ ತಡೆಯುವಂತೆ ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರಕಾರ ಆಯಾ ಸರಕಾರಗಳಿಗೆ ಸೂಚಿಸಿವೆ. ಇದರಂತೆ ರಾಜ್ಯ ಸರಕಾರವು ಎಲ್ಲ ಗಡಿ ಬಂದ್‌ ಮಾಡಿತ್ತು. ಇಷ್ಟಿದ್ದರೂ ನದಿ, ಕಡಲ ಕಿನಾರೆ ಮೂಲಕವೂ ಕೆಲವರು ದ.ಕ. ಪ್ರವೇಶಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಕರಾವಳಿ ಕಾವಲು ಪೊಲೀಸ್‌ ಪಡೆ ನದಿ/ಕಡಲ ಕಿನಾರೆ ವ್ಯಾಪ್ತಿಯಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಿದೆ. ಎಲ್ಲರ ಚಲನವಲನದ ಮೇಲೆ ಕಣ್ಣಿಟ್ಟಿದೆ.

ನದಿ ಕಿನಾರೆಯಿಂದ ನುಸುಳುವಿಕೆ
ಕೇರಳ ಗಡಿ ಭಾಗದ ಉದ್ಯಾವರ ಬೀಚ್‌ನಲ್ಲಿ ಮೀನು ಮಾರಾಟ ನಡೆಯುತ್ತಿದೆ. ಸಮೀಪದ ಕಣ್ವತೀರ್ಥ ನದಿ ಕಿನಾರೆಯಿಂದ ತಲಪಾಡಿ ಗಡಿ ಪ್ರವೇಶಕ್ಕೆ ಕೇವಲ ಮೂರು ಕಿ.ಮೀ. ಮಾತ್ರ ದೂರವಿದೆ. ಹಾಗಾಗಿ ಇಲ್ಲಿಂದ ತಲಪಾಡಿ ರಸ್ತೆ ಮೂಲಕ ಅಥವಾ ನದಿ ತಾಣದ ಮೂಲಕ ದ.ಕ. ಜಿಲ್ಲೆಯ ಗಡಿ ಪ್ರವೇಶಿಸುವ ಸಾಧ್ಯತೆಯಿದೆ. ತಲಪಾಡಿ ಸಮೀಪದ ಉಚ್ಚಿಲ ಭಟ್ರಪಾಡಿ ನದಿ ಕಿನಾರೆ ಕೂಡ ಕೇರಳಿಗರ ಪ್ರವೇಶಕ್ಕೆ ಸುಲಭದ ದಾರಿಯಾಗಿದೆ. ಇಲ್ಲಿಯೂ ನದಿ ನೀರಿನಲ್ಲಿ ಗಡಿ ದಾಟಿ ಹಲವು ಜನರು ಬರುತ್ತಿದ್ದಾರೆ ಎಂಬ ಆರೋಪವಿದೆ.
ತಲಪಾಡಿಗೆ ಹೊಂದಿಕೊಂಡಂತೆ ಕೇರಳ ಗಡಿ ಭಾಗದ ನದಿಯಲ್ಲಿ ಹೇರಳವಾಗಿ ಮರಳುಗಾರಿಕೆ ನಡೆಯುತ್ತಿದೆ. ಇದೇ ದೋಣಿ ಮೂಲಕ ಅಕ್ರಮವಾಗಿ ಮಂಗಳೂರು ಸರಹದ್ದು ಪ್ರವೇಶಿಸುವುದು ಸುಲಭ. ಮಾತ್ರವಲ್ಲ ಇಲ್ಲಿ ನದಿ ಅಷ್ಟೊಂದು ಆಳವಿಲ್ಲ. ಹಾಗಾಗಿ ನೀರಿನಲ್ಲಿ ನಡೆದುಕೊಂಡೇ ಗಡಿ ದಾಟಲು ಅವಕಾಶವಿದೆ. ಬಹುತೇಕ ಜನರು ಇಂತಹ ಸಾಧ್ಯತೆಯನ್ನು ಬಳಸಿರುವ ಬಗ್ಗೆ ಆರೋಪಗಳಿವೆ.

ತೀರ ಪ್ರದೇಶದಲ್ಲಿ ಕಟ್ಟೆಚ್ಚರ
ದ.ಕ. ಜಿಲ್ಲೆಯ ಗಡಿ ಭಾಗದ ನದಿ ಹಾಗೂ ಕಡಲ ತೀರದಲ್ಲಿ ಕರಾವಳಿ ಕಾವಲು ಪೊಲೀಸ್‌ ಪಡೆಯಿಂದ ಪಹರೆ ಏರ್ಪಡಿಸಲಾಗಿದೆ. ಈ ಭಾಗದಿಂದ ಗಡಿ ಪ್ರವೇಶಿಸದಂತೆ ಕಟ್ಟೆಚ್ಚರ ವಹಿಸಲಾಗಿದೆ. ಬೆಟ್ಟಂಪಾಡಿ, ಉಚ್ಚಿಲ ಸಹಿತ ಬಹುತೇಕ ಭಾಗದಲ್ಲಿ ಪೊಲೀಸ್‌ ಕಾವಲು ಬಿಗಿಗೊಳಿಸಲಾಗಿದೆ. ಅಕ್ರಮ ನುಸುಳುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ.
 - ಚೇತನ್‌, ಎಸ್‌ಪಿ-ಕರಾವಳಿ ಕಾವಲು ಪೊಲೀಸ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next