Advertisement

Karwar : ಚಕ್ರವರ್ತಿ ಸೂಲಿಬೆಲೆ ವಿರುದ್ಧ ಪ್ರಕರಣ ದಾಖಲು

07:37 PM Oct 14, 2023 | Team Udayavani |

 ಕಾರವಾರ: ಸರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮತೀಯ ದ್ವೇಷದ ಮಾತುಗಳನ್ನಾಡಿದ್ದ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕಾರವಾರ ಗ್ರಾಮೀಣ ಪೊಲೀಸರು ಸ್ವಮೋಟೋ ಪ್ರಕರಣ ದಾಖಲಿಸಿದ್ದಾರೆ‌ .

Advertisement

ಅಕ್ಟೋಬರ್3 ರಂದು ಕಾರವಾರದ ಕಡವಾಡಕ್ಕೆ ಜನಗಣಮನ ಅಭಿಯಾನ ನಿಮಿತ್ತ‌ ಬೈಕ್ ಯಾತ್ರೆಯಲ್ಲಿ ಆಗಮಿಸಿ ಅವರ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಈ ವೇಳೆ ಸರ್ಕಾರದ ವಿರುದ್ಧ ಮಾತನಾಡಿದ್ದಲ್ಲದೇ , ಶಿವಮೊಗ್ಗ ರಾಗಿಗುಡ್ಡ ಗಲಭೆಗೆ ರಾಜ್ಯ ಸರ್ಕಾರದ ಕುಮ್ಮಕ್ಕಿದೆ ಎಂದಿದ್ದರು.

ಮಂಗಳೂರಲ್ಲಿ ಮಾಡಲಾಗದ್ದನ್ನು ಶಿವಮೊಗ್ಗದಲ್ಲಿ ಅನ್ಯಧರ್ಮೀಯರು ಮಾಡುತ್ತಿದ್ದಾರೆ. ಹಿಂದುಗಳು ಬದುಕುವ ಸ್ಥಿತಿಯಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವತನಕ ರಾಜ್ಯದಲ್ಲಿ ದಂಗೆಗಳು ಆಗುತ್ತಿರುತ್ತವೆ. ಬೆಂಕಿ ಹಚ್ಚುವ ಕೆಲಸಕ್ಕೆ ಅವರೇ ಕಾರಣ ಎಂದಿದ್ದರು. ಪೊಲೀಸರು ಈ ಮಾತುಗಳನ್ನು ಆಲಿಸಿ,‌ಸರ್ಕಾರದ ವಿರುದ್ಧ ಹಾಗೂ ಮುಖ್ಯಮಂತ್ರಿ ವಿರುದ್ಧ ಮಾತಾಡಿದನ್ನು ದಾಖಲಿಸಿಕೊಂಡಿದ್ದರು. ಹಾಗೂ ಸೂಲಿಬೆಲೆ ಸರ್ಕಾರದ ವಿರುದ್ಧದ ಹೇಳಿಕೆಯನ್ನು ಕೆಲ ದೃಶ್ಯ ಮಾಧ್ಯಮಗಳಿಗೆ ನೀಡಿದ್ದನ್ನು ಸಹ ಸಂಗ್ರಹಿಸಿ ವಾರದ ಹಿಂದೆಯೇ ಸ್ವಮೋಟೋ ಪ್ರಕರಣ ದಾಖಲಿಸಿದ್ದಾರೆ.

ಸೂಲಿಬೆಲೆ ವಿರುದ್ಧ ಸೆಕ್ಷನ್ 295 ಅಡಿ, ಸರ್ಕಾರ ಹಾಗೂ ಮುಖ್ಯಮಂತ್ರಿ ವಿರುದ್ಧ ಮಾತಾಡಿದ ಪ್ರಕರಣ ದಾಖಲಿಸಲಾಗಿದೆ ಎಂದು ಗ್ರಾಮೀಣ ಠಾಣೆಯ ಪಿಎಸ್ ಐ ಖಚಿತಪಡಿಸಿದ್ದಾರೆ‌ . ಅನ್ಯ ಧರ್ಮೀಯರ ವಿರುದ್ಧ ಮಾತಾಡಿದ ಹಾಗೂ ಮತೀಯ ದ್ವೇಷ ಹುಟ್ಟು ಹಾಕುವ ಮಾತುಗಳನ್ನು ಸಹ ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next